ನೀಲಿ ಆರ್ಥಿಕತೆ : ಅಭಿವೃದ್ಧಿಯ ಹೊಸ ಬೀಜ
Team Udayavani, Jan 10, 2021, 5:40 AM IST
ಮಂಗಳೂರು: ಕರ್ನಾಟಕ, ಕೇರಳ ಮತ್ತಿತರ ರಾಜ್ಯಗಳ ಕರಾವಳಿ ಪ್ರದೇಶವನ್ನು ನೀಲಿ ಆರ್ಥಿಕತೆ (ಬ್ಲೂ ಎಕಾನಮಿ)ಯಾಗಿ ಅಭಿವೃದ್ಧಿ ಪಡಿಸುವ ಬಗ್ಗೆ ಪ್ರಧಾನಿ ಮೋದಿ ಅವರು ಜ. 5ರಂದು ಪ್ರಕಟಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೊಸ ನಿರೀಕ್ಷೆ ಗರಿಗೆದರಿದೆ.
ದಕ್ಷಿಣ ಕನ್ನಡ ಜಿಲ್ಲೆಯ ತಲಪಾಡಿಯಿಂದ ಉಡುಪಿ ಜಿಲ್ಲೆಯ ಶಿರೂರು ತನಕ ಸುಮಾರು 168 ಕಿ.ಮೀ. ಉದ್ದದ ಕರಾವಳಿ ತೀರವಿದ್ದರೆ, ಉತ್ತರ ಕನ್ನಡ ಜಿಲ್ಲೆ ಸುಮಾರು 120 ಕಿ.ಮೀ ಸಮುದ್ರ ತೀರ ಹೊಂದಿದೆ. ಮೀನುಗಾರಿಕೆ ಯನ್ನೇ ನಂಬಿಕೊಂಡಿರುವ ಕರಾವಳಿ ಭಾಗ ದೇಶದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡಿದೆ. ಸಹಸ್ರಾರು ಮಂದಿಗೆ ಬದುಕು ಕಲ್ಪಿಸಿದೆ.ದ.ಕ,ಉಡುಪಿ ಜಿಲ್ಲೆಯ ಸೋಮೇಶ್ವರ, ಉಳ್ಳಾಲ, ತಣ್ಣೀರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು, ಕಾಪು, ಮಲ್ಪೆ ಸಹಿತ ಹಲವು ಭಾಗಗಳು ಪ್ರವಾಸೋದ್ಯಮಕ್ಕೂ ಪ್ರಸಿದ್ಧ. ಇಲ್ಲೀಗ ನೀಲಿ ಆರ್ಥಿಕತೆಯ ಚರ್ಚೆ ಆರಂಭವಾಗಿದೆ.
ಕಡಲಿನಲ್ಲಿ ಸುಸ್ಥಿರ ಪರಿಸರ ನಿರ್ಮಿಸುವುದರೊಂದಿಗೆ ಸಮುದ್ರ ಸಂಪತ್ತಿನ ಸೂಕ್ತ ಬಳಕೆ, ಜಲ ಸಾರಿಗೆ ಮಾರ್ಗ, ಪ್ರವಾಸೋದ್ಯಮ, ಸಾಗರ ಜೈವಿಕ ತಂತ್ರಜ್ಞಾನದ ಅಭಿವೃದ್ಧಿ, ಉಪ್ಪುನೀರು ಸಂಸ್ಕರಣೆ ಪರಿಕಲ್ಪನೆ, ಸಾಗರ ತೈಲ ಮತ್ತು ಅನಿಲ ಕ್ಷೇತ್ರದಲ್ಲೂ ಹೊಸ ಸಾಧ್ಯತೆ ಹುಡುಕಲಾಗುತ್ತಿದೆ. ಇವೆಲ್ಲದರ ಸುಸ್ಥಿರ ನಿರ್ವಹಣೆಯೇ ನೀಲಿ ಆರ್ಥಿಕತೆ.
ಸಾಧ್ಯತೆಗಳೇನು? :
ಕರಾವಳಿಯ ಈಗಿರುವ ಬಹುವಿಧ ಸಂಪರ್ಕವನ್ನು ಇನ್ನಷ್ಟು ಮೇಲ್ದರ್ಜೆಗೇರಿಸುವುದು ಮತ್ತು ಕರಾವಳಿ ರಸ್ತೆ ನಿರ್ಮಾಣ ಇತ್ಯಾದಿ ಯೋಜನೆಗೆ ಆದ್ಯತೆ ನೀಡುವುದು. ಪ್ರಧಾನಿಯವರು ಉಲ್ಲೇಖೀಸಿದಂತೆ; ಮೀನುಗಾರ ಸಮುದಾಯವು ಸಮುದ್ರ ಸಂಪತ್ತಿನ ಅವಲಂಬಿತರಷ್ಟೇ ಅಲ್ಲ, ಅದರ ಕಾವಲುಗಾರರೂ ಸಹ. ಅದಕ್ಕಾಗಿ ಕರಾವಳಿ ಪರಿಸರವನ್ನು ಸಂರಕ್ಷಿಸಲು ಆದ್ಯತೆ ನೀಡುವ ಯೋಜನೆ ಗಳು ಜಾರಿಗೊಳ್ಳಬಹುದು. ಆಳ ಸಮುದ್ರ ಮೀನು ಗಾರಿಕೆಗೆ ಮತ್ತಷ್ಟು ಸಹಕಾರ ಸಿಗಬಹುದು. ಮೀನು ಗಾರರಿಗೆ ಸುಲಭ ಮತ್ತು ಅಗ್ಗದ ಸಾಲವನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ನೀಡಬಹುದು. ಮತ್ಸéಸಂಪದ ಯೋಜನೆ ಮೂಲಕ ಮೀನುಗಾರರ ಬದುಕಿಗೆ ಸರಕಾರವು ಆಸರೆ ನೀಡುತ್ತದೆ ಎಂಬುದು ಜನರ ನಿರೀಕ್ಷೆ.
ಸಮುದ್ರ ಕಳೆ ಬಗ್ಗೆ ಈ ಹಿಂದೆ ಉಲ್ಲೇಖೀಸಿದ್ದ ಪ್ರಧಾನಿ! :
ಈ ಹಿಂದೆ ಪ್ರಧಾನಿ ಮೋದಿ ಅವರು ಉಜಿರೆಗೆ ಬಂದಿದ್ದ ವೇಳೆ ಕರಾವಳಿ ತಟದಲ್ಲಿ ಸೀ ವೀಡ್ (ಸಮುದ್ರ ಕಳೆ) ಬೆಳೆಸಿ; ಗೊಬ್ಬರವಾಗಿಸಿ ಎಂದು ಹೇಳಿ ರೈತ ವಲಯದಲ್ಲಿ ಸಂಚಲನ ಸೃಷ್ಟಿಸಿದ್ದರು. ನಮ್ಮದು ಕರಾವಳಿ ತೀರ. ಆದ್ದರಿಂದ ಇಲ್ಲಿ ಸೀ ವೀಡ್ (ಸಮುದ್ರ ಕಳೆ-ಕಡಲಕಳೆ) ಗಿಡ ಬೆಳೆಸಬೇಕು. ಇದರಿಂದ ಸಾವಯವ ಗೊಬ್ಬರ ತಯಾರಿಸಿದಂತಾಗುತ್ತದೆ. ಸಾಕಷ್ಟು ಪ್ರಮಾಣದಲ್ಲಿ ಸಾವಯವ ಗೊಬ್ಬರ ದೊರೆತರೆ ರಾಸಾಯನಿಕ ಬಳಕೆ ಕಡಿಮೆ ಮಾಡಬಹುದು. ಇದಕ್ಕೆಲ್ಲ ಸರಕಾರವನ್ನು ಕಾಯಬೇಡಿ ಎಂದಿದ್ದರು. ಸಮುದ್ರದಲ್ಲಿ ಬೆಳೆಯುವ ಪಾಚಿ ಮಾದರಿಯ ಕಳೆಗಿಡ. ಕೆಲವು ತಳಿಗಳು ಸ್ವತಂತ್ರವಾಗಿ ತೇಲುತ್ತವೆ.
“ಕರಾವಳಿ ವಲಯ ನಿರ್ವಹಣ ಯೋಜನೆ’ಗೆ ನಿರೀಕ್ಷೆ :
ಕರಾವಳಿ ತೀರ ಪ್ರದೇಶದಲ್ಲಿ ಕಾಂಡ್ಲಾ ವನಗಳ ಅಭಿವೃದ್ಧಿ, ಕೈಗಾರಿಕೆಗಳಿಂದ ನದಿ-ಕಡಲಿಗೆ ಸೇರುತ್ತಿರುವ ಮಾಲಿನ್ಯ ತಡೆಗಟ್ಟುವುದು, ಮೀನುಗಾರರು-ಕಡಲ ತೀರ ಜನರ ಜೀವನ ಮಟ್ಟ ಸುಧಾರಣೆ ಉದ್ದೇಶದಿಂದ ಸಮಗ್ರ ಕರಾವಳಿ ವಲಯ ನಿರ್ವಹಣೆ ಯೋಜನೆ ಜಾರಿಗೆ ಬರುವ ಸಂಭವವಿದೆ. ಕರ್ನಾಟಕ, ಕೇರಳ ಸಹಿತ ದೇಶದ 9 ರಾಜ್ಯ ಮತ್ತು 4 ಕೇಂದ್ರಾಡಳಿತ ಪ್ರದೇಶಗಳಲ್ಲಿ ಈ ಯೋಜನೆ ಜಾರಿಗೆ ಬರಲಿದೆ. ಈ ಪೈಕಿ ಕರ್ನಾಟಕದಲ್ಲಿ (ದ.ಕ.-ಉಡುಪಿ-ಉತ್ತರ ಕನ್ನಡ) ಜಾರಿಗೆ ಶೀಘ್ರ ಬರುವ ನಿರೀಕ್ಷೆಯಿದೆ. ಸಮುದ್ರ ಮತ್ತು ನದಿ ಮಧ್ಯದ ಮುಖಜ ಭೂಮಿಯ ಉಪ್ಪು ಹಾಗೂ ಸಿಹಿ ನೀರಿನ ಸಂಗಮದ ಕೆಸರಿನ ಮಧ್ಯೆ ವಿಸ್ತಾರವಾಗಿ ಹರಡಿಕೊಂಡ ಕಾಂಡ್ಲಾ ವನ ಅಭಿವೃದ್ಧಿಗೆ ಆದ್ಯತೆ ಸಿಗಬಹುದು.
ಪ್ರಧಾನಿ ಮೋದಿ “ಬ್ಲೂ ಎಕಾನಮಿ’ ಬಗ್ಗೆ ಹೇಳಿದ್ದಾರೆ. ಈಗಾಗಲೇ ಕೇಂದ್ರದ ಮೂಲ ನೆರವಿನಲ್ಲಿ ಮತ್ಸéಸಂಪದ ಯೋಜನೆಯಡಿ ಮೀನುಗಾರಿಕೆಯ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಕರಾವಳಿ ಪ್ರವಾಸೋ ದ್ಯಮ ಅಭಿವೃದ್ಧಿ , ಕುದ್ರುಗಳ ಬಗ್ಗೆ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು. –ಡಾ| ರಾಜೇಂದ್ರ ಕೆ.ವಿ., ಜಿಲ್ಲಾಧಿಕಾರಿ, ದ.ಕ.
ಕರಾವಳಿಯನ್ನು ಆದ್ಯತೆಯ ನೆಲೆಯಾಗಿಸಿ ಸಂಪರ್ಕ ಸಹಿತ ಮೂಲ ಸೌಕರ್ಯಗಳ ಅಭಿವೃದ್ಧಿ ಪ್ರಯತ್ನ ಪ್ರಧಾನಿಯವರದ್ದು. ಮೀನುಗಾರಿಕೆಯನ್ನು ಮುಖ್ಯ ನೆಲೆಯ ಲ್ಲಿಟ್ಟು, ಜನಜೀವನ ಮಟ್ಟ ಸುಧಾರಣೆ ಇದರ ಮುಖ್ಯ ಚಿಂತನೆ. ಪ್ರವಾಸೋದ್ಯಮ ಮತ್ತು ಇತರ ಚಟುವಟಿಕೆಯ ಮೂಲಕ ಸಮಗ್ರ ಬದಲಾವಣೆ ಪರಿಕಲ್ಪನೆ ಇದಾಗಿರಬಹುದು.–ಐಸಾಕ್ ವಾಜ್, ಅಧ್ಯಕ್ಷರು, ಕೆನರಾ ವಾಣಿಜ್ಯ-ಕೈಗಾರಿಕಾ ಸಂಸ್ಥೆ, ಮಂಗಳೂರು
ಕರಾವಳಿಯ ಸಾಧ್ಯತೆ :
l ಕರಾವಳಿ ರಕ್ಷಣೆ lಮೀನುಗಾರಿಕೆ lಕರಾವಳಿ ಪ್ರವಾಸೋದ್ಯಮ l ಜಲ ಸಾರಿಗೆ lಜಲಕೃಷಿ (ಪಂಜರ ಕೃಷಿ ಇತ್ಯಾದಿ) lಸಾಗರ ಜೈವಿಕ ತಂತ್ರಜ್ಞಾನ lಉಪ್ಪುನೀರು ಸಂಸ್ಕರಣೆlಸಾಗರ ತೈಲ ಮತ್ತು ಅನಿಲl ಗಾಳಿ ವಿದ್ಯುತ್l ಹಡಗು ನಿರ್ಮಾಣ ಮತ್ತು ದುರಸ್ತಿl ತ್ಯಾಜ್ಯ ವಿಲೇವಾರಿl ಜೀವ ವೈವಿಧ್ಯ ವಿಶೇಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
ಟಯರ್ ಸ್ಫೋಟಗೊಂಡು ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ವಾಹನ ಪಲ್ಟಿ… ಬಾಲಕ ಮೃತ್ಯು
Pak: ಪ್ರಿಯಕರನ ಜತೆ ಮದುವೆಗೆ ನಿರಾಕರಣೆ; ಕುಟುಂಬದ 13 ಸದಸ್ಯರಿಗೆ ವಿಷವಿಕ್ಕಿ ಕೊಂದ ಯುವತಿ
Haryana Results: ಬಿಜೆಪಿಯ ಕ್ಯಾಪ್ಟನ್ ಮುನ್ನಡೆ, ಮತಎಣಿಕೆ ಕೇಂದ್ರದಿಂದ ಹೊರನಡೆದ ಫೋಗಾಟ್!
Ballari: ಮಧ್ಯಾರಾತ್ರಿ ಆರ್ ಟಿಓ ಚೆಕ್ಪೋಸ್ಟ್ ಮೇಲೆ ಲೋಕಾಯುಕ್ತ ದಾಳಿ
Arrested: ಪಾಕ್ ಪ್ರಜೆಗಳಿಗೆ ಸಹಕಾರ; ಪೊಲೀಸರಿಂದ ಕಿಂಗ್ಪಿನ್ ಸೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.