![WPL 2025: ಆರ್ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್ನಿಂದ ಹೊರಕ್ಕೆ](https://www.udayavani.com/wp-content/uploads/2025/02/shreyanka-patil-415x276.jpg)
![WPL 2025: ಆರ್ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್ನಿಂದ ಹೊರಕ್ಕೆ](https://www.udayavani.com/wp-content/uploads/2025/02/shreyanka-patil-415x276.jpg)
Team Udayavani, Jan 29, 2025, 6:50 AM IST
ಪಕ್ಷ ಸಂಘಟನೆ ಎಂದರೆ ಯಾರನ್ನೋ ತೆಗೆದುಹಾಕುವುದಲ್ಲ. ಎಲ್ಲ ರನ್ನೂ ಜೋಡಿಸಿಕೊಂಡು ಹೋಗುವುದು. ಆದರೆ ಶಿಸ್ತು ಕಲಿಸಲೇ ಬೇಕು. ಹೀಗಾಗಿ ಒಂದಿಬ್ಬರ ವಿರುದ್ಧವಾದರೂ ನಿರ್ದಾಕ್ಷಿಣ್ಯ ಕ್ರಮ ಆಗಬೇಕು. ಬಿಜೆಪಿ ಎಂಬ ಮರದ ಮೇಲೆ ಕುಳಿತು ಕಾಂವ್ ಕಾಂವ್ ಎನ್ನುವ ಕಾಗೆಗಳ ಗುಂಪಿಗೆ ಕಲ್ಲು ಹೊಡೆದರೆ ಹಾರಿ ಮತ್ತೆ ಅಲ್ಲೇ ಕುಳಿತು ಕವಗುಟ್ಟುತ್ತವೆ. ಹೀಗಾಗಿ ಒಂದು ಕಾಗೆಗೆ ಗುಂಡು ಹೊಡೆಯಿರಿ, ಉಳಿದವು ಸುಮ್ಮನಾಗುತ್ತವೆ. ಯಾವ ಕಾರಣಕ್ಕೂ ಮರ ತೆಗೆಯಬಾರದು.
ಇದು ಪಕ್ಷ ಶುದ್ಧೀಕರಣದ ಬಗ್ಗೆ ಧ್ವನಿ ಎತ್ತಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಖಡಕ್ ಉತ್ತರ. “ಉದಯವಾಣಿ’ಯೊಂದಿಗೆ ನೇರಾನೇರ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ತಮಗೆ ಆದ ಅನ್ಯಾಯ, ಪಕ್ಷದಲ್ಲಿ ನಡೆಯುತ್ತಿರುವ ಇತ್ತೀಚಿನ ವಿದ್ಯಮಾನ ಹಾಗೂ ಮುಂದಿನ ಹಂತದ ಶುದ್ಧೀಕರಣದ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.
ಬಿಜೆಪಿಯಲ್ಲಿ ಪಕ್ಷ ಶುದ್ಧೀಕರಣದ ಬಗ್ಗೆ ಮೊದಲು ಧ್ವನಿ ಎತ್ತಿದವರು ನೀವು. ಈ ರೀತಿ ಅನ್ನಿಸಿದ್ದೇಕೆ?
ಒಂದು ಹಂತದಲ್ಲಿ ಪಕ್ಷ ಅಧಿಕಾರಕ್ಕೆ ಬಂದು ಒಳ್ಳೆಯ ಆಡಳಿತ ಕೊಟ್ಟಿತು. ಅನಂತರ ನಮಗೆ ಅಧಿಕಾರದ ಅಮಲು ಜಾಸ್ತಿ ಆಯಿತು. ಜನರೂ ನಮ್ಮನ್ನು ಸ್ವಲ್ಪ ಸ್ವಲ್ಪವೇ ದೂರ ಇಡುತ್ತಾ ಬಂದರು. ಆಡಳಿತದಲ್ಲಿದ್ದು ಚುನಾವಣೆಗೆ ಹೋದಾಗ ಅನಿರೀಕ್ಷಿತವಾದ ಹಿನ್ನಡೆ ಆಯಿತು. ಅದರಲ್ಲಿ ಯಾರ್ಯಾರ ಪಾತ್ರ ಏನು ಎಂಬುದು ಗೊತ್ತಾಯಿತು. ಪಕ್ಷವನ್ನು ಇದೇ ರೀತಿ ಬಿಟ್ಟರೆ ಮುಂದೆ ಹೋಗಲ್ಲ ಎಂದು ನಿಶ್ಚಯಿಸಿ ಹಿರಿಯರು ಅನೇಕರು ಈ ಬಗ್ಗೆ ಚಿಂತನೆ ನಡೆಸಿದೆವು. ಹೊರಗಿನಿಂದ ಬಂದವರಿಗೂ ಇಲ್ಲಿದ್ದವರಿಗೂ ಹೊಂದಾಣಿಕೆ ಸರಿ ಹೋಗಲಿಲ್ಲ. ಕಾರ್ಯಕರ್ತರನ್ನು ಒಟ್ಟಿಗೆ ತೆಗೆದುಕೊಂಡು ಹೋಗುವಲ್ಲಿ ವಿಫಲರಾದೆವು. ಹಿಂದೆ ನಮ್ಮ ಹಿರಿಯರು ಅಧಿಕಾರದ ಆಸೆಯನ್ನು ಬಿಟ್ಟು ವಿಚಾರ ಆಧಾರಿತವಾಗಿ ಪಕ್ಷ ಕಟ್ಟಿದ್ದರು. ಅಧಿಕಾರಕ್ಕೆ ಬಂದರೆ ಹೆಚ್ಚು ಜನಸೇವೆ ಮಾಡಲು ಸುಲಭವಾಗುತ್ತದೆ ನಿಜ. ಆದರೆ ವಿಚಾರ ಬಿಟ್ಟು ಅಧಿಕಾರ ಮಾಡುವುದು ಸರಿಯಲ್ಲ. ಹೀಗಾಗಿಯೇ ಶುದ್ಧೀಕರಣದ ಪ್ರಕ್ರಿಯೆ ಆರಂಭ ಆಗಿದೆ.
ಅಧಿಕಾರ ಹಿಡಿಯಲು ಪಕ್ಷದ ನಿಯಮಗಳು ಸಡಿಲ ಆದವೆ? ಇಂದಿನ ಅಶಿಸ್ತಿಗೆ ಅದುವೇ ಕಾರಣವಾ?
ಈ ಮಾತಿಗೆ ಶೇ.50ರಷ್ಟು ಸಹಮತ ಇದೆ. ಹಿಂದೆ ಜನತಾ ಪರಿವಾರದಿಂದ ಬಿಜೆಪಿ ಸೇರಿದವರು ಪಕ್ಷದ ಶಿಸ್ತು ಉಲ್ಲಂ ಸಿರಲಿಲ್ಲ. ಪಕ್ಷವೂ ಅಧಿಕಾರಕ್ಕೆ ಬಂತು. ಅನಂತರದಲ್ಲಿ ಅಧಿಕಾರಕ್ಕಾಗಿಯೇ ಪಕ್ಷಕ್ಕೆ ಬಂದವರು, ಬಂದವರಾಗಿಯೇ ಉಳಿದರು. ಅವರದೇ ಅಸ್ತಿತ್ವ, ಕೋಟೆ ಕಟ್ಟುವ ಕೆಲಸ ಆಯಿತು. ಪಕ್ಷದ ವಿರುದ್ಧ ಬ್ರೇಕಿಂಗ್ ನ್ಯೂಸ್ ಕೊಟ್ಟವರೇ ದೊಡ್ಡ ನಾಯಕರಾಗಿದ್ದಾರೆ. ಆಗೆಲ್ಲ ಪಕ್ಷ ದಾರಿ ತಪ್ಪುತ್ತಿದೆ ಎಂದು ಅನ್ನಿಸಲೇ ಇಲ್ಲ. ಸಮನ್ವಯ ತರುವ ಪ್ರಯತ್ನ ಆಗಲೇ ಇಲ್ಲ. ಉದಾಹರಣೆಗೆ ಎಸ್.ಟಿ. ಸೋಮಶೇಖರ್, ಶಿವರಾಂ ಹೆಬ್ಟಾರ್ ಇಲ್ಲಿ ಬಂದು ಸಚಿವರಾಗಿ, ಶಾಸಕರಾಗಿ ಅಶಿಸ್ತು ತೋರಿದರೂ ನಾವು ಸಹಿಸುತ್ತೇವೆ ಎಂದರೆ ಪರಿಸ್ಥಿತಿ ಎಷ್ಟರ ಮಟ್ಟಿಗೆ ಆಗಿದೆ? ಅಧಿಕಾರ ಇದ್ದರೆ ಸಾಕು ಎನ್ನುವ ಅಮಲು ಬಂದುಬಿಟ್ಟಿದ್ದರಿಂದ ಹಣ, ಗುಂಪುಗಾರಿಕೆ ಮುನ್ನೆಲೆಗೆ ಬಂದಿದೆ. ಎಲ್ಲಕ್ಕಿಂತ ಭಿನ್ನ ಎನ್ನುತ್ತಿದ್ದ ಪಕ್ಷವೀಗ ಭಿನ್ನಾಭಿಪ್ರಾಯದ ಪಕ್ಷವಾಗಿದೆ.
ಅಧ್ಯಕ್ಷರನ್ನು ಬದಲಾಯಿಸುವಾಗ ವರಿಷ್ಠರು ರಾಜ್ಯ ಬಿಜೆಪಿಯ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲವೇ?
ಇಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿವೆ ನಿಜ. ಆದರೆ ಇದು ಕೇಂದ್ರದ ತೀರ್ಮಾನ. ಹೆಚ್ಚು ಹೇಳಲ್ಲ. ವಿಜಯೇಂದ್ರ ನಮ್ಮ ಅಧ್ಯಕ್ಷರು. ಅವರು ಹೇಗೇ ಇರಲಿ, ಏನೇ ಇರಲಿ ಒಪ್ಪಬೇಕು. ತಪ್ಪಾಗಿದ್ದರೆ ಏನಾದರೂ ಹೇಳುವುದಿದ್ದರೆ 4 ಗೋಡೆ ಮಧ್ಯೆ ಹೇಳುತ್ತಾರೆ. ಬಾಹ್ಯವಾಗಿ ಮಾತನಾಡುವುದು ಸರಿಯಲ್ಲ. ಕೇಂದ್ರದ ವರಿಷ್ಠರಿಗೆ ವಿಚಾರ ಹೇಳಿ ಸರಿಪಡಿಸುವ ತಾಕತ್ ಇರುವವರೇ ಗುಂಪಿನ ನಾಯಕರಾಗಿದ್ದಾರೆ. ಎಲ್ಲೋ ಬೀದಿಯಲ್ಲಿ ಮಾತನಾಡುವ ಬದಲು, ನೇರವಾಗಿ ಕೇಂದ್ರದ ವರಿಷ್ಠರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಬೇಕಾದ ಅಗತ್ಯ ಇದೆ. ಲೋಕಸಭೆ ಚುನಾವಣೆ ಅನಂತರ ಹರಿಯಾಣ, ಮಹಾರಾಷ್ಟ್ರದ ಸವಾಲಿನ ಚುನಾವಣೆಗಳು ಎದುರಾದವು. ಅದನ್ನು ಯಶಸ್ವಿಯಾಗಿ ನಿಭಾವಣೆ ಮಾಡಿದ್ದೇವೆ. ಅದಕ್ಕಾಗಿ ಹಾಕಿದ ಶ್ರಮ ಇಲ್ಲಿಗೂ ಹಾಕಬೇಕಿತ್ತು. ಇನ್ನು ಮಾಡುತ್ತಾರೆ ಎನ್ನುವ ವಿಶ್ವಾಸವಿದೆ.
ಈಗಿನ ಅಧ್ಯಕ್ಷರು ವಿಫಲರಾಗಿದ್ದಾರಾ? ಚುನಾವಣೆ ನಡೆಯಬೇಕು ಎನ್ನುವ ಯತ್ನಾಳ್ ಮಾತಿಗೆ ಏನಂತಿರಿ?
ಪಕ್ಷ ವಿರೋಧಿಯಾಗಿ ನಡೆದುಕೊಂಡರೆ ಶಿಸ್ತು ಸಮಿತಿ, ಕೇಂದ್ರ ಸಂಸ ದೀಯ ಮಂಡಳಿಗಳು ಕ್ರಮ ವಹಿಸಬೇಕು. ರಾಜ್ಯಾಧ್ಯಕ್ಷರಿಗೆ ಅಧಿಕಾರ ಇಲ್ಲ. ವಕ್ಫ್ ಹೋರಾಟ ಮಾಡಿದ ಯತ್ನಾಳ್ರ ಜತೆಗೆ ಕೇಂದ್ರದ ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ವಿ.ಸೋಮಣ್ಣ, ಜಂಟಿ ಸದನ ಸಮಿತಿ ಅಧ್ಯಕ್ಷ ಜಗದಂಬಿಕಾ ಪಾಲ್ ನಿಂತರು. ಕೇಂದ್ರದವರು ಯತ್ನಾಳ್ರ ಪರ ಇದ್ದಾರೆ ಎನ್ನುವ ವಾತಾವರಣ ನಿರ್ಮಾಣ ಆಯಿತು. ಈ ಹೆದರಿಕೆ ಅಧ್ಯಕ್ಷರಿಗೆ ಇದೆ. ಅದೇನೇ ಇರಲಿ, ಚುನಾವಣ ಪ್ರಕ್ರಿಯೆಯಂತೂ ನಮ್ಮಲ್ಲಿ ನಡೆಯಬೇಕು, ನಡೆಯುತ್ತಿದೆ. ಶೇ.51ರಷ್ಟು ಜಿಲ್ಲಾಧ್ಯಕ್ಷರು ಆಯ್ಕೆಯಾದ ಬಳಿಕ ರಾಜ್ಯಾಧ್ಯಕ್ಷರ ಆಯ್ಕೆ ನಡೆಸಬಹುದು. ಸಹಮತದಿಂದ ಆಯ್ಕೆ ಆಗಬಹುದು. ಅಗತ್ಯಬಿದ್ದರೆ ಚುನಾವಣೆ ನಡೆಯಬಹುದು. ಈಗಾಗಲೇ ಬೇರೆ ರಾಜ್ಯಗಳಲ್ಲಿ ರಾಜ್ಯಾಧ್ಯಕ್ಷರ ಆಯ್ಕೆ ಶುರುವಾಗಿದೆ. ಶೇ.51ರಷ್ಟು ರಾಜ್ಯಾಧ್ಯಕ್ಷರಾದರೆ ರಾಷ್ಟ್ರೀಯ ಅಧ್ಯಕ್ಷರ ಆಯ್ಕೆ ಬಳಿಕವೂ ವಿಶೇಷ ಉಸ್ತುವಾರಿ ಹಾಕಿ ಕರ್ನಾಟಕ ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಆಯ್ಕೆ ಮಾಡಬಹುದು. ಪ್ರತಿಯೊಬ್ಬರಿಗೂ ಸಣ್ಣ-ಸಣ್ಣ ಶಕ್ತಿ ಇರುತ್ತದೆ. ಅದನ್ನು ಕೈಬಿಡಲಾಗದು. ಎರಡೂ ಗುಂಪಿನಲ್ಲಿ ಇರುವ ನಾಯಕರಿಗೂ ಶಕ್ತಿ ಇದ್ದೇ ಇದೆ.
ಎಲ್ಲ ಗುಂಪಿನವರು ಪಕ್ಷನಿಷ್ಠೆಯ ಮಾತನ್ನಾಡುತ್ತಿದ್ದಾರೆ. ನಿಜವಾಗಿ ಪಕ್ಷದ ಪರ ಇರುವವರು ಯಾರು?
ಪಕ್ಷವನ್ನು ವಿರೋಧಿಸುವವರೇ ಇರಲಿ, ಬೇರೆ ಸಂಗತಿಗಳನ್ನು ಹೇಳುವವರೇ ಇರಲಿ. ಪಕ್ಷದಲ್ಲಿ ಇರುವವರೆಗೆ ಪಕ್ಷನಿಷ್ಠರು ಎಂದೇ ಒಪ್ಪಿಕೊ ಳ್ಳುತ್ತೇನೆ. ನಾನು ಹಿಂದೆ ಅಧ್ಯಕ್ಷನಿದ್ದಾಗ ಇದಕ್ಕಿಂತ ದೊಡ್ಡ ಗುಂಪುಗಾರಿಕೆ ಇತ್ತು. ಇಬ್ಬರ ನಡುವೆ ಸಣ್ಣ ಅಂತರ ಕಾಯ್ದುಕೊಂಡು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದೆ. ಆದರೆ ಅಂದು ಯಾವ ಬಣಗಳೂ ಬೀದಿಗೆ ಹೋಗಿರಲಿಲ್ಲ. ಈಗ ಬೀದಿಗೆ ಹೋಗಿದ್ದು ತಪ್ಪು. ಎರಡೂ ಗುಂಪು ಸೇರಿ ಇಷ್ಟು ದೊಡ್ಡ ಸಮಸ್ಯೆ ಸೃಷ್ಟಿಯಾಗಿದೆ. ಈಗಿನ ಸನ್ನಿವೇಶದಲ್ಲಿ ಬಣ ನಿಭಾಯಿಸುವಲ್ಲಿ ಜವಾಬ್ದಾರಿ ಇರುವವರು ವಿಫಲರಾದದ್ದು ಕಾರಣ. ಪಕ್ಷ ಎಂದರೆ ಯಾರನ್ನೋ ತೆಗೆದು ಹಾಕುವುದಲ್ಲ. ಜೋಡಿಸಿಕೊಂಡು ಹೋಗುವುದು. ಇದ್ದವರನ್ನು ಸರಿ ಮಾಡುವುದು, ಶಿಸ್ತು ಕಲಿಸಬೇಕು. ಒಂದೆರಡು ಜನರಿಗೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಮನೆಯ ಬಳಿ ಮರದಲ್ಲಿ ಕುಳಿತು ಕಾಗೆಗಳು ಕಾಂವ್ ಕಾಂವ್ ಎನ್ನುತ್ತಿದ್ದರೆ ಕಿವಿಯನ್ನೇ ಬಿಡಲಾಗುವುದಿಲ್ಲ. ಒಂದು ಕಲ್ಲು ಹೊಡೆದರೆ, ಹಾರಿ ಹೋಗಿ ಮತ್ತೆ ಬಂದು ಕುಳಿತುಕೊಳ್ಳುತ್ತವೆ. ಒಂದು ಕಾಗೆಗೆ ಗುಂಡು ಹೊಡೆಯಿರಿ, ಉಳಿದವು ಸುಮ್ಮನಾಗುತ್ತವೆ. ಯಾವ ಕಾರಣಕ್ಕೂ ಮರ ತೆಗೆಯಬಾರದು.
ವರಿಷ್ಠರು ಬಂದು ಕೋರ್ ಕಮಿಟಿ ಸಭೆ ಮಾಡಿದ ಬಳಿಕ ಸಮಸ್ಯೆ ಹೆಚ್ಚಾಗಿದೆ ಎನಿಸುವುದಿಲ್ಲವೇ?
ಕೋರ್ ಕಮಿಟಿಯಲ್ಲಿ ಚರ್ಚೆ, ಜಗಳ ಎಲ್ಲವೂ ಆಗಬೇಕು. ಸಾಧ್ಯ ಆದರೆ ಬಡಿದಾಡಿಕೊಳ್ಳಬೇಕು. ಹೊರಗೆ ಬರುವಾಗ ಒಮ್ಮತದ ತೀರ್ಮಾನ ಆಗಬೇಕು. ಇದು ಕೋರ್ ಕಮಿಟಿಯ ಸೂತ್ರ. ಅಲ್ಲಿ ಮಾತನಾಡದೆ ಮನಸ್ಸಿನಲ್ಲಿ ಇಟ್ಟುಕೊಳ್ಳುವವರು ಪಕ್ಷದ್ರೋಹಿಗಳು. ನಮ್ಮಲ್ಲಿ ತುಂಬಾ ಜನ ಆ ರೀತಿ ಇದ್ದಾರೆ. ಬೂತ್, ಮಂಡಲ, ಜಿಲ್ಲಾಧ್ಯಕ್ಷರ ಚುನಾವಣ ಪ್ರಕ್ರಿಯೆ ಸರಿಯಾಗಿ ನಡೆಯದ ಬಗ್ಗೆ ಚರ್ಚೆ ಆಗಿದೆ. ಹಿಂದಿನ ಕೋರ್ ಕಮಿಟಿ ಸಭೆಯಲ್ಲಿ ಸೋಮಶೇಖರ್, ಹೆಬ್ಟಾರ್ ವಿರುದ್ಧ ಕ್ರಮಕ್ಕೆ ಶಿಫಾರಸು ಆಗಿದೆ. ಯತ್ನಾಳ್ಗೆ ಶೋಕಾಸ್ ನೋಟಿಸ್ ಕೊಟ್ಟ ಬಳಿಕದ ಬೆಳವಣಿಗೆ ಬಗ್ಗೆಯೂ ಚರ್ಚೆ ಆಗಿದೆ. ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಸುನಿಲ್ ಕುಮಾರ್ ಬಿಡುಗಡೆ ಕೇಳಿದ್ದರ ಬಗ್ಗೆ, ಪ್ರೀತಂ ಗೌಡ ಕಾಂಗ್ರೆಸ್ ಸೇರುವ ವದಂತಿಗಳ ಬಗ್ಗೆ ಚರ್ಚೆ ಆಗಿದೆ. ಇದೆಲ್ಲವೂ ಶುದ್ಧೀಕರಣದ 2ನೇ ಹಂತ. ಕೋರ್ ಕಮಿಟಿ ಬದಲಾಗಬೇಕು ಎಂದು ನನಗೂ ಅನ್ನಿಸಿದೆ. ಹಾಗೆಂದು ಕೇಳಿದವರಿಗೆಲ್ಲ ಸ್ಥಾನ ಕೊಡಲಾಗಲ್ಲ. ಪ್ರಬುದ್ಧರು, ಅಧಿಕಾರಕ್ಕೆ ಆಸೆ ಪಡದವರು, ಪಕ್ಷದ ಹಿತದೃಷ್ಟಿಯಿಂದ ಮಾತನಾಡುವವರು ಇರಬೇಕು. ಚೇಲಾಗಳ ಪರ ಮಾತನಾಡುವವರು ಇರಬಾರದು. ಹಣ ಇಲ್ಲದವನಿಗೆ ಸ್ಥಾನ ಇಲ್ಲ ಎನ್ನುವ ಸ್ಥಿತಿಗೆ ಪಕ್ಷ ಬಂದಿದೆ. ಬದ್ಧತೆ ಏನು ಎಂಬುದು ಮುಖ್ಯ. ದುಡ್ಡು, ಚೇಲಾಗಿರಿ ಮಾಡುವುದೇ ಪಕ್ಷ ಎನ್ನುವಂತಾಗಿದೆ. ಯಾವುದಾದರೂ ಗುಂಪಿನೊಂದಿಗೆ ಗುರುತಿಸಿಕೊಳ್ಳದಿದ್ದರೆ ಅಸ್ತಿತ್ವವೇ ಇಲ್ಲ ಎನ್ನುವಂತಾಗಿದೆ. ಇವೆಲ್ಲವೂ ಬದಲಾಗಬೇಕು.
ಅಧ್ಯಕ್ಷರ ಬದಲಾವಣೆ ಕೂಗು ಶುರು ಆಗಿರುವುದೇಕೆ? ಕಾರ್ಯಕರ್ತರಿಗೆ ಇದರಿಂದ ಏನು ಸಂದೇಶ ತಲುಪುತ್ತದೆ?
ಪಕ್ಷ ಆಡಳಿತದಲ್ಲಿ ಇದ್ದಾಗ ಜವಾಬ್ದಾರಿಗಳಿದ್ದವು. ಕೆಲಸ ಮಾಡುತ್ತಿದ್ದೆವು. ಸಾರ್ವಜನಿಕ ಜವಾಬ್ದಾರಿಗಳು ವಿರೋಧ ಪಕ್ಷಕ್ಕಿದೆ ಎನ್ನುವ ಪರಿಜ್ಞಾನ ಕಡಿಮೆ ಆಗಿದೆ. ಅಧಿಕಾರ ಇಲ್ಲದ ಖನ್ನತೆಯಿಂದಲೂ ಹೀಗೆಲ್ಲ ಆಗುತ್ತಿದೆ ಎನ್ನಿಸುತ್ತದೆ. ಸ್ವಲ್ಪ ಮಟ್ಟಿಗೆ ಕೆಲವರ ವೈಯಕ್ತಿಕ ಕಾರಣಗಳಿವೆ. ಯತ್ನಾಳ್ ಒಬ್ಬರು ಧ್ವನಿ ಎತ್ತಿದ್ದರು. ಸಚಿವರಾಗದವರು, ಎಂಪಿ ಸ್ಥಾನ ಸಿಗದವರು ಜತೆಯಾದರು. ನನಗೂ ಸಿಕ್ಕಿಲ್ಲ. ನಾನೂ ಯಾವುದಾದರೂ ಬಣ ಸೇರಬಹುದಿತ್ತು. ಸೇರಲಿಲ್ಲ. ನನಗೆ ಪಕ್ಷ ಮುಖ್ಯ. ಸ್ಥಾನ ಕೊಡದೆ ಒಬ್ಬರೋ ಇಬ್ಬರೋ ಅನ್ಯಾಯ ಮಾಡಿರಬಹುದು. ಪಕ್ಷ ಯಾವ ಅನ್ಯಾಯ ಮಾಡಿದೆ? ನಮ್ಮ ಪಕ್ಷಕ್ಕೆ ಸದಸ್ಯರಾಗಿ, ಮತ ಹಾಕಿ ಎಂದು ಕೇಳುವ ಕಾರ್ಯಕರ್ತರನ್ನು ಜನರು ನೋಯಿಸುತ್ತಾರೆ. ಇದಕ್ಕೆ ಕಾರಣ ಯಾರು? ಇದು ಅಕ್ಷಮ್ಯ ಅಪರಾಧ ಅಲ್ಲವೇ?
ಉದಯವಾಣಿ ಸಂದರ್ಶನ: ಸಾಮಗ ಶೇಷಾದ್ರಿ
ಪಕ್ಷ ಶುದ್ಧೀಕರಣವಾಗದೆ ಬಿಜೆಪಿ ಸೇರಲ್ಲ, ಸೇರಿದರೂ ಕ್ರಾಂತಿವೀರ ಬ್ರಿಗೇಡ್ ನಿಲ್ಲುವುದಿಲ್ಲ
ಮುಖ್ಯಮಂತ್ರಿ ಬದಲಾವಣೆ ಮಾಡುವುದಾದರೆ ಒಕ್ಕಲಿಗ ಸಮುದಾಯದ ಡಿಕೆಶಿಯನ್ನೇ ನೇಮಿಸಲಿ
ಜಿ.ಪಂ.,ತಾ.ಪಂ. ಚುನಾವಣೆ ವಿಳಂಬಕ್ಕೆ ಸರಕಾರವೇ ನೇರ ಹೊಣೆ, ನಾವು ಚುನಾವಣೆಗೆ ಸಿದ್ಧ: ಆಯೋಗ
ಅಪಾಯಕ್ಕೆ ಎದೆಯೊಡ್ಡಿ ವಕ್ಫ್ ವರದಿ ಮಾಡಿದ್ದು ನಾನು, ಅದರಿಂದ ಹಣ ಮಾಡಿದ್ದು ಅನೇಕರು!
Belagavi:ಅಧಿವೇಶನ ವೇಳೆ 10 ಲಕ್ಷ ಜನರ ಜತೆ ಸುವರ್ಣವಿಧಾನಸೌಧಕ್ಕೆ ಮುತ್ತಿಗೆ ಹಾಕುತ್ತೇವೆ…
Belthangady: ಕಾರು- ರಿಕ್ಷಾ ಅಪಘಾತ; ರಿಕ್ಷಾ ಚಾಲಕನಿಗೆ ಗಂಭೀರ ಗಾಯ
WPL 2025: ಆರ್ಸಿಬಿ ಆಘಾತ… ಗಾಯ, ಶ್ರೇಯಾಂಕಾ ಡಬ್ಲ್ಯೂಪಿಎಲ್ನಿಂದ ಹೊರಕ್ಕೆ
Women’s FIH Pro League: ಭಾರತಕ್ಕೆ ಇಂಗ್ಲೆಂಡ್ ವಿರುದ್ಧ 3-2ರಿಂದ ಜಯ
Maha Kumbh Mela: ಕುಂಭ ಮೇಳ ಅವಧಿ ಫೆ.26ರ ಬಳಿಕವೂ ವಿಸ್ತರಿಸಿ: ಅಖಿಲೇಶ್ ಯಾದವ್
Mangaluru: ಮಾದಕ ವಸ್ತು ಸೇವನೆ; ಮೂವರು ವಶಕ್ಕೆ
You seem to have an Ad Blocker on.
To continue reading, please turn it off or whitelist Udayavani.