ಅಧಿಕಾರ ವಿಕೇಂದ್ರೀಕರಣ ಮತ್ತು ರಾಜಧಾನಿಗಳ ನಿರ್ಮಾಣ


Team Udayavani, Jan 24, 2020, 6:00 AM IST

kaa-42

ವಾಸ್ತವವಾಗಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಮೂರು ರಾಜಧಾನಿ ನಿರ್ಮಿಸಲು ಮುಂದಾಗಿರುವುದು ನಿಕಟಪೂರ್ವ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮೇಲಿರುವ ಸೇಡು ತೀರಿಸಿಕೊಳ್ಳುವ ಸಲುವಾಗಿ. ನಾಯ್ಡು ಅಗಾಧ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಅಮರಾವತಿಯಲ್ಲಿ ವೈಭವೋಪೇತವಾದ ರಾಜಧಾನಿ ನಿರ್ಮಿಸಲು ಮುಂದಾಗಿದ್ದರು.

ಒಂದಕ್ಕಿಂತ ಎರಡು ಉತ್ತಮ ಎಂಬುದೊಂದು ಜನಪ್ರಿಯ ನಾಣ್ಣುಡಿ. ಆದರೆ ಜನರು ಮತ್ತು ಅವರ ತೆರಿಗೆ ಹಣವನ್ನು ವ್ಯಯಿಸಿ ಎರಡನ್ನು ಕೊಂಡುಕೊಳ್ಳುವುದು ಸರಿಯಲ್ಲ. ನಮ್ಮ ದೇಶದಲ್ಲಿ ಈಗ ಅಧಿಕಾರಕ್ಕಾಗಿ ಮತ್ತು ಸ್ಥಾನಮಾನಕ್ಕಾಗಿ ನಡೆಯುತ್ತಿರುವ ಮೇಲಾಟವನ್ನು ನೋಡಿ. ನಮ್ಮ ರಾಜಕೀಯ ನಾಯಕರು ವೈಯಕ್ತಿಕ ಮತ್ತು ರಾಜಕೀಯ ಕಾರಣಗಳಿಗಾಗಿ ಸಾರ್ವಜನಿಕ ಹಣವನ್ನು ದುಂದುವೆಚ್ಚ ಮಾಡುವ ಪ್ರಾದೇಶಿಕತೆ ಮತ್ತು ಜಾತೀಯ ನೆಲೆಗಳ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

ಆಂಧ್ರ ಪ್ರದೇಶದ ವೈ.ಎಸ್‌.ಆರ್‌. ಕಾಂಗ್ರೆಸ್‌ ಸರಕಾರ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ನಿರ್ಮಿಸಲು ಕೈಗೊಂಡಿರುವ ನಿರ್ಧಾರ ಈ ಮಾದರಿಯದ್ದು. 2017ರಿಂದೀಚೆಗೆ ರಾಜಧಾನಿಯಾಗಿರುವ ಅಮರಾವತಿಯ ಜೊತೆಗೆ ವಿಶಾಖ ಪಟ್ಟಣಂ ಮತ್ತು ಕರ್ನೂಲ್‌ನಲ್ಲಿ ರಾಜಧಾನಿ ನಿರ್ಮಿಸಲು ತೀರ್ಮಾನಿಸಲಾಗಿದೆ. ಇದು ಮುಖ್ಯಮಂತ್ರಿ ವೈ.ಎಸ್‌. ಜಗನ್‌ ಮೋಹನ್‌ ರೆಡ್ಡಿಯವರ ಚಿಂತನೆಯಾಗಿದ್ದು, ಈ ಯೋಜನೆ ಪ್ರಕಾರ ಅಮರಾವತಿ ಶಾಸಕಾಂಗದ ರಾಜಧಾನಿ, ವಿಶಾಖಪಟ್ಟಣಂ ಕಾರ್ಯಾಂಗದ ರಾಜಧಾನಿ ಮತ್ತು ಕರ್ನೂಲ್‌ ನ್ಯಾಯಾಂಗದ ರಾಜಧಾನಿಯಾಗಲಿದೆ. ವಿಶ್ರಾಂತ ಐಎಎಸ್‌ ಅಧಿಕಾರಿ ಜಿ.ಎನ್‌. ರಾವ್‌ ನೇತೃತ್ವದ ವರದಿಯನ್ನು ಜಗನ್‌ ಮೋಹನ್‌ ರೆಡ್ಡಿ
ತನ್ನ ನಿರ್ಧಾರಕ್ಕೆ ಸಮರ್ಥನೆಯಾಗಿ ಬಳಸಿಕೊಂಡಿದ್ದಾರೆ.

ದೇಶಕ್ಕೆ ಹೊಸ ದಿಲ್ಲಿಯೊಂದೇ ರಾಜಧಾನಿಯಾಗಿರುವಾಗ ಆಂಧ್ರ ಪ್ರದೇಶಕ್ಕೆ ಏಕೆ 3 ರಾಜಧಾನಿ ಬೇಕು ಎಂದು ಯಾರಿಗಾದರೂ ಆಶ್ಚರ್ಯವಾಗುವುದು ಸಹಜ. ಆಂಧ್ರ ಪ್ರದೇಶದ ಸಂಪುಟದ ತರ್ಕವನ್ನು ಅನ್ವಯಿಸಿದರೆ ನಮ್ಮ ದೇಶಕ್ಕೆ ಇನ್ನೂ ಎರಡು ರಾಜಧಾನಿಗಳಿರಬೇಕಿತ್ತು. 1911ರ ತನಕ ಅವಿಭಜಿತ ಭಾರತಕ್ಕೆ ಕೋಲ್ಕತ್ತ ರಾಜಧಾನಿಯಾಗಿತ್ತು ಮತ್ತು ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಹಿಮಾಚಲ ಪ್ರದೇಶ ಬೇಸಿಗೆ ರಾಜಧಾನಿಯಾಗಿತ್ತು. ದಿಲ್ಲಿ ರಾಜಧಾನಿ ಎಂದು ಘೋಷಿಸಲ್ಪಟ್ಟದ್ದು (ವೈಸರಾಯ್‌ ಲಾರ್ಡ್‌ ಇರ್ವಿನ್‌) 1931, ಫೆಬ್ರವರಿ 13ರಂದು.

ಈಗ ಪಾಕಿಸ್ಥಾನಕ್ಕೆ ಸೇರಿರುವ ಮುರಿ 1864ರ ತನಕ ಬ್ರಿಟಿಷರ ಬೇಸಿಗೆ ರಾಜಧಾನಿಯಾಗಿತ್ತು ಎಂಬ ವಿಚಾರ ಹೆಚ್ಚಿನವರಿಗೆ ಗೊತ್ತಿಲ್ಲ. ಆನಂತರ ಬ್ರಿಟಿಷರು ಹೆಚ್ಚು ಸುರಕ್ಷಿತ ಎಂದು ಭಾವಿಸಿದ ಶಿಮ್ಲಾವನ್ನು ಬೇಸಿಗೆ ರಾಜಧಾನಿ ಅಥವಾ ಎರಡನೇ ರಾಜಧಾನಿ ಎಂದು ಘೋಷಿಸಿದರು. ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ (1857-59) ದಿಲ್ಲಿ, ಮೇರs…, ಕಾನ್‌ಪುರ ಮತ್ತು ಲಕ್ನೊದಂಥ ಪ್ರಕ್ಷುಬ್ಧತೆ ಶಿಮ್ಲಾದಲ್ಲಿ ಇರಲಿಲ್ಲ.

ಒಂದಕ್ಕಿಂತ ಹೆಚ್ಚು ರಾಜಧಾನಿ ಹೊಂದುವ ನಿರ್ಧಾರಕ್ಕೆ ಜಗನ್‌ ಮೋಹನ್‌ ರೆಡ್ಡಿ ಸರಕಾರ ದಕ್ಷಿಣ ಆಫ್ರಿಕದ ಸಮರ್ಥನೆ ನೀಡುತ್ತಿದೆ. ದಕ್ಷಿಣ ಆಫ್ರಿಕ ಗಣರಾಜ್ಯಕ್ಕೆ ಪ್ರಿಟೋರಿಯ ಆಡಳಿತಾತ್ಮಕ ರಾಜಧಾನಿ, ಕೇಪ್‌ಟೌನ್‌ ಶಾಸಕಾಂಗದ ರಾಜಧಾನಿ ಮತ್ತು ಬ್ಲೊಂಫಾಂಟೀನ್‌ ನ್ಯಾಯಾಂಗದ ರಾಜಧಾನಿ. ಆದರೆ ಇದು ಜನರನ್ನು ಸಮಾಧಾನಪಡಿಸಲು ರೂಪಿಸಿದ ಸಂಧಾನ ಸೂತ್ರವಾಗಿತ್ತು. ಅಲ್ಲಿ ರಾಜಧಾನಿ ನಿರ್ಮಾಣ ಮಾಡಲು ಭಾರೀ ಒತ್ತಾಯವಿತ್ತು. ಆದರೆ ಆಂಧ್ರದಲ್ಲಿ ವಿಶಾಖಪಟ್ಟಣಂ ಮತ್ತು ಕರ್ನೂಲ್‌ಗಳನ್ನು ರಾಜಧಾನಿಯಾಗಿ ಮಾಡಲು ಹೋರಾಟಗಳಾಗಲಿ, ಬೇಡಿಕೆಯಾಗಲಿ ಇರಲಿಲ್ಲ. ಇದನ್ನು ಏಕಪಕ್ಷದ ಸರಕಾರವನ್ನು ಮುನ್ನಡೆಸುತ್ತಿರುವ ಜಗನ್‌ ಮೋಹನ್‌ ರೆಡ್ಡಿ ತನ್ನ ಅಧಿಕಾರವನ್ನು ಬಳಸಿಕೊಂಡು ನಿರ್ಧರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ರಾಜಧಾನಿ ಇರುವ ಒಂದು ದೇಶ ನಮ್ಮ ಪಕ್ಕದಲ್ಲೇ ಇದೆ. ಅದು ಶ್ರೀಲಂಕಾ. ಕೊಲಂಬೊ ಮತ್ತು ಶ್ರೀ ಜಯವರ್ಧನಪುರ ಕೊಟ್ಟೆ ಈ ದೇಶದ ರಾಜಧಾನಿಗಳು. ಒಟ್ಟಾರೆ 17 ದೇಶಗಳಷ್ಟೇ ಒಂದಕ್ಕಿಂತ ಹೆಚ್ಚು ರಾಜಧಾನಿಗಳನ್ನು ಹೊಂದಿವೆ.

ನಮ್ಮ ದೇಶದಲ್ಲೂ ಮೂರು ರಾಜ್ಯಗಳು ಎರಡೆರಡು ರಾಜಧಾನಿಗಳನ್ನು ಹೊಂದಿವೆ. ಜಮ್ಮು-ಕಾಶ್ಮೀರಕ್ಕೆ ಶ್ರೀನಗರ ಮತ್ತು ಜಮ್ಮು, ಮಹಾರಾಷ್ಟ್ರಕ್ಕೆ 2017ರಿಂದೀಚೆಗೆ ಮುಂಬಯಿ ಮತ್ತು ನಾಗಪುರ,
ಹಿಮಾಚಲ ಪ್ರದೇಶಕ್ಕೆ ಶಿಮ್ಲಾ ಮತ್ತು ಧರ್ಮಶಾಲಾ ರಾಜಧಾನಿಗಳಾಗಿವೆ. ರಾಜಸ್ಥಾನ, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಛತ್ತೀಸ್‌ಗಢ, ಒಡಿಶಾ, ಕೇರಳ ಮತ್ತು ಈಶಾನ್ಯದ ರಾಜ್ಯಗಳು ಪ್ರತ್ಯೇಕ ನ್ಯಾಯಾಂಗ ರಾಜಧಾನಿಗಳನ್ನು ಹೊಂದಿವೆ.

ಕರ್ನಾಟಕ್ಕೇಕೆ ಬೇಕು ಮೂವರು ಉಪಮುಖ್ಯಮಂತ್ರಿಗಳು?
ಒಂದಕ್ಕಿಂತ ಹೆಚ್ಚು ಮಂದಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕೆಲವೇ ರಾಜ್ಯಗಳ ಪೈಕಿ ಕರ್ನಾಟಕವೂ ಒಂದು. ಮೂವರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಮೂಲಕ ಬಿಜೆಪಿ ಸರಕಾರ “ಅಧಿಕಾರ ವಿಕೇಂದ್ರೀಕರಣ’ ಮಾಡಿದೆ. ಬಿಜೆಪಿಯನ್ನು ಅಧಿಕಾರಕ್ಕೆ ತರಲು ಕಾರಣರಾಗಿರುವ, ಉಪಚುನಾವಣೆಯಲ್ಲಿ ಗೆದ್ದಿರುವ 13 ಶಾಸಕರಿಗೆ ಬಿಜೆಪಿ ಯಾವೆಲ್ಲ ಆಶ್ವಾಸನೆಗಳನ್ನು ನೀಡಿದೆ ಎಂದು ಯಾರಿಗಾದರೂ ಆಶ್ಚರ್ಯವಾಗದೇ ಇರದು. ಈ ಎಲ್ಲ 13 ಮಂದಿಯನ್ನು ಉಪಮುಖ್ಯಮಂತ್ರಿಗಳಾಗಿ ಮಾಡಿದರೂ ಆಶ್ಚರ್ಯವಿಲ್ಲ. ಮೂವರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡಲು ಬಿಜೆಪಿ ಅನುಸರಿಸಿದ್ದು ಜಾತಿ ಸೂತ್ರವನ್ನು. ಲಿಂಗಾಯತರಿಗೊಂದು, ಒಕ್ಕಲಿಗರಿಗೊಂದು ಮತ್ತು ಪರಿಶಿಷ್ಟ ಜಾತಿಯವರಿಗೊಂದು ಎಂದು ಉಪಮುಖ್ಯಮಂತ್ರಿ ಸ್ಥಾನವನ್ನು ಹಂಚಲಾಗಿದೆ. ಆದರೆ ಲಕ್ಷ್ಮಣ ಸವದಿಯನ್ನು ಉಪಮುಖ್ಯಮಂತ್ರಿ ಮಾಡಿದ್ದು ಮಾತ್ರ ಈ ತರ್ಕವನ್ನು ಮೀರಿದ ನಿರ್ಧಾರ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಲಿಂಗಾಯತ ಸಮುದಾಯದವರು. ಹೀಗಿರುವಾಗ ಇನ್ನೋರ್ವ ಲಿಂಗಾಯತ ನಾಯಕನನ್ನು ಉಪಮುಖ್ಯಮಂತ್ರಿ ಮಾಡಿದ ನಿರ್ಧಾರ ಪ್ರಶ್ನಾರ್ಹವೇ. ಬಿಎಸ್‌ವೈ ಹಳೇ ಮೈಸೂರು ಭಾಗದವರು ಮತ್ತು ಸವದಿ ಮುಂಬಯಿ ಕರ್ನಾಟಕ ಭಾಗದವರು ಎನ್ನುವುದು ಇದಕ್ಕೆ ಉತ್ತರವಾಗಿರಬಹುದು. ತನ್ನ ಜಾತಿಯವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಬೇಕೆಂದು ಬಹಿರಂಗವಾಗಿ ಬೇಡಿಕೆಯಿಟ್ಟ ಲಿಂಗಾಯತ ಪಂಚಮಶಾಲಿ ಸ್ವಾಮೀಜಿ ವಚನಾನಂದ ಅವರ ಬಾಯಿಯನ್ನು ಯಡಿಯೂರಪ್ಪ ಮುಚ್ಚಿಸಿದ್ದು ಸರಿಯಾಗಿಯೇ ಇದೆ.

ಈ ರೀತಿ ಜಾತಿ ಮತ್ತು ಪ್ರಾದೇಶಿಕ ನೆಲೆಯಲ್ಲಿ ಅಧಿಕಾರ ನೀಡುವ ಚಾಳಿ ಬಿಜೆಪಿಗೆ ಮಾತ್ರ ಸೀಮಿತವಲ್ಲ. ಕಾಂಗ್ರೆಸ್‌ ಕೂಡ ನಾಲ್ವರು ಕಾರ್ಯಾಧ್ಯಕ್ಷರನ್ನು ನೇಮಿಸುವ ಪ್ರಯತ್ನದಲ್ಲಿದೆ. ಇದು ವಿಪಕ್ಷ ನಾಯಕ ಸಿದ್ದರಾಮಯ್ಯನವರ ದಾಳ ಎನ್ನುವುದು ಹೆಚ್ಚು ಸರಿ. ಆದರೆ ಇದರಿಂದ ರಾಜ್ಯದ ಬೊಕ್ಕಸಕ್ಕೇನೂ ಹೊರೆಯಾಗುವುದಿಲ್ಲ. ಇದು ಏನಿದ್ದರೂ ಕಾಂಗ್ರೆಸ್‌ನ ಆಂತರಿಕ ವಿಚಾರ. ಕೆಲ ಸಮಯದ ಹಿಂದೆಯಷ್ಟೇ ಆಗ ಮುಖ್ಯಮಂತ್ರಿಯಾಗಿದ್ದ ಎಚ್‌. ಡಿ. ಕುಮಾರಸ್ವಾಮಿಯವರು ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಮಾಡುವ ಪ್ರಸ್ತಾವ ಇಟ್ಟಿದ್ದರು. ತನ್ನ ಸರಕಾರ ಉತ್ತರ ಕರ್ನಾಟಕವನ್ನು ಕಡೆಗಣಿಸುತ್ತಿದೆ ಎಂಬ ಟೀಕೆಗಳಿಂದ ರೋಸಿ ಕುಮಾರಸ್ವಾಮಿ ಈ ಪ್ರಸ್ತಾವ ಮುಂದಿಟ್ಟಿದ್ದರು. ಇದರಲ್ಲಿ ಪಕ್ಕದ ರಾಜ್ಯಕ್ಕೆ ಟಾಂಗ್‌ ಕೊಡುವ ಒಂದು ಒಳ ಉದ್ದೇಶವೂ ಇತ್ತು. ಬೆಳಗಾವಿ ಹೊರತಾಗಿ ತಮ್ಮ ರಾಜ್ಯ “ಮಹಾ ರಾಷ್ಟ್ರ’ವಾಗುವುದಿಲ್ಲ ಎಂಬ ಭಾವನೆ ಅಲ್ಲಿನ ಕೆಲವು ರಾಜಕೀಯ ನಾಯಕರಲ್ಲಿದೆ.

ಅಧಿಕಾರ ವಿಕೇಂದ್ರೀಕರಣ, ಸುಗಮ ಆಡಳಿತ ಮತ್ತು ಸಂತುಲಿತ ಅಭಿವೃದ್ಧಿಗಾಗಿ ಮೂರು ರಾಜಧಾನಿ ಸೂತ್ರವನ್ನು ಪಾಲಿಸಲಾಗುತ್ತಿದೆ ಎಂದು ವೈಎಸ್‌ಆರ್‌ ಕಾಂಗ್ರೆಸ್‌ ಸರಕಾರ ಜನರನ್ನು ನಂಬಿಸುತ್ತಿದೆ. ಕರ್ನೂಲನ್ನು “ನ್ಯಾಯಾಂಗ ರಾಜಧಾನಿ’ಯಾಗಿ ಆಯ್ಕೆ ಮಾಡಿರುವುದಕ್ಕೆ 1937ರಲ್ಲಿ ಅಂದಿನ ಮದ್ರಾಸ್‌ ಪ್ರಾಂತ್ಯದ ಪ್ರಧಾನಮಂತ್ರಿಯಾಗಿದ್ದ ಸಿ. ರಾಜಗೋಪಾಲಾಚಾರಿಯವರ ಮಧ್ಯಸ್ಥಿಕೆಯಲ್ಲಿ ಮಾಡಿಕೊಂಡಿದ್ದ ಶ್ರೀಬಾಘ… ಒಪ್ಪಂದದ ನೆಪ ಹೇಳುತ್ತಿದೆ. ರಾಯಲಸೀಮೆಯ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ರಾಯಲಸೀಮೆಯ ನಾಯಕರು ಮತ್ತು ಕರಾವಳಿ ಭಾಗದ ನಾಯಕರ (ಸರ್ಕಾರ್‌ಗಳು) ನಡುವೆ ಈ ಒಪ್ಪಂದ ಏರ್ಪಟ್ಟಿತ್ತು. ಆಂಧ್ರ ವಿಶ್ವವಿದ್ಯಾಲಯ ಅನಂತಪುರದ ಬದಲಾಗಿ ವಾಲ್ಟಯರ್‌ (ವಿಶಾಖಪಟ್ಟಣಂ)ದಲ್ಲಿ ತಲೆ ಎತ್ತಿದಾಗ ಕರಾವಳಿಯ ನಾಯಕರ ಉದ್ದೇಶದ ಮೇಲೆ ರಾಯಲಸೀಮೆಯ ನಾಯಕರಿಗೆ ಅನುಮಾನಗಳಿದ್ದವು. ಶ್ರೀಬಾಘ… ಎನ್ನುವುದು ಚೆನ್ನೈಯಲ್ಲಿರುವ ಒಂದು ಬಂಗಲೆ. ಮಾಜಿ ಮುಖ್ಯಮಂತ್ರಿ ಜಯಲಲಿತಾ ಈ ಬಂಗಲೆಯನ್ನು ತನ್ನ ಬಂಗಲೆ ಜೊತೆ ಸೇರಿಸಿಕೊಳ್ಳಲು ಬಹಳ ಉತ್ಸುಕರಾಗಿದ್ದರು.

1956ರಲ್ಲಿ ಆಂಧ್ರ ಪ್ರದೇಶ ರಾಜ್ಯ ರಚನೆಯಾದಾಗ ತೆಲಂಗಾಣದ ಹಿತಾಸಕ್ತಿಗಳನ್ನು ರಕ್ಷಿಸುವ ಸಲುವಾಗಿ ತೆಲಂಗಾಣ ಮತ್ತು ಆಂಧ್ರದ ನಾಯಕರ ಮಧ್ಯೆ “ಜಂಟಲ್‌ಮ್ಯಾನ್ಸ್‌ ಅಗ್ರಿಮೆಂಟ್‌’ (ಅನೌಪಚಾರಿಕವಾದ ಒಪ್ಪಂದ) ಏರ್ಪಟ್ಟಿತ್ತು. ಈ ಒಪ್ಪಂದವನ್ನು ಮುರಿದದ್ದೇ ತೆಲಂಗಾಣ ರಾಜ್ಯ ರಚನೆಗೆ ಹೇತುವಾಯಿತು.

1953ರಿಂದ 1956ರ ತನಕ ಕರ್ನೂಲ್‌ ರಾಜಧಾನಿ
ವಾಸ್ತವವಾಗಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಮೂರು ರಾಜಧಾನಿ ನಿರ್ಮಿಸಲು ಮುಂದಾಗಿರುವುದು ನಿಕಟಪೂರ್ವ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಮೇಲಿರುವ ಸೇಡು ತೀರಿಸಿಕೊಳ್ಳುವ ಸಲುವಾಗಿ. ನಾಯ್ಡು ಅಗಾಧ ಖರ್ಚಿನ ಬಗ್ಗೆ ತಲೆಕೆಡಿಸಿಕೊಳ್ಳದೆ ಅಮರಾವತಿಯಲ್ಲಿ ವೈಭವೋಪೇತವಾದ ರಾಜಧಾನಿ ನಿರ್ಮಿಸಲು ಮುಂದಾಗಿದ್ದರು. 2024ರ ತನಕ ಹೈದರಾಬಾದ್‌ ಆಂಧ್ರ ಮತ್ತು ತೆಲಂಗಾಣಕ್ಕೆ ರಾಜಧಾನಿಯಾಗಿರಲು ಅವಕಾಶ ಇದ್ದರೂ ನಾಯ್ಡುಗೆ ಆದಷ್ಟು ಬೇಗ ಹೈದರಾಬಾದ್‌ ತೊರೆಯವ ಅವಸರವಿತ್ತು. ಅವರು ವಿಜಯವಾಡದಲ್ಲಿ ತಾತ್ಕಾಲಿಕ ರಾಜಧಾನಿಯನ್ನು ನಿರ್ಮಿಸಿದ್ದಾರೆ. ಇದಕ್ಕೆ ಒಂದು ಕಾರಣ ವಿಜಯವಾಡ ಕಮ್ಮ ಸಮುದಾಯದವರ (ನಾಯ್ಡು ಇದೇ ಸಮುದಾಯದವರು) ಭದ್ರ ನೆಲೆ ಎನ್ನುವುದು. ಜಗನ್‌ ಮೋಹನ್‌ ರೆಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡಿರುವ ರಾಯಲಸೀಮೆಯ ಕಡಪದ ಪ್ರಬಲ ರೆಡ್ಡಿ ಸಮುದಾಯಕ್ಕೆ ಸೇರಿದವರು.

ಕರ್ನೂಲ್‌ ರಾಜಧಾನಿಯಾಗುವುದು ಹೊಸತೇನಲ್ಲ. 1953ರಿಂದ 1956ರ ತನಕ ಇದು ಆಂಧ್ರ ಪ್ರದೇಶದ ರಾಜಧಾನಿಯಾಗಿತ್ತು. ಕುತೂಹಲಕಾರಿ ವಿಷಯವೆಂದರೆ ಆಧುನಿಕ ಆಂಧ್ರದ ಸ್ಥಾಪಕ ಟಿ. ಪ್ರಕಾಶಂ ಅವರು ವಿಜಯವಾಡದ ಬದಲು ಕರ್ನೂಲನ್ನು ಕರಾವಳಿಯಲ್ಲಿ ಬಲಿಷ್ಠವಾಗಿದ್ದ ಕಮ್ಮ ಸಮುದಾಯವರ ಪ್ರಾಬಲ್ಯ ತಗ್ಗಿಸುವ ಸಲುವಾಗಿ ರಾಜಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಆ ಸಂದರ್ಭದಲ್ಲಿ ಪ್ರಕಾಶಂ ಆಂಧ್ರ ಪ್ರದೇಶದ ಹೈಕೋರ್ಟಿಗೆ ಗುಂಟೂರನ್ನು ಆರಿಸಿದ್ದರು. ಸುಪ್ರೀಂ ಕೋರ್ಟಿ ಮಾಜಿ ಮುಖ್ಯ ನ್ಯಾಯಾಧೀಶ ಕೋಕ ಸುಬ್ಟಾ ರಾವ್‌ ಆಂಧ್ರ ಹೈಕೋರ್ಟಿನ ಮೊದಲ ಮುಖ್ಯ ನ್ಯಾಯಾಧೀಶರಾಗಿದ್ದರು.

ಅದಾಗ್ಯೂ ಅಮರಾವತಿಯನ್ನು ರಾಜಧಾನಿಗಳ ಪಟ್ಟಿಯಿಂದ ಕೈಬಿಡುವ ದಿಟ್ಟತನವನ್ನು ಜಗನ್‌ ಮೋಹನ್‌ ರೆಡ್ಡಿ ತೋರಿಸಿಲ್ಲ. ಇದಕ್ಕೆ ಕಾರಣ ಸರಕಾರ ಈಗಾಗಲೇ ಅಮರಾವತಿಯಲ್ಲಿ ಭಾರೀ ಮೊತ್ತವನ್ನು ಹೂಡಿಕೆ ಮಾಡಿರುವುದು. ಇದು ಚಂದ್ರಬಾಬು ನಾಯ್ಡು ಅವರ ಕನಸಿನ ನಗರಿ ಎಂಬ ಕಾರಣಕ್ಕೆ ಅದರ ಪ್ರಾಮುಖ್ಯತೆಯನ್ನು ನಗಣ್ಯವಾಗಿಸಬೇಕೆನ್ನುವುದೇ ರೆಡ್ಡಿಯ ಉದ್ದೇಶ. ನಮ್ಮದೇ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಆರ್‌. ಗುಂಡುರಾವ್‌ ಒಮ್ಮೆ ರಾಷ್ಟ್ರ ರಾಜಧಾನಿಯನ್ನು ಬೆಂಗಳೂರಿಗೆ ತರಲು ಮುಂದಾಗಿದ್ದರು. ಯಲಹಂಕ ಸೆಟಲೈಟ್‌ ನಗರಿ ಭಾರತದ ರಾಜಧಾನಿಯಾಗಬೇಕಿತ್ತು.

ಅಧಿಕಾರವನ್ನು ಮೂರು ರಾಜಧಾನಿಗಳಲ್ಲಿ ಹಂಚುವುದರಿಂದ ಜನರಲ್ಲಿ ಸಾಕಷ್ಟು ಗೊಂದಲಗಳು ಉಂಟಾಗಲಿರುವುದು ಮಾತ್ರವಲ್ಲದೆ ಇದು ಜನರ ತೆರಿಗೆ ಹಣವನ್ನು ಪೋಲು ಮಾಡಿದಂತೆ. ವಾಸ್ತವವಾಗಿ ಸಣ್ಣ ನಗರಗಳಲ್ಲಿ ರಾಜ್ಯಗಳ ರಾಜಧಾನಿಯಿರಬೇಕು. ಅಮೆರಿಕದ 50 ರಾಜ್ಯಗಳಿಗೆ ಸಣ್ಣ ನಗರಗಳೇ ರಾಜಧಾನಿ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

CJI-Ind

Recommendation: ನ್ಯಾ. ಸಂಜೀವ್‌ ಖನ್ನಾ ಸುಪ್ರೀಂಕೋರ್ಟ್‌ ಮುಂದಿನ ಮುಖ್ಯ ನ್ಯಾಯಮೂರ್ತಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ

Koppal: ಚಿಕನ್‌, ಮಟನ್‌ ಸೆಂಟರ್‌ಗೆ ಸಚಿವೆ ಶೋಭಾ ಕರಂದ್ಲಾಜೆ ಹೆಸರಿಟ್ಟ ಅಭಿಮಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

udayavani youtube

ಮಕ್ಕಳ ಸ್ಕ್ರೀನ್ ಟೈಮಿಂಗ್ ಕುರಿತು ಎಚ್ಚರಿಕೆ ಅತ್ಯವಶ್ಯಕ.. ಇಲ್ಲಿದೆ ಅಗತ್ಯ ಮಾಹಿತಿ

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

ಹೊಸ ಸೇರ್ಪಡೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ

2-vijayapura

Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ

Jaiswal

Canada Vs India: ನಿಜ್ಜರ್‌ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ

Bhagavath

Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್‌

ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.