Election result; 12ಕ್ಕೇರಿದ ಬಿಜೆಪಿ, ಮೂರಕ್ಕಿಳಿದ ಕಾಂಗ್ರೆಸ್
ಕವಲು ಹಾದಿಯಲ್ಲಿ ನಾಯಕರು
Team Udayavani, Dec 4, 2023, 6:35 AM IST
ನಾಲ್ಕು ರಾಜ್ಯಗಳ ಫಲಿತಾಂಶದ ಬಳಿಕ ಬಿಜೆಪಿ ಈಗ ಸ್ವಂತ ಬಲದಿಂದಲೇ12 ರಾಜ್ಯಗಳಲ್ಲಿ ಅಧಿಕಾರಕ್ಕೇರಿದೆ. ಉತ್ತರ
ಪ್ರದೇಶ, ಉತ್ತರಾಖಂಡ, ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ಥಾನ, ಅಸ್ಸಾಂ, ತ್ರಿಪುರಾ, ಹರಿಯಾಣ, ಗೋವಾ, ಮಣಿಪುರ, ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮಹಾರಾಷ್ಟ್ರ, ಸಿಕ್ಕಿಂ, ನಾಗಾಲ್ಯಾಂಡ್, ಮೇಘಾಲಯದಲ್ಲಿ ಬಿಜೆಪಿ ಮೈತ್ರಿಕೂಟ ಆಡಳಿತದಲ್ಲಿದೆ. ಇನ್ನು ಕಾಂಗ್ರೆಸ್ ಸ್ವಂತ ಬಲದ ಮೇಲೆ ಮೂರರಲ್ಲಿ ಅಧಿಕಾರದಲ್ಲಿದೆ. ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ಜತೆಗೆ ಈಗ ತೆಲಂಗಾಣ ಸೇರಿಕೊಂಡಿದೆ. ಈ ಹಿಂದೆ ಇದ್ದ ರಾಜಸ್ಥಾನ ಮತ್ತು ಛತ್ತೀಸ್ಗಢವನ್ನು ಕಳೆದುಕೊಂಡಿದೆ. ಉಳಿದಂತೆ ಝಾರ್ಖಂಡ್ ಮತ್ತು ಬಿಹಾರದಲ್ಲಿ ಸಣ್ಣಪಕ್ಷವಾಗಿ ಇದೆ.
ಪಶ್ಚಿಮ ಬಂಗಾಲ, ಒಡಿಶಾ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳ, ಮಿಜೋರಾಂ, ಪಂಜಾಬ್, ದಿಲ್ಲಿ ಸೇರಿ ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳು ಆಡಳಿತ ನಡೆಸುತ್ತಿವೆ.
ಲೋಕಸಭಾ ಚುನಾವಣೆಗೆ ಪೂರ್ವಭಾವಿ ಪರೀಕ್ಷೆ ಎಂದೇ ಪರಿಗಣಿಸಲಾಗಿರುವ ವಿಧಾನಸಭಾ ಚುನಾವಣ ಫಲಿತಾಂಶಗಳು ಹಲವು ನಾಯಕರಿಗೆ ಹೊಸ ಜನ್ಮ ನೀಡಿದರೆ, ಇನ್ನು ಹಲವು ನಾಯಕರ ಭವಿಷ್ಯವನ್ನು ಕತ್ತಲಾಗಿಸಿ ಬಿಟ್ಟಿದೆ.
ಅಶೋಕ್ ಗೆಹ್ಲೋ ಟ್
ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹ್ಲೋ ಟ್ ಅವರು ಸತತ ಆರನೇ ಬಾರಿ ಗೆದ್ದಿದ್ದಾರೆ. ಆದರೆ ಮುಖ್ಯಮಂತ್ರಿ ಪದವಿಯನ್ನು ಕಳಕೊಂಡಿದ್ದಾರೆ. ಪ್ರತೀ ಸಲ ಇಲ್ಲಿ ಹಾಲಿ ಸರಕಾರವನ್ನು ಕೆಳಗಿಳಿಸುವ ಜಾಯಮಾನ ಇದೆಯಾದರೂ, ಇದನ್ನು ಮೀರಿ ಗೆದ್ದೇ ಗೆಲ್ಲುತ್ತೇವೆ ಎಂಬ ಭರವಸೆಯಲ್ಲಿದ್ದರು ಗೆಹ್ಲೋ ಟ್. ಆದರೆ ಅದು ಕೈಗೂಡದೆ ಸೋಲನ್ನಪ್ಪಿದ್ದಾರೆ. ಇದರೊಂದಿಗೆ ಇವರ ರಾಜಕೀಯ ಭವಿಷ್ಯದ ಮುಂದೆ ಪ್ರಶ್ನಾರ್ಥಕ ಚಿಹ್ನೆ ಬಂದು ಕೂತಿದೆ.
ಅಲ್ಲಿನ ಕಾಂಗ್ರೆಸ್ ಸರಕಾರದಲ್ಲಿ ಗೆಹ್ಲೋ ಟ್ ಮತ್ತು ಸಚಿನ್ ಪೈಲಟ್ ಅವರ ನಡುವಿನ ವಿರಸ ಪಕ್ಷಕ್ಕೆ ದುಬಾರಿಯಾಯಿತು ಎನ್ನುವುದು ಗುಟ್ಟಾಗಿ ಉಳಿದಿಲ್ಲ. ತಾನು ಮುಖ್ಯಮಂತ್ರಿಯಾಗಿ ಉಳಿಯಬೇಕೆನ್ನುವ ಅವರ ಹಪಹಪಿಯಿಂದಾಗಿ ಹಿಂದೆ ಪಕ್ಷದ ರಾಷ್ಟ್ರೀಯ ಮಟ್ಟದ ಜವಾಬ್ದಾರಿ ಬಂದಾಗಲೂ ಅದನ್ನು ತಿರಸ್ಕರಿಸಿದ್ದ 72ರ ಪ್ರಾಯದ ಗೆಹ್ಲೋ ಟ್ಗೆ ರಾಜ್ಯದಲ್ಲಿ ಪಕ್ಷವನ್ನು ಸಂಘಟಿಸಿ ಮುಂದಿನ ಲೋಕಸಭಾ ಚುನಾವಣೆಗೆ ಸಜ್ಜಾಗುವ ದೊಡ್ಡ ಹೊಣೆಗಾರಿಕೆ ಇದೆ. ಆದರೆ ಈ ಸೋಲಿನಿಂದಾಗಿ ನೈತಿಕ ಧೈರ್ಯ ಕಳೆದುಕೊಂಡಿರುವ ಗೆಹ್ಲೋ ಟ್ ಪಕ್ಷದಲ್ಲಿ ಹೆಚ್ಚು ವಿರೋಧಗಳನ್ನು ಎದುರಿಸಬೇಕಾಗಬಹುದು. ಈವರೆಗೆ ಪಕ್ಷದೊಳಗೆ ಹಿಡಿತ ಇಟ್ಟುಕೊಂಡಿರುವ ಇವರು ಇನ್ನು ಮುಂದೆ ಸಚಿನ್ ಪೈಲಟ್ ಅವರ ಬಣದ ನೇರಾನೇರ ವಿರೋಧವನ್ನು ಎದುರಿಸಲೇಬೇಕು.
ಕಮಲನಾಥ್- ದಿಗ್ವಿಜಯ ಸಿಂಗ್
ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಈ ಬಾರಿ ಕಮಾಲ್ ಮಾಡುತ್ತಾರೆ, ಮತ್ತೆ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇತ್ತು. ಕಮಲನಾಥ್ ಮತ್ತು ದಿಗ್ವಿಜಯ ಸಿಂಗ್ ಜೋಡಿ ರಾಜ್ಯದಾದ್ಯಂತ ಸಂಚರಿಸಿ ಪಕ್ಷಕ್ಕೆ ಬಲ ತಂದುಕೊಟ್ಟಿದ್ದರು. 77ರ ಕಮಲ್ನಾಥ್ ಮತ್ತು 76ರ ದಿಗ್ವಿಜಯ ಸಿಂಗ್ ಅವರು ಮಧ್ಯಪ್ರದೇಶದಲ್ಲಿ ಪಕ್ಷವನ್ನು ಎಷ್ಟರ ಮಟ್ಟಿಗೆ ವ್ಯಾಪಿಸಿದರೆಂದರೆ, ಹೊಸ ತಲೆಮಾರಿನ ನಾಯಕರ ಪ್ರವೇಶಕ್ಕೆ ಅವಕಾಶ ಕೊಡಲಿಲ್ಲ, ಇವರಿಬ್ಬರ ಪ್ರಾಬಲ್ಯದಿಂದಾಗಿ ಕಾಂಗ್ರೆಸ್ ಈಗ ಅಲ್ಲಿ ನರಳುವಂತಾಗಿದೆ.
ಟಿಕೆಟ್ ಹಂಚಿಕೆಯಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲಿ ಮೇಲುಗೈ ಸಾಧಿಸಿದ್ದ ಈ ಜೋಡಿ ಈಗ ಕವಲು ಹಾದಿಯಲ್ಲಿದೆ. ಹೊಸ ತಲೆಮಾರನ್ನು ಮುಂದಕ್ಕೆ ತರುವ ಅನಿವಾರ್ಯತೆಯಲ್ಲಿ ಕಾಂಗ್ರೆಸ್ಗೆ ಸಿಲುಕಿದೆ.
ಕೆ.ಸಿ.ಚಂದ್ರಶೇಖರ್ ರಾವ್
ಬಿಆರ್ಎಸ್ ಗೆದ್ದು ತಾನೇ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಅತೀವ ಆತ್ಮವಿಶ್ವಾಸ ದಿಂದ ಇದ್ದ ತೆಲಂಗಾಣದ ಹಾಲಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹೀನಾಯ ಸೋಲು ಅನುಭವಿಸಿದ್ದಾರೆ. ಕಳೆದ ಎರಡು ಅವಧಿಯಲ್ಲಿ ಸಿಎಂ ಆಗಿರುವ ಕೆಸಿಆರ್ ತನ್ನ ರಾಜ್ಯವನ್ನು ಬಿಟ್ಟು ದೇಶದ ರಾಜಕಾರಣದಲ್ಲೂ ಚಮಕ್ ತೋರಬೇಕೆನ್ನುವ ಮಹತ್ವಾಕಾಂಕ್ಷೆ ಹೊಂದಿದ್ದರು, ಆ ಕಾರಣಕ್ಕಾಗಿಯೇ ತೆಲಂಗಾಣ ರಾಷ್ಟ್ರೀಯ ಪಕ್ಷ (ಟಿಆರ್ಎಸ್) ಎಂಬ ಹೆಸರಿನ ತಮ್ಮ ಪಕ್ಷವನ್ನು ಭಾರತ ರಾಷ್ಟ್ರೀಯ ಪಕ್ಷ (ಬಿಆರ್ಎಸ್) ಎಂದ ಬದಲಿಸಿ ರಾಷ್ಟ್ರ ರಾಜಕಾರಣದತ್ತ ಹೆಜ್ಜೆ ಹಾಕೋಣ ಎಂದು ಹೊರಟಿದ್ದರು. ಈ ಸೋಲು ಅವರ ಎಲ್ಲ ಪ್ರಯತ್ನಗಳಿಗೂ ನೀರು ಎರಚಿದೆ. ಅತ್ತ ಎನ್ಡಿಎ ಮತ್ತು ಇತ್ತ ಐಎನ್ಡಿಐಎ ನಿಂದ ಸಮಾನ ದೂರದಲ್ಲಿದ್ದ ಕೆಸಿಆರ್ ಈಗ ಒಂಟಿಯಾಗಿರುವುದು ಸತ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ; ಮತ್ತೋರ್ವ ಆರೋಪಿ ಬಂಧನ
Sandalwood: ಏಳುಮಲೆಗೆ ಬಂದ ‘ಮಹಾನಟಿʼ ಪ್ರಿಯಾಂಕಾ
Modi – Trump Meet: ಪ್ಯಾರಿಸ್ ಪ್ರವಾಸದ ಬೆನ್ನಲ್ಲೇ ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷರ ಭೇಟಿ
Dhananjaya: ʼಟಾಕ್ಸಿಕ್ʼ ಸೆಟ್ನಲ್ಲಿ ಯಶ್ ಭೇಟಿಯಾಗಿ ಮದುವೆಗೆ ಆಹ್ವಾನಿಸಿದ ಡಾಲಿ ಧನಂಜಯ್
ಕಂಪ್ಲಿ ತಾಲೂಕಿನ ಚಿನ್ನಾಪುರ ಗುಡ್ಡದಲ್ಲಿ ಬೆಂಕಿ… ಗ್ರಾಮಸ್ಥರಲ್ಲಿ ಆತಂಕ