![Basanagowda-Yatnal](https://www.udayavani.com/wp-content/uploads/2025/02/Basanagowda-Yatnal-1-415x249.jpg)
![Basanagowda-Yatnal](https://www.udayavani.com/wp-content/uploads/2025/02/Basanagowda-Yatnal-1-415x249.jpg)
Team Udayavani, Jan 30, 2025, 7:30 AM IST
17 ವರ್ಷಗಳ ಹಿಂದೆ, ಅಂದರೆ 2008ರ ನವೆಂಬರ್ 26ರಂದು ಸಮುದ್ರ ಮಾರ್ಗವಾಗಿ ಬಂದ ಪಾಕಿಸ್ಥಾನದ ಉಗ್ರರು, ಮುಂಬಯಿಯಲ್ಲಿ ಅಕ್ಷರಶಃ ಮಾರಣ ಹೋಮ ನಡೆಸಿದ್ದರು. ಈ ದಾಳಿಯ ಹಿಂದೆ ಪಾಕ್ ಮೂಲದ ಅಮೆರಿಕನ್ ಪ್ರಜೆ ಡೇವಿಡ್ ಹೆಡ್ಲಿ ಮತ್ತು ಕೆನಡಾ ಪ್ರಜೆ ತಹಾವ್ವುರ್ ರಾಣಾ ಸಂಚು ಇರುವುದು ಸ್ಪಷ್ಟ. ಈಗ ಅಮೆರಿಕದ ಸೆರೆವಾಸದಲ್ಲಿರುವ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ರಾಣಾ ಯಾರು, ದಾಳಿ ಸಂಚು ರೂಪಿಸಿದ್ದು, ರಾಣಾ ಹಸ್ತಾಂತರ ಪ್ರಕ್ರಿಯೆ ಹೇಗೆ ಎಂಬಿತ್ಯಾದಿ ಮಾಹಿತಿ ಇಲ್ಲಿದೆ.
2008ರ ಮುಂಬಯಿ ದಾಳಿಯ ಪ್ರಮುಖ ಸಂಚುಕೋರ, ಪಾಕಿಸ್ಥಾನ ಮೂಲದ ಕೆನಡಾ ಪ್ರಜೆ ಡಾ| ತಹಾವ್ವುರ್ ಹುಸೇನ್ ರಾಣಾ ಗಡೀಪಾರಿಗೆ ಅಮೆರಿಕದ ಸುಪ್ರಿಂಕೋರ್ಟ್ ಒಪ್ಪಿಗೆ ಸೂಚಿಸುವ ಮೂಲಕ 26/11 ಪ್ರಕರಣ ಹೊಸ ಮಜಲಿಗೆ ತಲುಪಿದೆ. ಜತೆಗೆ ಘಟನೆ ನಡೆದು 16 ವರ್ಷಗಳ ಬಳಿಕ ಈ ವಿಚಾರದಲ್ಲಿ ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ದೊರೆತಿದೆ. 26/11 ಉಗ್ರ ದಾಳಿಯಲ್ಲಿ 166 ಜನರ ಸಾವಿಗೆ ಕಾರಣವಾದ ತಹಾವ್ವುರ್ ರಾಣಾನನ್ನು ಭಾರತ ದೋಷಿ ಎಂದು ಹಿಂದೆಯೇ ಘೋಷಿ ಸಿತ್ತು. ಹೀಗಾಗಿ ಆತನನ್ನು ಗಡೀಪಾರು ಮಾಡುವಂತೆ ಭಾರತವು ಅಮೆ ರಿಕಕ್ಕೆ ಮನವಿ ಮಾಡಿತ್ತು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಹಸ್ತಾಂತರಕ್ಕೆ ಒಪ್ಪಿಗೆ ಸೂಚಿಸಿದೆ.
ಯಾರು ಈ ಉಗ್ರ ತಹಾವ್ವುರ್ ರಾಣಾ?
ಡಾ. ತಹಾವ್ವುರ್ ರಾಣಾ ಪಾಕಿಸ್ಥಾನದ ಸೇನೆಯ ವೈದ್ಯನಾಗಿದ್ದು, 1990ರಲ್ಲಿ ಪಾಕಿಸ್ಥಾನದಿಂದ ಕೆನಡಾಕ್ಕೆ ವಲಸೆ ಹೋಗಿದ್ದ. ಬಳಿಕ ಅಲ್ಲಿನ ಪೌರತ್ವವನ್ನೂ ಪಡೆದಿದ್ದ. ಅನಂತರ ಅಮೆರಿಕಕ್ಕೆ ಮರು ಸ್ಥಳಾಂತರ ವಾಗಿದ್ದು ಶಿಕಾಗೋದಲ್ಲಿ “ಫಸ್ಟ್ ವರ್ಲ್ಡ್ ಇಮಿಗ್ರೇಶನ್ ಸರ್ವಿಸಸ್’ ಹೆಸರಿನ ವಲಸೆ ಸಲಹಾ ಸಂಸ್ಥೆಯನ್ನು ಸ್ಥಾಪಿ ಸಿದ್ದನು. ಈ ಸಂಸ್ಥೆಯ ಶಾಖೆಯನ್ನು ಮುಂಬಯಿಯಲ್ಲೂ ತೆರೆದಿದ್ದನು.
26/11 ಮುಂಬಯಿ ದಾಳಿ ಹಿಂದಿನ ಸಂಚುಕೋರ!
ಡಾ| ರಾಣಾ ಮುಂಬಯಿ ದಾಳಿ ನಡೆಸುವುದಕ್ಕಾಗಿಯೇ ತನ್ನ “ಫಸ್ಟ್ ವರ್ಲ್ಡ್ ಇಮಿಗ್ರೇಶನ್ ಸರ್ವಿಸಸ್’ ಸಂಸ್ಥೆಯ ಶಾಖೆಯನ್ನು ಮುಂಬ ಯಿಯಲ್ಲಿ ತೆರೆದಿದ್ದ ಎಂದು ಚಾರ್ಜ್ಶೀಟ್ನಲ್ಲಿ ಹೇಳಲಾಗಿದೆ. ಇದೇ ಸಂಸ್ಥೆ ಮೂಲಕ ತನ್ನ ಬಾಲ್ಯದ ಗೆಳೆಯ, ಮುಂಬಯಿ ದಾಳಿಯ ಪ್ರಮುಖ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಗೆ ಹಲವು ಬಾರಿ ಭಾರತ ಪ್ರವಾಸ ಕೈಗೊಳ್ಳಲು ಮತ್ತು ಹಣಕಾಸು ನೆರವನ್ನು ನೀಡಿದ್ದನು. ರಾಣಾನ ವಲಸೆ ಸಲಹಾ ಸಂಸ್ಥೆಯ ಉದ್ಯೋಗಿ ಎಂಬ ನೆಪದಲ್ಲಿ ಮುಂಬಯಿಯ ಪ್ರಮುಖ ತಾಣಗಳಾದ ತಾಜ್ ಮಹಲ್ ಹೊಟೇಲ್ ಮತ್ತು ಛತ್ರಪತಿ ಶಿವಾಜಿ ಟರ್ಮಿನಸ್ನಲ್ಲಿ ಹೆಡ್ಲಿ ವಿಚಕ್ಷಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದನು. 2006ರಲ್ಲಿ ರಾಣಾನನ್ನು ಭೇಟಿಯಾಗಲು ಶಿಕಾಗೋಗೆ ಪ್ರಯಾಣ ಬೆಳೆಸಿದ್ದಾಗಿ ಹೆಡ್ಲಿ ಅಮೆರಿಕ ಪ್ರಾಸಿಕ್ಯೂಟರ್ಗೆ ತಿಳಿಸಿದ್ದನು. ಅಲ್ಲದೆ ಎಲ್ಇಟಿ ತನಗೆ ನಿಯೋಜಿಸಿದ ಕಾರ್ಯಾಚರಣೆ ಬಗ್ಗೆಯೂ ತಿಳಿಸಿದ್ದೆ ಎಂದು ಬಾಯ್ಬಿಟ್ಟಿದ್ದ. ಮುಂಬಯಿಯಲ್ಲಿ ಮೊದಲ ವಿಶ್ವ ವಲಸೆ ಸೇವೆಗಳ ಕೇಂದ್ರವನ್ನು ಸ್ಥಾಪಿಸುವ ಹೆಡ್ಲಿಯ ಯೋಜನೆಯನ್ನು ರಾಣಾ ಅನುಮೋದಿಸಿದ್ದನು ಮತ್ತು 5 ವರ್ಷಗಳ ವ್ಯಾಪಾರ ವೀಸಾವನ್ನು ಪಡೆಯಲು ಸಹಾಯ ಮಾಡಿದ್ದನು. ಮುಂಬಯಿ ದಾಳಿಯ ಬಳಿಕ ರಾಣಾನನ್ನು ಅವರನ್ನು ಅಮೆರಿಕದಲ್ಲಿ ಬಂಧಿಸಲಾಯಿತು. 2011ರಲ್ಲಿ ಲಷ್ಕರ್-ಎ-ತೋಯ್ಬಾಗೆ ಬೆಂಬಲವನ್ನು ನೀಡಿದ ಮತ್ತು 2005ರಲ್ಲಿ ಪ್ರವಾದಿಯವರ ಚಿತ್ರಗಳನ್ನು ಮುದ್ರಿಸಿದ ಡ್ಯಾನಿಶ್ ಪತ್ರಿಕೆ ಜಿಲ್ಯಾ-ಪೋಸ್ಟನ್ ಮೇಲೆ ದಾಳಿ ಮಾಡಲು ಸಂಚು ರೂಪಿಸಿದ್ದಕ್ಕಾಗಿ ಆತನಿಗೆ ಶಿಕ್ಷೆ ವಿಧಿಸಲಾಗಿದೆ.
ಅಮೆರಿಕದಿಂದ ಹಸ್ತಾಂತರ ಪ್ರಕ್ರಿಯೆ ಹೇಗೆ?
ಭಾರತಕ್ಕೆ ಗಡೀಪಾರಾಗದಿರಲು ರಾಣಾನಿಗೆ ಉಳಿದಿದ್ದ ಏಕೈಕ ಕಾನೂನು ಅವಕಾಶವೂ ಈಗ ಅಮೆರಿಕದಲ್ಲಿ ಕೈತಪ್ಪಿದೆ. ಇದಕ್ಕಾಗಿಯೇ ಆತ ಕಳೆದ ನವೆಂಬರ್ 13ರಂದು ಅಮೆರಿಕ ಸುಪ್ರೀಂ ಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದ. ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷ ರಾಗಿ ಪ್ರಮಾಣವಚನ ಸ್ವೀಕರಿಸಿದ 1 ದಿನದ ಬಳಿಕ ಅಂದರೆ ಜ.21ರಂದು ಈ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ಈ ಮೂಲಕ ಉಗ್ರ ರಾಣಾನನ್ನು ಭಾರತಕ್ಕೆ ಗಡೀಪಾರು ಮಾಡಲು ಇದ್ದ ಎಲ್ಲ ಕಾನೂನು ತಡೆಗಳು ಈಗ ನಿವಾರಣೆಯಾಗಿದೆ. ಆತನನ್ನು ಭಾರತಕ್ಕೆ ಯಾವಾಗ ಹಸ್ತಾಂತರಿಸ ಲಾಗುತ್ತದೆ ಎಂಬುದು ತಿಳಿದುಬಂದಿಲ್ಲ. ಶೀಘ್ರವೇ ಭಾರತಕ್ಕೆ ಕರೆತರಲಾ ಗುತ್ತದೆ ಎಂದು ತಿಳಿದುಬಂದಿದೆ. ಸದ್ಯ ರಾಣಾನನ್ನು ಲಾಸ್ ಏಂಜಲೀಸ್ನ ಮೆಟ್ರೋಪಾಲಿಟನ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ.
ಉಗ್ರ ಹೆಡ್ಲಿ-ರಾಣಾ ಇಬ್ಬರೂ ಸಹಪಾಠಿಗಳು
ಡಾ| ತಹಾವ್ವುರ್ ರಾಣಾ ಮತ್ತು ಡೇವಿಡ್ ಕೋಲ್ಮನ್ ಹೆಡ್ಲಿ ಇಬ್ಬರೂ ಮೂಲತಃ ಪಾಕಿಸ್ಥಾನದ ಪಂಜಾಬ್ ಪ್ರಾಂತದವರು. ಹಸನ್ ಅಬ್ದಲ್ ಕೆಡೆಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುವಾಗ ಇಬ್ಬರೂ 5 ವರ್ಷಗಳ ಕಾಲ ಸಹಪಾಠಿಗಳಾಗಿದ್ದರು. ಮುಂಬಯಿ ದಾಳಿಗೂ ಮುನ್ನ 2006 ರಿಂದ 2008ರ ವರೆಗೆ ಡೇವಿಡ್ ಹೆಡ್ಲಿ ಭಾರತದ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದ. ಈ ಪ್ರವಾಸಕ್ಕೆ ರಾಣಾ ಸಹಾಯ ಮಾಡಿದ್ದ. 2006ರಲ್ಲಿ ಹೆಡ್ಲಿ ಮತ್ತು ಲಷ್ಕರ್ ಉಗ್ರ ಸಂಘಟನೆಯ ಕೆಲವರು ಮುಂಬಯಿಯಲ್ಲಿ ವಲಸೆ ಕಚೇರಿ ತೆರೆಯುವ ಬಗ್ಗೆ ಚರ್ಚಿಸಿದ್ದರು. ಈ ಮೂಲಕ ತಮ್ಮ ವಿಧ್ವಂಸಕ ಕೃತ್ಯಗಳಿಗೆ ಕಣ್ಗಾವಲು ಚಟುವಟಿಕೆ ನಡೆಸುವ ಉದ್ದೇಶ ಹೊಂದಿದ್ದರು. ಇದಕ್ಕೆ ರಾಣಾ ಎಲ್ಲ ಅಗತ್ಯ ನೆರವು ಒದಗಿಸಿದ್ದ. ದಾಳಿಗೂ ಮುನ್ನ 3 ವರ್ಷದಲ್ಲಿ ಒಟ್ಟು 5 ಬಾರಿ ಡೇವಿಡ್ ಹೆಡ್ಲಿ ಮುಂಬಯಿ ಪ್ರವಾಸ ಕೈಗೊಂಡಿದ್ದು, ಈ ವೇಳೆ ದಾಳಿ ನಡೆಸಬಹುದಾದ ಸಂಭಾವ್ಯ ಸ್ಥಳಗಳ ವೀಡಿಯೋ ಮಾಡಿದ್ದ ಎನ್ನಲಾಗಿದೆ. ಜತೆಗೆ ಪ್ರತೀ ಪ್ರವಾಸದ ಬಳಿಕ ವೀಡಿಯೋಗಳನ್ನು ಒದಗಿಸಲು ಪಾಕಿಸ್ಥಾನಕ್ಕೆ ತೆರಳುತ್ತಿದ್ದ ಎಂದು ಹೇಳಲಾಗಿದೆ. ಡೇವಿಡ್ ಕೋಲ್ಮನ್ ಹೆಡ್ಲಿ ಅಮೆರಿಕದ ಪ್ರಜೆಯಾಗಿದ್ದು, ಈತನ ತಾಯಿ ಅಮೆರಿಕನ್, ತಂದೆ ಪಾಕಿಸ್ಥಾನಿ. ಮುಂಬಯಿ ದಾಳಿಯ ಪ್ರಮುಖ ಸಂಚುಕೋರನಾಗಿದ್ದು 2009ರ ಅಕ್ಟೋಬರ್ನಲ್ಲಿ ಈತನನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದು ಮುಂಬಯಿ ಮೇಲಿನ ದಾಳಿಗಾಗಿಯೇ ಈತ 35 ವರ್ಷಗಳ ಜೈಲು ಶಿಕ್ಷೆಗೆ ಸಹ ಗುರಿಯಾಗಿದ್ದಾನೆ.
ಭಾರತಕ್ಕೆ ರಾಣಾ ಹಸ್ತಾಂತರ ಮಾಡಿದರೆ
ಮುಂದೆ ಕಾನೂನು ಪ್ರಕ್ರಿಯೆ ಏನು?
ರಾಣಾನನ್ನು ಭಾರತಕ್ಕೆ ಕರೆತಂದು ಇಲ್ಲಿ ಆತನ ವಿಚಾರಣೆ ನಡೆಸುವುದರಿಂದ ಮುಂಬಯಿ ದಾಳಿಗೆ ಸಂಬಂಧಿಸಿದಂತೆ ಮತ್ತಷ್ಟು ವಿಷಯಗಳು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಪಾಕಿಸ್ಥಾನದ ಐಸಿಸ್ ಜತೆಗೂ ಈತ ಸಂಪರ್ಕ ಹೊಂದಿದ್ದು ದಾಳಿಯಲ್ಲಿ ಪಾಲ್ಗೊಂಡ ಮತ್ತಷ್ಟು ಉಗ್ರರ ಮಾಹಿತಿ ಲಭ್ಯವಾಗುವ ಸಾಧ್ಯತೆ ಇದೆ. ಈತನನ್ನು ಭಾರತಕ್ಕೆ ಕರೆತಂದ ಬಳಿಕ ಹೊಸ ಚಾರ್ಜ್ಶೀಟ್ ಹಾಕಲಾಗುತ್ತದೆ. ಈತನ ವಿಚಾರಣೆ ವೇಳೆ ಏನಾದರೂ ಸುಳಿವು ಸಿಕ್ಕಲ್ಲಿ ಮತ್ತೆ ತನಿಖೆ ಆರಂಭಿಸಲಾಗುತ್ತದೆ. ಈ ಹಿಂದೆ ಯಾರಾದರೂ ತನಿಖೆಯಿಂದ ತಪ್ಪಿಸಿಕೊಂಡಿದ್ದರೆ ಅವರು ಹೊಸದಾಗಿ ತನಿಖೆ ಎದುರಿಸಬೇಕಾಗುತ್ತದೆ. ಮುಂಬಯಿ ದಾಳಿಯಲ್ಲಿ ಜೀವಂತ ಸೆರೆಸಿಕ್ಕ ಏಕೈಕ ಉಗ್ರ ಅಜ್ಮಲ್ ಕಸಬ್ಗ ಮಾತ್ರ ಈವರೆಗೆ ಗಲ್ಲು ಶಿಕ್ಷೆಯಾಗಿದೆ.
ಏನಿದು ಮುಂಬಯಿ ದಾಳಿ?
2008ರ ನವೆಂಬರ್ 26ರಂದು ಸಮುದ್ರ ಮಾರ್ಗವಾಗಿ ಮುಂಬಯಿಗೆ ಲಗ್ಗೆ ಇಟ್ಟಿದ್ದ ಪಾಕಿಸ್ಥಾನದ 10 ಉಗ್ರರು, ತಾಜ್ ಹೊಟೇಲ್, ಛತ್ರಪತಿ ಶಿವಾಜಿ ಟರ್ಮಿನಸ್ ಸೇರಿದಂತೆ ಹಲವು ಸ್ಥಳಗಳಲ್ಲಿ 3 ದಿನಗಳ ಕಾಲ ದಾಳಿ ನಡೆಸಿದ್ದರು. ಈ ವೇಳೆ 166 ಜನರು ಮೃತಪಟ್ಟು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಮೃತರಲ್ಲಿ 6 ಜನ ಅಮೆರಿಕನ್ನರು ಸಹ ಸೇರಿದ್ದರು.
ರಾಣಾ ಹಸ್ತಾಂತರದ ಪ್ರಯತ್ನ…
2008: ಮುಂಬೈ ಮೇಲೆ ಭಯೋತ್ಪಾದಕರ ದಾಳಿ, 166 ಮಂದಿ ಸಾವು
2009: ದಾಳಿಯ ಸಂಚುಕೋರ ಡೇವಿಡ್ ಹೆಡ್ಲಿ ಅಮೆರಿಕದಲ್ಲಿ ಬಂಧನ, ಹೆಡ್ಲಿ ಬಳಿಕ ಡಾ. ತಹಾವ್ವುರ್ ರಾಣಾ ಕೂಡ ಅಮೆರಿಕದಲ್ಲಿ ಸೆರೆ
2011:ಡಾ.ತಹಾವ್ವುರ್ ರಾಣಾಗೆ ಅಮೆರಿಕದಲ್ಲಿ 14 ವರ್ಷಗಳ ಜೈಲು, ರಾಣಾ ಸೇರಿ 9 ಮಂದಿ ವಿರುದ್ಧ ಎನ್ಐಎ ಚಾರ್ಜ್ಶೀಟ್ ಸಲ್ಲಿಕೆ
2014:ರಾಣಾ ಇತರರು ತಲೆಮರೆಸಿಕೊಂಡವರು ಎಂದು ಎನ್ಐಎ ಘೋಷಣೆ
2024:ಭಾರತಕ್ಕೆ ಗಡೀಪಾರು ವಿರೋಧಿಸಿ ಅಮೆರಿಕ ಸುಪ್ರೀಂಗೆ ರಾಣಾ ಅರ್ಜಿ
2025:ಭಾರತಕ್ಕೆ ಗಡೀಪಾರು ಮಾಡಲು ಅಮೆರಿಕ ಸುಪ್ರೀಂಕೋಟ್ ಅಸ್ತು
-ಪಿ. ಕುಮಾರ್
BJP: ಕೇಂದ್ರ ಶಿಸ್ತು ಸಮಿತಿ ನೋಟಿಸ್ಗೆ ಉತ್ತರ ಕೊಟ್ಟ ಶಾಸಕ ಬಸನಗೌಡ ಯತ್ನಾಳ್
Yellapur: ಕಂದಕಕ್ಕೆ ಬಿದ್ದ ಸರಕು ತುಂಬಿದ ಲಾರಿ; ಚಾಲಕ ಹಾಗೂ ನಿರ್ವಾಹಕ ಪಾರು
Manipal: ಮಾಹೆ; ಆಧುನಿಕ ಗ್ರಂಥಾಲಯಗಳ ನಿರ್ವಹಣೆ: ಫೆ. 21, 22: 6ನೇ ರಾಷ್ಟ್ರೀಯ ಸಮ್ಮೇಳನ
Yadagiri: ವಿದ್ಯಾರ್ಥಿಗಳಿಂದ ಚರಂಡಿ ಸ್ವಚ್ಛತೆ: ಆಕ್ರೋಶ
Bhagavad Gita: ಪ್ರಜಾಪ್ರಭುತ್ವ ಸಂಪೂರ್ಣ ಸಾಕಾರಗೊಳ್ಳಲು ಪ್ರತಿಯೊಬ್ಬನಿಗೂ ಭಗವದ್ಗೀತೆ
You seem to have an Ad Blocker on.
To continue reading, please turn it off or whitelist Udayavani.