ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ


Team Udayavani, Oct 24, 2021, 6:00 AM IST

ಪ್ರಗತಿ ಪಥದಲ್ಲಿ ದಾಪುಗಾಲಿಡುತ್ತಿದೆ ದೇಶದ ವೈಮಾನಿಕ ಕ್ಷೇತ್ರ

ಸರಿಸುಮಾರು ಒಂದೂವರೆ ವರ್ಷದಿಂದ ಕೊರೊನಾ ಹಿನ್ನೆಲೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ, ಅನಿಶ್ಚತತೆಗಳ ಕಾರ್ಮೋಡ ಕೊನೆಗೂ ಸರಿದಿದ್ದು ಕಳೆದ ವಾರದಿಂದ ದೇಶೀಯ ವಿಮಾನಯಾನ ಯಥಾಸ್ಥಿತಿಗೆ ಮರಳಿದೆ. ಈಗಾಗಲೇ ಹಬ್ಬಗಳ ಋತು ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ದೇಶಿಯ ವಿಮಾನಗಳು ಶೇ. 100 ಆಸನ ಸಾಮರ್ಥ್ಯದೊಂದಿಗೆ ಹಾರಾಟ ನಡೆಸಲು ಅನುಮತಿ ನೀಡಿದೆ. ಇದರೊಂದಿಗೆ ವಿವಿಧ ನಿರ್ಬಂಧಗಳೊಂದಿಗೆ ಯಾನಿಗಳಿಗೆ ದೇಶೀಯ ವಿಮಾನ ಯಾನ ಸೇವೆ ಒದಗಿಸುತ್ತಿದ್ದ ವೈಮಾನಿಕ ಕಂಪೆನಿಗಳು ನಿಟ್ಟುಸಿರು ಬಿಡುವಂತಾಗಿದೆ. ಇದೇ ವೇಳೆ ಅಂತಾರಾಷ್ಟ್ರೀಯ ವಿಮಾನ ಯಾನವೂ ಬಹುತೇಕ ಪುನರಾರಂಭಗೊಂಡಿದ್ದು ವಿಮಾನಯಾನ ಕ್ಷೇತ್ರದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.

2022ರಲ್ಲಿ ದೇಶದ ವಿಮಾನ ಯಾನ ಕ್ಷೇತ್ರದಲ್ಲಿ ಹಲವಾರು ಮಹತ್ತರ ಬದಲಾವಣೆಗಳನ್ನು ನಿರೀಕ್ಷಿಸಲಾಗಿದ್ದು ಪ್ರಯಾಣಿಕರಿಗೆ ಹಲವಾರು ಸಿಹಿ ಸುದ್ದಿಗಳನ್ನು ನೀಡಲು ವಿಮಾನಯಾನ ಕಂಪೆನಿಗಳು ಸಜ್ಜಾಗಿವೆ. ಎಲ್ಲವೂ ಅಂದುಕೊಂಡಂತೆ ನಡೆದದ್ದೇ ಆದಲ್ಲಿ ಮುಂದಿನ ವರ್ಷದ ಮೊದಲ ತ್ತೈಮಾಸಿಕದಿಂದಲೇ ದೇಶದ ವಿಮಾನ ಯಾನಿಗಳ ಪಾಲಿಗೆ ಇನ್ನಷ್ಟು ಹೆಚ್ಚಿನ ಆಯ್ಕೆಗಳು ಲಭ್ಯವಾಗಲಿವೆಯಲ್ಲದೆ ಪ್ರಯಾಣ ದರವೂ ಕಡಿಮೆಯಾಗುವ ನಿರೀಕ್ಷೆ ಇದೆ. ಜೆಟ್‌ ಏರ್‌ವೆàಸ್‌ನ ವಿಮಾನಗಳು ಹಾರಾಟ ಪುನರಾರಂಭಿಸಲಿದ್ದರೆ “ಆಕಾಶ ಏರ್‌’ನ ವಿಮಾನಗಳ ಹಾರಾಟಕ್ಕೆ ಚಾಲನೆ ಲಭಿಸಲಿದೆ. ಇನ್ನು ಏರ್‌ ಇಂಡಿಯಾದ “ಘರ್‌ ವಾಪಸಿ’ ಕೂಡ ವಿಮಾನಯಾನಿಗಳ ಪಾಲಿಗೆ ಧನಾತ್ಮಕವೇ. ಈಗಾಗಲೇ ಟಾಟಾ ಸಂಸ್ಥೆ ಏರ್‌ ಇಂಡಿಯಾ ವಿಮಾನಗಳ ಹಾರಾಟವನ್ನು ಹೆಚ್ಚಿಸಲು ಮತ್ತು ಯಾನಿಗಳ ಸುಗಮ ಪ್ರಯಾಣಕ್ಕೆ ಅವಕಾಶ ಕಲ್ಪಿಸಿಕೊಡುವ ಭರವಸೆಯನ್ನು ನೀಡಿದೆ. ಇನ್ನು ಭಾರತ ಸರಕಾರದ ಮಹತ್ವಾಕಾಂಕ್ಷಿ “ಉಡಾನ್‌’ಯೋಜನೆಯಡಿಯಲ್ಲಿ ಹೊಸ ವಾಯುಮಾರ್ಗಗಳಲ್ಲಿ ವಿಮಾನಗಳ ಹಾರಾಟ, ಎರಡು ಮತ್ತು ಮೂರನೇ ಸ್ತರದ ನಗರಗಳಿಗೂ ವಾಯು ಸಾರಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಇಂತಹ ನಗರಗಳಲ್ಲಿ ವಿಮಾನ ನಿಲ್ದಾಣಗಳ ನಿರ್ಮಾಣ ಕಾರ್ಯವೂ ಭರದಿಂದ ಸಾಗಿದ್ದು ಮುಂದಿನ ವರ್ಷ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ನಿಲ್ದಾಣಗಳು ವಿಮಾನಗಳ ಹಾರಾಟಕ್ಕೆ ಸಜ್ಜುಗೊಳ್ಳಲಿವೆ. ಇವೆಲ್ಲವೂ ಮುಂದಿನ ದಿನಗಳಲ್ಲಿ ದೇಶೀಯ ವಿಮಾನ ಯಾನ ಕ್ಷೇತ್ರವನ್ನು ಪ್ರಗತಿ ಪಥದಲ್ಲಿ ಉನ್ನತ ಸ್ತರಕ್ಕೆ ಕೊಂಡೊಯ್ಯಲಿದೆ ಎಂದು ನಿರೀಕ್ಷಿಸಲಾಗಿದೆ. 2022ರಲ್ಲಿ ದೇಶದ ವೈಮಾನಿಕ ಕ್ಷೇತ್ರ ಹೊಸ ಎತ್ತರಕ್ಕೇರುವ ನಿರೀಕ್ಷೆ ಮೂಡಿಸಿದ್ದು ಇದಕ್ಕೆ ಕಾರಣವಾಗಿರುವ ಕೆಲವೊಂದು ಬೆಳವಣಿಗೆಗಳ ಮೇಲೆ ಇಲ್ಲಿ ಬೆಳಕು ಚೆಲ್ಲಲಾಗಿದೆ.

ಆಕಾಶ ಏರ್‌ಗೆ ಚಾಲನೆ
ಮುಂದಿನ ವರ್ಷದ ಬೇಸಗೆ ಋತುವಿನ ವೇಳೆಗೆ “ಆಕಾಶ ಏರ್‌’ ತನ್ನ ವಿಮಾನ ಹಾರಾಟವನ್ನು ಆರಂಭಿಸಲಿದೆ. ಬಹುಕೋಟಿ ಉದ್ಯಮಿ ರಾಕೇಶ್‌ ಜುಂಜುನ್‌ವಾಲಾ ಅವರು ಸುಮಾರು 260ಕೋ. ರೂ.ಗಳನ್ನು ಹೂಡಿಕೆ ಮಾಡಲಿದ್ದಾರೆ. ಮುಂದಿನ ನಾಲ್ಕು ವರ್ಷಗಳಲ್ಲಿ 70 ವಿಮಾನಗಳನ್ನು ಕಂಪೆನಿಗೆ ಸೇರ್ಪಡೆಗೊಳಿಸಲು ಸಿದ್ಧತೆ ನಡೆಸಿದೆ. ವಿಮಾನಗಳ ಖರೀದಿಗಾಗಿ ಏರ್‌ಬಸ್‌ನೊಂದಿಗೆ ಕಂಪೆನಿ ಮಾತುಕತೆ ನಡೆಸುತ್ತಿದೆ. ಇದು ಅಲ್ಟ್ರಾ ಲೋ ಕಾಸ್ಟ್‌ ಕ್ಯಾರಿಯರ್‌(ಯುಎಲ್‌ಸಿಸಿ) ಏರ್‌ಲೈನ್‌ ಆಗಿರಲಿದ್ದು ಪ್ರಯಾಣ ದರ ಅಗ್ಗವಾಗಿರಲಿದೆ. ಆದರೆ ದೇಶದ ವಾಯುಯಾನ ಕ್ಷೇತ್ರದಲ್ಲಿ ಈಗಾಗಲೇ ಯುಎಲ್‌ಸಿಸಿ ವಿಮಾನಗಳು ಹಾರಾಟ ನಡೆಸುತ್ತಿರುವುದರಿಂದಾಗಿ ಇದು ಎಷ್ಟರಮಟ್ಟಿಗೆ ಯಾನಿಗಳನ್ನು ಆಕರ್ಷಿಸಲಿದೆ ಎಂಬ ಬಗ್ಗೆ ಸಹಜವಾಗಿ ಎಲ್ಲರಲ್ಲೂ ಕುತೂಹಲ ಮೂಡಿದೆ. ಇದು ಆಕಾಶ ಏರ್‌ನ ಪಾಲಿಗೆ ಗಂಭೀರ ಸವಾಲೇ ಸರಿ. ಇನ್ನು ಯುಎಲ್‌ಸಿಸಿ ವಿಮಾನಗಳಲ್ಲಿ ಯಾನಿಗಳಿಗೆ ತೀರಾ ಅಗತ್ಯ ಸೌಲಭ್ಯಗಳು ಮಾತ್ರವೇ ಲಭಿಸಲಿವೆ. ಈ ವಿಮಾನಗಳಲ್ಲಿ ಮನೋರಂಜನೆ, ಆಹಾರ ಪೂರೈಕೆ ಮತ್ತು ಬಿಸಿನೆಸ್‌ ಕ್ಲಾಸ್‌ಗಳ ವ್ಯವಸ್ಥೆಗಳಿರುವುದಿಲ್ಲ. ಇದರ ವೆಚ್ಚ ಉಳಿತಾಯವಾಗಲಿದ್ದು ಇದರಿಂದಾಗಿ ಟಿಕೆಟ್‌ ದರವೂ ಇತರ ವಿಮಾನಗಳಿಗೆ ಹೋಲಿಸಿದಲ್ಲಿ ಕಡಿಮೆಯಾಗಿರಲಿದೆ. ಟಿಕೆಟ್‌ ದರದಲ್ಲಿ ಆಹಾರ ಅಥವಾ ಬ್ಯಾಗೇಜ್‌ ಸೇವೆಗಳಿಗಾಗಿ ಪ್ರತ್ಯೇಕ ಶುಲ್ಕವಿರುವುದಿಲ್ಲ.

ಉಡಾನ್‌ ಯೋಜನೆ ಯಶಸ್ವಿ
ದೇಶೀಯ ವಿಮಾನ ಸೇವೆಯನ್ನು ಪ್ರತಿಯೊಬ್ಬ ನಾಗರಿಕನೂ ಪಡೆಯುವಂತಾಗಲು ಕೇಂದ್ರ ಸರಕಾರ 2017ರ ಎಪ್ರಿಲ್‌ 27ರಂದು ಆರಂಭಿಸಿದ ಈ ವಿನೂತನ ವಿಮಾನ ಯಾನ ಯೋಜನೆ ಈಗಾಗಲೇ ಮಹತ್ತರ ಯಶಸ್ಸನ್ನು ಕಂಡಿದೆ. ದೇಶದ ವಿವಿಧೆಡೆಗಳಿಗೆ ಉಡಾನ್‌ ಯೋಜನೆಯ ಮೂಲಕ ವಿಮಾನಗಳು ಹಾರಾಟ ನಡೆಸುತ್ತಿವೆ. ಸದ್ಯ 369 ಮಾರ್ಗಗಳಲ್ಲಿ ಉಡಾನ್‌ ಸೇವೆ ಲಭ್ಯವಿದೆ. 2021-22ನೇ ಆರ್ಥಿಕ ವರ್ಷದಲ್ಲಿ ಕೇಂದ್ರ ಬಜೆಟ್‌ನಲ್ಲಿ ಉಡಾನ್‌ ಸೇವೆಯ ವಿಸ್ತರಣೆಗಾಗಿ 1,130ಕೋ. ರೂ.ಗಳನ್ನು ಮೀಸಲಿಡಲಾಗಿದೆ. 2018-2021ರ ವರೆಗೆ ಉಡಾನ್‌ ಯೋಜನೆಗಾಗಿ ಸರಕಾರ 3,350 ಕೋ. ರೂ.ಗಳನ್ನು ಖರ್ಚು ಮಾಡಿದೆ. ಕೇಂದ್ರ ಸರಕಾರ ಉಡಾನ್‌ ಯೋಜನೆಯಡಿಯಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 900ಕ್ಕಿಂತ ಹೆಚ್ಚಿನ ಹೊಸ ವೈಮಾನಿಕ ಮಾರ್ಗಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಿದೆ. ಅಷ್ಟು ಮಾತ್ರವಲ್ಲದೆ ವಿಮಾನ ಸಂಚಾರವೇ ಇಲ್ಲದಿದ್ದ ಕಡೆಗಳಲ್ಲಿ 50ಕ್ಕಿಂತಲೂ ಅಧಿಕ ವಿಮಾನ ನಿಲ್ದಾಣಗಳು ಕಾರ್ಯಾಚರಣೆ ಆರಂಭಿಸಿವೆ. ಆದರೆ ಈ ವರ್ಷದ ಮೇ 31ರ ವರೆಗೆ ದೇಶದ ಒಟ್ಟಾರೆ ವಾಯುಯಾನ ಮಾರ್ಗಗಳ ಪೈಕಿ ಶೇ. 47ರಲ್ಲಿ ಮತ್ತು ವಿಮಾನ ನಿಲ್ದಾಣಗಳ ಪೈಕಿ ಶೇ. 39ರಷ್ಟರಲ್ಲಿ ಮಾತ್ರವೇ ಉಡಾನ್‌ವಿಮಾನ ಸೇವೆ ಆರಂಭಗೊಂಡಿದ್ದು ಇದನ್ನು ಇನ್ನಷ್ಟು ಹೆಚ್ಚಿಸುವುದು ಸರಕಾರದ ಮುಂದಿರುವ ಬಲುದೊಡ್ಡ ಸವಾಲಾಗಿದೆ. ಉಡಾನ್‌ ಯೋಜನೆಯಿಂದ ಮೂಲಸೌಕರ್ಯಗಳ ಹೆಚ್ಚಳವಾಗುವುದರ ಜತೆಯಲ್ಲಿ ವಿಮಾನಯಾನ ಸೇವೆಯಲ್ಲಿ ಇನ್ನಷ್ಟು ಹೆಚ್ಚಿನ ಸೌಲಭ್ಯಗಳು ಯಾನಿಗಳಿಗೆ ಲಭಿಸಲಿದೆ.

ಇದನ್ನೂ ಓದಿ:ಭೀಮಾ ಕೋರೆಗಾಂವ್‌ ಪ್ರಕರಣ: ವಿಚಾರಣೆಗೆ ರಶ್ಮಿ ಶುಕ್ಲಾ, ಪರಂಬೀರ್‌ ಸಿಂಗ್‌ಗೆ ಸಮನ್ಸ್‌ ಜಾರಿ

ಏರ್‌ ಇಂಡಿಯಾದ ಘರ್‌ ವಾಪಸಿ
ಈಗಾಗಲೇ ಟಾಟಾ ಸಮೂಹವು ಏರ್‌ ಇಂಡಿಯಾವನ್ನು ತನ್ನ ತೆಕ್ಕೆಗೆ ಮರು ಸೆಳೆದುಕೊಂಡಿದ್ದು ಇದಕ್ಕಾಗಿ 18,000 ಕೋ. ರೂ.ಗಳನ್ನು ವ್ಯಯಿಸಿದೆ. ಇದರೊಂದಿಗೆ 117 ವಿಮಾನಗಳು, ಸಾವಿರಕ್ಕೂ ಅಧಿಕ ಪರಿಣತ ಪೈಲಟ್‌ಗಳು ಮತ್ತು ಸಿಬಂದಿ ಟಾಟಾ ಸಮೂಹಕ್ಕೆ ಸೇರ್ಪಡೆ ಗೊಳ್ಳಲಿದ್ದಾರೆ. 4,400 ದೇಶೀಯ ಮತ್ತು 1,800 ಅಂತಾರಾಷ್ಟ್ರೀಯ ಲ್ಯಾಂಡಿಂಗ್‌ ಮತ್ತು ಪಾರ್ಕಿಂಗ್‌ ಸ್ಲಾಟ್‌ಗಳು ಕೂಡ ಟಾಟಾ ಸನ್ಸ್‌ ಕಂಪೆನಿಯ ಪಾಲಾಗಿದೆ. ಸದ್ಯದ ನಿರೀಕ್ಷೆಯಂತೆ ದೇಶೀಯ ವಿಮಾನ ಯಾನ ಮಾರುಕಟ್ಟೆಯಲ್ಲಿ ಶೇ.27ರಿಂದ 35ರಷ್ಟು ಪಾಲು ಟಾಟಾದ ಕೈವಶವಾಗಲಿದೆ. ಸರಕಾರದ ಅಧೀನದಲ್ಲಿದ್ದ ಏರ್‌ ಇಂಡಿಯಾ 23,000 ಕೋಟಿ ರೂ. ಸಾಲದಲ್ಲಿದ್ದು ಈ ಹೊರೆಯ ನಿಭಾಯಿಸುವ ಜತೆಯಲ್ಲಿ ಏರ್‌ ಇಂಡಿಯಾವನ್ನು ವೈಮಾನಿಕ ಮಾರುಕಟ್ಟೆಯಲ್ಲಿ ಮತ್ತೆ ಮುಂಚೂಣಿಗೆ ತರುವ ಮಹತ್ತರ ಸವಾಲು ಟಾಟಾ ಕಂಪೆನಿಯ ಮುಂದಿದೆ. ಏರ್‌ ಇಂಡಿಯಾವನ್ನು ಮರಳಿ ತನ್ನ ಸ್ವಾಧೀನಕ್ಕೆ ತೆಗೆದುಕೊಂಡಿರುವ ಹುಮ್ಮಸ್ಸಿನಲ್ಲಿರುವ ಟಾಟಾದ ಪಾಲಿಗೆ ಇದು ಅತ್ಯಂತ ಪ್ರತಿಷ್ಠೆಯ ವಿಚಾರವಾಗಿರುವುದರಿಂದ ಯಾನಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುವ ಮೂಲಕ ಗುಣಮಟ್ಟದ ಸೇವೆಯನ್ನು ನೀಡುವುದಾಗಿ ಈಗಾಗಲೇ ಘೋಷಿಸಿದೆ. ಈ ಮೂಲಕ ಟಾಟಾ ಸನ್ಸ್‌ ಏರ್‌ ಇಂಡಿಯಾಕ್ಕೆ ಪುನಶ್ಚೇತನ ನೀಡುವ ಸಂಕಲ್ಪ ತೊಟ್ಟಿದೆ.

ವಿಮಾನಯಾನ
ಮಾರುಕಟ್ಟೆಯ ವ್ಯವಹಾರ
ಭಾರತದ ವಾಯುಯಾನ ಕ್ಷೇತ್ರವು ಒಟ್ಟಾರೆ 1.2ಲಕ್ಷ ಕೋಟಿ ರೂ. ವ್ಯವಹಾರವನ್ನು ಹೊಂದಿದೆ. ಸದ್ಯದ ಅಂದಾಜಿನಂತೆ 2024ರ ವೇಳೆಗೆ ಭಾರತದ ವಾಯುಯಾನ ಕ್ಷೇತ್ರವು ಯುಕೆಯನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀದೊಡ್ಡ ವೈಮಾನಿಕ ಮಾರುಕಟ್ಟೆಯನ್ನು ಹೊಂದಿದ ಹೆಗ್ಗಳಿಕೆಗೆ ಪಾತ್ರವಾಗಲಿದೆ.

2027ರ ವೇಳೆಗೆ ಪ್ರತೀ ವರ್ಷ ದೇಶದ ಆಗಸದಲ್ಲಿ 1,100ಕ್ಕೂ ಅಧಿಕ ವಿಮಾನಗಳು ಹಾರಾಟ ನಡೆಸಲಿವೆ. ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತೀಯ ವಾಯುಯಾನ ಕ್ಷೇತ್ರದಲ್ಲಿ 35,000ಕೋ. ರೂ. ಹೂಡಿಕೆಯಾಗಲಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತೀಯ ವಿಮಾನ ನಿಲ್ದಾಣ
ಗಳ ಪ್ರಾಧಿಕಾರ ಮೂಲಸೌಕರ್ಯ ವೃದ್ಧಿಗಾಗಿ 25,000ಕೋ. ರೂ.ಗಳನ್ನು ವ್ಯಯಿಸಲಿದೆ. ವಿಮಾನಯಾನ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸರಕಾರ ಸಂಪೂರ್ಣ ಹಸುರು ನಿಶಾನೆ ತೋರಿರುವುದರಿಂದ ಯಥೇತ್ಛವಾಗಿ ಖಾಸಗಿ ಹೂಡಿಕೆ ಹರಿದು ಬರುತ್ತಿದೆಯಲ್ಲದೆ ಸರಕಾರವೂ ಈ ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಹೂಡಿಕೆಗೆ ಆಸಕ್ತಿ ತೋರುತ್ತಿರುವುದರಿಂದಾಗಿ ಮುಂದಿನ ಕೆಲವೇ ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ವಿಶ್ವದಲ್ಲಿ ಪಾರಮ್ಯವನ್ನು ಮೆರೆಯಲಿದೆ. 2030ರ ವೇಳೆಗೆ ಚೀನ ಮತ್ತು ಅಮೆರಿಕವನ್ನು ಹಿಂದಿಕ್ಕಿ ಪ್ರಯಾಣಿಕ ವಿಮಾನಯಾನ ಮಾರುಕಟ್ಟೆಯಲ್ಲಿ ಅಗ್ರಸ್ಥಾನಕ್ಕೇರಲಿದೆ ಎಂದು ಅಂತಾರಾಷ್ಟ್ರೀಯ ವಾಯು ಸಾರಿಗೆ ಅಸೋಸಿಯೇಶನ್‌(ಐಎಟಿಎ)ಅಂದಾಜಿಸಿದೆ.

ಜೆಟ್‌ ಏರ್‌ವೇಸ್ 2.0
ತೀವ್ರ ನಷ್ಟದಲ್ಲಿ ಸಿಲುಕಿ ಸಂಪೂರ್ಣವಾಗಿ ದಿವಾಳಿಯಾಗಿರುವ ಜೆಟ್‌ ಏರ್‌ವೇಸ್ ಗೆ ಮರುಜೀವ ನೀಡುವ ಪ್ರಕ್ರಿಯೆ ಅಂತಿಮ ಹಂತ ತಲುಪಿದ್ದು 2022ರ ಮೊದಲ ತ್ತೈಮಾಸಿಕದಲ್ಲಿ ಈ ಕಂಪೆನಿಯ ವಿಮಾನಗಳ ಹಾರಾಟವನ್ನು ಪುನರಾರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಜಲನ್‌-ಕನ್ಸೋರ್ಟಿಯಂ 1,375 ಕೋಟಿ ರೂ. ಗಳನ್ನು ಹೂಡಿಕೆ ಮಾಡುವ ಮೂಲಕ ಜೇಟ್‌ ಏರ್‌ವೇಸ್ ಗೆ ಕಾಯಕಲ್ಪ ನೀಡಲಿದೆ. ಮುಂದಿನ 5 ವರ್ಷಗಳಲ್ಲಿ 100 ವಿಮಾನಗಳನ್ನು ಹೊಂದಲು ಸಿದ್ಧತೆ ಮಾಡಿಕೊಂಡಿರುವ ಒಕ್ಕೂಟ ಈಗಾಗಲೇ ಇತ್ತ ಕಾರ್ಯೋನ್ಮುಖವಾಗಿದೆ. 2021-22ನೇ ಹಣಕಾಸು ವರ್ಷದಲ್ಲಿ 1,000ಕ್ಕೂ ಅಧಿಕ ಉದ್ಯೋಗಿಗಳನ್ನು ಕಂಪೆನಿ ನೇಮಕ ಮಾಡಿಕೊಳ್ಳಲಿದೆ.

ಲ್ಯಾಂಡಿಂಗ್‌ ಮತ್ತು ಪಾರ್ಕಿಂಗ್‌ ಸ್ಲಾಟ್‌ಗಳ ಖರೀದಿ ಮತ್ತು ಏರ್‌ಕ್ರಾಫ್ಟ್ ಫ್ಲೀಟ್‌ಗಳನ್ನು ಸಿದ್ಧಪಡಿಸುವ ಮಹತ್ತರ ಸವಾಲು ಒಕ್ಕೂಟದ ಮುಂದಿದೆ. ಇದೇ ವೇಳೆ ಜೆಟ್‌ ಏರ್‌ವೇಸ್ ನ ಮಾಜಿ ಉದ್ಯೋಗಿಗಳು ಕಂಪೆನಿಯಿಂದ ತಮಗೆ ಪಾವತಿಯಾಗಬೇಕಿರುವ ಬಾಕಿ ಮೊತ್ತಕ್ಕಾಗಿ ಮತ್ತು ಜೆಟ್‌ ಏರ್‌ವೇಸ್ ನ ಆಡಳಿತವನ್ನು ಜಲನ್‌-ಕ್ಯಾಲ್ರಾಕ್‌ ಒಕ್ಕೂಟಕ್ಕೆ ನೀಡಿರುವುದನ್ನು ಪ್ರಶ್ನಿಸಿ ರಾಷ್ಟ್ರೀಯ ಕಂಪೆನಿ ಕಾನೂನು ನ್ಯಾಯಮಂಡಳಿಗೆ ಮೇಲ್ಮನವಿ ಸಲ್ಲಿಸಿದೆ. ಒಕ್ಕೂಟವು ಕಂಪೆನಿಯ ಮಾಜಿ ಉದ್ಯೋಗಿಗಳಿಗೆ ನಿರ್ದಿಷ್ಟ ಮೊತ್ತವನ್ನು ನೀಡುವ ಭರವಸೆ ನೀಡಿದೆಯಾದರೂ ಇದನ್ನು ನೌಕರರ ಸಂಘ ಒಪ್ಪುತ್ತಿಲ್ಲ. ಹೀಗಾಗಿ ಈ ಸಮಸ್ಯೆಯನ್ನು ಜಲನ್‌-ಕ್ಯಾಲ್ರಾಕ್‌ ಒಕ್ಕೂಟ ಹೇಗೆ ಬಗೆಹರಿಸಲಿದೆ ಎಂಬುದನ್ನು ಕಾದುನೋಡಬೇಕಿದೆ.

ಜೆಟ್‌ ಏರ್‌ವೇಸ್ ವಿಮಾನ ಹಾರಾಟವನ್ನು ಪುನರಾರಂಭಿಸಿದ್ದೇ ಆದಲ್ಲಿ ಯಾನಿಗಳಿಗೆ ಹೆಚ್ಚಿನ ಆಯ್ಕೆಗಳು ಲಭಿಸಲಿವೆಯಲ್ಲದೆ ಟಿಕೆಟ್‌ ದರದಲ್ಲಿಯೂ ವಿಮಾನ ಯಾನ ಕಂಪೆನಿಗಳ ನಡುವೆ ಪೈಪೋಟಿ ಏರ್ಪಟ್ಟು ಟಿಕೆಟ್‌ ದರ ಕಡಿಮೆಯಾಗುವ ಎಲ್ಲ ಸಾಧ್ಯತೆಗಳಿವೆ. ಉದ್ಯಮಿ ಮುರಾರಿ ಲಾಲ್‌ ಜಲನ್‌ ಮತ್ತು ಮೂಲತಃ ಜರ್ಮನಿಯವರಾದ ಫ್ಲೋರಿಯಲ್‌ ಫ್ರೆಚ್‌ ನೇತೃತ್ವದ ಬ್ರಿಟನ್‌ನ ಹೂಡಿಕೆದಾರ ಸಂಸ್ಥೆಯಾದ ಕ್ಯಾಲ್ರಾಕ್‌ ಜಂಟಿಯಾಗಿ ಜಲನ್‌-ಕ್ಯಾಲ್ರಾಕ್‌ ಒಕ್ಕೂಟವನ್ನು ರಚಿಸಿಕೊಂಡಿದ್ದು ಇದೀಗ ಜೆಟ್‌ ಏರ್‌ವೇಸ್ ಗೆ ಮರುಜೀವ ನೀಡಲು ಮುಂದಾಗಿವೆ.

ಟಾಪ್ ನ್ಯೂಸ್

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

9-yoga

Sattvic Diet: ಪರೀಕ್ಷಾ ಒತ್ತಡ ನಿವಾರಣೆ ಯೋಗ, ಸಾತ್ವಿಕ ಆಹಾರದ ಸರಳ ಸೂತ್ರಗಳು

8-bagappa

Bagappa Harijan: ಭೀಮಾ ತೀರದಲ್ಲಿ ಮತ್ತೆ ರಕ್ತದ ಹನಿ

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Valentine’s Day: ನೀನು ಪ್ರೀತಿಸಿದ್ದೆ.. ಪ್ರೀತಿಸುತ್ತಿರುವೆ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

Pamban Bridge:: ದೇಶದ ಮೊದಲ ವರ್ಟಿಕಲ್‌ ಲಿಫ್ಟ್ ರೈಲ್ವೇ ಸೇತುವೆ: ಶತಮಾನದ ಇತಿಹಾಸ!

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಯಾನಿಯ ಪ್ರಾರ್ಥನೆ

1sadgu

Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

18

Uv Fusion: ಗೆಳೆತನವೆಂಬ ನಿಸ್ವಾರ್ಥ ಬಾಂಧವ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.