![DKSHi-4](https://www.udayavani.com/wp-content/uploads/2025/02/DKSHi-4-415x234.jpg)
![DKSHi-4](https://www.udayavani.com/wp-content/uploads/2025/02/DKSHi-4-415x234.jpg)
Team Udayavani, Feb 21, 2021, 12:41 PM IST
ಭಾರತ ಅನೇಕ ಸಂಸ್ಕೃತಿ, ಪರಂಪರೆ, ಸಂಪ್ರದಾಯ ಹಾಗೂ ಭಹು ಭಾಷೆಯನ್ನು ಹೊಂದಿರುವ ರಾಷ್ಟ್ರ. ಪ್ರಾಧೇಶಿಕ ವೈವಿಧ್ಯತೆಯ ಆಧಾರದ ಮೇಲೆ ಭಾಷೆಗಳು ಬೆಳೆದು ಶ್ರೀಮಂತ ಸಂಸ್ಕೃತಿಗೆ ಕಾರಣವಾಗುತ್ತದೆ. ಇಡೀ ಜಗತ್ತಿನಲ್ಲಿ ಅಂದಾಜು ಏಳು ಸಾವಿರ ಭಾಷೆಗಳಿದ್ದು, ಅವುಗಳಲ್ಲಿ ಎಷ್ಟೋ ಭಾಷೆಗಳು ಇಂದು ಅಳಿವಿನಂಚಿನಲ್ಲಿವೆ. ಆ ಎಲ್ಲಾ ಭಾಷಾ ಸಂಸ್ಕೃತಿಯ ಬಹು ಭಾಷಾವಾದವನ್ನು, ಸಬಲೀಕರಣದತ್ತ ಸಾಗಿಸಲು ವಿಶ್ವ ಮಾತೃ ಭಾಷಾ ದಿನವನ್ನು ಆಚರಿಸಲಾಗುತ್ತಿದೆ.
ಓದಿ : ಬಿಸಿನೀರು ಹಾಗೂ ತಣ್ಣೀರನ್ನು ದೈನಂದಿನ ಬದುಕಿನಲ್ಲಿ ಹೇಗೆ ಬಳಸಬೇಕು?
ಫೆಬ್ರವರಿ 21 ನ್ನು ಪ್ರಪಂಚಾದ್ಯಂತ ವಿಶ್ವ ಮಾತೃ ಭಾಷೆ ದಿನವಾಗಿ ಆಚರಿಸಲಾಗುತ್ತದೆ. ಬಹುಭಾಷೆ ಮತ್ತು ಬಹುಸಂಸ್ಕೃತಿಯನ್ನು ಪ್ರತಿಬಿಂಬಿಸಲು ಮತ್ತು ಪ್ರೋತ್ಸಾಹಿಸಿ ಉಳಿಸಲು ಈ ಆಚರಣೆಯನ್ನು ಮಾಡಲಾಗುತ್ತಿದೆ. 1999 ರಲ್ಲಿ ಮೊದಲ ಬಾರಿಗೆ ಇದನ್ನು ಯುನೆಸ್ಕೋ ಘೋಷಿಸಿತು. ಇದರ ಮುಂದುವರೆದ ಭಾಗವಾಗಿ ವಿಶ್ವಸಂಸ್ಥೆಯು 2008 ನ್ನು ವಿಶ್ವ ಭಾಷೆಗಳ ವರ್ಷ ಎಂದು ಆಚರಿಸಿತು. 2000 ನೆಯ ಇಸವಿಯಿಂದ ಪ್ರತಿ ವರ್ಷ ವಿಶ್ವ ಮಾತೃ ಭಾಷೆ ದಿವಸವನ್ನು ಆಚರಿಸಲಾಗುತ್ತಿದೆ. 1952 ನೆಯ ಇಸವಿಯಲ್ಲಿ ಅಂದಿನ ಪಾಕಿಸ್ತಾನದ ಭಾಗವಾಗಿದ್ದ ಇಂದಿನ ಬಾಂಗ್ಲಾದೇಶದಲ್ಲಿ ಬಾಂಗ್ಲಾ ಭಾಷೆಯನ್ನು ಅಧಿಕೃತ ಭಾಷೆಯಾಗಿ ಗುರುತಿಸಿ ಘೋಷಿಸಬೇಕು ಎಂದು ಹೋರಾಡಿ ವಿದ್ಯಾರ್ಥಿಗಳು ಸತ್ತದಿನದ ನೆನಪಿಗೆ ಈ ಆಚರಣೆಯನ್ನು ಮಾಡಲಾಗುತ್ತಿದೆ.
ವಿಶ್ವ ಮಾತೃ ಭಾಷೆ ದಿನದ ಹಿನ್ನೆಲೆ :
1947 ರಲ್ಲಿ ಭಾರತದಿಂದ ಪಾಕಿಸ್ತಾನ ವಿಭಜನೆಗೊಂಡಾಗ ಅಲ್ಲಿ ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನ ಎಂಬ ಎರಡು ಭೂ ಪ್ರದೇಶಗಳು ರಚನೆಯಾದುವು. ಪೂರ್ವ ಪಾಕಿಸ್ತಾನವೆಂದರೆ ಇಂದಿನ ಬಾಂಗ್ಲಾದೇಶ, ಪಶ್ಚಿಮ ಪಾಕಿಸ್ತಾನವೆಂದರೆ ಈಗಿರುವ ಪಾಕಿಸ್ತಾನ. ಪೂರ್ವ ಪಾಕಿಸ್ತಾನದ ಮಾತೃಭಾಷೆ ಬಂಗಾಳಿಯಾಗಿತ್ತು. ಪಶ್ಚಿಮ ಪಾಕಿಸ್ತಾನದ ಮಾತೃಭಾಷೆ ಉರ್ದು ಆಗಿತ್ತು.
ಓದಿ : ಕೋವಿಡ್ 2ನೇ ಅಲೆಯ ಬಗ್ಗೆ ಗಡಿ ಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರ: ಬಸವರಾಜ ಬೊಮ್ಮಾಯಿ
1948 ರಲ್ಲಿ ಪಶ್ಚಿಮ ಪಾಕಿಸ್ತಾನ ಮಾತೃಭಾಷೆ ಉರ್ದುವನ್ನು’ ರಾಷ್ಟ್ರಭಾಷೆ’ಯೆಂದು ಘೋಷಿಸಿತು. ಇದರಿಂದ ಪೂರ್ವ ಪಾಕಿಸ್ತಾನದ ಬಂಗಾಳಿ ಭಾಷೆಯನ್ನು ಮಾತಾನಾಡುತ್ತಿದ್ದವರು ತುಂಬ ಅಸಮಾಧಾನಗೊಂಡರು. ಉರ್ದುವನ್ನು ರಾಷ್ಟ್ರಭಾಷೆ ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡತೊಡಗಿದರು. ಆಗ ಪಾಕ್ ಇವರ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಕೂಡ ಮಾಡಿತು.
ಪಾಕ್ ಸರ್ಕಾರದ ನಿಷೇಧವನ್ನು ಮೀರಿ 21. 02. 1952 ರಂದು ಢಾಕಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ಮಾಡತೊಡಗಿದರು.ಪ್ರತಿಭಟನೆ ತೀವ್ರ ಸ್ವರೂಪ ಪಡೆದಾಗ, ಪಾಕ್ ಸರ್ಕಾರದ ಆದೇಶದಂತೆ ಪೋಲಿಸರು ಪ್ರತಿಭಟನಾಕಾರರ ಮೇಲೆ ಗುಂಡು ಹಾರಿಸಿದಾಗ ಢಾಕಾ ವಿಶ್ವವಿದ್ಯಾನಿಲಯದ ಕೆಲವು ವಿದ್ಯಾರ್ಥಿಗಳು ಅಸುನೀಗಿದರು.
ಬಾಂಗ್ಲಾದೇಶದ ಮಾತೃಭಾಷೆ ಬಂಗಾಳಿಯನ್ನು ಆಡಳಿತ ಭಾಷೆಯನ್ನಾಗಿ ಮಾಡಬೇಕೆಂದು ಪ್ರಾಣತೆತ್ತ ವಿದ್ಯಾರ್ಥಿಗಳ ನೆನಪಿಗಾಗಿ ಆ ದಿನವನ್ನು ವಿಶ್ವಸಂಸ್ಥೆಯ ಯುನೆಸ್ಕೊವು “ವಿಶ್ವ ಮಾತೃ ಭಾಷೆ ದಿವಸ”ವನ್ನಾಗಿ ಆಚರಿಸುವಂತೆ ಘೋಷಿಸಿತು.
ಈ ವರ್ಷದ ಅಂತಾರಾಷ್ಟ್ರೀಯ ಮಾತೃ ಭಾಷಾ ದಿನ ಧ್ಯೇಯ : ಸುಸ್ಥಿರ ಅಭಿವೃದ್ಧಿಗೆ ಭಾಷಾ ವೈವಿಧ್ಯತೆಯ ಮತ್ತು ಬಹು ಭಾಷಾವಾದದ ಎಣಿಕೆ.
You seem to have an Ad Blocker on.
To continue reading, please turn it off or whitelist Udayavani.