Yakshagana ಹಿಮ್ಮೇಳ-ಮುಮ್ಮೇಳದ ನಡುವೆ ಸಮನ್ವಯ ಅಗತ್ಯ : ರಾಮಕೃಷ್ಣ ಮಂದಾರ್ತಿ

ಬಡಗುತಿಟ್ಟಿನ ಹಿರಿಯ ಚೆಂಡೆವಾದಕ

Team Udayavani, Aug 18, 2024, 6:20 AM IST

1-ramanna

ಬಡಗಿನ ಚೆಂಡೆ ಮಾಂತ್ರಿಕ ಕೆಮ್ಮಣ್ಣು ಆನಂದ ಅವರ ಶಿಷ್ಯರಾದ ರಾಮಕೃಷ್ಣ ಮಂದಾರ್ತಿಯವರು ಗುರುವಿನ ಕಾಲಾನಂತರ ಆ ಸ್ಥಾನವನ್ನು ಸಮರ್ಥವಾಗಿ ತುಂಬಿದವರು. ದಾಸದ್ವಯರು, ಮರಿಯಪ್ಪಾಚಾರ್‌, ಗುಂಡ್ಮಿ ಕಾಳಿಂಗ ನಾವಡರಿಂದ ಇಂದಿನ ಎಲ್ಲ ಯುವ ಭಾಗವತರಿಗೆ ಸಾಥ್‌ ನೀಡಿ ಮೂರೂ ತಲೆಮಾರಿನ ಭಾಗವತರುಗಳಿಗೆ ಚೆಂಡೆಯ ಸಾಥ್‌ ನೀಡಿದ್ದಾರೆ. ಮೂರೂ ತಲೆಮಾರಿನ ಕಲಾವಿದರನ್ನು ಕುಣಿಸಿದ್ದಾರೆ.

ಶ್ರೀ ಕ್ಷೇತ್ರ ಮಂದಾರ್ತಿಯಲ್ಲಿ 1960ರಲ್ಲಿ ಪದ್ಮನಾಭ ಕಾಮತ್‌-ರಾಧಾಬಾಯಿ ದಂಪತಿಯ 8ನೇ ಪುತ್ರನಾಗಿ ಜನಿಸಿದ ಇವರಿಗೆ, ಮದ್ದಳೆಯಲ್ಲಿ ಆಸಕ್ತಿ ಹೊಂದಿದ್ದ ತಂದೆ ಪದ್ಮನಾಭಯ್ಯ ಅವರೇ ಪ್ರೇರಣೆಯಾಗಿದ್ದರು. ಅನಂತರ ಕೋಡಂಗಿ ವೇಷ, ಕಟ್ಟು ವೇಷ ಕಲಾವಿದನಾಗಿ ಮೇಳ ಪ್ರವೇಶಿಸಿ, ಖ್ಯಾತ ಚೆಂಡೆ ವಾದಕ ದಿ| ಕೆಮ್ಮಣ್ಣು ಆನಂದ ಅವರ ಚೆಂಡೆಯ ಪೆಟ್ಟಿಗೆ ಮರುಳಾಗಿ ಅವರಿಂದಲೇ ಪ್ರಾಥಮಿಕ ವಾದನ ಅಭ್ಯಾಸ ಮಾಡಿದರು. ಅನಂತರ ಸುರಗಿಕಟ್ಟೆ ಬಸವ ಗಾಣಿಗರಿಂದ ಶ್ರುತಿ-ಲಯಗಳ ಅನುಭವ ಪಡೆದು, ಕೊಲ್ಲೂರು ಕೊಗ್ಗ ಆಚಾರ್ಯ ಅವರಿಂದಲೂ ಚೆಂಡೆಯನ್ನು ಅಭ್ಯಸಿಸಿದ್ದರು.

ಎಂಟು ವರ್ಷ ತವರು ಮೇಳ ಮಂದಾರ್ತಿಯಲ್ಲಿ, ಏಳು ವರ್ಷ ಮಾರಣಕಟ್ಟೆ ಮೇಳ ದಲ್ಲಿ ತಿರುಗಾಟ ಮಾಡಿದ ಇವರು ಗರಿಷ್ಠ 10 ವರ್ಷಗಳ ತಿರುಗಾಟವನ್ನು ಸಾಲಿಗ್ರಾಮ ಮೇಳದಲ್ಲಿ ನಡೆಸಿ ಕೌಟುಂಬಿಕ ಜೀವನಕ್ಕೆ ಒತ್ತು ನೀಡುವ ಸಲುವಾಗಿ 1999ರಲ್ಲಿ ಬಹಳಷ್ಟು ಬೇಗನೆ ಮೇಳದ ತಿರುಗಾಟಕ್ಕೆ ವಿದಾಯ ಹೇಳಿದ್ದರು. ಕಾಳಿಂಗ ನಾವಡರ ಸಹವರ್ತಿಯಾಗಿ ದುಡಿದ ದಿನಗಳು ರಾಮಣ್ಣರ ವೃತ್ತಿ ಜೀವನದ ಸುವರ್ಣ ಯುಗವಾಗಿತ್ತು. ಕಂಚಿನ ಕಂಠದ ಕಾಳಿಂಗ ನಾವಡರ ಭಾಗವತಿಕೆಗೆ ರಾಮಣ್ಣನ ಚೆಂಡೆಯ ಕಂಚಿನ ನಾದ ಇನ್ನಷ್ಟು ಮೆರುಗು ನೀಡಿತ್ತು. ಯಕ್ಷಪ್ರೇಮಿಗಳು ಇಂದಿಗೂ ಕಾಳಿಂಗ ನಾವಡರ ತಿರುಗಾಟವನ್ನು, ಅವರ ರಂಗ ಮಾಂತ್ರಿಕತೆಯನ್ನು ನೆನಪಿಸಿಕೊಳ್ಳುವಾಗ ರಾಮಕೃಷ್ಣ ಮಂದಾರ್ತಿಯವರನ್ನು ನೆನಪಿಸಿಕೊಳ್ಳುತ್ತಾರೆ.

ಏಳು ಚೆಂಡೆಗಳನ್ನು ಶ್ರುತಿಯ ಏರಿಳಿತಕ್ಕೆ ಹೊಂದಿಸಿಕೊಂಡು ಏಕಕಾಲದಲ್ಲಿ ಬಾರಿಸಿದ ಖ್ಯಾತಿ ಇವರದ್ದು. ಸಪ್ತ ಚೆಂಡೆಗಳಲ್ಲಿ ದಾಖಲಾರ್ಹ ಸಾಧನೆ ಇವರದ್ದು. ನಯ ನಾಜೂಕಿನ ಪೆಟ್ಟು, ದಸ್ತನ್ನೇ ಧ್ವನಿಸುವ ನುಡಿತ, ಪದ್ಯ ಸಾಹಿತ್ಯ ಕೇಳುವಂತೆ ಚೆಂಡೆ ನುಡಿಸುವ ಕುಶಲತೆ, ಮದ್ದಳೆಯ ಪೆಟ್ಟುಗಳನ್ನರಿತ ಚೆಂಡೆಯಲ್ಲೂ ಅದೇ ಸ್ವರ ಹೊಮ್ಮಿಸುವ ಅಪರೂಪದ ಕಲಾವಿದರಿವರು. ಇವರ ಏರು ಚೆಂಡೆ ಪೆಟ್ಟು ಬಹಳ ಅಪರೂಪದ್ದು.

ಯಕ್ಷರಂಗ ರಂಗ ಪ್ರವೇಶಿಸಿ ಇದೀಗ 50ನೇ ವರ್ಷದ ಸಂಭ್ರಮದಲ್ಲಿರುವ ಇವರು ಸದ್ಯ ಶ್ರೀಕ್ಷೇತ್ರ ಮಂದಾರ್ತಿಯಲ್ಲಿ ಹಣ್ಣು ಕಾಯಿ ಅಂಗಡಿ ನಡೆಸುತ್ತಿದ್ದು, ಪತ್ನಿ, ಮಕ್ಕಳು, ಮೊಮ್ಮಕ್ಕಳ ಜತೆ ಸುಂದರ ಸಂಸಾರ ನಡೆಸುತ್ತಿದ್ದಾರೆ. ಅಬ್ಬರದ ಆಟಗಳಲ್ಲಿ ಅತಿಥಿ ಕಲಾವಿದರಾಗಿ ಆಗಾಗ ಕಾಣಿಸಿಕೊಳ್ಳುತ್ತಾರೆ. ವೃತ್ತಿ ಜೀವನದಲ್ಲಿ, ಉಡುಪಿ ಯಕ್ಷಗಾನ ಕಲಾಕ್ಷೇತ್ರದ ನಿಟ್ಟೂರು ಭೋಜಪ್ಪ ಸುವರ್ಣ ಪ್ರಶಸ್ತಿ, ಕಾಳಿಂಗ ನಾವಡ ಪ್ರಶಸ್ತಿ, ಸೋಮನಾಥ ಹೆಗ್ಡೆ ಪ್ರಶಸ್ತಿ ಸಹಿತ ಹಲವಾರು ಪುರಸ್ಕಾರ, ಸಮ್ಮಾನಗಳು ಇವರಿಗೆ ಸಂದಿವೆ.

ಭಾಗವತರು ಹಾಗೂ ಮುಮ್ಮೇಳ ಕಲಾವಿದರಿಗೆ ಸಿಗುವ ಪ್ರಾತಿನಿಧ್ಯ, ಪ್ರಚಾರಗಳು ಚೆಂಡೆ-ಮದ್ದಳೆ ಯವರಿಗೆ ಸಿಗುವುದಿಲ್ಲ ಎನ್ನುವ ಸಂದರ್ಭದಲ್ಲಿ ಕಠಿನ ಪರಿಶ್ರಮ, ಪ್ರತಿಭೆ ಇದ್ದರೆ ಚೆಂಡೆಯವರು ಸ್ಟಾರ್‌ ಪಟ್ಟದಲ್ಲಿ ಗುರುತಿಸಿಕೊಳ್ಳಬಹುದು, ಅಭಿಮಾನಿಗಳಿಗೆ ಹತ್ತಿರವಾಗಬಹುದು ಎಂದು ತೋರಿಸಿಕೊಟ್ಟ ಬಡಗುತಿಟ್ಟಿನ ಬೆರಳೆಣಿಕೆ ಕಲಾವಿದರಲ್ಲಿ ರಾಮಕೃಷ್ಣ ಮಂದಾರ್ತಿ ಅವರೂ ಓರ್ವರು.

ನಿಮ್ಮ ವೃತ್ತಿ ಜೀವನದ ಆರಂಭ ಹೇಗಿತ್ತು ?
ನಾನು ಯಕ್ಷಗಾನದ ಚಟ ಹಿಡಿಸಿಕೊಂಡು ಮೇಳ ಸೇರಿದವನು. ಮೊದ-ಮೊದಲು ಕಿಲೋ ಮೀಟರ್‌ಗಟ್ಟಲೆ ಕಾಲ್ನಡಿಗೆಯಲ್ಲಿ ಸಾಗಿ ಆಟ ಮಾಡಬೇಕಿತ್ತು. ಒಂದು ರೂಪಾಯಿ ದಿನ ಸಂಬಳಕ್ಕೆ ಕೆಲಸ ಮಾಡಿದ್ದೆ. ಆ ಕಾಲದಲ್ಲಿ ನರಸಿಂಹ ದಾಸರು, ಮತ್ಯಾಡಿ ನರಸಿಂಹ ಶೆಟ್ಟರು, ನಾವಡರು, ಚಿಟ್ಟಾಣಿ ರಾಮಚಂದ್ರ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್‌, ಶಿರಿಯಾರ ಮಂಜು ನಾಯ್ಕ, ಐರೋಡಿ ಗೋವಿಂದಪ್ಪ, ಘಟಾನುಘಟಿಗಳ ಜತೆ ಕೆಲಸ ಮಾಡಿದ್ದೆ. ಮೂರು ವರ್ಷ ಇಡೀ ರಾತ್ರಿ ಒಬ್ಬನೇ ಚೆಂಡೆ ಬಾರಿಸಿದ್ದೆ. ಆರಂಭದಲ್ಲಿ ಮಂದಾರ್ತಿ ಮೇಳದಲ್ಲಿ ಕೋಡಂಗಿ ವೇಷಕ್ಕೆ ಸೇರಿದ್ದು, ಅನಂತರ ಕಮಲಶಿಲೆ ಮೇಳಕ್ಕೆ ಸೇರಿದಾಗ “ನೀ ವೇಷಕ್ಕೆ ಬೇಡ ಚೆಂಡೆಗೆ ಬಾ’ ಎಂದು ಗುರುಗಳಾದ ಚೆಂಡೆ ಆನಂದರು ಕರೆದರು. ಅಂದಿನಿಂದ ಚೆಂಡೆಯೇ ಖಾಯಂ ಆಯಿತು.

ಚೆಂಡೆಯಲ್ಲಿ ಅಂದು-ಇಂದಿನ ಬದಲಾವಣೆ ಏನು?
ಹಿಂದೆ ಚೆಂಡೆಯವರು ಬಾರಿಸಿದಂತೆ ಕಲಾವಿದ ಕುಣಿಯಬೇಕಿತ್ತು. ಎಷ್ಟೇ ದೊಡ್ಡ ಕಲಾವಿದನಾದರು ಹೊಸ ಹೆಜ್ಜೆಗಳನ್ನು ಪ್ರಯೋಗ ಮಾಡುವಾಗ ಚೆಂಡೆಯವರ ಬಳಿ ಮಾತನಾಡಿಕೊಂಡು ರಂಗದಲ್ಲಿ ಪ್ರಯೋಗ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಕಲಾವಿದ ಕುಣಿದಂತೆ ಚೆಂಡೆಗಾರ ಬಾರಿಸಬೇಕಿದೆ. ಅನಿವಾರ್ಯ ಆಗಿರುವುದರಿಂದ ನಾನು ಕೂಡ ಅದಕ್ಕೆ ಒಗ್ಗಬೇಕಾದ ಸ್ಥಿತಿ ಇದೆ.

ಕಲಾವಿದ ಕುಣಿದಂತೆ ಚೆಂಡೆಯವರು ಬಾರಿಸಬೇಕಾದ ಸ್ಥಿತಿ ಯಾಕೆ ಬಂತು?
ಯಕ್ಷಗಾನ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅದೇ ರೀತಿ ಇದು ಕೂಡ ಒಂದು ಬದಲಾವಣೆ. ಇದು ಶುದ್ಧ ತಪ್ಪು ಎಂದು ಹೇಳುವುದಕ್ಕೂ ಆಗುವುದಿಲ್ಲ. ಯಾಕೆಂದರೆ ಅಂದಿನ ಕ್ರಮ, ಇಂದಿನ ಕ್ರಮದಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ಕಾಳಿಂಗ ನಾವಡರೊಂದಿಗಿನ ನಿಮ್ಮ ಒಡನಾಟದ ನೆನಪುಗಳು?
ನಾವಡರನ್ನು ನೆನಪು ಮಾಡಿಕೊಂಡರೆ ಈಗಲೂ ಕಣ್ಣಂಚು ಒದ್ದೆಯಾಗುತ್ತದೆ. ಅವರ ಜತೆಗಿನ ತಿರುಗಾಟ ನನ್ನ ಜೀವನದ ಸುವರ್ಣಯುಗ. ಚೆಂಡೆ ರಾಮನಾಗಿದ್ದ ನನ್ನನ್ನು ಜನರು ರಾಮಕೃಷ್ಣ ಮಂದಾರ್ತಿ ಎಂದು ಗೌರವದಿಂದ ಗುರುತಿಸುವಂತೆ ಮಾಡಿದ್ದು ನಾವಡರು. ರಂಗದಲ್ಲಿ ನಾವಡರು ಏನು ಬಯಸುತ್ತಾರೆ ಅದು ನನಗೆ ತಿಳಿಯುತ್ತಿತ್ತು. ಅದೇ ರೀತಿ ಪ್ರತಿಕ್ರಿಯೆ ನನ್ನ ಚೆಂಡೆಯಿಂದ ಹೊರಹೊಮ್ಮುತ್ತಿತ್ತು. ಅವರು ತಪ್ಪು-ಒಪ್ಪುಗಳನ್ನು ತಿಳಿಸುತ್ತಿದ್ದರು. “ಶರಧಿಗೆ ಶರಧಿಯೇ ಸಾಟಿ’ ಎನ್ನುವಂತೆ ನಾವಡರಿಗೆ ನಾವಡರೇ ಸಾಟಿ.

ಈ ಹಿಂದಿನ ಹಳೆ, ಹೊಸ ಪ್ರಸಂಗಗಳಲ್ಲಿ ಯಾವ ತೆರನಾದ ಭಿನ್ನತೆ ಇತ್ತು?
ನಾವಡರ ಜತೆಗೆ ತಿರುಗಾಟ ಮಾಡುವಾಗ ಹೊಸ ಪ್ರಸಂಗ-ಹಳೆ ಪ್ರಸಂಗವೆಂಬ ಭೇದ ಇರಲಿಲ್ಲ. ಯಾಕೆಂದರೆ ಹೊಸ ಪ್ರಸಂಗಗಳು ಹಳೆ ಪ್ರಸಂಗದ ಗತಿಯಲ್ಲೇ ಪ್ರದರ್ಶನಗೊಳ್ಳುತ್ತಿದ್ದವು ಹಾಗೂ ಹಳೆ ಪ್ರಸಂಗದ ಎಲ್ಲ ವೈಶಿಷ್ಟéಗಳು ಅದರಲ್ಲಿದ್ದವು.

ಬೇಗ ನಿವೃತ್ತಿ ಪಡೆಯಲು ಯಕ್ಷರಂಗದ ಮೇಲಿನ ಬೇಸರ ಕಾರಣವೇ?
ಖಂಡಿತ ಇಲ್ಲ. ನಾವಡರ ಕಾಲಾನಂತರವೂ ನಾನು 3 ವರ್ಷ ಸಾಲಿಗ್ರಾಮ, 5 ವರ್ಷ ಮಂದಾರ್ತಿ ಮೇಳದಲ್ಲಿ ತಿರುಗಾಟ ಮಾಡಿದ್ದೆ. ಆದರೆ ಮನೆಯನ್ನು ನೋಡಿಕೊಳ್ಳುವವರು ಯಾರೂ ಇಲ್ಲದಾದಾಗ ಅನಿವಾರ್ಯವಾಗಿ ಮೇಳ ತ್ಯಜಿಸಿದೆ.

ರಾಮಣ್ಣನ ಚೆಂಡೆಯ ಧ್ವನಿಯೇ ವಿಶಿಷ್ಟ ಎನ್ನುವ ಮಾತಿದೆ ಹೇಗೆ ಇದು?
ಎಲ್ಲರೂ ಬಳಸುವ ಚೆಂಡೆಯನ್ನೇ ನಾನು ಬಳಸುವುದು. ಚೆಂಡೆಯ ಮುಚ್ಚಿಗೆ, ಕೋಲು ಇದೆಲ್ಲ ನನ್ನದೇ ಆಯ್ಕೆ ಇರುತ್ತದೆ ಹಾಗೂ ಚೆಂಡೆಯನ್ನು ಬಾರಿಸುವ ಕೈಚಳಕ, ವಿಧಾನದಿಂದ ಈ ರೀತಿ ನಾದ ಹೊರಹೊಮ್ಮುತ್ತದೆ ಹೊರತು ಚೆಂಡೆಯಲ್ಲಿ ವಿಶೇಷ ಇಲ್ಲ.

ಇಂದಿನ ಪೀಳಿಗೆಯ ಚೆಂಡೆ ವಾದಕರಿಗೆ ನೀವು ಏನು ಕಿವಿಮಾತು ಹೇಳುತ್ತೀರಿ?
ಏನೂ ಹೇಳುವ ಅಗತ್ಯ ಇಲ್ಲ; ಯಾಕೆಂದರೆ ಬದಲಾವಣೆ ಸಾಕಷ್ಟು ಆಗಿದೆ. ಆದರೆ ಯಾವುದೇ ಚೆಂಡೆಗಾರನಿದ್ದರೂ ಹೆಸರು ಬರಬೇಕು ಎನ್ನುವ ಕಾರಣಕ್ಕೆ ಬೇಡವಾದ ಪೆಟ್ಟು ಬಾರಿಸಬೇಡಿ. ಎಲ್ಲಿ ಎಷ್ಟು ಬೇಕು, ಯಾವಾಗ ಬೇಕು ಅದನ್ನ ಮಾತ್ರ ಬಳಸಿ. ವೃತ್ತಿಯ ಬಗ್ಗೆ ಶ್ರದ್ಧೆ ಇರಲಿ, ಒಂದಷ್ಟು ಪರಿಶ್ರಮ ಹಾಕಿ. ಆಗ ಜನ ನಿಮ್ಮನ್ನು ಇಷ್ಟಪಡುತ್ತಾರೆ.

ಪ್ರಶಸ್ತಿ-ಪುರಸ್ಕಾರಗಳ ಬಗ್ಗೆ ನಿಮ್ಮ ಅನಿಸಿಕೆ?
ನಾನಂತು ಪ್ರಶಸ್ತಿಗಾಗಿ ಅರ್ಜಿ ಹಿಡಿದು ತಿರುಗಾಡುವವನಲ್ಲ. ಯಾರ ಬಳಿ ಗೋಗರೆಯುವವನಲ್ಲ. ಗುರುತಿಸಿ ಕೊಟ್ಟ ಪ್ರಶಸ್ತಿಗಳನ್ನು ಗೌರವದಿಂದ ಸ್ವೀಕರಿಸಿ ದ್ದೇನೆ. ಕಾಳಿಂಗ ನಾವಡರ ಕಾಲಘಟ್ಟದವರು ಈಗಲೂ ನನ್ನನ್ನು ಕರೆದು ಮಾತನಾಡಿಸುತ್ತಾರೆ. ಈಗಿನ ಹುಡುಗರು ರಾಮಣ್ಣ ಎಂದು ಪ್ರೀತಿ ತೋರುತ್ತಾರೆ. ಇದಕ್ಕಿಂತ ದೊಡ್ಡ ಗೌರವ ಇನ್ನೇನಿದೆ?.

ಒಂದು ಉತ್ತಮ ಪ್ರದರ್ಶನಕ್ಕೆ ಹಿಮ್ಮೇಳ-ಮುಮ್ಮೇಳ ಹೇಗಿರಬೇಕು?
ಹಿಮ್ಮೇಳ-ಮುಮ್ಮೇಳದ ನಡುವೆ ಉತ್ತಮ ಸಮನ್ವಯ ಇದ್ದರೆ ಮಾತ್ರ ಒಳ್ಳೆ ಆಟ ಸಾಧ್ಯ. ಹಿಮ್ಮೇಳದವರು ಮಾಡುವ ತಪ್ಪು ಮುಮ್ಮೇಳದವರಿಗೂ; ಮುಮ್ಮೇಳದ್ದು ಹಿಮ್ಮೇಳಕ್ಕೂ ತಿಳಿಯುತ್ತದೆ. ಆಟ ಮುಗಿದ ಅನಂತರ ಇಬ್ಬರೂ ಸಾಮರಸ್ಯದಿಂದ ಮಾತಾಡಿಕೊಂಡು, ತಪ್ಪುಗಳನ್ನು ಸರಿಪಡಿಸಿಕೊಂಡರೆ ಎಲ್ಲ ಕಲಾವಿದರು ಪರಿಪೂರ್ಣರಾಗಲು ಸಾಧ್ಯ.

  *ರಾಜೇಶ್‌ ಗಾಣಿಗ, ಅಚ್ಲಾಡಿ

ಟಾಪ್ ನ್ಯೂಸ್

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

BANDARAKERI

Udupi: ಭಕ್ತರಲ್ಲಿಗೆ ಭಾಗವತ ಭಂಡಾರಕೇರಿ ಶ್ರೀಗಳ ಸಾಧನೆ

Payan

Movie Release: ರಾಜ್ಯಾದ್ಯಂತ “ಪಯಣ್‌’ ಸಿನೆಮಾ ಸೆ.20ರಂದು ತೆರೆಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-rrrr

Yakshagana;ನೋಡಿ ಕಲಿಯುವುದು ಬಹಳಷ್ಟಿದೆ: ಶಿವರಾಮ ಜೋಗಿ ಬಿ.ಸಿ.ರೋಡು

1-shab

Yakshagana ಭಾಗವತ ತಾನೊಬ್ಬನೇ ಮೆರೆಯುವುದಲ್ಲ:ನಾರಾಯಣ ಶಬರಾಯ ಜಿ.ಎ.

1-yyyy

Rakshit Shetty Padre; ಸಾರ್ಥಕತೆ ಕಂಡ ಯಕ್ಷ ಸಿದ್ಧಿ ದಶಮಾನೋತ್ಸವ ಸಂಭ್ರಮ

-Bolara-Subbaya-Shetty

YakshaRanga: ಯಕ್ಷಗಾನ ಉಳಿವಿಗೆ ಹೊಸ ಕಲಾವಿದರು ಪಣ ತೊಡಬೇಕು

1-aaa-chandra

Yakshagana ರಂಗದಲ್ಲಿ ಕುತೂಹಲ: ಭಕ್ತ ಚಂದ್ರ ಹಾಸನಲ್ಲ ಯಾರಿವನು ‘ವೀರ ಚಂದ್ರಹಾಸ’?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1KARKALA1

Worship: ಕರಾವಳಿಯೆಲ್ಲೆಡೆ ಅನಂತಪದ್ಮನಾಭ ವ್ರತ ಸಂಪನ್ನ

Maravooru

Mangaluru: ತಾಂತ್ರಿಕ ತಜ್ಞರ ಸಮಿತಿಯಿಂದ ಮರವೂರು ಸೇತುವೆ ಪರಿಶೀಲನೆ

Yashpal-Udupi

Udupi: ಮತ್ಸ್ಯಸಂಪದ ಯೋಜನೆ ಅನುಷ್ಠಾನ: ಶಾಸಕ ಯಶ್‌ಪಾಲ್‌ ಸುವರ್ಣ

uUdupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

Udupi ಗೀತಾರ್ಥ ಚಿಂತನೆ-38: ಸರ್ವೋತ್ತಮಜ್ಞಾನ, ಅಜತ್ತ್ವಜ್ಞಾನ

MNCY

Development project: ಮಂಗಳೂರು ಪಾಲಿಕೆ; ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.