![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Oct 25, 2022, 12:14 PM IST
ಸಾಮಾನ್ಯವಾಗಿ ಹಸೆಮಣೆ ಏರಿದ ಬಳಿಕ ಬಹುತೇಕ ನಟಿಯರು ಅಭಿನಯಕ್ಕೆ ಗುಡ್ ಬೈ ಹೇಳುತ್ತಾರೆ ಎಂಬುದು ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಮಾತು. ಆದರೆ ಕೆಲವು ನಟಿಯರು ಮಾತ್ರ ಈ ಮಾತಿಗೆ ಅಪವಾದ. ಮದುವೆಯಾಗಿ, ಪೋಷಕರಾದ ನಂತರವೂ ಚಿತ್ರರಂಗದಲ್ಲಿ ಹೊಸ ಇನ್ನಿಂಗ್ಸ್ ಶುರುಮಾಡಿ, ತಮ್ಮದೇ ಆದ ಬೇಡಿಕೆ ಮತ್ತು ಅವಕಾಶ ಎರಡನ್ನೂ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ. ಇಂಥ ನಟಿಯರ ಸಾಲಿಗೆ ಈಗ ಸೇರ್ಪಡೆಯಾಗುತ್ತಿರುವ ಹೆಸರು ಮಯೂರಿ ಕ್ಯಾತರಿ.
ಹೌದು, “ಕೃಷ್ಣಲೀಲ’ ಸಿನಿಮಾದ ಮೂಲಕ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾದ ಮಯೂರಿ, ಬಳಿಕ “ಇಷ್ಟಕಾಮ್ಯ’, “ನಟರಾಜ ಸರ್ವೀಸ್’, “ಕರಿಯ-2′, “ರ್ಯಾಂಬೋ-2′, “8 ಎಂಎಂ’, “ರುಸ್ತುಂ’, “ನನ್ನ ಪ್ರಕಾರ’, “ಆಟಕ್ಕುಂಟು ಲೆಕ್ಕಕ್ಕಿಲ್ಲ’, “ಮೌನಂ’, “ಪೊಗರು’, “ವೀಲ್ಚೇರ್ ರೋವಿಯೋ’ ಹೀಗೆ ಒಂದಷ್ಟು ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸಿ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು. ಚಿತ್ರರಂಗದಲ್ಲಿ ಬಿಝಿಯಾಗಿರುವಾಗಲೇ ಹಸೆಮಣೆ ಏರಿದ್ದ ಮಯೂರಿ ಒಂದಷ್ಟು ಮಂದಿಗೆ ಸರ್ಪ್ರೈಸ್ ಕೂಡ ನೀಡಿದ್ದರು
ಮದುವೆಯಾದ ನಂತರ ಗೃಹಿಣಿಯಾಗಿ ಮನೆ ನಿರ್ವಹಣೆ, ಬಳಿಕ ಮಗುವಿನ ತಾಯಿಯಾಗಿ ಲಾಲನೆ-ಪಾಲನೆಯಲ್ಲಿ ಎಂಗೇಜ್ ಆಗಿದ್ದ ಮಯೂರಿ, ಇತ್ತೀಚೆಗಷ್ಟೇ ಕನ್ನಡ ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಬಿಗ್ಬಾಸ್ ಮನೆಗೆ ಅಡಿಯಿಟ್ಟಿದ್ದಾರೆ. ಈ ಮೂಲಕ ಮತ್ತೆ ಬಣ್ಣದ ಲೋಕದಲ್ಲಿ ಸಕ್ರಿಯವಾಗುವ ಸುಳಿವು ನೀಡಿದ್ದಾರೆ ಮಯೂರಿ. ಇದರ ಬೆನ್ನಲ್ಲೆ, ಮಯೂರಿ ನಾಯಕಿಯಾಗಿ ಅಭಿನಯಿಸಿರುವ ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ “ಆದ್ಯಂತ’ ಸಿನಿಮಾ ಕೂಡ ಬಿಡುಗಡೆಗೆ ತಯಾರಾಗಿದೆ.
ಅಂದಹಾಗೆ, “ಆದ್ಯಂತ’ ಸೈಕಲಾಜಿಕಲ್ ಥ್ರಿಲ್ಲರ್ ಕಥಾಹಂದರದ ಸಿನಿಮಾವಾಗಿದ್ದು, ಇದರಲ್ಲಿ ಮಯೂರಿ ಎರಡು ವಿಭಿನ್ನ ಶೇಡ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿಲೀಪ್ ನಾಯಕನಾಗಿರುವ ಈ ಸಿನಿಮಾದಲ್ಲಿ ರಮೇಶ್ ಭಟ್, ಶ್ರೀನಾಥ್ ವಸಿಷ್ಟ, ಪ್ರಶಾಂತ್ ನಟನ, ನಿಖೀಲ್ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಆರ್. ಆರ್ ಮೂವೀಸ್’ ಮತ್ತು “ಲೇಖನ ಕ್ರಿಯೇಷನ್ಸ್’ ಬ್ಯಾನರ್ನಲ್ಲಿ ಟಿ. ರಮೇಶ್ ಬಾಬು ನಿರ್ಮಿಸಿರುವ ಈ ಸಿನಿಮಾಕ್ಕೆ ಪುನೀತ್ ಶರ್ಮನ್ ನಿರ್ದೇಶನವಿದೆ.
ಈಗಾಗಲೇ “ಆದ್ಯಂತ’ ಸಿನಿಮಾದ ಮೋಶನ್ ಪೋಸ್ಟರ್, ಟೀಸರ್ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ ಸದ್ಯ ಸಿನಿಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿದ್ದು, ಇದೇ ಡಿಸೆಂಬರ್ ವೇಳೆಗೆ “ಆದ್ಯಂತ’ ತೆರೆಗೆ ಬರಲಿದೆ.
You seem to have an Ad Blocker on.
To continue reading, please turn it off or whitelist Udayavani.