![Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ](https://www.udayavani.com/wp-content/uploads/2025/02/Agna-415x228.jpg)
![Maha Kumbh Melaದಲ್ಲಿ ಮತ್ತೆ ಅಗ್ನಿ ಅವಘಡ: ಅಗ್ನಿಶಾಮಕ ದಳದಿಂದ ಕಾರ್ಯಾಚರಣೆ](https://www.udayavani.com/wp-content/uploads/2025/02/Agna-415x228.jpg)
Team Udayavani, Sep 10, 2024, 4:10 PM IST
ಯಾವುದೇ ಕ್ಷೇತ್ರವಾದರೂ ಅಲ್ಲಿ ನೀವು ಗೆದ್ದು ತೋರಿಸುವವರೆಗೆ ನಿಮ್ಮ “ಕಥೆ’ಗಳಿಗೆ ಬೆಲೆ ಇರುವುದಿಲ್ಲ. ಒಮ್ಮೆ ನೀವು ಗೆದ್ದುಬಿಟ್ಟರೆ ನೀವು ಹೇಳುವ “ಯಾವುದೇ’ ಕಥೆಗಳನ್ನಾದರೂ ಕಣ್ಣಿಗೊತ್ತಿಕೊಂಡು ಕೇಳುತ್ತಾರೆ. ಸಿನಿಮಾ ರಂಗದಲ್ಲಂತೂ ಇದು ಸ್ವಲ್ಪ ಹೆಚ್ಚೇ. ಅದರಲ್ಲೂ ಹೊಸಬರ ಅಥವಾ ಒಂದು ಗೆಲುವಿಗಾಗಿ ಹಂಬಲಿಸುವ ತಂಡವಾದರೆ ಅವರನ್ನು ಬೆಂಬಲಿಸುವವರ ಸಂಖ್ಯೆ ತೀರಾ ಕಡಿಮೆ.
ಈ ಅನುಭವ “ರಾನಿ’ ತಂಡಕ್ಕೆ ಆಗಿದೆ. ಈಗಾಗಲೇ ಟೀಸರ್, ಟ್ರೇಲರ್ ಮೂಲಕ ಸದ್ದು ಮಾಡುತ್ತಿರುವ “ರಾನಿ’ ಚಿತ್ರ ಸೆ.12ಕ್ಕೆ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಕಿರಣ್ ರಾಜ್ ಹೀರೋ ಆಗಿ ನಟಿಸಿದ್ದು, ಗುರುತೇಜ್ ಶೆಟ್ಟಿ ನಿರ್ದೇಶನವಿದೆ. ನಿರ್ಮಾಪಕರು ಕೂಡಾ ಹೊಸಬರು. ಈ ತಂಡ ಚಿತ್ರದ ಟ್ರೇಲರ್ ರಿಲೀಸ್ ಅಥವಾ ಯಾವುದಾದರೂ ಒಂದು ಇವೆಂಟ್ ಅನ್ನು ಚಿತ್ರರಂಗದ ಸ್ಟಾರ್ ನಟ ಅಥವಾ ಖ್ಯಾತನಾಮರನ್ನು ಕರೆಸಿ ಮಾಡಬೇಕೆಂದು ಕನಸು ಕಂಡಿತ್ತಂತೆ. ಅದರಂತೆ ಅನೇಕರನ್ನು ಸಂಪರ್ಕಿಸಿದೆ. ಆದರೆ, ಹೊಸಬರ ತಂಡ ಎಂಬ ಕಾರಣಕ್ಕೋ ಏನೋ ಯಾರು ಕೂಡಾ ಈ ತಂಡದ ಬೆಂಬಲಕ್ಕೆ ನಿಂತಿಲ್ಲ. ಇದು ತಂಡಕ್ಕೆ ತುಂಬಾ ಬೇಸರ ತಂದಿದೆ.
ಇತ್ತೀಚೆಗೆ ನಡೆದ ಚಿತ್ರದ ಟೈಟಲ್ ಟ್ರ್ಯಾಕ್ ರಿಲೀಸ್ ಇವೆಂಟ್ನಲ್ಲಿ ನಿರ್ದೇಶಕ ಗುರುತೇಜ್ ಶೆಟ್ಟಿ ಈ ಕುರಿತ ತಮ್ಮ ಬೇಸರವನ್ನು ಹೊರ ಹಾಕಿದರು. ಚಿತ್ರದ ಟ್ರೇಲರ್ ಬಿಡುಗಡೆಯನ್ನು ದೊಡ್ಡದಾಗಿ ಮಾಡಬೇಕು, ದೊಡ್ಡವರನ್ನು ಕರೆಸಬೇಕೆಂಬ ಆಸೆ ಇತ್ತು. ಈ ಸಂಬಂಧ ಹಲವು ದೊಡ್ಡ ನಟರನ್ನು ಕೇಳಿದ್ದೇವೆ. ಒಬ್ಬೊಬ್ಬರು ಒಂದೊಂದು ಕಾರಣ ಹೇಳಿದರು.
ಬಹುಶಃ ಅವರೆಲ್ಲರೂ ಬಿಝಿ ಇರಬಹುದು. ನಿರ್ಮಾಪಕರು ಹೊಸಬರು. ಯಾರೂ ಬರದಿದ್ದಾಗ ಅವರಿಗೆ ಸಹಜವಾಗಿಯೇ ಆತಂಕ ಕಾಡುತ್ತದೆ. ಮಾಧ್ಯಮದವರು ಬಿಟ್ಟರೆ ನಮ್ಮ ಜೊತೆಗೆ ಯಾರೂ ಇಲ್ಲ. ಹಾಗಂತ ಯಾರಿಗೂ ಬಕೆಟ್ ಹಿಡಿಯುವುದಕ್ಕೆ ನನಗೆ ಸಾಧ್ಯವಿಲ್ಲ. ನಾನು ಸ್ವಾಭಿಮಾನಿ. ಹಾಗಾಗಿ, ನಿರ್ಮಾಪಕರಿಗೆ ಈ ಮೂಲಕ ಕ್ಷಮೆ ಕೇಳುತ್ತೇನೆ. ಯಾರೂ ಬರದಿದ್ದರೇನು? ಜನ ಬರುತ್ತಾರೆ, ನಮ್ಮ ಕೈ ಹಿಡಿಯುತ್ತಾರೆ ಎಂಬ ನಂಬಿಕೆ ಇದೆ’ ಎಂದರು. ಚಿತ್ರದಲ್ಲಿ ನಟಿಸಿರುವ ರವಿಶಂಕರ್, ಮಠ ಗುರುಪ್ರಸಾದ್ ಕೂಡಾ ಈ ಸಿನಿಮಾದ ಕಾರ್ಯಕ್ರಮಗಳಿಂದ ದೂರವೇ ಉಳಿದಿದ್ದಾರೆ. “ನಾವು ಸಿನಿಮಾವನ್ನು ಕಾಟಾಚಾರಕ್ಕೆ ಮಾಡಿಲ್ಲ. ತುಂಬಾ ಇಷ್ಟಪಟ್ಟು ಮಾಡಿದ್ದೇವೆ’ ಎನ್ನುವುದು ಗುರುತೇಜ್ ಶೆಟ್ಟಿ ಮಾತು.
“ರಾನಿ’ ಚಿತ್ರದ ಶೀರ್ಷಿಕೆ ಗೀತೆಯನ್ನು ಹಿರಿಯ ಚಿತ್ರಸಾಹಿತಿ ಜೆ.ಕೆ. ಭಾರವಿ ಚಿತ್ರದ ಹಾಡು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು. ಈ ಹಾಡನ್ನು ಪ್ರಮೋದ್ ಮರವಂತೆ ಬರೆದರೆ, ಸಚಿನ್ ಬಸ್ರೂರು ಸಂಗೀತ ಸಂಯೋಜಿಸುವುದರ ಜೊತೆಗೆ ಹಾಡಿದ್ದಾರೆ. ಚಂದ್ರಕಾಂತ ಪೂಜಾರಿ ಮತ್ತು ಉಮೇಶ್ ಹೆಗ್ಡೆ ಈ ಚಿತ್ರದ ನಿರ್ಮಾಪಕರು.
You seem to have an Ad Blocker on.
To continue reading, please turn it off or whitelist Udayavani.