Darshan ಅಭಿಮಾನಿಗಳ ಮೇರೆ ಮೀರಿದ ಹುಚ್ಚಾಟ: ವ್ಯಾಪಕ ಆಕ್ರೋಶ
ಲಾಠಿ ಬೀಸುವಂತೆ ಮಾಡಿದರು... ದೇವರ ಮೂರ್ತಿಯ ಮೇಲೆ ಕಾಲಿಟ್ಟು ಅಂಧಾಭಿಮಾನ!!!
Team Udayavani, Aug 30, 2024, 7:30 PM IST
ಬೆಂಗಳೂರು/ಬಳ್ಳಾರಿ : ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ (Darshan) ಪರಪ್ಪನ ಅಗ್ರಹಾರ ಜೈಲಿನಿಂದ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಆಗುತ್ತಿದ್ದಂತೆ ಅಭಿಮಾನಿಗಳು ಹುಚ್ಚಾಟ ತೋರಿ ಪೊಲೀಸರ ಲಾಠಿ ರುಚಿ ಅನುಭವಿಸಿದ್ದಾರೆ, ಮಾತ್ರವಲ್ಲದೆ ಜನಾಕ್ರೋಶಕ್ಕೆ ಗುರಿಯಾಗಿದ್ದಾರೆ.
ಶುಕ್ರವಾರ(ಆ 30) ದರ್ಶನ್ ಅಭಿನಯದ ‘ಕರಿಯ’ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗಿದ್ದು, ಈ ವೇಳೆ ನೂರಾರು ಅಭಿಮಾನಿಗಳು ಜಮಾಯಿಸಿ ಅಂಧಾಭಿಮಾನ ಮೆರೆದು ಪೊಲೀಸರ ವಿರುದ್ಧವೇ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಾರೆ. ಕೆಪಿ ಅಗ್ರಹಾರ ಪೊಲೀಸ್ ಠಾಣೆಯ ವ್ಯಾಪ್ತಿಯ ಪ್ರಸನ್ನ ಚಿತ್ರ ಮಂದಿರದಲ್ಲಿ ಘಟನೆ ನಡೆದಿದ್ದು , ಪರಿಸ್ಥಿತಿ ನಿಯಂತ್ರಿಸಲು ಅಂಧಾಭಿಮಾನಕ್ಕೆ ಕಡಿವಾಣ ಹಾಕಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ. ಒಬ್ಬಾತನನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ. ಅಭಿಮಾನಿಗಳ ವರ್ತನೆ ಅತಿರೇಕಕ್ಕೆ ಹೋದ ಕಾರಣ ಎರಡು ಶೋಗಳನ್ನೇ ರದ್ದು ಮಾಡಲಾಗಿದೆ ಎಂದು ತಿಳಿದು ಬಂದಿದೆ.
”ನಿಮ್ಮಂತಹ ಕೆಟ್ಟ ಅಭಿಮಾನಿಗಳಿಂದಾಗಿಯೇ ದರ್ಶನ್ ಅವರಿಗೆ ಕೆಟ್ಟ ಹೆಸರು ಬರುತ್ತಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
ಬಳ್ಳಾರಿಯಲ್ಲೂ ಅಂಧಾಭಿಮಾನ
ದರ್ಶನ್ ಅಭಿಮಾನಿಗಳು ಬಿಡುಗಡೆಗೆ ಹಾರೈಸಿ ಬಳ್ಳಾರಿ ಜೈಲಿನ ಸಮೀಪದಲ್ಲೇ ಇರುವ ಕನಕ ದುರ್ಗಮ್ಮ ದೇವಿಗೆ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು. ಈ ವೇಳೆ ದೇವಿಗೆ ಬೃಹತ್ ಹಾರ ಹಾಕುವ ಸಂದರ್ಭ ದೇವರ ಮೂರ್ತಿ ಮೇಲೆ ಕಾಲಿಟ್ಟು ಪುಂಡಾಟ ಮೆರೆದಿದ್ದು, ಈ ಬಗ್ಗೆ ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ.
ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಮಂಜುನಾಥ ಬಳಿಗಾರ ನೇತೃತ್ವದಲ್ಲಿ ನಡೆದ ಪೂಜೆಯಲ್ಲಿ ನೂರಾರು ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸಿ ಜೈಕಾರ ಹಾಕಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.