ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
ಮಹಾಲಿಂಗೇಶ್ವರ ಮಹಾಜಾತ್ರೆಯ ರಥೋತ್ಸವ
Team Udayavani, Sep 18, 2024, 9:15 PM IST
ಮಹಾಲಿಂಗಪುರ : ಪಟ್ಟಣದ ಆರಾಧ್ಯ ದೈವ, ಪವಾಡ ಪುರುಷ ಮಹಾಲಿಂಗೇಶ್ವರ ಮಹಾಜಾತ್ರೆಯ ರಥೋತ್ಸವಕ್ಕೆ ಬುಧವಾರ ಸಂಜೆ 7-30ಕ್ಕೆ ಅದ್ದೂರಿ ಚಾಲನೆ ದೊರೆಯಿತು.
ವಿದ್ಯುತ್ ದೀಪ ಹಾಗೂ ಬೃಹತ್ ಹೂಮಾಲೆ, ಕಬ್ಬು-ಬಾಳೆಗಡದಿಂದ ಅಲಂಕಾರಗೊಳಿಸಿದ್ದ ಮಹಾಲಿಂಗೇಶ್ವರ ರಥಕ್ಕೆ ಶ್ರೀಮಠದ ಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿ ಪೂಜೆ ಸಲ್ಲಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ನೆರೆದಿದ್ದ ಸಾವಿರಾರು ಭಕ್ತಾದಿಗಳಿಂದ ಶ್ರೀಮಹಾಲಿಂಗೇಶ್ವರ ಮಹಾರಾಜಕಿ ಜೈ, ಚನ್ನಗಿರೇಶ್ವರ ಮಹಾರಾಜ ಕೀ ಜೈ ಎಂಬ ಜಯಘೋಷಗಳೊಂದಿಗೆ ಜಾತ್ರೆಯ ಪ್ರಥಮ ದಿನದ ತುಂಬಿದ ತೇರು ಭಕ್ತರ ಹರ್ಷೋದ್ಘಾರದ ನಡುವೆ ಅತ್ಯಂತ ಸಂಭ್ರಮ-ಸಡಗರದಿಂದ ಜರುಗಿತು. ಜಾತ್ರೆಯ ನಿಮಿತ್ಯ ಮಹಾಲಿಂಗೇಶ್ವರರ ಗದ್ದುಗೆಗೆ ಮೂರು ಹೊತ್ತು ವಿಶೇಷ ಪೂಜೆ ಹಾಗೂ ಹೂವಿನ ಅಲಂಕಾರಗಳನ್ನು ಮಾಡಲಾಗಿತ್ತು.
ರಥೋತ್ಸವದ ಮುನ್ನ ಹರಿವಾಣ ಕಟ್ಟೆ ಲೂಟಿ :
ತುಂಬಿದ ತೇರು ಸಾಗುವ ಮುನ್ನ ಮಹಾಲಿಂಗೇಶ್ವರ ದೇವಸ್ಥಾನದ ಪಾದಗಟ್ಟಿಯ ಮುಂದೆ ನಿರ್ಮಿಸಲಾದ ಹರಿವಾಣ ಕಟ್ಟೆಯ ಲೂಟಿ ಕಾರ್ಯಕ್ರಮ ಸಂಜೆ 7 ಕ್ಕೆ ಜರುಗಿತು. ನೂರಾರು ರೈತರು ತಮ್ಮ ತಮ್ಮ ಜಮೀನುಗಳಲ್ಲಿ ಬೆಳೆದ ಗೋವಿನ ಜೋಳ, ಬಾಳೆಗಿಡ, ಕಬ್ಬು ಸೇರಿದಂತೆ ಹಲವು ತರಹದ ಬೆಳೆಗಳನ್ನು ತಂದು ಪಾದಗಟ್ಟೆಯ ಮುಂದಿನ ಹಂದರ ಮೇಲೆ ಹಾಕಿದ್ದರು. ಶಿವಯೋಗಿ ರಾಜೇಂದ್ರ ಸ್ವಾಮಿಜಿಯವರು ಪೂಜೆ ಮಾಡಿ, ಮಂಗಳಾರತಿ ಸಲ್ಲಿಸಿದ ನಂತರ ಸಂಪ್ರದಾಯದಂತೆ ಅಲ್ಲಿದ್ದ ಕಬ್ಬು, ತೇನೆ, ಇತ್ಯಾದಿಗಳನ್ನು ಅಲ್ಲಿ ಜಮಾಯಿಸಿದ ಸಾವಿರಾರು ಭಕ್ತರು, ನನಗೆ-ನಿನಗೆ ಎಂದು ಒಬ್ಬರ ಮೇಲೊಬ್ಬರು ಬೀಳುತ್ತಾ ಹರಿವಾನ ಕಟ್ಟೆಯಲ್ಲಿನ ಕಬ್ಬು, ಜೋಳದ ದಂಟುನ್ನು ದೋಚಿಕೊಂಡು ಹೋಗುವಲ್ಲಿ ಯಶಸ್ವಿಯಾದರು.
ಹರಿವಾನ ಕಟ್ಟೆಯಿಂದ ದೋಚಿಕೊಂಡು ಹೋದ ಕಬ್ಬು, ಗೋವಿನ ಜೋಳದ ದಂಟನ್ನು ಮನೆ, ಅಂಗಡಿಗಳಲ್ಲಿ ಕಟ್ಟಿ, ಮುಂದಿನ ವರ್ಷದ ಜಾತ್ರೆಯವರೆಗೂ ಅದನ್ನು ಪೂಜಿಸಲಾಗುತ್ತದೆ. ಈ ರೀತಿಯ ಹರಿವಾನ ಕಟ್ಟೆಯ ಪೂಜೆಯಿಂದ ರೈತರಿಗೆ ಹೊಲದಲ್ಲಿ, ಭಕ್ತರಿಗೆ ಮನೆಯಲ್ಲಿ ಅನ್ನದ ಕೊರತೆಯಾಗುವದಿಲ್ಲ ಎಂಬ ನಂಬಿಕೆ ಭಕ್ತರಲ್ಲಿದೆ.
ತುಂಬಿದ ರಥೋತ್ಸವದ ಮೆರಗು :
ರಥೋತ್ಸವದ ಮುಂದೆ ಕಂಡ್ಯಾಳ ಬಾಸಿಂಗ, ಉಚ್ಚಾಯಿ, ನಂದಿಕೋಲು, ಕರಡಿ ಮಜಲು, ಶಹನಾಯಿ, ಡೊಳ್ಳಿನ ಮೇಳ, ಹಲಗೆ ವಾದನ ಸೇರಿದಂತೆ ಹಲವಾರು ಕಲಾವಿದರ ಮಂಗಳವಾದ್ಯಗಳು ರಥೋತ್ಸವದ ಮೆರಗನ್ನು ಮತ್ತಷ್ಟು ಹೆಚ್ಚಿಸಿದ್ದವು. ಬುಧವಾರ ಸಂಜೆ 7-30ಕ್ಕೆ ಪ್ರಾರಂಭವಾದ ತುಂಬಿದ ತೇರು ಮಹಾಲಿಂಗೇಶ್ವರ ದೇವಸ್ಥಾನದಿಂದ ನಡಚೌಕಿ ಮಾರ್ಗವಾಗಿ ರಾತ್ರಿಯಿಡಿ ಜರುಗಿ ಗುರುವಾರ ನಸುಕಿನ ಜಾವ 5-30ಕ್ಕೆ ಚನ್ನಗಿರೇಶ್ವರ ದೇವಸ್ಥಾನ ತಲುಪಲಿದೆ.
ಆಹೋರಾತ್ರಿ ನಡೆಯುವ ರಥೋತ್ಸವನ್ನು ನೋಡಲು ಬೆಳಗಾವಿ, ಬಿಜಾಪೂರ, ಬಾಗಲಕೋಟ, ಹುಬ್ಬಳ್ಳಿ, ದಾವಣಗೇರಿ, ಬೆಂಗಳೂರ ಸೇರಿದಂತೆ ರಾಜ್ಯ ಮತ್ತು ಹೊರ ರಾಜ್ಯಗಳಿಂದ ಭಕ್ತರು ಆಗಮಿಸಿ ಮಹಾಲಿಂಗೇಶ್ವರ ರಥೋತ್ಸವಕ್ಕೆ ಬೆಂಡು, ಬೆತ್ತಾಸು, ಉತ್ತತ್ತಿ ಹಾರಿಸಿ, ಕಾಯಿ-ಕರ್ಪೂರ ಅರ್ಪಣೆ ಮೂಲಕ ಪೂಜೆ ಸಲ್ಲಿಸುತ್ತಿದ್ದಾರೆ.
ಭಾರಿ ಜನಸಾಗರ :
ಶಕ್ತಿಯೋಜನೆಯಡಿಯಲ್ಲಿ ಬಸ್ ಪ್ರಯಾಣ ಉಚಿತವಿದ್ದ ಕಾರಣ ಮಹಾಲಿಂಗೇಶ್ವರ ಮಹಾಜಾತ್ರೆಗೆ ಪರಸ್ಥಳಗಳಿಂದ ಲಕ್ಷಾಂತರ ಭಕ್ತರು ಆಗಮಿಸಿದ್ದ ಜಾತ್ರಾಮಹೋತ್ಸವದಲ್ಲಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.
ಭರ್ಜರಿ ಮನರಂಜನೆ :
ರಥೋತ್ಸವದ ನಿಮಿತ್ಯ ಪಟ್ಟಣದ ಎಲ್ಲ ರಸ್ತೆಗಳು ಜನ-ಜಂಗುಳಿಯಿಂದ ತುಂಬಿ ತುಳುಕುತ್ತಿವೆ. ಜವಳಿಬಜಾರ, ಮಹಾಲಿಂಗೇಶ್ವರ ದೇವಸ್ಥಾನ, ಚನ್ನಗಿರೇಶ್ವರ ದೇವಸ್ಥಾನ, ಚನ್ನಮ್ಮ ವೃತ್ತ, ಅನ್ನಪೂರ್ಣೇಶ್ವರಿ ದೇವಸ್ಥಾನ, ಬುದ್ನಿ ಮಹಾಲಿಂಗೇಶ್ವರ ದೇವಸ್ಥಾನ ಸೇರಿದಂತೆ ಹಲವೆಡೆ ಬಯಲಾಟ, ಶ್ರೀಕೃಷ್ಣ ಪಾರಿಜಾತ, ಭಜನೆ ಸೇರಿದಂತೆ ಹಲವು ಕಾರ್ಯಕ್ರಮಗಳು ರಾತ್ರಿಯಿಡಿ ನಡೆಯುತ್ತವೆ.
ಅನ್ನ ಸಂತರ್ಪಣೆ :
ತುಂಬಿದ ತೇರಿನ ನಿಮಿತ್ಯ ಪರಸ್ಥಳದ ಭಕ್ತರಿಗಾಗಿ ಮಹಾಲಿಂಗೇಶ್ವರ ದೇವಾಲಯದಲ್ಲಿ ಬುಧವಾರ ನಸುಕಿನ ಜಾವದ ಉಪಹಾರ, ಮುಂಜಾನೆ 9 ರಿಂದ ರಾತ್ರಿ 12 ವರೆಗೆ ಸಾವಿರಾರು ಮಂದಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.
ಭಾವೈಕ್ಯತೆಯ ದೀಡ ನಮಸ್ಕಾರ :
ಮಹಾಲಿಂಗೇಶ್ವರ ಮಹಾಜಾತ್ರೆಯ ನಿಮಿತ್ಯ ಮಹಾಲಿಂಗಪೂರ ಹಾಗೂ ಸುತ್ತ-ಮುತ್ತಲಿನ ಹಳ್ಳಿಗಳಿಂದ ಆಗಮಿಸಿದ್ದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಮಂಗಳವಾರ ರಾತ್ರಿ 10 ರಿಂದ ಬುಧವಾರ ಸಂಜೆ 5 ವರೆಗೂ ಮಕ್ಕಳು, ಮಹಿಳೆಯರು. ವಯಸ್ಕರು ಪವಿತ್ರ ಬಸವತೀರ್ಥ(ಅಪ್ಪನವರ ಭಾಂವಿ) ಯಿಂದ ಒದ್ದೆ ಬಟ್ಟೆಯಲ್ಲಿ ಶ್ರೀಮಠದವರೆಗೆ ದೀಡ ನಮಸ್ಕಾರ ಹಾಕುವುದರೊಂದಿಗೆ ತಮ್ಮ ತಮ್ಮ ಹರಕೆ ಸಲ್ಲಿಸಿದರು.
ರಾಶಿರಾಶಿ ಬಟ್ಟೆ :
ದೀಡ ನಮಸ್ಕಾರ ಹಾಕಿ ಭಕ್ತರು ಬಿಟ್ಟಿರುವ ರಾಶಿರಾಶಿ ಬಟ್ಟೆಯನ್ನು ಪುರಸಭೆಯ ಸಿಬ್ಬಂದಿ ಹತ್ತಾರು ಕಸದ ವಾಹನಗಳಲ್ಲಿ ಹಾಕಿ, ದೇವಸ್ಥಾನವನ್ನು ಸ್ವಚ್ಛಗೊಳಿಸಿ ದರು. ಮುಸ್ಲಿಂ ಸಮುದಾಯದ ಪುರುಷ, ಮಹಿಳೆಯರು ಸಹ ದೀಡ ನಮಸ್ಕಾರ ಹಾಕುವ ಮೂಲಕ ಬೆಲ್ಲದ ನಾಡಿನ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷೀಯಾದರು.
ಸೂಕ್ತ ಬಂದೋಬಸ್ತ್ :
ಮಹಾಲಿಂಗೇಶ್ವರ ಜನದಟ್ಟನೆಯ ಜಾತ್ರೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಬನಹಟ್ಟಿ ಸಿಪಿಆಯ್ ಸಂಜೀವ ಬಳೆಗಾರ, ಬನಹಟ್ಟಿ ಎಸೈ ಶಾಂತಾ ಹಳ್ಳಿ, ಸ್ಥಳಿಯ ಠಾಣಾಧಿಕಾರಿ ಕಿರಣ ಸತ್ತಿಗೇರಿ ಅವರು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ. ಜನದಟ್ಟನೆ ಕಡಿಮೆ ಮಾಡಲು ಸೂಕ್ತ-ಪಾರ್ಕಿಂಗ ವ್ಯವಸ್ಥೆ ಕಲ್ಪಿಸಿ, ರಥೋತ್ಸವ ನಿಮಿತ್ಯ ಕೆಲ ಮಾರ್ಗಗಳಲ್ಲಿ ವಾಹನ ಸಂಚಾರ ನಿಷೇಧಿಸಿ, ಸೂಕ್ತ ಬಂದೋಬಸ್ತ್ ಒದಗಿಸಿದ್ದಾರೆ.
ನಾಳೆ ಮರು ರಥೋತ್ಸವ :
ಸೆ.19ರ ಗುರುವಾರ ಸಂಜೆ 7ಕ್ಕೆ ಚನ್ನಗಿರೇಶ್ವರ ದೇವಸ್ಥಾನದಿಂದ ಮರಳಿ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಮರು ರಥೋತ್ಸವ ನಡೆಯಲಿದೆ. ಮರುತೇರಿನ ನಿಮಿತ್ಯ ಗುರುವಾರ ಚನ್ನಗೀರೇಶ್ವರ ದೇವಸ್ಥಾನದಲ್ಲಿ ಅನ್ನಪ್ರಸಾದ ಜರುಗಲಿದೆ.
ಬುಧವಾರ ಮುಂಜಾನೆಯಿಂದ ಜಿಲ್ಲೆಯ ವಿವಿಧ ಪಕ್ಷದ ರಾಜಕಾರಣಿಗಳು, ಗಣ್ಯರು, ಪೂಜ್ಯರು ಸೇರಿದಂತೆ ಸಂಖ್ಯಾತ ಭಕ್ತರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಿ ಮಹಾಲಿಂಗೇಶ್ವರ ದರ್ಶನ ಮಾಡಿದರು. ರಾತ್ರಿಯಿಡಿ ಜರುಗುವ ರಥೋತ್ಸವ ದರ್ಶನಕ್ಕೂ ಹಲವರು ಆಗಮಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka ಕಾಂಗ್ರೆಸ್ನಲ್ಲಿ ಭಿನ್ನರಾಗ!: ಊಹಾಪೋಹಕ್ಕೆ ಸಚಿವರು ಗರಂ
ಸಾವಿನಂಚಿನ ರೋಗಿಯ ಸುಖಮರಣಕ್ಕೆ ಸಮ್ಮತಿ : ಏನಿದು ನಿರ್ಧಾರ? ಅನುಮತಿ ಹೇಗೆ?
BJP; ಬಣ ಜಗಳ ದಿಲ್ಲಿ ವರಿಷ್ಠರ ಜಗಲಿಗೆ:ಬೊಮ್ಮಾಯಿ ಸಲಹೆ ಮೇರೆಗೆ ದಿಲ್ಲಿಗೆ ತೆರಳಲು ನಿರ್ಧಾರ
MUDA; ಅಕ್ರಮ ವಹಿವಾಟು ಬಗ್ಗೆ ಯಾವುದೇ ಸಾಕ್ಷಿಯಿಲ್ಲ: ಸಿದ್ದರಾಮಯ್ಯ
MUDA ಹಗರಣ ಮಾಡಿಲ್ಲ ಅಂದಮೇಲೆ ಸೈಟ್ ಏಕೆ ವಾಪಸ್ ಕೊಟ್ಟಿರಿ?
MUST WATCH
ಹೊಸ ಸೇರ್ಪಡೆ
Chikkamagalur: ಇಂದೇ ಮುಖ್ಯವಾಹಿನಿಗೆ ಕೋಟೆಹೊಂಡ ರವೀಂದ್ರ: ನಕ್ಸಲ್ ಚಳವಳಿಯ ಕೊನೆಯ ವ್ಯಕ್ತಿ
Pavagada: ಕಾರ್ಮಿಕರು ತೆರಳುತ್ತಿದ್ದ 407 ವಾಹನ ಪಲ್ಟಿ; 10ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ
ಮಹಾಮಂಡಲೇಶ್ವರರಾಗಿ ಪಟ್ಟಾಭಿಶಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ
BCCI Awards ಇಂದು ಪ್ರದಾನ: ಬುಮ್ರಾ,ಸ್ಮೃತಿ ಮಂಧನಾಗೆ ವರ್ಷದ ಶ್ರೇಷ್ಠ ಕ್ರಿಕೆಟಿಗ ಪ್ರಶಸ್ತಿ
ಮಹಾಮಂಡಲೇಶ್ವರರಾಗಿ ಪಟ್ಟಾಭಿಷಿಕ್ತರಾದ ಕನ್ಯಾಡಿ ಶ್ರೀರಾಮ ಕ್ಷೇತ್ರದ ಬ್ರಹ್ಮಾನಂದ ಶ್ರೀ