Mudhol: ಮಾನವೀಯತೆ ಮೆರೆಯಬೇಕಿದೆ ಮಾಲೀಕ; ತಾಲೂಕಿನಲ್ಲಿ ಪಾಲುದಾರ ಕೃಷಿ ಕಾರ್ಮಿಕರೇ ಹೆಚ್ಚು
ಯಾರ ಪಾಲಾಗಲಿದೆ ಬೆಳೆಹಾನಿ ಪರಿಹಾರ ?
Team Udayavani, Aug 4, 2024, 11:42 AM IST
ಮುಧೋಳ: ತಾಲೂಕಿನ ಜನರ ನಿದ್ದೆ, ನೆಮ್ಮದಿ ಕೆಡಿಸಿರುವ ಪ್ರವಾಹ ಮುಂದಿನ ಬದುಕು ಹೇಗೆ ಎಂಬ ಹೊಸ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ.
ಘಟಪ್ರಭಾ ನದಿ ಪ್ರವಾಹಕ್ಕೆ ಸಿಲುಕಿ ಸಾವಿರಾರು ಹೆಕ್ಟೇರ್ ಬೆಳೆನಾಶವಾಗಿದ್ದು ಕೃಷಿಕರ ಬದುಕು ಹೈರಾಣಾಗಿಸಿದೆ. ಇನ್ನೊಂದೆಡೆ ಕೃಷಿ ಭೂಮಿ ಇಲ್ಲದೆ ಮತ್ತೊಬ್ಬರ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಸಾಗುವಳಿ ಮಾಡುತ್ತಿದ್ದ ಕೃಷಿ ಕಾರ್ಮಿಕರ ಬದುಕು ಮತ್ತಷ್ಟು ಶೋಚನೀಯವಾಗಿದೆ.
ತಾವು ಉತ್ತು ಬಿತ್ತನೆ ಮಾಡುತ್ತಿರುವ ಜಮೀನಿನ ಮಾಲೀಕ ಬೇರೆಯವರಾಗಿದ್ದು ಮುಂದಿನ ದಿನದಲ್ಲಿ ಸರ್ಕಾರ ನೀಡುವ ಪರಿಹಾರ ನೇರವಾಗಿ ಮಾಲೀಕನ ಖಾತೆಗೆ ಜಮೆಯಾಗಲಿದ್ದು, ಪಾಲುದಾರಿಕೆಯಲ್ಲಿ ಕೃಷಿ ಮಾಡಿರುವ ರೈತನಿಗೆ ಜಮೀನು ಮಾಲೀಕ ಪರಿಹಾರದಲ್ಲಿ ಸ್ವಲ್ಪ ದುಡ್ಡು ಕೊಟ್ಟರೆ ಒಳಿತು. ಇಲ್ಲದಿದ್ದರೆ ಸಾಲ-ಸೋಲ ಮಾಡಿ ಬಿತ್ತನೆ ಮಾಡಿರುವ ಕೃಷಿ ಕಾರ್ಮಿಕನಿಗೆ ಮತ್ತಷ್ಟು ಆರ್ಥಿಕ ಸಮಸ್ಯೆ ಎದುರಾಗುವುದಂತು ಖಚಿತ.
ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ರೂಢಿ: ಇಂದಿಗೂ ಬಹುತೇಕ ಗ್ರಾಮೀಣ ಪ್ರದೇಶದಲ್ಲಿ ಪಾಲುದಾರಿಕೆಯಲ್ಲಿ ಕೃಷಿ ಚಟುವಟಿಕೆ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿದೆ. ಹೆಚ್ಚು ಭೂಮಿ ಹೊಂದಿರುವ ರೈತರು ತಮ್ಮ ಜಮೀನುಗಳನ್ನು ಭೂ ರಹಿತ ಕೃಷಿ ಕಾರ್ಮಿಕರಿಗೆ ಬಿತ್ತಿದ ಬೆಳೆಯ ಲಾಭದಲ್ಲಿ ಇಂತಿಷ್ಟು ಪಾಲು ನೀಡುವುದಾಗಿ ಮೌಖಿಕ ಕರಾರಿನ ಮೇಲೆ ಕೃಷಿ ಕಾರ್ಯ ಮಾಡಿಸುತ್ತಿರುತ್ತಾರೆ.
ಇದೀಗ ಅಂತಹ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿರುವ ಭೂ ರಹಿತ ಕೃಷಿ ಕಾರ್ಮಿಕರು ಪ್ರವಾಹ ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ಪಾಲುದಾರಿಕೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಮೀನು ಮಾಲೀಕ ಹೂಡಿಕೆ ಮಾಡಿದ್ದರೆ ಕೃಷಿ ಕಾರ್ಮಿಕ ಸಣ್ಣ ಮೊತ್ತದ ಹೂಡಿಕೆ ಮಾಡಿರುತ್ತಾನೆ.
ಆದರೆ ಪ್ರವಾಹದ ಬಳಿಕ ಸರ್ಕಾರ ಸಮೀಕ್ಷೆ ನಡೆಸಿ ನಿಗದಿಪಡಿಸಿದ ಪರಿಹಾರ ಮೊತ್ತವನ್ನೆಲ್ಲ ಮಾಲೀಕನ ಖಾತೆಗೆ ಜಮಾ ಮಾಡುತ್ತದೆ. ಇದರಿಂದ ಅಲ್ಪಮೊತ್ತದ ಹೂಡಿಕೆ ಮಾಡಿರುವ ಬಡ ಕೃಷಿ ಕಾರ್ಮಿಕನಿಗೆ ಯಾವ ಹಣವೂ ದೊರೆಯುವುದಿಲ್ಲ.
ಮಾನವೀಯತೆ ಮೆರೆಯಬೇಕು: ಇನ್ನು ಸರ್ಕಾರದ ಮಟ್ಟದಲ್ಲಿ ಇಂತಹ ಪಾಲುದಾರಿಕೆ ಕೃಷಿ ಕಾರ್ಮಿಕರನ್ನು ಗುರುತಿಸುವುದು ಕಷ್ಟಸಾಧ್ಯ. ಜಮೀನು ಮಾಲೀಕರೆ ಮಾನವೀಯತೆಯಿಂದ ಸರ್ಕಾರದ ಪರಿಹಾರ ಹಣದಲ್ಲಿ ಸ್ವಲ್ಪ ಮೊತ್ತವನ್ನಾದರೂ ಕೃಷಿ ಕಾರ್ಮಿಕನಿಗೆ ನೀಡದರೆ ಅವರಿಗೂ ಅಲ್ಪಸ್ವಲ್ಪ ಆಸರೆಯಾಗುತ್ತದೆ. ಬಡತನದ ನಡುವೆ ದಿನದ ಕೂಳಿಗಾಗಿ ಪಾಲಿನಂತೆ ಕೃಷಿ ಕಾರ್ಯದಲ್ಲಿ ತೊಡಗುವ ಕಾರ್ಮಿಕರನ್ನು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಜಮೀನು ಮಾಲೀಕರು ಕೈ ಹಿಡಿಬೇಕು ಎನ್ನುತ್ತಾರೆ ಹೆಸರು ಹೇಳಲಿಚ್ಚಿಸದ ಅಧಿಕಾರಿಯೋರ್ವರು.
ಗಾಯದ ಮೇಲೆ ಬರೆ: ಘಟಪ್ರಭಾ ಪ್ರವಾಹಕ್ಕೆ ಮುಧೋಳ ತಾಲೂಕಿನ ಸರಿ ಸುಮಾರು 38 ಗ್ರಾಮಗಳ ಜಮೀನಿನಲ್ಲಿನ ಬೆಳೆಗಳಿಗೆ ನೀರು ನುಗ್ಗುತ್ತದೆ. ಪ್ರವಾಹದ ವಿಕೋಪಕ್ಕೆ ಸಿಲುಕಿ ಮನೆ-ಮಠ ಕಳೆದುಕೊಂಡು ಬದುಕು ಬೀದಿಗೆ ಬಂದಿದೆ. ಇಂದೋ ನಾಳೆ ಉತ್ತಮ ಫಸಲು ಬಂದು ನಮ್ಮ ಆರ್ಥಿಕ ಬದುಕು ಹಸನಾಗುತ್ತದೆ ಎಂಬ ಕನಸು ಕಮರಿ ಹೋಗಿದ್ದು, ಸಾವಿರಾರು ಭೂ ರಹಿತ ಕೃಷಿ ಕಾರ್ಮಿಕರ ಜೀವನ ಅಯೋಮಯವಾಗಿದೆ.
ಬಹುತೇಕ ಕಡೆಗಳಲ್ಲಿ ಪಾಲುದಾರಿಕೆ ಕೃಷಿ ಮೌಖಿಕ ಕರಾರಿನ ಮೇಲೆ ನಡೆಯುತ್ತದೆ. ಒಂದು ವೇಳೆ ದಾಖಲಾತಿ ಒಪ್ಪಂದ ಮಾಡಿಕೊಂಡಿದ್ದರೂ ಭೂ ಒಡೆಯನ ಎದುರು ನಿಂತು ಪರಿಹಾರಕ್ಕಾಗಿ ಪಟ್ಟು ಹಿಡಿಯುವುದು ಸಾಮರಸ್ಯಕ್ಕೆ ಧಕ್ಕೆಯನ್ನುಂಟು ಮಾಡುತ್ತದೆ. ಇದರಿಂದ ಪರಿಹಾರವೂ ಇಲ್ಲ ಹಾಕಿದ ಬಂಡವಾಳವೂ ಇಲ್ಲದಂತಾಗಿ ಬಡ ಕೃಷಿ ಕಾರ್ಮಿಕರಿಗೆ ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿ ಉಂಟಾಗಿದೆ.
ಮುಧೋಳ ತಾಲೂಕಿನಲ್ಲಿಯೇ ಹೆಚ್ಚು ಹಾನಿ: ಇದುವರೆಗೂ ಇರುವ ಮಾಹಿತಿ ಪ್ರಕಾರ ಘಟಪ್ರಭಾ ನದಿ ಪ್ರವಾಹಕ್ಕೆ ಮುಧೋಳ ತಾಲೂಕಿನಲ್ಲಿಯೇ ಹೆಚ್ಚು ಬೆಳೆ ಜಲಾವೃತವಾಗಿದೆ. ಜಿಲ್ಲೆಗೆ ಹೋಲಿಕೆ ಮಾಡಿದರೆ 2791 ಹೆಕ್ಟೇರ್ ಕೃಷಿ ಬೆಳೆ ಹಾಗೂ 285 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ. ಇದು ಇನ್ನುಳಿದ ಎಂಟು ತಾಲೂಕುಗಳಿಗಿಂತಲೂ ಹೆಚ್ಚಿನ ಜಲಾವೃತ ಬೆಳೆಯಾಗಿದೆ. ಪ್ರವಾಹ ನಿರೀಕ್ಷಿತಮಟ್ಟದಲ್ಲಿ ಇಳಿಮುಖವಾಗದ ಕಾರಣ ಜಲಾವೃತ ಪ್ರಮಾಣ ಹೆಚ್ಚಾಗುವ ಲಕ್ಷಣವೂ ಇದೆ.
ಅದೇನೆ ಇದ್ದರೂ ಮಾನವೀಯತೆ ದೃಷ್ಟಿಯಲ್ಲಿ ಜಮೀನು ಮಾಲೀಕರು ತಮಗೆ ಬರುವ ಪರಿಹಾರ ಮೊತ್ತದಲ್ಲಿ ತಮ್ಮ ಭೂ ರಹಿತ ಕೃಷಿ ಕಾರ್ಮಿಕರಿಗೆ ಅಲ್ಪಮೊತ್ತದ ಆರ್ಥಿಕ ನೆರವು ನೀಡಿದರೆ ಬಡ ಕೃಷಿ ಕಾರ್ಮಿಕರು ನೆಮ್ಮದಿಯ ನಿಟ್ಟುಸಿರು ಬಿಡಬಹುದು.
ನಮಗೆ ಸ್ವಂತ ಜಮೀನು ಇಲ್ಲ ನಮ್ಮೂರಿನ ಶ್ರೀಮಂತರ 8 ಎಕರೆ ಜಮೀನಿನಲ್ಲಿ ಪಾಲುದಾರಿಕೆಯಲ್ಲಿ ಕಬ್ಬು, ಹೆಸರು ಮತ್ತು ವಿವಿಧ ಬಗೆಯ ಬೆಳೆ ಬೆಳೆದಿದ್ದೆ. ಇದೀಗ ಬೆಳೆ ಮುಳುಗುವ ಹಂತಕ್ಕೆ ನೀರು ನಿಂತಿದೆ. ಸಾಲ ಮಾಡಿ ಕೃಷಿ ಮಾಡಿದ್ದೆ. ಎಲ್ಲವೂ ನೀರಲ್ಲಿ ಹೋಮ ಮಾಡಿದಂತಾಗಿದೆ. ಸರ್ಕಾರ ನೀಡುವ ಪರಿಹಾರದಲ್ಲಿ ಜಮೀನು ಮಾಲೀಕರನ್ನು ನಮಗೂ ಕೊಡಿ ಎಂದು ಕೇಳುವುದಾದರೂ ಹೇಗೆ ? – ಹೆಸರು ಹೇಳಲಿಚ್ಚಿಸದ ಭೂ ರಹಿತ ಕೃಷಿ ಕಾರ್ಮಿಕ
-ಗೋವಿಂದಪ್ಪ ತಳವಾರ ಮುಧೋಳ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rabkavi Banhatti: ತೇರಿನ ಮೇಲಿನಿಂದ ಬಿದ್ದ ವ್ಯಕ್ತಿ ಸ್ಥಳದಲ್ಲೇ ಸಾವು
ಮಹಾಲಿಂಗಪುರದ ಮಹಾಜಾತ್ರೆ…: ಲಕ್ಷಾಂತರ ಭಕ್ತರು ಭಾಗಿ… ರಾತ್ರಿಯಿಡಿ ಸಾಗುವ ರಥೋತ್ಸವ
Pak flag ಹಾರಾಡುವ ವಾಟ್ಸಪ್ ಸ್ಟೇಟಸ್: ಯುವಕ ಪೊಲೀಸರ ವಶಕ್ಕೆ
Mudhol: ಆರ್ಎಸ್ಎಸ್ನಿಂದ ದೇಶಕ್ಕೆ ಕಂಟಕ: ಆರ್.ಬಿ.ತಿಮ್ಮಾಪುರ
Farmers; ರೈತನ ಬೆಳೆ ಕಾಯುಲು ಸಿನಿ ತಾರೆಯರು; ಉತ್ತಮ ಬೆಳೆಗೆ ರೈತನ ಹೊಸ ಪ್ರಯೋಗ
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.