![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-415x219.jpg)
High Court: ಕುದುರೆ ರೇಸ್ಗೆ ಹೈಕೋರ್ಟ್ ತಡೆ
Team Udayavani, Jun 23, 2024, 11:23 AM IST
![High Court: ಕುದುರೆ ರೇಸ್ಗೆ ಹೈಕೋರ್ಟ್ ತಡೆ](https://www.udayavani.com/wp-content/uploads/2024/06/Untitled-1-9-620x372.jpg)
ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್ (ರೇಸ್ ಕೋರ್ಸ್) ನಲ್ಲಿ ಕುದುರೆ ರೇಸ್ಗಳ ಆಯೋಜನೆಗೆ ಅನುಮತಿ ನೀಡಿದ್ದ ಏಕಸದಸ್ಯ ನ್ಯಾಯಪೀಠದ ಮಧ್ಯಂತರ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ತಡೆಯಾಜ್ಞೆ ನೀಡಿದೆ. ರೇಸ್ ಕೋರ್ಸ್ನಲ್ಲಿ ಕುದುರೆ ರೇಸ್ ನಡೆಸಲು ಷರತ್ತು ಬದ್ಧ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಶುಕ್ರವಾರ ತುರ್ತು ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ ಶನಿವಾರ ತೀರ್ಪು ಪ್ರಕಟಿಸಿದೆ.
ಸರ್ಕಾರವು ಮೇಲ್ಮನವಿಯಲ್ಲಿ ಕುದುರೆ ಪಂದ್ಯಗಳ ಆಯೋಜಿಸದಂತೆ ಬಲವಾದ ಕಾರಣಗಳನ್ನು ನೀಡಿದೆ. ಈ ನಿಟ್ಟಿನಲ್ಲಿ ಪಂದ್ಯಗಳ ಆಯೋಜನೆಗೆ ಅನುಮತಿ ನೀಡಿದ್ದ ಏಕಸದಸ್ಯ ಪೀಠದ ಆದೇಶವನ್ನು ಅಮಾನತ್ತಿಲ್ಲಿಟ್ಟಿ ರುವುದಾಗಿ ಪೀಠ ತಿಳಿಸಿದೆ. ಅರ್ಜಿ ವಿಚಾರಣೆ ಪೂರ್ಣ ಗೊಳಿಸುವವರೆಗೂ ಬೆಂಗಳೂರು ಟಫ್ì ಕ್ಲಬ್ನಲ್ಲಿ ಆನ್ ಕೋರ್ಸ್ ಮತ್ತು ಆಫ್ ಕೋರ್ಸ್ಗಳ ಆಯೋ ಜನೆಗೆ ನಿರ್ಬಂಧ ವಿಧಿಸಿದೆ. ಅರ್ಜಿಯ ಅಂತಿಮ ವಿಚಾರಣೆಯನ್ನು ಆಗಸ್ಟ್ 13ಕ್ಕೆ ನಿಗದಿ ಪಡಿಸಿದೆ. ರಾಜ್ಯ ಸರ್ಕಾರದ ಪರ ವಾದಿಸಿದ್ದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಕುದುರೆ ಪಂದ್ಯಗಳ ನಡೆಯುವ ವೇಳೆ ಬುಕ್ಕಿಗಳು ದೊಡ್ಡಮಟ್ಟದ ಅವ್ಯವಹಾರ ನಡೆಸಿದ್ದಾರೆ. ಸಿಸಿಬಿ ನಡೆಸಿದ ದಾಳಿಯಲ್ಲಿ ಈ ಬಗ್ಗೆಗಿನ ಸಾಕ್ಷ್ಯ ಪತ್ತೆಯಾಗಿದೆ. ಹಣ ಬೆಟ್ ಮಾಡುವವರಿಗೆ ಪೆನ್ಸಿಲಿನಿಂದ ಬರೆದ ಟಿಕೆಟ್ ನೀಡುತ್ತಿದ್ದ ಕೋಟ್ಯಂತರ ರೂ.ಗಳ ಅವ್ಯವಹಾರ ಬೆಳಕಿಗೆ ಬಂದಿದೆ.
ಇದರಿಂದ ಸರ್ಕಾರಕ್ಕೆ ಬರಬೇಕಾದ ತೆರಿಗೆ ವಂಚಿಸಲಾಗಿದೆ ಎಂದು ವಾದಿಸಿದ್ದರು. ಅಲ್ಲದೆ, ಆಟೋ ಚಾಲಕರು ಸೇರಿದಂತೆ ಬಡ ಜನತೆ ತಾವು ದಿನಪೂರ್ತಿ ದುಡಿದ ಹಣವನ್ನು ಕುದುರೆ ಪಂದ್ಯಗಳಿಗೆ ವಿನಿಯೋಗಿಸುತ್ತಿದ್ದು, ಇವರೆಲ್ಲ ಮೋಸಕ್ಕೆ ಬಳಿಯಾಗುತ್ತಿದ್ದಾರೆ. ಈ ಹಿಂದೆ ಕುದುರೆಯೊಂದಕ್ಕೆ ಡ್ರಗ್ಸ್ ನೀಡಿದ್ದ ಆರೋಪವೂ ಇದೆ. ಆದ್ದರಿಂದ ಕುದುರೆ ಪಂದ್ಯಗಳಿಗೆ ಅನುಮತಿ ನೀಡಬಾರದು ಎಂದು ಕೋರಿದರು. ಪ್ರತಿವಾದಿಗಳಾದ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್, ಕರ್ನಾಟಕ ಟ್ರೈನರ್ಸ್ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘದ ಪರ ವಕೀಲರು, ಕುದುರೆ ಪಂದ್ಯ ಒಂದು ಕ್ರೀಡೆಯಾಗಿದೆ. ಕ್ರೀಡೆಯಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ಜಾಕಿಗಳು ಈಗಾಗಲೇ ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಏಕಸದಸ್ಯಪೀಠ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಿದೆ.
ಇದೀಗ ಸರ್ಕಾರ ಪಂದ್ಯಗಳ ಆಯೋಜಿಸದಂತೆ ಹೇಳಿದರೆ ಅದನ್ನೇ ನಂಬಿ ಜೀವನ ನಡೆಸುತ್ತಿರುವವರಿಗೆ ತೊಂದರೆಯಾಗಲಿದೆ ಎಂದು ವಾದಿಸಿದ್ದರು. ಕುದುರೆ ರೇಸ್ನಲ್ಲಿ ಬೆಟ್ಟಿಂಗ್ ಕಾನೂನುಬದ್ಧ ವಾಗಿದ್ದು ಸರ್ಕಾರಕ್ಕೆ ಕೋಟ್ಯಂತರ ರೂ. ತೆರಿಗೆ ಸಂಗ್ರಹವಾಗುತ್ತಿದೆ. ಏಕಸದಸ್ಯ ಪೀಠ ಪಂದ್ಯಗಳ ಆಯೋಜನೆಗೆ ಅವಕಾಶ ನೀಡಿದ್ದರಿಂದ ಶನಿವಾರದಿಂದ (ಜೂನ್ 22) ಪಂದ್ಯಗಳ ಆಯೋಜನೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕಡೆ ಕ್ಷಣದಲ್ಲಿ ಪಂದ್ಯಕ್ಕೆ ತಡೆ ನೀಡಿದರೆ ತೀವ್ರ ತೊಂದ ರೆಯಾಗಲಿದೆ. ಆದ್ದರಿಂದ ಪಂದ್ಯಗಳ ಆಯೋಜನೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದರು.
ಟಾಪ್ ನ್ಯೂಸ್
![1-qwewq-wq-ew](https://www.udayavani.com/wp-content/uploads/2024/06/1-qwewq-wq-ew-415x219.jpg)
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.