![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Feb 4, 2017, 11:52 AM IST
ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದಲ್ಲಿ ಶುಕ್ರವಾರ ಹಾಡಹಗಲೇ ಶೂಟ್ಔಟ್ ನಡೆದಿದೆ. ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅಲಿಯಾಸ್ ಸೀನ ಎಂಬುವವರ ಮೇಲೆ ಗುಂಡಿನ ದಾಳಿ ಮಾಡಲಾಗಿದೆ.
ಬಸವೇಶ್ವರ ನಗರದಲ್ಲಿ ವಾಸವಿದ್ದ ಶ್ರೀನಿವಾಸ್, ಶುಕ್ರವಾರ ಎಂದಿನಂತೆ ಯಲಹಂಕದಲ್ಲಿ ರೈತ ಸಂತೆಗೆ ಭೇಟಿ ನೀಡಿ, ಎಪಿಎಂಸಿ ನೌಕರ ಸಂಘದ ಅಧ್ಯಕ್ಷ ಶ್ರೀಧರ್ ಜತೆ ಸ್ನೇಹಿತರೊಬ್ಬರ ಮನೆ ಗೃಹ ಪ್ರವೇಶಕ್ಕೆ ಕಾರಿನಲ್ಲಿ ತೆರಳುತ್ತಿದ್ದರು. ಶ್ರೀನಿವಾಸ್ ಅವರಿದ್ದ ಕಾರನ್ನು ಚಾಲಕ ಮೂರ್ತಿ ಓಡಿಸುತ್ತಿದ್ದ. ಬೆಳಗ್ಗೆ 10.45ರ ಸುಮಾರಿಗೆ ಕೋಗಿಲು ಕ್ರಾಸ್ ಬಳಿಯ ಸಿಗ್ನಲ್ನಲ್ಲಿ ಕಾರು ನಿಂತುಕೊಂಡಿತ್ತು.
ಈ ವೇಳೆ ಪಲ್ಸರ್ನಲ್ಲಿ ಬಂದಿದ್ದ ಇಬ್ಬರು ಮುಸುಕುಧಾರಿಗಳು ಕಾರಿನ ಮೇಲೆ ಆರು ಬಾರಿ ಗುಂಡು ಹಾರಿಸಿದ್ದಾರೆ. ಇದರಲ್ಲಿ ಎರಡು ಗುಂಡುಗಳು ಶ್ರೀನಿವಾಸ್ ಹೊಟ್ಟೆ ಮತ್ತು ಬೆನ್ನಿನ ಭಾಗಕ್ಕೆ ತಗುಲಿವೆ. ಕಪ್ಪು ಬಣ್ಣದ ಜರ್ಕೀನ್, ಹೆಲ್ಮೆಟ್ ಮತ್ತು ಮುಖಕ್ಕೆ ಮುಸುಕು ಧರಿಸಿದ್ದ ದುಷ್ಕರ್ಮಿಗಳು ದಾಳಿ ಮಾಡಿ, ಬಳಿಕ ದೇವಹಳ್ಳಿ ಕಡೆಗೆ ಪರಾರಿಯಾಗಿದ್ಧಾರೆ.
ಗುಂಡಿನ ದಾಳಿಯಿಂದ ರಕ್ತದ ಮಡುವಿನಲ್ಲಿದ್ದ ಶ್ರೀನಿವಾಸ್ನನ್ನು ತಕ್ಷಣ ಯಲಹಂಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಪ್ರಥಮ ಚಿಕಿತ್ಸೆ ನೀಡಿ, ನಂತರ ಹೆಬ್ಟಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಶಸ್ತ್ರಚಿಕಿತ್ಸೆ ನಡೆಸಿ ದೇಹಕ್ಕೆ ಹೊಕ್ಕಿದ ಎರಡು ಗುಂಡಗಳನ್ನೂ ಹೊರತೆಗೆಯಲಾಗಿದೆ. ಶ್ರೀನಿವಾಸ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಗುಂಡಿನ ದಾಳಿ ವಿಷಯ ತಿಳಿಯುತ್ತಿದಂತೆ ಶ್ರೀನಿವಾಸ್ ಬೆಂಬಲಿಗರು ಹೆಚ್ಚಿನ ಸಂಖ್ಯೆಯಲ್ಲಿ ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿ ಜಮಾಯಿಸಿದ್ದರು. ಮುಂಜಾಗೃತ ಕ್ರಮವಾಗಿ ಎರಡು ಕೆಎಸ್ಆರ್ಪಿ ತುಕಡಿ ಸೇರಿದಂತೆ ಪೊಲೀಸ್ ಸಿಬ್ಬಂದಿಯನ್ನು ಆಸ್ಪತ್ರೆ ಭದ್ರತೆಗೆ ನಿಯೋಜಿಸಲಾಗಿತ್ತು. ಶ್ರೀನಿವಾಸ್ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದು ವ್ಯವಹಾರಿಕ ಕಾರಣಗಳಿಗೆ ಕೃತ್ಯ ನಡೆದಿರಬಹುದು, ಇಲ್ಲವೇ ರಾಜಕೀಯ ದ್ವೇಷದಿಂದ ನಡೆದಿರಬಹುದು ಎಂದು ಶಂಕಿಸಲಾಗಿದೆ.
ವಿಶೇಷ ತಂಡ ರಚನೆ: ಆರೋಪಿಗಳ ಪತ್ತೆಗೆ ಸಿಸಿಬಿಯ ಎರಡು ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ನಗರದಿಂದ ಹೊರಹೋಗುವವರ ಮೇಲೆ ನಿಗಾ ಇಟ್ಟು, ಅನುಮಾನ ಬಂದವರನ್ನು ತಪಾಸಣೆಗೆ ಒಳಡಪಡಿಸುವಂತೆ ತಿಳಿಸಲಾಗಿದೆ ಎಂದು ನಗರ ಅಪರಾಧ ವಿಭಾಗದ ಹೆಚ್ಚುವರಿ ಆಯುಕ್ತ ರವಿ ತಿಳಿಸಿದ್ದಾರೆ.
ಸಿಗ್ನಲ್ ಬಳಿ ಸಿಸಿ ಟಿವಿ ಕ್ಯಾಮರಾ: ಯಲಹಂಕ ಕ್ಷೇತ್ರದ ಬಿಬಿಎಂಪಿ ವ್ಯಾಪ್ತಿಯಲ್ಲಿ 400ಸಿಸಿ ಟಿವಿ ಕ್ಯಾಮರಾ ಅಳವಡಿಸುವ ಕಾರ್ಯಕ್ಕೆ ಕಳೆದ ವಾರವಷ್ಟೇ ಚಾಲನೆ ಸಿಕ್ಕಿತ್ತು. ಅದರಂತೆ ಆರಂಭಿಕವಾಗಿ ಕೋಗಿಲು ವೃತ್ತದಲ್ಲಿ 360 ಡಿಗ್ರಿ ವೃತ್ತದಲ್ಲಿ ಸೆರೆಹಿಡಿಯುವ ಹೈಢೆಪನೇಷನ್ ಕ್ಯಾಮರಾ ಅಳವಡಿಸಲಾಗಿತ್ತು. ಈ ಕ್ಯಾಮರಾದಿಂದ ಅರ್ಧ ಕೀ.ಮೀ.ದೂರದ ಚಿತ್ರಗಳನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಈ ಕ್ಯಾಮೆರಾದಲ್ಲಿ ಆರೋಪಿಗಳ ಚಿತ್ರ ಸೆರೆಯಾಗಿದೆ ಎನ್ನಲಾಗಿದೆ. ಯಲಹಂಕ ಪೊಲೀಸರು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ಧಾರೆ.
ಅಣ್ಣನ ನೋಡಲು ಬಂದ ರೌಡಿಶೀಟರ್ ತಮ್ಮನ ಸೆರೆ: ಈ ಮಧ್ಯೆ, ಶ್ರೀನಿವಾಸ್ನನ್ನು ನೋಡಲು ಸಹೋದರ ಪಾಯ್ಸನ್ ರಾಮ ಆಸ್ಪತ್ರೆಗೆ ಬಂದಿದ್ದ. ಪ್ರಕರಣವೊಂದರ ಆರೋಪಿಯಾಗಿದ್ದ ರಾಮ, ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದ. ಆಸ್ಪತ್ರೆ ಬಳಿ ಬಂದ ಕೂಡಲೇ ರಾಮನನ್ನು ಪೊಲೀಸರು ವಶಕ್ಕೆ ಪಡೆದು, ಠಾಣೆಗೆ ಕರೆದೊಯ್ದರು.
ಯಾರೀ ಕಡಬಗೆರೆ ಸೀನ?
ಶ್ರೀನಿವಾಸ್ ಮಾಗಡಿ ರಸ್ತೆಯ ಕಡಬಗೆರೆ ಮೂಲದವನು. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿರುವ ಸೀನ ಮಾಗಡಿ ರಸ್ತೆಯಲ್ಲಿ ಡಾಬಾ ಇಟ್ಟುಕೊಂಡಿದ್ದ. ಡಾಬಾ ಸೀನಾ ಈತನ ಇನ್ನೊಂದು ಹೆಸರು. ಬಳಿಕ ಲಾರಿ ಬಾಡಿಗೆಗೆ ನೀಡುವ ವ್ಯವಹಾರ ಆರಂಭಿಸಿದ್ದ. ರೌಡಿ ಕೃತ್ಯಗಳಲ್ಲಿ ತೊಡಗಿಸಿಕೊಂಡಿದ್ದ ಈತನ ವಿರುದ್ಧ ಮಾದನಾಯಕನಹಳ್ಳಿ, ರಾಮನಗರ ಮತ್ತು ನೆಲಮಂಗದ ರೌಡಿಶೀಟ್ ತೆರೆಯಲಾಗಿದೆ.
ಶ್ರೀನಿವಾಸ್ನ ವಿರುದ್ಧ ಸುಮಾರು 40ಕ್ಕೂ ಹೆಚ್ಚು ಪ್ರಕರಣಗಳಿವೆ. ಶ್ರೀನಿವಾಸ್ ಆರಂಭದಲ್ಲಿ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ. ಬಿಜೆಪಿಯಿಂದ ದಾಸನಪುರ ಜಿಲ್ಲಾ ಪಂಚಾಯ್ತಿಗೆ ಸ್ಪರ್ಧಿಸಿ ಪರಾಭವಗೊಂಡಿದ್ದ. ಗ್ರಾಮ ಪಂಚಾಯ್ತಿಗೂ ಸ್ಪರ್ಧಿಸಿ ಸೋಲು ಕಂಡಿದ್ದ. ಕೆಲ ವರ್ಷಗಳ ಹಿಂದಷ್ಟೇ ಕಾಂಗ್ರೆಸ್ಗೆ ಸೇರ್ಪಡೆಗೊಂಡು ದಾಸನಪುರದ ಎಪಿಎಂಸಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ. ಬಿಜೆಪಿಯಲ್ಲಿದ್ದಾಗ ಶಾಸಕ ವಿಶ್ವನಾಥ್ ಜತೆ ಒಡನಾಡ ಇಟ್ಟುಕೊಂಡಿದ್ದ. ನಂತರ ಅವರಿಂದ ಬೇರಾಗಿದ್ದ. ಎಪಿಎಂಸಿ ಅಧ್ಯಕ್ಷನಾದ ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡಿದ್ದ ಎನ್ನಲಾಗಿದೆ.
ಬೆತ್ತನಗೆರೆ ಸಹಚರ
ಐದು ವರ್ಷಗಳ ಹಿಂದೆ ನಗರದ ಹೊರವಲದ ಹೇರೋಹಳ್ಳಿಯಲ್ಲಿ ಪೊಲೀಸ್ ಎನ್ಕೌಂಟರ್ಗೆ ಬಲಿಯಾ ಗಿದ್ದ ಬೆತ್ತನಗೆರೆ ಸೀನನ ಸಹಚರ ಶ್ರೀನಿವಾಸ್. ಬೆತ್ತನಗೆರೆ ಸೀನ ಬೆಮಲ್ ಕೃಷ್ಣಪ್ಪನ ಕೊಲೆ ಪ್ರಕರಣ ಪ್ರಮುಖ ಆರೋಪಿಯಾಗಿದ್ದ. ಈತನ ಗ್ಯಾಂಗ್ನಲ್ಲಿ ಶ್ರೀನಿವಾಸ್ ಸಕ್ರೀಯವಾಗಿದ್ದ ಎನ್ನಲಾಗಿದೆ. ನೆಲಮಂಗಲ, ದಾಬಸ್ಪೇಟೆ ಬೆಂಗಳೂರು ಹೊರ ವಲಯ ದಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ. ಬೆಮಲ್ ಕೃಷ್ಣಪ್ಪ ಕೊಲೆ ಪ್ರಕರಣಲ್ಲಿ ಶ್ರೀನಿವಾಸ್ ಬೆತ್ತನಗೆರೆ ಸೀನನಿಗೆ ಸಹಕರಿಸಿದ್ದ ಎನ್ನಲಾಗಿದೆ. ಕಡಬಗೆರೆ ಭವಾನಿ ಕೊಲೆಯ ಪ್ರಕರಣದಲ್ಲೂ ಶ್ರೀನಿವಾಸನ ಹೆಸರಿದೆ.
ಸಾಕ್ಷಿ ಹತ್ಯೆಗೆ ರೂಪಿಸಿದ್ದ ಸಂಚಿನಿಂದ ಸಂಚಕಾರ?
ಬೆಂಗಳೂರು ಗ್ರಾಮಾಂತರ ಠಾಣೆ ವ್ಯಾಪ್ತಿಯ ಮಾಯಗಾನಹಳ್ಳಿ ಎಂಬಲ್ಲಿ 2008ರಲ್ಲಿ ಅಖೀಲ ಭಾರತ ಮಧ್ಯಪಾನ ವಿರೋಧಿ ಸಂಘದ ಅಧ್ಯಕ್ಷ ಎ.ಟಿ.ಬಾಬು ಹತ್ಯೆ ನಡೆದಿತ್ತು. ಭೂ ವಿವಾದಕ್ಕೆ ಸಂಬಂಧಿಸಿದಂತೆ ಪಾಯ್ಸನ್ ರಾಮನ ಸಹಚರರು ಬಾಬುವಿನ ಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಶ್ರೀನಿವಾಸ್ ಕೂಡ ಆರೋಪಿಯಾಗಿದ್ದ. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಪ್ರಕರಣದ ಸಾಕ್ಷಿದಾರ ಜೈಕಾರ್ ಶೆಟ್ಟಿ, ಪ್ರೇಮ ಶೆಟ್ಟಿ ಹತ್ಯೆಗೆ ಪಾಯ್ಸನ್ ರಾಮ್ ಹಾಗೂ ಶ್ರೀನಿವಾಸ್ ಸಹಚರರು ಸಂಚು ರೂಪಿಸಿದ್ದರು ಎನ್ನಲಾಗಿದೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಕೊಲೆಗೆ ಯತ್ನ ನಡೆದಿರಬಹುದೆಂದೂ ಪೊಲೀಸರು ಶಂಕಿಸಿದ್ದಾರೆ.
ಸೀನ, ರಾಮ ಕ್ರಿಮಿನಲ್ ಬ್ರದರ್
ಶ್ರೀನಿವಾಸ್ ರೌಡಿ ಶೀಟರ್ ಬೆತ್ತನಗೆರೆ ಸೀನನ ಸಹಚರನಾಗಿದ್ದ. ಮಾದನಾಯಕನಹಳ್ಳಿಯಲ್ಲಿ ಸೀನನ ವಿರುದ್ಧ 2013ರಲ್ಲೇ ರೌಡಿ ಶೀಟ್ ತೆರೆಯಲಾಗಿತ್ತು. ಈತನ ಸಹೋದರ ಪಾಯ್ಸನ್ ರಾಮ ಸಹ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಮಾದನಾಯಕನಹಳ್ಳಿ ಠಾಣೆಯಲ್ಲಿ ಸೀನನ ವಿರುದ್ಧ 2 ಜಾತಿ ನಿಂದನೆ ಪ್ರಕರಣ ಹಾಗೂ ಒಂದು ವರ್ಷದ ಹಿಂದೆ ಚುನಾವಣಾ ಅಪರಾಧದ ಕೇಸ್ ಕೂಡ ಸೀನನ ವಿರುದ್ಧ ದಾಖಲಾಗಿದೆ. ನೆಲಮಂಗಲ ಠಾಣೆಯಲ್ಲೂ ಒಂದು ಪ್ರಕರಣ ದಾಖಲಾಗಿದೆ.
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.