![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Nov 11, 2018, 6:00 AM IST
ಬೆಂಗಳೂರು: ಭಯೋತ್ಪಾದನೆ, ನಕ್ಸಲ್ ಕೃತ್ಯಗಳು ಸೇರಿದಂತೆ ಮತ್ತಿತರ ಗಂಭೀರ ಅಪರಾಧ ಪ್ರಕರಣಗಳಲ್ಲಿ ಜೈಲು ಸೇರುವ ಆರೋಪಿಗಳಿಗಾಗಿಯೇ “ಹೈ ಸೆಕ್ಯೂರಿಟಿ’ ಜೈಲು ನಿರ್ಮಿಸಲು ಕಾರಾಗೃಹ ಇಲಾಖೆ ಸಿದ್ಧತೆ ನಡೆಸಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಸಮೀಪದಲ್ಲೇ ಈ ಜೈಲು ಕೂಡ ತಲೆ ಎತ್ತಲಿದೆ!
ಇನ್ಮುಂದೆ ಕೈದಿಗಳು ಆರೋಗ್ಯದ ನೆಪ ಹೇಳಿ ಜೈಲಿನಿಂದ ಹೊರಗೆ ಚಿಕಿತ್ಸೆ ಪಡೆಯಲು ಹೋಗುವುದಕ್ಕೆ ಬ್ರೇಕ್ ಹಾಕಲು ಜೈಲು ಆವರಣದಲ್ಲೇ ಸುಸಜ್ಜಿತ ಆಸ್ಪತ್ರೆ ವ್ಯವಸ್ಥೆ ಕಲ್ಪಿಸುವುದು, ಜತೆಗೆ ಅಡುಗೆ ಕೋಣೆ, ಗ್ರಂಥಾಲಯ, ವ್ಯಕ್ತಿ ವಿಕಸನ ಕೇಂದ್ರಗಳು, ಆಪ್ತ ಸಮಾಲೋಚನೆ ಕೊಠಡಿಗಳು, ದೇವಾಲಯವನ್ನೂ ಅಲ್ಲಿಯೇ ನಿರ್ಮಾಣ ಮಾಡಲಾಗುತ್ತಿದೆ ಎಂದು ಕಾರಾಗೃಹ ಇಲಾಖೆ ಮೂಲಗಳು ಮಾಹಿತಿ ನೀಡಿವೆ.
ಕೇಂದ್ರ ಕಾರಾಗೃಹಕ್ಕೆ ಸಮೀಪದಲ್ಲೇ ಇರುವ 16 ಎಕರೆ ಪ್ರದೇಶದಲ್ಲಿ ಈ ಹೈ ಸೆಕ್ಯೂರಿಟಿ ಜೈಲು ನಿರ್ಮಿಸಲು ತೀರ್ಮಾನಿಸಲಾಗಿದೆ. ಅಂದಾಜು 157 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಈಗಾಗಲೇ ಸರ್ಕಾರ ಬಜೆಟ್ನಲ್ಲಿ 100 ಕೋಟಿ ರೂ.ಬಿಡುಗಡೆ ಮಾಡಿದ್ದು, ಹೆಚ್ಚುವರಿಯಾಗಿ 57 ಕೋಟಿ ರೂ. ಅನುದಾನ ಕೋರಲಾಗಿದೆ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.
ಪ್ರಸ್ತುತ ಕೇಂದ್ರ ಕಾರಾಗೃಹದಲ್ಲಿರುವ ಉಗ್ರರು, ನಕ್ಸಲೀಯರು, ರೌಡಿಶೀಟರ್ಗಳು ಮತ್ತು ಪದೇ ಪದೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗುವ ಪ್ರಮುಖ ಆರೋಪಿಗಳು ಹಾಗೂ ಹೈ ಪ್ರೊಫೈಲ್ ಪ್ರಕರಣಗಳ ಆರೋಪಿಗಳನ್ನು ಈ ಜೈಲಿನಲ್ಲಿ ಇಡಲಾಗುತ್ತದೆ. ಇದರಿಂದ ಕೇಂದ್ರ ಕಾರಾಗೃಹದಲ್ಲಿ ಭದ್ರತೆ, ಒತ್ತಡದ ಸಮಸ್ಯೆ ಬಗೆಹರಿಯಲಿದೆ. ಹೈ ಪ್ರೊಫೈಲ್ ಕೈದಿಗಳು, ದೇಶದ ಭದ್ರತೆಗೆ ಧಕ್ಕೆ ತರುವವರನ್ನು ಹೆಚ್ಚಿನ ಭದ್ರತೆಯಲ್ಲಿ ಇಡಲೂ ಅನುಕೂಲವಾಗಲಿದೆ ಎನ್ನುವುದು ಇದರ ಉದ್ದೇಶ ಎನ್ನಲಾಗಿದೆ.
ಯಾಕಾಗಿ ಇನ್ನೊಂದು ಜೈಲು?:
ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹ 3,500 ಕೈದಿಗಳನ್ನಿಡುವ ಸಾಮರ್ಥ್ಯ ಹೊಂದಿದೆಯಾದರೂ ಪ್ರಸ್ತುತ ಇಲ್ಲಿ 4,500ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಪ್ರತಿನಿತ್ಯ ಈ ಸಂಖ್ಯೆಯಲ್ಲಿ ಏರಿಳಿತವಾಗುತ್ತಲೇ ಇರುತ್ತದೆ. ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರವಾದಿ ಆರೋಪಿತರಲ್ಲದೇ ಕುಖ್ಯಾತ ಕೈದಿಗಳಿದ್ದಾರೆ. ಆದರೆ, ಕೈದಿಗಳ ಸಂಖ್ಯೆಗೆ ತಕ್ಕಂತೆ ಸಿಬ್ಬಂದಿ ಇಲ್ಲದ ಕಾರಣ ಕ್ರಿಮಿನಲ್ ಕೈದಿಗಳ ಮೇಲೆ ಹೆಚ್ಚಿನ ನಿಗಾ ವಹಿಸುವುದು ಕಷ್ಟವಾಗುತ್ತಿದೆ. ಇದರ ಜತೆಗೆ ಕೆಲ ಸಂದರ್ಭದಲ್ಲಿ ವಿಚಾರಣಾಧೀನ ಕೈದಿಗಳು, ಸಜಾ ಕೈದಿಗಳು, ಹೈ ಪ್ರೊಫೈಲ್ ಪ್ರಕರಣಗಳ ಆರೋಪಿಗಳು ಮತ್ತು ಅಪರಾಧಿಗಳು ಪರಸ್ಪರ ಚರ್ಚೆಯಲ್ಲಿ ತೊಡಗಿಕೊಳ್ಳುವ, ತಮ್ಮ ಜಾಲ ವಿಸ್ತರಿಸುವ ಸಾಧ್ಯತೆ ಇದೆ. ಇದಕ್ಕೆ ಕಡಿವಾಣ ಹಾಕುವುದೂ ಪ್ರತ್ಯೇಕ ಜೈಲು ನಿರ್ಮಾಣಕ್ಕೊಂದು ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಕನಿಷ್ಠ 1,000 ಕೈದಿಗಳನ್ನು ಇಡುವ ಸಾಮರ್ಥ್ಯದ ಪ್ರತ್ಯೇಕ ಜೈಲು ನಿರ್ಮಾಣ ಆಗಬೇಕು ಎಂದು ಕೆಲ ತಿಂಗಳ ಹಿಂದೆಯೇ ಜೈಲು ಅಧಿಕಾರಿಗಳು ಹಿರಿಯ ಅಧಿಕಾರಿಗಳಲ್ಲಿ ಮನವಿ ಮಾಡಿದ್ದರು. ಈ ಕೋರಿಕೆಗೆ ಅಸ್ತು ಎಂದಿರುವ ಹಿರಿಯ ಅಧಿಕಾರಿಗಳು ಹೈ ಸೆಕ್ಯೂರಿಟಿ ಜೈಲು ನಿರ್ಮಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅದರಂತೆ ಲೋಕೋಪಯೋಗಿ ಇಲಾಖೆ ಜತೆ ಚರ್ಚಿಸಿದ್ದು, ಇಲಾಖೆ ಆರಂಭಿಕವಾಗಿ ಹೊಸ ಜೈಲಿನ ನೀಲನಕ್ಷೆ ಸಿದ್ಧ ಪಡಿಸಿದೆ ಎಂದು ಕಾರಾಗೃಹ ಇಲಾಖೆ ಮೂಲಗಳು ಖಚಿತಪಡಿಸಿದೆ.
ಜೈಲಿನಲ್ಲಿ ಏನೆಲ್ಲಾ ಇರುತ್ತೆ?
ಹೈ ಪ್ರೊಫೈಲ್ ಪ್ರಕರಣದ ಅಪರಾಧಿಗಳು, ಆರೋಪಿಗಳು, ಶಂಕಿತ ಉಗ್ರರು, ನಕ್ಸಲೀಯರು ಸೇರಿದಂತೆ ಪ್ರಮುಖ ಕೈದಿಗಳನ್ನು ಇಡುವ ಈ ಜೈಲಿಗೆ ವಿಶೇಷ ಭದ್ರತಾ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಅಲ್ಲದೆ, ತಾಂತ್ರಿಕವಾಗಿಯೂ ಭದ್ರತೆ ಕಲ್ಪಿಸಲಾಗುತ್ತದೆ. ಮಖ್ಯಅಧೀಕ್ಷಕರು, ಅಧೀಕ್ಷಕರು ಸೇರಿ ಎಲ್ಲ ಹಂತದ ಸಿಬ್ಬಂದಿಯನ್ನು ಪ್ರತ್ಯೇಕವಾಗಿ ನೇಮಕ ಮಾಡಲಾಗುತ್ತದೆ. ಒಟ್ಟಾರೆ 250 ಮಂದಿ ಸಿಬ್ಬಂದಿ ನಿಯೋಜಿಸಲಾಗುವುದು ಎಂದು ಅಧಿಕಾರಿಯೊಬ್ಬರು “ಉದಯವಾಣಿ’ಗೆ ತಿಳಿಸಿದ್ದಾರೆ.
ಸಜಾ ಕೈದಿಗಳು, ಮಹಿಳೆಯರು ಹಾಗೂ ರೌಡಿ ಚಟುವಟಿಕೆಗಳಲ್ಲಿ ತೊಡಗುವವರಿಗಾಗಿ ಮೂರು ಪ್ರತ್ಯೇಕ ಬ್ಯಾರಕ್ಗಳನ್ನು ತೆರೆಯಲಾಗುತ್ತದೆ. ಜತೆಗೆ ಜೈಲಿನ ಎಲ್ಲೆಡೆ ಹೈಡ್ರಾಲಿಕ್ ಗೇಟ್ಗಳು, ಗ್ರೀಲ್ಗಳು, ಪ್ರತಿ ಕಾರಿಡಾರ್ಗಳಲ್ಲಿ ಸಿಸಿಟಿವಿ ಕ್ಯಾಮರಾಗಳು, 8 ದಿಕ್ಕುಗಳಲ್ಲಿಯೂ ಮೊಬೈಲ್ ಜಾಮರ್ಗಳನ್ನು ಅಳವಡಿಸಲಾಗುವುದು. ಅಲ್ಲದೆ, ಯಾವುದೇ ಬ್ಯಾರಕ್ಗಳಲ್ಲಿರುವ ಕೊಠಡಿಗಳಲ್ಲಿ ನೆಲ ಕೊರೆಯಲು ಸಾಧ್ಯವಾಗದಂತೆ ತಾಂತ್ರಿಕವಾಗಿ ನಿರ್ಮಾಣ ಮಾಡಲಾಗುವುದು ಎಂದಿದ್ದಾರೆ.
– ಮೋಹನ್ ಭದ್ರಾವತಿ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.