![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, May 16, 2019, 3:04 AM IST
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಅದಕ್ಕೆ ಸೆಡ್ಡು ಹೊಡೆದು ಪುಸ್ತಕೋದ್ಯಮ ಸಾಗುತ್ತಿದ್ದು, ಇದಕ್ಕೆ ಅಳಿವಿಲ್ಲ ಎಂದು ನಾಡೋಜ ಡಾ.ಬರಗೂರು ರಾಮಚಂದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಂತವೇರಿ ಗೋಪಾಲಗೌಡ ವಿಚಾರ ಸಂಸ್ಥೆ, ಬುಧವಾರ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪುಸ್ತಕ ಸಂಸ್ಕೃತಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಒಂದು ಮಾಧ್ಯಮ ಮತ್ತೂಂದು ಮಾಧ್ಯಮಕ್ಕೆ ಯಾವತ್ತು ವಿರೋಧಿ ಅಲ್ಲ.
ಅವುಗಳ ನಡುವೆ ಆರಂಭದಲ್ಲಿ ಸಂಘರ್ಷ ಎದುರಾಗಿ ನಂತರ ಮುಖ – ಮುಖೀಯಾಗಿ ಅನುಸಂಧಾನಗೊಳ್ಳುತ್ತವೆ ಎಂದು ಹೇಳಿದರು. ಈ ಹಿಂದೆ ಸಿನಿಮಾ ಕಾಲಿಟ್ಟಾಗ ರಂಗಭೂಮಿ, ಟಿವಿ ಆವಿಷ್ಕಾರವಾದಾಗ ಸಿನಿಮಾ ಕ್ಷೇತ್ರ, ಹಾಗೆಯೇ ಕಂಪ್ಯೂಟರ್ ಪರಿಚಯವಾದಾಗ ಪುಸ್ತಕೋದ್ಯಮ ನಶಿಸುತ್ತವೆ ಎಂದು ಹಲವರು ಹೇಳುತ್ತಿದ್ದರು.
ಆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗಳು ಕೂಡ ನಡೆದಿದ್ದವು. ಆದರೆ ಪುಸ್ತಕ, ರಂಗಭೂಮಿ ಹಾಗೂ ಸಿನಿಮಾಗಳು ಅಲ್ಪ ಕಾಲದಲ್ಲಿ ಹಿನ್ನಡೆ ಅನುಭವಿಸಿದವು. ಆ ನಂತರ ಪೈಪೋಟಿ ನಡೆಸಿ ಇಂದಿಗೂ ಮುನ್ನಡೆಯುತ್ತಿವೆ ಎಂದರು.
ದೇಶದಲ್ಲಿ ಈಗಾಗಲೇ ಸಾವಿರಾರು ನೋಂದಾಯಿತ ಪುಸ್ತಕ ಪ್ರಕಾಶನ ಸಂಸ್ಥೆಗಳಿವೆ. ಪುಸ್ತಕೋದ್ಯಮದ ಮೇಲೆ 19 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗಿದೆ. ಪ್ರತಿ ವರ್ಷ 80 ಸಾವಿರಕ್ಕಿಂತ ಹೆಚ್ಚು ಪುಸ್ತಕಗಳು ಪ್ರಕಟವಾಗುತ್ತಿವೆ.
ಪುಸ್ತಕ ಪ್ರಕಟಣೆಯಲಿ ಭಾರತ ವಿಶ್ವದಲ್ಲೇ ಏಳನೇ ಸ್ಥಾನದಲ್ಲಿದೆ. ಈ ಅಂಕಿ -ಅಂಶ ಗಮನಿಸಿದರೆ ಪುಸ್ತಕೋದ್ಯಮಕ್ಕೆ ಅಳಿವಿಲ್ಲ ಎಂಬುದು ತಿಳಿಯುತ್ತದೆ ಎಂದು ತಿಳಿಸಿದರು. ಲೇಖಕ ಸಿ.ಕೆ.ರಾಮೇಗೌಡ ಅವರ “ಬೆಂಗಳೂರು -ನಮ್ಮ ಹೆಮ್ಮೆ’, ಪುಸ್ತಕದ ಕುರಿತು ಮಾತನಾಡಿದ ಸಾಹಿತಿ ಡಾ.ಬಸವರಾಜು ಕಲ್ಗುಡಿ, ಬೆಂಗಳೂರಿನ ಇತಿಹಾಸ, ಸಂಸ್ಕೃತಿ, ವಾಸ್ತು ಶಿಲ್ಪ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಈ ಕೃತಿ ಬೆಳಕು ಚೆಲ್ಲಲ್ಲಿದ್ದು,
ಬೆಂಗಳೂರಿನ ಚಿತ್ರಣ ಇದರಲ್ಲಿ ಅಡಕವಾಗಿದೆ ಎಂದು ಹೇಳಿದರು. ಇದೇ ವೇಳೆ ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ್ ಕಂಬತ್ತಳ್ಳಿ ಅವರಿಗೆ “ಪುಸ್ತಕ ಸಂಸ್ಕೃತಿ’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಜಾನಪದ ವಿದ್ವಾಂಸ ಡಾ.ಮೀರಾಸಾಬಿಹಳ್ಳಿ ಶಿವಣ್ಣ, ಐಸಿರಿ ಪ್ರಕಾಶನ ಸಂಸ್ಥೆಯ ಡಾ.ಮಂಜುನಾಥ ಪಾಳ್ಯ ಇದ್ದರು
You seem to have an Ad Blocker on.
To continue reading, please turn it off or whitelist Udayavani.