
ಗಾಳಿ -ಮಳೆಗೆ ಕೊಡಗು, ಮಲೆನಾಡು, ಕರಾವಳಿ ತತ್ತರ
Team Udayavani, Jul 16, 2018, 6:15 AM IST

ಬೆಂಗಳೂರು: ಕಳೆದ ಮೂರು ದಿನಗಳಿಂದ ಬೀಸುತ್ತಿರುವ ಗಾಳಿಯ ಅಬ್ಬರಕ್ಕೆ ಮಲೆನಾಡು,ಕರಾವಳಿ, ಕೊಡಗು ತತ್ತರಿಸಿ ಹೋಗಿವೆ. ಗಾಳಿಯ ರಭಸಕ್ಕೆ ನೂರಾರು ಮರಗಳು ಬಿದ್ದು, ವಿದ್ಯುತ್ ಟ್ರಾನ್ಸ್ಫಾರ್ಮರ್, ಕಂಬಗಳು ಹಾಗೂ ಹಲವು ಮನೆಗಳು ಹಾನಿಗೊಳಗಾಗಿವೆ.
ಮಡಿಕೇರಿ ಸಮೀಪದ ಮಾದಾಪುರ ಬಳಿ ಶಾಸಕ ಅಪ್ಪಚ್ಚು ರಂಜನ್ರ ನಿವಾಸದ ಬಳಿ ಭಾರೀ ಗಾತ್ರದ ಮರ ರಸ್ತೆಗೆ ಉರುಳಿ ಬಿದ್ದಿದ್ದು, ಮಡಿಕೇರಿ- ಸೋಮವಾರಪೇಟೆ ಮಾರ್ಗವಾಗಿ ಬರುತ್ತಿದ್ದ ಕೆಎಸ್ಆರ್ಟಿಸಿ ಬಸ್ಸು ಕೂದಲೆಳೆಯ ಅಂತರದಲ್ಲಿ ಅನಾಹುತದಿಂದ ತಪ್ಪಿಸಿಕೊಂಡಿತು.
ಚಿಕ್ಕಮಗಳೂರು ತಾಲೂಕಿನ ಇತಿಹಾಸ ಪ್ರಸಿದ್ಧ ಪರಮೇಶ್ವರ ದೇವಾಲಯದ ಮೇಲ್ಛಾವಣಿ ಕುಸಿದು ಬಿದ್ದಿದೆ. ತಾಲೂಕಿನ ಭಕ್ತರಹಳ್ಳಿ, ಆನೆಗುಂಡಿ ಭೂತಪ್ಪ ದೇವಾಲಯ ಬಳಿ 6ಕ್ಕೂ ಹೆಚ್ಚು ಮರಗಳು ರಸ್ತೆಗೆ ಉರುಳಿ ಬಿದ್ದು, ಹಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು.
ಮರೆಬೈಲ್ನಲ್ಲಿ ಮನೆ ಮೇಲೆ ಮರ ಬಿದ್ದು, ಮಹಿಳೆಯೊಬ್ಬಳು ಗಾಯಗೊಂಡಿದ್ದಾಳೆ.ಮಹಾರಾಷ್ಟ್ರದ ಕೊಂಕಣ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ 1.20 ಲಕ್ಷ ಕ್ಯುಸೆಕ್ ನೀರು ಹರಿದು ಬಂದಿದ್ದು, ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳು ಉಕ್ಕಿ ಹರಿಯುತ್ತಿವೆ. ಕೃಷ್ಣಾ ಮತ್ತು ಪಂಚಗಂಗಾ ನದಿಗಳ ಸಂಗಮ ಕ್ಷೇತ್ರವಾದ ಕೊಲ್ಲಾಪುರ ಜಿಲ್ಲೆಯ ಶಿರೋಳ ತಾಲೂಕಿನ ಸುಕ್ಷೇತ್ರ ನರಸಿಂಹವಾಡಿ ದತ್ತಾತ್ರೇಯ ದೇವಸ್ಥಾನ ಸಂಪೂರ್ಣ ಜಲಾವೃತಗೊಂಡಿದೆ. ಚಿಕ್ಕೋಡಿ ತಾಲೂಕಿನ ಆರು ಸೇತುವೆಗಳು ಜಲಾವೃತಗೊಂಡಿವೆ.
ಜಮಖಂಡಿ ತಾಲೂಕಿನ ಹಿಪ್ಪರಗಿ ಜಲಾಶಯದಿಂದ 1,28,000 ಕ್ಯೂಸೆಕ್ ನೀರನ್ನು ಆಲಮಟ್ಟಿ ಜಲಾಶಯಕ್ಕೆ ಹರಿ ಬಿಡಲಾಗುತ್ತಿದೆ. ಈ ಮಧ್ಯೆ, ವರದಾ ನದಿಯಲ್ಲಿ ಲಾರಿಯೊಂದಿಗೆ ನದಿಗೆ ಬಿದ್ದು ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಭಾನುವಾರ ಕುಣಿಮೆಹಳ್ಳಿ ಸೇತುವೆ ಬಳಿ ಪತ್ತೆಯಾಗಿದೆ. ಬಸವರಾಜ ಸೋಮಣ್ಣನವರ (29) ಮೃತ ವ್ಯಕ್ತಿ. ಇನ್ನೂ ಎರಡು ದಿನಗಳು ಕರಾವಳಿ ಮತ್ತು
ಒಳನಾಡಿನ ಆಯ್ದ ಭಾಗಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಜೋಗ ವೀಕ್ಷಣೆ: ಜೋಗ ಜಲಪಾತ ಮೈದುಂಬಿದ್ದು, ಭಾನುವಾರ ಒಂದೇ ದಿನ 50 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಬ್ರಿಟಿಷ್ ಬಂಗ್ಲೆಯ ಭಾಗದಿಂದ ಜಲಪಾತ ವೀಕ್ಷಿಸುವವರಿಗೆ ಮಳೆಗಾಲದ ಸೃಷ್ಟಿಯಾದ ಕೆಪ್ಪ ಜೋಗ ಬೋನಸ್ ಆಗಿ ಮನ ಸೆಳೆಯಿತು. ಭಾನುವಾರ ಒಂದೇ ದಿನ ಪ್ರವೇಶ ಶುಲ್ಕವೇ ಒಂದೂವರೆ ಲಕ್ಷ ರೂ.ಗೂ ಹೆಚ್ಚು ಸಂಗ್ರಹವಾಗಿರಬಹುದು ಎಂದು ಅಂದಾಜಿಸಲಾಗಿದೆ.
ರಂಗನತಿಟ್ಟು ಜಲಾವೃತ: ಕೆಆರ್ಎಸ್ನಿಂದ 65 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ಕೆಆರ್ಎಸ್ನಿಂದ ಶಿಂಷಾವರೆಗಿನ ಅನೇಕ ಸ್ಥಳಗಳಲ್ಲಿ ಜಲಚರ ಪಕ್ಷಿಗಳ ಸಹಸ್ರಾರು ಗೂಡುಗಳು ಕೊಚ್ಚಿ ಹೋಗಿವೆ. ಕೆಆರ್ ಎಸ್ ಬೃಂದಾವನ ಗಾರ್ಡನ್ಗೆ ಪ್ರವೇಶ ನಿಷೇಧಿಸಲಾಗಿದೆ.
ರಂಗನ ತಿಟ್ಟು ಜಲಾವೃಗೊಂಡಿದ್ದು, ದೋಣಿ ವಿಹಾರ ನಿಷೇಧಿಸಲಾಗಿದೆ. ಶ್ರೀರಂಗ ಪಟ್ಟಣದ ಗೌತಮ ಕ್ಷೇತ್ರ ದ್ವೀಪ ದಂತಾಗಿದ್ದು, ಸ್ವಾಮೀಜಿಗಳು ಮಠದಿಂದ ಹೊರ ಬರಲು ಸಾಧ್ಯವಾಗದೇ ಅಲ್ಲೇ ಉಳಿದಿದ್ದಾರೆ.
ಹೊರಹರಿವು ಹೆಚ್ಚಾಗಿರುವುದರಿಂದ ನದಿ ಪಾತ್ರದ ಪ್ರತಿಯೊಂದು ಗ್ರಾಮದಲ್ಲಿ ಟಾಂ ಟಾಂ ಹೊಡೆಸುವುದರ ಮೂಲಕ ಮುನ್ನೆಚ್ಚರಿಕೆ ನೀಡುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಕಾಲುಸಂಕ ದಾಟುವಾಗ ಬಿದ್ದು ಸಾವು: ಮರದ ಕಾಲುಸಂಕ ದಾಟುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಹೊಸನಗರ ತಾಲೂಕಿನ ಮುಂಬಾರು ವಾಸಿ ಕೂಲಿ ಕಾರ್ಮಿಕ ವೆಂಟಕ ನಾಯ್ಕ (65) ಸಾವನ್ನಪ್ಪಿದ್ದಾರೆ.
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್ಮಿಲ್ ಕುಸಿತ:7 ಮಂದಿಗೆ ಗಾಯ

Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.