![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, Nov 29, 2021, 12:35 PM IST
ಆನೇಕಲ್: ಪಟ್ಟಣಕ್ಕೆ ಸಮೀಪದ ದೊಡ್ಡಕೆರೆಯಲ್ಲಿ ಅಭಿವೃದ್ಧಿಗೆ ಸಾಕಷ್ಟು ಜನರ ಮನವಿ ಬಂದ ಹಿನ್ನೆಲೆ ಕೆರೆಯನ್ನು ಅಭಿವೃದ್ಧಿ ಮಾಡಲು ತಾಲೂಕಿನ ಎಲ್ಲಾ ಅಧಿಕಾರಿಗಳು ಒಗ್ಗೂಡಿ ಮುಂದಾಗಿದ್ದಾರೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದರು. ಆನೇಕಲ್ಲಿನ ದೊಡ್ಡಕೆರೆ ರಾಜಕಾಲುವೆ ತೆರವು ಕಾರ್ಯಾಚರಣೆ ಹಿನ್ನೆಲೆಯಲ್ಲಿ ಭೇಟಿ ನೀಡಿ ಮಾತನಾಡಿದರು.
ಆನೇಕಲ್ ಪಟ್ಟಣಕ್ಕೆ ನೀರುಣಿಸುತ್ತಿದ್ದ ಅತೀ ದೊಡ್ಡಕೆರೆ ಯಾಗಿರುವ ದೊಡ್ಡಕೆರೆ ನಿರಂತರವಾಗಿ ಮಳೆಯಾಗುತ್ತಿದ್ದರೂ ಸಹ ಕೆರೆಗೆ ನೀರು ಬಂದಿರಲಿಲ್ಲ, ಇದಕ್ಕೆ ಪ್ರಮುಖ ಕಾರಣ ಸುತ್ತಮುತ್ತಲಿನ ರಾಜಕಾಲುವೆಗಳು ಮುಚ್ಚಿಹೋಗಿದ್ದು ಕೆಲವು ಕಡೆ ಒತ್ತುವರಿ ಕೂಡ ಆಗಿದೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಕೆರೆಯ ಸುತ್ತಮುತ್ತ ನಾಲ್ಕು ಕಡೆ ನೀರು ಹರಿದುಬರುವ ರಾಜಕಾಲುವೆ ಒತ್ತುವರಿಯನ್ನು ತೆರವು ಮಾಡುವ ಕುರಿತು ಆನೇಕಲ್ ತಹಶೀಲ್ದಾರ್ ಹಾಗೂ ಸಣ್ಣ ನೀರಾವರಿ ಇಲಾಖೆ ಮತ್ತು ಆನೇಕಲ್ ತಾಲೂಕಿನ ರಾಜಕಾಲುವೆ ಹಾಗೂ ಕೆರೆಗಳ ಬಗ್ಗೆ ಕಾಳಜಿವಹಿಸಿ ಕಳೆದ ಎರಡು ವರ್ಷದಿಂದ ನಿರಂತರವಾಗಿ ಕೆಲಸ ಮಾಡುತ್ತಿರುವ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಅವರು ಕಾಳಜಿವಹಿಸಿ ಕೆರೆಯನ್ನು ಅಭಿವೃದ್ಧಿಪಡಿಸಬೇಕು ಎಂದು ಮುಂದೆ ನಿಂತಿದ್ದು ಅವರಿಗೆ ಸ್ಥಳೀಯ ಜನಪ್ರತಿನಿಧಿಗಳು ಸಹಕಾರ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.
ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಮಾತನಾಡಿ, ಆನೇಕಲ್ ತಾಲೂಕಿನ ಸಾಕಷ್ಟು ಕೆರೆಗಳ ಬಗ್ಗೆ ಅಧ್ಯಯನ ಮಾಡಲಾಗಿದೆ ಅದೇ ರೀತಿಯ ದೊಡ್ಡಕೆರೆ ಪುರಾತನ ಕೆರೆಯಾಗಿದ್ದು ಈ ಕೆರೆಯ ಬಗ್ಗೆಯೂ ಸಾಕಷ್ಟು ಮಾಹಿತಿಯನ್ನು ಕಲೆ ಹಾಕಲಾಗಿತ್ತು.
ಇದೇ ಸಂದರ್ಭದಲ್ಲಿ ಮಾಧ್ಯಮಗಳೂ ಆನೇಕಲ್ ದೊಡ್ಡಕೆರೆಗೆ ಮಳೆಯಾಗುತ್ತಿದ್ದರೂ ನೀರು ಹರಿದು ಬರುತ್ತಿಲ್ಲ ಎನ್ನುವ ಬಗ್ಗೆ ವರದಿಯನ್ನು ಮಾಡಿದ್ದರು ವರದಿ ಬಂದ ಬಳಿಕ ಮತ್ತೆ ತಾಲೂಕು ಕಚೇರಿಯ ಅಧಿಕಾರಿಗಳು ಹಾಗೂ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳನ್ನು ಭೇಟಿ ನೀಡಿ ಚರ್ಚಿಸಿದಾಗ ಕೆರೆಗೆ ನೀರು ಹರಿದು ಬರಲು ರಾಜಕಾಲುವೆ ಒತ್ತುವರಿ ಆಗಿರುವುದೇ ಕಾರಣ ಎಂದು ತಿಳಿದು, ಎಲ್ಲ ಅಧಿಕಾರಿಗಳು ದೊಡ್ಡಕೆರೆ ಹಾಗೂ ಸುತ್ತಮುತ್ತಲಿನ ರಾಜಕಾಲುವೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ರಾಜಕಾಲುವೆ ಒತ್ತುವರಿ ಯಾಗಿರುವುದು ತಿಳಿದುಬಂದು ಒಂದೇ ದಿನದಲ್ಲಿ ಕೆರೆ ಸುತ್ತಮುತ್ತಲಿನ ರಾಜಕಾಲುವೆ ಒತ್ತುವರಿ ತೆರಗೆ ಮುಂದಾಗಿದ್ದೇವೆ ಎಂದರು.
ಇದನ್ನೂ ಓದಿ;- ಭೀಮಣ್ಣ ನಾಯ್ಕ ಕೇವಲ ರಾಜಕೀಯ ವ್ಯಕ್ತಿ ಅಲ್ಲ: ದೀಪಕ್ ದೊಡ್ಡೂರು
ಸಣ್ಣ ನೀರಾವರಿ ಇಲಾಖೆ, ಆನೇಕಲ್ ತಹಶೀಲ್ದಾರ್ ದಿನೇಶ್ ಹಾಗೂ ಆನೇಕಲ್ ಪುರಸಭೆ ಅಧ್ಯಕ್ಷ ಪದ್ಮನಾಭ ಸೇರಿದಂತೆ ಹಲವಾರು ಜನ ಜನಪ್ರತಿನಿಧಿಗಳು ಸಹಕಾರ ನೀಡಲು ಮುಂದಾಗಿದ್ದಾರೆ ಎಂದು ತಿಳಿಸಿದರು. ಆನೇಕಲ್ ಪುರಸಭಾ ಅಧ್ಯಕ್ಷ ಎನ್.ಎಸ್ ಪದ್ಮನಾಭ ಮಾತನಾಡಿ, ಆನೇಕಲ್ ಪಟ್ಟಣಕ್ಕೆ ಒಂದು ಕಾಲದಲ್ಲಿ ನೀರುಣಿಸುತ್ತಿದ್ದದ್ದು ದೊಡ್ಡಕೆರೆ ಎನ್ನುವುದು ಇತಿಹಾಸ, ಆದರೆ ಸಾಕಷ್ಟು ಕಡೆ ರಾಜಕಾಲುವೆಗಳನ್ನು ಹಾಗೂ ಸಣ್ಣ ಡ್ಯಾಂಗಳನ್ನು ನಿರ್ಮಾಣ ಮಾಡಿಕೊಂಡಿದ್ದು ಇದರಿಂದಾಗಿ ನೀರು ರಾಜಕಾಲುವೆಗಳಲ್ಲಿ ಹರಿದು ಬರುತ್ತಿಲ್ಲ, ಜಿಲ್ಲಾಧಿಕಾರಿಗಳ ಕಾಳಜಿ ಹಾಗೂ ಮಾಜಿ ಯೋಧ ಕ್ಯಾಪ್ಟನ್ ಸಂತೋಷ್ ಕುಮಾರ್ ಸೇರಿದಂತೆ ಆನೇಕಲ್ ತಹಶೀಲ್ದಾರ್ ದಿನೇಶ್ ಅವರು ಕೆರೆ ಅಭಿವೃದ್ಧಿಗೆ ಸಂಪೂರ್ಣ ಸಹಕಾರವನ್ನು ನೀಡಲು ಮುಂದೆ ಬಂದಿದ್ದಾರೆ.
ಆನೇಕಲ್ ಪುರಸಭೆ ಕೂಡ ಕೆರೆಯ ಅಭಿವೃದ್ಧಿಗೆ ನೀಡಲು ಸಿದ್ಧ ಎಂದರು. ಸಣ್ಣ ನೀರಾವರಿ ಇಲಾಖೆಯ ಅಭಿಯಂತರ ಡಾ.ಜೆ.ರಾಜಣ್ಣ ಮಾತನಾಡಿ, ಆನೇಕಲ್ ತಾಲೂಕಿನ ಬಹುತೇಕ ಕೆರೆಗಳಲ್ಲಿ ಈಗಾಗಲೇ ನೀರು ತುಂಬಿದೆ ಆದರೆ ದೊಡ್ಡಕೆರೆಗೆ ನೀರು ಬಂದಿಲ್ಲ ಇದಕ್ಕೆ ಪ್ರಮುಖ ಕಾರಣ ಕೆಲವು ಕಡೆ ರಾಜಕಾಲುವೆಗಳು ಒತ್ತುವರಿಯಾಗಿರುವುದು ಎನ್ನುವ ಮಾಹಿತಿಯನ್ನು ಪಡೆದ ಬಳಿಕ ಎರಡೇ ದಿನದಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಆನೇಕಲ್ ಪುರಸಭೆ ಮುಖ್ಯಾಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಅಧಿಕಾರಿವರ್ಗದವರು ಹಾಜರಿದ್ದರು.
ಒಗ್ಗಟ್ಟಿನಿಂದ ಕೆರೆ ಒತ್ತುವರಿ ತೆರವು ತಹಶೀಲ್ದಾರ್ ದಿನೇಶ್ ಮಾತನಾಡಿ, ಆನೇಕಲ್ ದೊಡ್ಡಕೆರೆ ನೀರಿಲ್ಲದೆ ಬರಿದಾಗಿದ್ದು ಮಳೆಯಾಗುತ್ತಿದ್ದರೂ ಕೂಡ ನೀರು ಬರುತ್ತಿಲ್ಲ ಎನ್ನುವ ಬಗ್ಗೆ ಸಾಕಷ್ಟು ಮಾಧ್ಯಮಗಳು ಗಮನ ಸೆಳೆದಿತ್ತು, ಸ್ಥಳೀಯರಿಂದಲೂ ಕೂಡ ಕೆರೆ ಸುತ್ತಮುತ್ತ ರಾಜಕಾಲುವೆ ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಬಂದಿದ್ದು, ಎಲ್ಲರೂ ಒಗ್ಗಟ್ಟಿನಿಂದ ಕೆರೆ ಸುತ್ತಮುತ್ತಲಿನ ರಾಜಕಾಲುವೆ ಒತ್ತುವರಿ ತೆರವಿಗೆ ಮುಂದಾಗಿದ್ದೇವೆ ಎಂದು ತಿಳಿಸಿದರು.
You seem to have an Ad Blocker on.
To continue reading, please turn it off or whitelist Udayavani.