![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Oct 27, 2021, 12:07 PM IST
ಬೀದರ: ಮುಂಗಾರು ಋತುವಿನಲ್ಲಿ ಬಿದ್ದ ಭಾರೀ ಮಳೆ ಮತ್ತು “ಮಹಾ’ ನೀರಿನ ಕಂಟಕದಿಂದ ಲಕ್ಷಾಂತರ ಹೆಕ್ಟೇರ್ ಬೆಳೆ ಹಾನಿಯಾಗಿರುವ ಇಡೀ ಗಡಿ ನಾಡು ಬೀದರ ಅತಿವೃಷ್ಟಿ/ಪ್ರವಾಹ ಪೀಡಿತ ಜಿಲ್ಲೆ. ಕಳೆದೆರಡು ತಿಂಗಳ ಹಿಂದೆ ಜಿಲ್ಲೆಯ ಮೂರು ತಾಲೂಕುಗಳನ್ನು ಅತಿವೃಷ್ಟಿ/ಪ್ರವಾಹ ಪೀಡಿತ ಪ್ರದೇಶ ಎಂದು ಘೋಷಿಸಿದ್ದ ಸರ್ಕಾರ ಈಗ ಇನ್ನುಳಿದ ಐದು ತಾಲೂಕುಗಳನ್ನೂ ಆ ಪಟ್ಟಿಗೆ ಸೇರಿಸಿ ಮಂಗಳವಾರ ಆದೇಶಿಸಿದೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯನ್ನಾಧರಿಸಿ 2021ನೇ ಮುಂಗಾರು ಹಂಗಾಮಿನ ಸೆಪ್ಟೆಂಬರ್ ಮಾಹೆಯಲ್ಲಿ ಅತಿವೃಷ್ಟಿ ಮತ್ತು ಮಾಂಜ್ರಾ ನದಿ ಹರಿವಿನಿಂದ ಜಿಲ್ಲೆಯ ಔರಾದ, ಬೀದರ ಬಸವಕಲ್ಯಾಣ, ಕಮಲನಗರ ಮತ್ತು ಹುಲಸೂರು ತಾಲೂಕುಗಳನ್ನು ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ.
ಕಂದಾಯ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್ ಮಂಗಳವಾರ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ. ಈ ಮೊದಲೇ ಜಿಲ್ಲೆಯ ಭಾಲ್ಕಿ, ಹುಮನಾಬಾದ ಮತ್ತು ಚಿಟಗುಪ್ಪ ತಾಲೂಕುಗಳು ಆ ಪಟ್ಟಿಗೆ ಸೇರಿದ್ದವು. ಅತಿವೃಷ್ಟಿ/ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಿದ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಎಸ್ಡಿಆರ್ಎಫ್/ಎನ್ಡಿಆರ್ಎಫ್ ಮಾರ್ಗಸೂಚಿ ಪ್ರಕಾರ ಹಾಗೂ ಪರಿಹಾರ ಕಾರ್ಯಗಳಿಗೆ ಸರ್ಕಾರದಿಂದ ಕಾಲ ಕಾಲಕ್ಕೆ ಹೊರಡಿಸಲಾದ ಸರ್ಕಾರದ ಆದೇಶ ಮತ್ತು ಸುತ್ತೋಲೆಗಳಲ್ಲಿನ ನಿರ್ದೇಶನ ಕಟ್ಟುನಿಟ್ಟಾಗಿ ಪಾಲಿಸಿ, ಜಿಲ್ಲಾಡಳಿತ ಅಗತ್ಯ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದು ಆದೇಶದಲ್ಲಿ ಸೂಚಿಸಲಾಗಿದೆ.
ಸದಾ ಪ್ರಕೃತಿ ವಿಕೋಪದ ಹೊಡೆತಕ್ಕೆ ಸಿಲುಕುವ ಬಿಸಿಲೂರಿನ ಅನ್ನದಾತರು ಕಳೆದೆರಡು ವರ್ಷದಿಂದ ವರುಣನ ಅವಕೃಪೆಗೆ ಒಳಗಾಗುತ್ತಿದ್ದು, ಅಕ್ಷರಶಃ ನಲುಗಿ ಹೋಗಿದ್ದಾರೆ. ಜಿಲ್ಲೆಯಲ್ಲಿ ಕಳೆದ ಜ.1ರಿಂದ ಅ. 20ರವರೆಗೆ 882 ಮಿ.ಮೀ (795 ಮಿ.ಮೀ) ಮಳೆ ಆಗಿದೆ. ಮುಂಗಾರು ಹಂಗಾಮಿನಲ್ಲಿ 3.71 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದ್ದು, ಅದರಲ್ಲಿ 1,83,660 ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ಹಾನಿಯಾಗಿದೆ.
ಇದನ್ನೂ ಓದಿ: ಪೆಗಾಸಸ್ ಗೂಢಚರ್ಯೆ; ಸ್ವತಂತ್ರ ತನಿಖೆ ನಡೆಸಲು ತಜ್ಞರ ಸಮಿತಿ ರಚಿಸಿದ ಸುಪ್ರೀಂಕೋರ್ಟ್
ಕೃಷಿ-ಕಂದಾಯ ಇಲಾಖೆ ಜಂಟಿ ಸಮೀಕ್ಷೆ ನಡೆಸಿ ಅ. 18ರಂದು ಜಿಲ್ಲಾಧಿಕಾರಿ ರಾಮಚಂದ್ರನ್ ಆರ್. ಕಂದಾಯ ಇಲಾಖೆ (ವಿಪತ್ತು ನಿರ್ವಹಣೆ) ಪ್ರಧಾನ ಕಾರ್ಯದರ್ಶಿಗಳಿಗೆ ನಷ್ಟದ ಬಗ್ಗೆ ನೆರವು ಕೋರಿ ಪ್ರಸ್ತಾವನೆ ಸಲ್ಲಿಸಿದ್ದರು. ಜಿಲ್ಲಾದ್ಯಂತ ಈ ಹಿಂದೆ ಸುರಿದ ಮಳೆಗೆ ಸಮೃದ್ಧವಾಗಿ ಬೆಳೆದಿದ್ದ, ಉದ್ದು ಮತ್ತು ಹೆಸರು ಬೆಳೆ ಹಾನಿಗೀಡಾಗಿತ್ತು. ನಂತರ ರಾಜ್ಯದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುವ ಸೋಯಾಬಿನ್ ನೀರು ಪಾಲಾಗಿದೆ. ಕಟಾವು ಮಾಡಿ ಕೂಡಿಟ್ಟಿದ್ದ ಬೆಳೆ ಕೊಳೆತು ಹೋಗುತ್ತಿದ್ದರೆ, ಇನ್ನೂ ಕೆಲವೆಡೆ ಭೂಮಿಯಲ್ಲಿನ ತೇವಾಂಶದಿಂದಾಗಿ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದ ಸಾಲ-ಸೂಲ ಮಾಡಿ ಭೂಮಿಗೆ ಸಾವಿರಾರು ರೂ. ಖರ್ಚು ಮಾಡಿದ ರೈತರು ಕಣ್ಣೀರಲ್ಲಿ ಕೈತಳೆಯುವಂತಾಗಿದೆ.
ಮುಂದಿನ ಬದುಕು ಹೇಗೆ? ಎಂಬ ಚಿಂತೆಯಲ್ಲಿದ್ದರು. ಆದರೆ, ಕೊನೆಗೂ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತಿವೃಷ್ಟಿ/ ಪ್ರವಾಹ ಪೀಡಿತ ತಾಲೂಕುಗಳು ಎಂದು ಘೋಷಿಸಿದೆ. ತ್ವರಿತ ಪರಿಹಾರ ಸಿಗಲಿ ಕಳೆದ ಮುಂಗಾರು ಹಂಗಾಮಿನಲ್ಲೂ ಜಿಲ್ಲೆಯಲ್ಲಿ ರೈತರ ಬದುಕು ದುಸ್ತರಗೊಂಡಿತ್ತು.
ಪ್ರಸಕ್ತ ವರ್ಷದ ಮುಂಗಾರಿನಲ್ಲಿ ಮಾರಣಾಂತಿಕ ಕೋವಿಡ್ ಸಂಕಷ್ಟದ ನಡುವೆಯೂ ಬಿತ್ತನೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿದ್ದ ಅನ್ನದಾತರಿಗೆ ಮಳೆ ಅಬ್ಬರ ಮತ್ತೆ ಸಂತ್ರಸ್ತರನ್ನಾಗಿಸಿದೆ. ಬೆಳೆ ಹಾನಿ ಸಮೀಕ್ಷೆ ವರದಿ ಸಲ್ಲಿಸಿಕೆ ಬಳಿಕ ಈಗ ಸರ್ಕಾರ ಜಿಲ್ಲೆಯ ಎಲ್ಲ ತಾಲೂಕುಗಳನ್ನು ಅತಿವೃಷ್ಟಿ/ ಪ್ರವಾಹ ಪೀಡಿತ ತಾಲೂಕುಗಳೆಂದು ಘೋಷಿಸಿದೆ. ಮಾರ್ಗಸೂಚಿಯಂತೆ ತ್ವರಿತವಾಗಿ ಪರಿಹಾರ ಒದಗಿಸಿ ಕೃಷಿಕರಿಗೆ ನೆರವಾಗಬೇಕಿದೆ.
-ಶಶಿಕಾಂತ ಬಂಬುಳಗೆ
Bidar: ಕೊನೆಗೂ ಎಟಿಎಂ ಹಣ ದರೋಡೆ – ಶೂಟೌಟ್ ಪ್ರಕರಣದ ಆರೋಪಿಗಳ ಗುರುತು ಪತ್ತೆ
Bidar: ಮದುವೆ ವಿಚಾರದಲ್ಲಿ ಜಗಳ… ಮಗಳನ್ನೇ ಹತ್ಯೆಗೈದು ಪರಾರಿಯಾದ ತಂದೆ
Bidar: ಸಾಲ ಬಾಧೆ ತಾಳಲಾರದೆ ಯುವ ರೈತ ನೇಣಿಗೆ ಶರಣು
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Budget 2025: ಕಲ್ಯಾಣ ಕರ್ನಾಟಕ ಕಡೆಗಣಿಸಿದ ಕೇಂದ್ರ: ಈಶ್ವರ ಖಂಡ್ರೆ ಕಿಡಿ
You seem to have an Ad Blocker on.
To continue reading, please turn it off or whitelist Udayavani.