![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 25, 2021, 2:19 PM IST
ಚಾಮರಾಜನಗರ: ಕೋವಿಡ್ ಹರಡುವಿಕೆಯನ್ನು ಪರಿಣಾಮಕಾರಿ ಯಾಗಿ ತಡೆಯಲು ದೃಢೀಕೃತ ಪ್ರಕರಣಗಳಿಗೆ ಸಂಬಂಧಿಸಿದ ಪ್ರಾಥಮಿಕ ಸಂಪರ್ಕಿತರನ್ನು ಶೀಘ್ರ ಪತ್ತೆ ಹಚ್ಚಿ ಪರೀಕ್ಷೆಗೆ ಒಳಪಡುವಂತಹ ಪ್ರಕ್ರಿಯೆಗೆ ವಿಳಂಬ ಮಾಡಬಾರದೆಂದು ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕೋವಿಡ್ ನಿಯಂತ್ರಣ ಸಂಬಂಧ ನಿಯೋಜನೆಗೊಂಡಿರುವ ನೋಡೆಲ್ ಅಧಿಕಾರಿಗಳು ಹಾಗೂ ಹಿರಿಯ ಆರೋಗ್ಯ ಹಾಗೂ ವೈದ್ಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.
ಕೋವಿಡ್ ವ್ಯಾಪಿಸುವುದನ್ನು ನಿಯಂತ್ರಿಸಲು ದೃಢಪಟ್ಟ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದಿರಬಹುದಾದ ವ್ಯಕ್ತಿಗಳ ಬಗ್ಗೆ ನಿಗಾ ವಹಿಸಬೇಕಿದೆ. ಸೋಂಕುದೃಢಪಡುತ್ತಿದ್ದಂತೆಯೇ ಸೋಂಕಿತರಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಪರೀಕ್ಷೆಗೆ ಒಳಪಡಿಸುವ ಕೆಲಸ ನಿಗದಿತ ಅವಧಿಯೊಳಗೆ ನಡೆಸಬೇಕಿದೆ. ಇದಕ್ಕಾಗಿ ಪತ್ತೆ ಹಚ್ಚುವಿಕೆ ತಂಡ ಅತಿ ವೇಗವಾಗಿ ಪ್ರಕ್ರಿಯೆ ಕೈಗೊಳ್ಳಬೇಕೆಂದರು.
ಜಿಪಂ ಸಿಇಒ ಹರ್ಷಲ್ ಬೋಯರ್ ಮಾತನಾಡಿ, ಪ್ರಕರಣ ದೃಢೀಕೃತಗೊಳ್ಳುತ್ತಿದ್ದಂತೆ ಸೋಂಕಿತರ ಮಾಹಿತಿಯನ್ನು ತಾಲೂಕು ವೈದ್ಯಾಧಿಕಾರಿಗಳಿಗೆ ಕಳುಹಿಸಿ ಕೊಡಬೇಕು. ತಾಲೂಕು ವೈದ್ಯಾಧಿಕಾರಿಗಳು ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚಿ ಮುಂದಿನ ಪರೀಕ್ಷಾ ಕ್ರಮಗಳಿಗೆ ಮುಂದಾಗುವ ಮೂಲಕ ಸೋಂಕು ಮತ್ತಷ್ಟು ಹರಡದಂತೆ ನಿಯಂತ್ರಿಸಬೇಕು. ಪತ್ತೆ ಹಚ್ಚುವಿಕೆಗಾಗಿಯೇ ನಿಯೋಜಿತವಾಗಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸೇರಿದಂತೆ ಇತರೆ ಸಿಬ್ಬಂದಿ ಶೀಘ್ರವಾಗಿ ಕಾರ್ಯೋನ್ಮುಖರಾಗಲು ನೋಡೆಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಬೇಕೆಂದರು.
ಜಿಲ್ಲಾಧಿಕಾರಿ ಡಾ. ಎಂ.ಆರ್. ರವಿ ಮುಂದುವರಿದು ಮಾತನಾಡಿ, ಕೋವಿಡ್ ಪರೀಕ್ಷೆಗಳನ್ನು 24 ಗಂಟೆಯೊಳಗೆ ನಡೆಸಿ ವರದಿ ನೀಡಬೇಕು. ಯಾವುದೇ ತಾಲೂಕಿನಲ್ಲಿರಲಿ, ಜಿಲ್ಲೆಯ ಪ್ರಯೋಗಾಲಯಕ್ಕೆ ನಿಗದಿತ ಸಮಯಕ್ಕೆ ಮಾದರಿ ತಲುಪಿಸ ಬೇಕು ಎಂದರು.
ರಜಾ ದಿನಗಳಲ್ಲಿಯೂ ಲಸಿಕೆ ಪಡೆಯುವವರ ಪ್ರಮಾಣ ಕಡಿಮೆಯಾಗದಂತೆ ಹೆಚ್ಚು ಜನರಿಗೆ ಲಸಿಕೆ ನೀಡಬೇಕು. ಹಾಡಿಗಳಲ್ಲಿನ ಗಿರಿಜನರಿಗೆ ಲಸಿಕೆ ಸೌಲಭ್ಯ ಪೂರ್ಣ ಪ್ರಮಾಣದಲ್ಲಿ ತಲುಪಬೇಕು. ಸ್ವಸಹಾಯ ಸಂಘಗಳ ಸದಸ್ಯರು ಸೇರಿದಂತೆ ಎಲ್ಲಾ ವರ್ಗದ ಅರ್ಹರಿಗೆ ಲಸಿಕೆ ಪಡೆದು ಕೊಳ್ಳಲು ಉತ್ತೇಜನ ನೀಡಬೇಕೆಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬಡೋಲೆ, ವೈದ್ಯಕೀಯ ಕಾಲೇಜಿನ ನಿರ್ದೇಶಕಹಾಗೂ ಡೀನ್ ಡಾ. ಸಂಜೀವ್, ಡಿಎಚ್ಓ ಡಾ. ಎಂ.ಸಿ. ರವಿ. ಜಿಲ್ಲಾ ಸರ್ವೇಲೆನ್ಸ್ಅಧಿಕಾರಿ ಡಾ. ನಾಗರಾಜು, ಜಿಲ್ಲಾ ಆಸ್ಪತ್ರೆ ಹಿರಿಯ ವೈದ್ಯರಾದ ಡಾ. ಮಹೇಶ್, ಡಾ. ಕೃಷ್ಣಪ್ರಸಾದ್ ಇತರರು ಹಾಜರಿದ್ದರು.
ಹೋಂ ಐಸೋಲೇಷನ್ ಕಾಳಜಿ ವಹಿಸಿ :
ಹೋಮ್ ಐಸೋಲೇಷನ್ ಆಯ್ಕೆ ಮಾಡಿಕೊಂಡಿರುವವರ ಬಗ್ಗೆ ಅತ್ಯಂತ ಹೆಚ್ಚು ಕಾಳಜಿಯಿಂದ ನಿಗಾ ವಹಿಸಬೇಕು. ಇದಕ್ಕಾಗಿಯೇ ನೇಮಕವಾಗಿರುವ ನೋಡೆಲ್ ಅಧಿಕಾರಿಗಳು ಮತ್ತು ತಂಡ ಸೋಂಕಿತರ ಸಂಪರ್ಕದಲ್ಲಿದ್ದು, ಆರೋಗ್ಯ ಸಂಬಂಧ ಎಲ್ಲಾ ಅಗತ್ಯ ಮಾಹಿತಿ ಪಡೆದು ಔಷಧ ಉಪಚಾರಗಳ ಪಡೆಯುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ವಿಶೇಷವಾಗಿ ಟೆಲಿ ಮಾನಿಟರಿಂಗ್ ತಂಡದ ವೈದ್ಯರು, ಆಪ್ತ ಸಮಾಲೋಚಕರು ಪ್ರತಿನಿತ್ಯವು ಹೆಚ್ಚಿನ ಅವಧಿಯಲ್ಲಿ ಸೋಂಕಿತರಿಗೆ ಸಲಹೆ, ಅಪ್ತ ಸಮಾಲೋಚನೆ, ಚಿಕಿತ್ಸೆ, ಮಾರ್ಗದರ್ಶನ ಮಾಡಬೇಕು ಎಂದು ಜಿಲ್ಲಾಧಿಕಾರಿ ನಿರ್ದೇಶನ ನೀಡಿದರು.
You seem to have an Ad Blocker on.
To continue reading, please turn it off or whitelist Udayavani.