![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jun 5, 2018, 4:45 PM IST
ಆಲ್ದೂರು: ಮಳೆಗಾಲ ಆರಂಭವಾಗುತ್ತಿದ್ದು,ಮಲೆನಾಡಿನಲ್ಲಿ ಕೃಷಿ ಚಟುವಟಿಕೆಗಳಿಗೆ ಜೀವಕಳೆ ಬಂದಿದೆ. ಮಳೆಯಿಂದ
ಮೆದುವಾದ ಕೃಷಿ ಜಮೀನನ್ನು ರೈತರು ಹಸನು ಮಾಡಿಕೊಳ್ಳುತ್ತಿದ್ದು ನಾಟಿಗಾಗಿ ಭತ್ತದ ಸಸಿ ಮಡಿಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಮಲೆನಾಡಿನ ಪ್ರಮುಖ ವಾಣಿಜ್ಯ ಬೆಳೆಗಳೆಂದರೆ ಕಾಫಿ, ಕಾಳು ಮೆಣಸು, ಭತ್ತ
ಇಲ್ಲಿನ ಪ್ರಮುಖ ಬೆಳೆ. ಕಾಫಿ ಬೆಳೆಗೆ ಇಲ್ಲಿ ಅಗ್ರ ಸ್ಥಾನ. ಇತ್ತೀಚೆಗೆ ಕಾಳು ಮೆಣಸು ಕಾಫಿ ಬೆಳೆಗೆ ಪೈಪೋಟಿ ನೀಡುತ್ತಿದೆ.
ಆಲ್ದೂರು ಹೋಬಳಿಯಲ್ಲಿ ಸುಮಾರು 625 ಹೆಕ್ಟೆರ್ ಕೃಷಿ ಭೂಮಿ ಇದೆ. ಮಳೆಯಾಶ್ರಿತ ಕೃಷಿ ಭೂಮಿಯೇ ಹೆಚ್ಚು. ನೀರಾವರಿ ಸೌಲಭ್ಯವನ್ನು ಬೆರಳೆಣಿಕೆಯಷ್ಟು ರೈತರು ಮಾತ್ರ ಹೊಂದಿದ್ದಾರೆ. ಆಲ್ದೂರು ವ್ಯಾಪ್ತಿಯಲ್ಲಿ ಮುಖ್ಯವಾಗಿ ಬೆಳೆಯುವ ಭತ್ತದ ತಳಿಗಳೆಂದರೆ ಕಿರುವಾಣ, ಪುಟ್ಟಭತ್ತ, ಸರ್ಕಾರಿ ಭತ್ತದ ತಳಿಗಳಾದ ತುಂಗಾ, ಬಾಂಗ್ಲಾ , ಐಆರ್ 64 ಇವುಗಳಿಗೆ ಬೇಡಿಕೆ ಕಡಿಮೆಯಿದ್ದು ಕೇವಲ 30 ರಿಂದ 35 ಕ್ವಿಂಟಾಲ್ ಬಿತ್ತನೆ ಭತ್ತ ಕೃಷಿ ಇಲಾಖೆಯಿಂದ ಸರಬರಾಜಾಗುತ್ತದೆ. ಇಳಿಮುಖವಾಗುತ್ತಿರುವ ಮಳೆಯ ಪ್ರಮಾಣ: ವರ್ಷದಿಂದ ವರ್ಷಕ್ಕೆ ಮಲೆನಾಡಿನಲ್ಲಿ ಮಳೆಯ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿದ್ದು ಕೃಷಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕೆಲವು ಬಾರಿ ನಾಟಿ ಮಯದಲ್ಲಿ ಉತ್ತಮ ಮಳೆಯಾಗಿದ್ದರೂ ತೆನೆಗಟ್ಟುವ ಸಮಯದಲ್ಲಿ ಮಳೆ ಬಾರದೆ ಇಳುವರಿ ಕುಂಠಿತವಾಗುತ್ತದೆ. ಆಲ್ದೂರು ಭಾಗದಲ್ಲಿ ಸರಾಸರಿ 75 ರಿಂದ 80 ಇಂಚು ಮಳೆಯಾಗುತ್ತಿದ್ದು, 2014-15 ರಲ್ಲಿ 77 ಇಂಚು ಮಳೆಯಾಗಿದ್ದು, 2016 ರಲ್ಲಿ 52 ಇಂಚು ಮಳೆಯಾಗಿದ್ದು, 2017 ರಲ್ಲಿ 56 ಇಂಚು ಮಳೆಯಾಗಿದೆ.
ಇಳಿಮುಖವಾಗುತ್ತಿರುವ ಭತ್ತದ ಕೃಷಿ:
ಆಲ್ದೂರು ಸುತ್ತಮುತ್ತ ಈ ಹಿಂದಿನ ಅವಧಿಯಲ್ಲಿ 825 ಹೆಕ್ಟೆರ್ ಕೃಷಿ ಜಮೀನಿದ್ದು ಈಗ 625 ಹೆಕ್ಟೆರ್ಗೆ ಇಳಿದಿದೆ. ಕೂಲಿ ಕಾರ್ಮಿಕರ ಸಮಸ್ಯೆ, ಬೆಳೆಗೆ ಉತ್ತಮ ಬೆಲೆ ಸಿಗದಿರುವುದು ಹಾಗೂ ಸರಿಯಾದ ಸಮಯಕ್ಕೆ ಮಳೆ ಬಾರದೆ ಇರುವುದು ಹಾಗೂ ಬೆಳೆಗಾರರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿರುವುದು ಹಾಗೂ ಭತ್ತದ ಗದ್ದೆಗಳನ್ನು ಕಾಫಿ ತೋಟಗಳನ್ನಾಗಿ ಮಾಡುತ್ತಿರುವುದರಿಂದ ಭತ್ತದ ಬೆಳೆ ಕಡಿಮೆಯಾಗಿದೆ.
ಕಾಡುತ್ತಿರುವ ಸೈನಿಕ ಹುಳು ಭಾದೆ:
ಮಲೆನಾಡಿನ ಭತ್ತದ ಬೆಳೆಯನ್ನು ಸೈನಿಕ ಹುಳು ಬಾದೆ ಕಾಡುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಈ ಹಿಂದೆ ಭತ್ತದ ಬೆಳೆಯನ್ನು ಬೆಂಕಿ ರೋಗ, ಸಣ್ಣ ಪುಟ್ಟ ಕೀಟ ಭಾದೆಗಳು ಕಾಡುತ್ತಿದ್ದು, ಔಷಧಿ ಸಿಂಪಡನೆಯಿಂದ ಹತೋಟಿಗೆ ಬರುತ್ತಿತ್ತು. ಆದರೆ ಕಳೆದ ಬಾರಿಯಿಂದ ಕಾಣಿಸಿಕೊಂಡಿರುವ ಸೈನಿಕ ಹುಳು ಭಾದೆ ರೈತರನ್ನು ಕಂಗೆಡಿಸಿದೆ. ಭತ್ತದ ಫಸಲು ಕಟಾವಿಗೆ ಬರುವ ಸಮಯಕ್ಕೆ ಭತ್ತದ ತೆನೆಯನ್ನು ಸೈನಿಕ ಹುಳುಗಳು ಕಟಾವು ಮಾಡಿ ಬರಿ ಹುಲ್ಲನ್ನು ಮಾತ್ರ ಬಿಡುತ್ತಿದ್ದು ಇದರಿಂದ ರೈತರು ಹೈರಾಣಾಗಿದ್ದಾರೆ. ಈ ಬಾರಿ ಕೃಷಿ ಇಲಾಖೆ ಈ ರೋಗವನ್ನು ಹತೋಟಿಗೆ ತರಲು ಮುಂಜಾಗ್ರತಾ ಕ್ರಮವನ್ನು ಕೈಗೊಂಡು ರೈತರ ನೆರವಿಗೆ ಧಾವಿಸಬೇಕಿದೆ.
You seem to have an Ad Blocker on.
To continue reading, please turn it off or whitelist Udayavani.