ಮೆಟಡೊರ್ ಚಲನಚಿತ್ರದ ಪ್ರೋಮೋ ಬಿಡುಗಡೆ
ಮೇ 27ರಂದು ಚಲನಚಿತ್ರ ತೆರೆಗೆ
Team Udayavani, May 3, 2022, 2:18 PM IST
ಕಡೂರು: ಕಡೂರಿನಿಂದ ಕನ್ನಡ ಚಿತ್ರರಂಗಕ್ಕೆ ಬರುತ್ತಿರುವ ಯುವಕರು, ನಟರು, ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಪ್ರೋತ್ಸಾಹಿಸಿ ಬೆಳೆಸಿ ಎಂದು ಕನ್ನಡ ಚಲನಚಿತ್ರದ ಹಾಸ್ಯನಟ ಕಡೂರು ಧರ್ಮಣ್ಣ ತಿಳಿಸಿದರು.
ಪ್ರವಾಸಿ ಮಂದಿರದಲ್ಲಿ ಸೋಮವಾರ ತಾಲೂಕಿನ ಸಖರಾಯಪಟ್ಟಣದ ಹನುಮಯ್ಯ ಮತ್ತು ಜಯಶ್ರೀ ದಂಪತಿಯ ಪುತ್ರ ಎಸ್.ಎಚ್. ಕಿರಣ್ಕುಮಾರ್ ಅವರು ನಟಿಸಿ, ನಿರ್ಮಿಸಿರುವ “ಮೆಟಡೊರ್’ ಚಲನಚಿತ್ರದ ಪ್ರೋಮೋ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಮ್ಮ ಹುಡುಗ ಕಿರಣ್ಕುಮಾರ್ ಮತ್ತು ಗೆಳೆಯರು ಸೇರಿ ನಿರ್ಮಾಣ ಮಾಡಿರುವ ಈ ಚಿತ್ರ ಇದೇ 27 ರಂದು ತೆರೆಗೆ ಬರಲಿದ್ದು ಪ್ರತಿಯೊಬ್ಬರು ಚಿತ್ರವನ್ನು ವೀಕ್ಷಿಸಿ ಪ್ರೋತ್ಸಾಹಿಸಬೇಕು ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿದರು.
ಪೋಷಕರು ಮಕ್ಕಳಿಗೆ ಎಲ್ಲವನ್ನೂ ನೀಡುತ್ತಾರೆ. ಆದರೆ ಅವರಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬುವಲ್ಲಿ ಸೋಲುತ್ತಾರೆ ಎಂಬುದು ವಾಸ್ತವಿಕ ಸಂಗತಿಯಾಗಿದೆ. ಮಕ್ಕಳಿಗೆ ಏನೇ ಕಲಿಸುವುದಕ್ಕೂ ಮುನ್ನ ಅವರಲ್ಲಿ ಸಾಧಿಸುವ ಶಕ್ತಿಯಿದೆ ಎಂಬ ಆತ್ಮವಿಶ್ವಾಸ ಮತ್ತು ಧೈರ್ಯ ತುಂಬಬೇಕು. ಆಗ ಮಾತ್ರ ಅವರಲ್ಲಿ ಸಾಧಿಸುವ ಛಲ ಬರುತ್ತದೆ. ಇಂತಹ ವ್ಯಕ್ತಿತ್ವ ಹೊಂದಿರುವ ಕಿರಣ್ಕುಮಾರ್ ಅವರು ನಿರ್ಮಿಸಿ ನಟಿಸಿರುವ ಈ ಚಿತ್ರವನ್ನು ಸುದರ್ಶನ್ ಜಿ.ಶೇಖರ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಯಶಸ್ಸು ದೊರೆಯಲಿ ಎಂದು ಹಾರೈಸಿದರು.
ದಶಕಗಳ ಹಿಂದೆ ಮೆಟಡೋರ್ ವಾಹನ ನೋಡದವರಿಲ್ಲ. ಆದರೆ ಅದರಲ್ಲಿ ಪ್ರಯಾಣಿಸುತ್ತಿದ್ದವರೆಲ್ಲರಿಗೂ ಅದರ ಚಾಲಕನ ಮೇಲೆ ದಿವ್ಯ ನಂಬಿಕೆಯಿತ್ತು. ಈ ಜೀವನವೂ ಒಂದು ಮೆಟಡೋರ್ನಂತೆ. ಜೀವನ ಮುನ್ನಡೆಸುವ ಚಾಲಕನೊಬ್ಬನಿದ್ದಾನೆ ಎಂಬ ಎಳೆಯನ್ನಿಟ್ಟುಕೊಂಡು ಈ ಚಿತ್ರ ತಯಾರಾಗಿದೆ ಎಂದರು.
ನಟ ಕಿರಣ್ಕುಮಾರ್, ಕಡೂರಿನ ಮಿಮಿಕ್ರಿ ಪ್ರವೀಣ್, ಪುರಸಭಾ ಸದಸ್ಯರಾದ ತೋಟದಮನೆ ಮೋಹನ್ ಕುಮಾರ್, ಈರಳ್ಳಿ ರಮೇಶ್, ಮರುಗುದ್ದಿ ಮನು, ಜೆಸಿಐ ಅಧ್ಯಕ್ಷ ಸೋಮಶೇಖರ್, ಹಿರಿಯ ಪತ್ರಕರ್ತ ಎಚ್.ಎಸ್. ಪರಮೇಶ್, ಬಾಲು ಮಚ್ಚೇರಿ, ಚಂದ್ರು, ಜಿಂಮ್ ರಾಜು, ಜಿಂಮ್ ಶ್ರೀನಿವಾಸ್ ಮತ್ತು ಶಿಕ್ಷಕ ಹರೀಶ್ ಮತ್ತು ಸಖರಾಯಪಟ್ಟಣದ ಹನುಮಯ್ಯ,ಜಯಶ್ರೀ ಚಿತ್ರದ ಬಗ್ಗೆ ಮಾತನಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.