![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 13, 2019, 1:17 PM IST
ಚಿತ್ರದುರ್ಗ: ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ನ ಚುನಾವಣೆಗೆ ಘಟಾನುಘಟಿಗಳು, ಸಹಕಾರ ಕ್ಷೇತ್ರದ ಧುರೀಣರು, ಶಾಸಕರು ದಿಢೀರ್ ಕಣಕ್ಕೆ ಇಳಿದಿದ್ದರಿಂದ ಚುನಾವಣಾ ಕಣ ರಂಗೇರಿದೆ.
ಇದುವರೆಗೆ ಹಿರಿಯೂರು ಕ್ಷೇತ್ರದ ಮಾಜಿ ಶಾಸಕ ಡಿ. ಸುಧಾಕರ್ ಚಳ್ಳಕೆರೆ ಕ್ಷೇತ್ರದಿಂದ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗುತ್ತಿದ್ದರು. ಮಾತ್ರವಲ್ಲ, ಅಧ್ಯಕ್ಷಗಾದಿಯನ್ನೂ ಏರುತ್ತಿದ್ದರು. ಈ ಬಾರಿಯೂ ಚಳ್ಳಕೆರೆ ಕ್ಷೇತ್ರದಿಂದ ಅವರೊಬ್ಬರೇ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಅಧಿಕೃತ ಘೋಷಣೆಯಷ್ಟೇ ಬಾಕಿ ಇದೆ.
ಮೇಲ್ನೋಟಕ್ಕೆ ಸಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಆದರೆ ಮತ್ತೂಂದೆಡೆ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ. ರಘುಮೂರ್ತಿ ಹಾಗೂ ಮಾಜಿ ಶಾಸಕ ಡಿ. ಸುಧಾಕರ್ ನಡುವೆ ಅಧ್ಯಕ್ಷ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಡುವ ಸಾಧ್ಯತೆ ಇರುವುದು ಈ ಬಾರಿಯ ಚುನಾವಣೆಯ ವಿಶೇಷ.
ರಾಜಕೀಯ ಭವಿಷ್ಯಕ್ಕೆ ಸಿಡಿಸಿಸಿ ಮೆಟ್ಟಿಲು: ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡಿ ರಾಜಕೀಯ ಭವಿಷ್ಯ ರೂಪಿಸಿಕೊಳ್ಳಲು ಕಾಮಧೇನುವಿನಂತಿರುವ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೇರಲು ಶಾಸಕ ಟಿ. ರಘುಮೂರ್ತಿ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿದೆ.
ಸುಧಾಕರ್ ಹಾಗೂ ರಘುಮೂರ್ತಿ ವೈಯಕ್ತಿಕವಾಗಿ ಉತ್ತಮ ಸ್ನೇಹಿತರು. ಆದರೆ ಸುಧಾಕರ್ ಹಿರಿಯೂರು ಕ್ಷೇತ್ರದಿಂದ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದರೂ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಮೇಲೆ ಹಿಡಿತ ಹೊಂದಿದ್ದಾರೆ. ಜಿಪಂ, ತಾಪಂ, ಗ್ರಾಪಂ ಹಾಗೂ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಚದುರಂಗದಾಟವಾಡಿ ಮೇಲುಗೈ ಸಾಧಿಸುತ್ತಿದ್ದರು. ತಮ್ಮ ಕ್ಷೇತ್ರದಲ್ಲಿ ಡಿ. ಸುಧಾಕರ್ ಬಲವಾಗಿ ನೆಲೆಯೂರುತ್ತಿರುವುದನ್ನು ಗಮನಿಸಿದ ಶಾಸಕ ಟಿ. ರಘುಮೂರ್ತಿ, ಸುಧಾಕರ್ ವೇಗಕ್ಕೆ ಬ್ರೇಕ್ ಹಾಕಲು ಸಹಕಾರ ರಂಗ ಪ್ರವೇಶಿಸಿ ಅವರಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.
ಸಿಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಶಾಸಕ ಟಿ. ರಘುಮೂರ್ತಿಸಹ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಲಾಗಿದ್ದು, ಬಹುತೇಕ ಕಾಂಗ್ರೆಸ್ ಮುಖಂಡರು ರಘುಮೂರ್ತಿ ತೀರ್ಮಾನಕ್ಕೆ ಪ್ರತ್ಯಕ್ಷ- ಪರೋಕ್ಷವಾಗಿ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ನಿತ್ಯ ರಾಜಕೀಯದ ಆಟಗಳು ಹೋಟೆಲ್, ವಸತಿಗೃಹಗಳು, ಮನೆಗಳಲ್ಲಿ ಬಿರುಸುಗೊಳ್ಳುತ್ತಿವೆ. ರಘುಮೂರ್ತಿಯವರು ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸುಧಾಕರ್, ತಾವು ಕೂಡ ಪ್ರತಿತಂತ್ರ ಹೆಣೆಯಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಮಾಜಿ ಶಾಸಕ ಡಿ. ಸುಧಾಕರ್ ಅವರ ರಾಜಕೀಯ ಏಳ್ಗೆಗೆ ಸಿಡಿಸಿಸಿ ಬ್ಯಾಂಕ್ ಮೆಟ್ಟಿಲಾಗಿ ಕೆಲಸ ಮಾಡಿತು ಎಂದರೆ ಅತಿಶಯೋಕ್ತಿಯಲ್ಲ. ರಘುಮೂರ್ತಿ ಪ್ರವೇಶದಿಂದಾಗಿ ಸಿಡಿಸಿಸಿ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ‘ಶತ್ರುವಿನ ಶತ್ರು ಮಿತ್ರ’ ಎಂಬಂತೆ ಹಳೆಯ ವಿರೋಧಿಗಳೆಲ್ಲ ಸ್ನೇಹಿತರಾಗುತ್ತಿದ್ದಾರೆ. ನಿರ್ದೇಶಕ ಸ್ಥಾನದ ಚುನಾವಣೆಯಲ್ಲೇ ರಘುಮೂರ್ತಿ ಅವರನ್ನು ಸೋಲಿಸಿದರೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆಯೇ ಇರುವುದಿಲ್ಲ ಎನ್ನುವ ಲೆಕ್ಕಾಚಾರವೂ ಜೋರಾಗಿ ನಡೆದಿದೆ. ಒಂದೇ ಪಕ್ಷದವರು ಕಣಕ್ಕಿಳಿದಿರುವುದರಿಂದ ಫಲಿತಾಂಶ ಏನಾದೀತು ಎಂಬ ಕುತೂಹಲ ಮೂಡಿದೆ.
ಅಂತೂ ಸಿಕ್ಕಿತು ಮತದಾನ ಹಕ್ಕು
ಸಿಡಿಸಿಸಿ ಬ್ಯಾಂಕ್ನಲ್ಲಿ ಸದ್ಯ 156 ಅರ್ಹ ಮತದಾರರಿದ್ದು, ಅನರ್ಹತೆ ಪಟ್ಟಿಯಲ್ಲಿ 260 ಮಂದಿ ಇದ್ದಾರೆ. ಇವರೆಲ್ಲ ನ್ಯಾಯಾಲಯದ ಮೊರೆ ಹೋಗಿ ಮತದಾನ ಮಾಡಲು ನ್ಯಾಯಾಲಯದಿಂದ ಅವಕಾಶವನ್ನೂ ಪಡೆದುಕೊಂಡಿದ್ದಾರೆ. ಇದೇ ರೀತಿ ಶಿವಮೊಗ್ಗದಲ್ಲೂ ಅನರ್ಹರು ನ್ಯಾಯಾಲಯಕ್ಕೆ ಹೋಗಿದ್ದು, ನ್ಯಾಯಾಲಯ ಮತದಾನಕ್ಕೆ ಮಾತ್ರ ಅವಕಾಶ ನೀಡಿ ಸ್ಪರ್ಧಿಸಲು ನಿರಾಕರಿಸಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ. ಸಿಡಿಸಿಸಿ ಬ್ಯಾಂಕ್ ಬೈಲಾ ಪ್ರಕಾರ ಐದು ಸಾಮಾನ್ಯ ಸಭೆಗಳ ಪೈಕಿ (ಜನರಲ್ ಬಾಡಿ) ಕನಿಷ್ಠ ಮೂರು ಸಾಮಾನ್ಯ ಸಭೆಗಳಿಗೆ ಹಾಜರಾದವರಿಗೆ ಮಾತ್ರ ಮತದಾನದ ಹಕ್ಕು ಸಿಗಲಿದೆ. ಇಲ್ಲದಿದ್ದರೆ ಅಂಥವರನ್ನು ಅನರ್ಹ ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಇಂಥವರು 260 ಸದಸ್ಯರಿದ್ದಾರೆ.
•ಹರಿಯಬ್ಬೆ ಹೆಂಜಾರಪ್ಪ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.