ಪಿವಿಎಸ್ನಿಂದ ಲೇಡಿಹಿಲ್ ರಸ್ತೆ ಮೇಲ್ದರ್ಜೆಗೆ: ಮೇಯರ್
Team Udayavani, Oct 27, 2017, 10:06 AM IST
ಬಂದರ್: ಪಿವಿಎಸ್ನಿಂದ ಲೇಡಿಹಿಲ್ವರೆಗೆ ರಸ್ತೆಯನ್ನು ಸುಮಾರು 6.50 ಕೋ.ರೂ. ವೆಚ್ಚದಲ್ಲಿ ಸ್ಮಾರ್ಟ್ ರಸ್ತೆ ಮಾದರಿಯಲ್ಲಿ ಮೇಲ್ದರ್ಜೆಗೆ ಏರಿಸಲು ಪಾಲಿಕೆ ಮುಂದಾಗಿದ್ದು, ಮುಂದಿನ ತಿಂಗಳಿ ನಲ್ಲಿ ಶಿಲಾನ್ಯಾಸ ನೆರವೇರಲಿದೆ ಎಂದು ಮೇಯರ್ ಕವಿತಾ ಸನಿಲ್ ಹೇಳಿದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ಜರಗಿದ ‘ಮಂಗಳೂರು ನಗರಾಭಿವೃದ್ದಿ’ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಸ್ಮಾರ್ಟ್ ರಸ್ತೆಯ ಮಾದರಿಯಲ್ಲಿ ಈ ರಸ್ತೆ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಈ ರಸ್ತೆಯಲ್ಲಿ ಈಗ ಇರುವ ಎಲ್ಲ ರೀತಿಯ ಕೇಬಲ್ಗಳನ್ನು ಅಂಡರ್ಗ್ರೌಂಡ್ ಮಾಡುವುದು, ಸುಸಜ್ಜಿತವಾಗಿ ಫುಟ್ಪಾತ್ ಹಾಗೂ ಚರಂಡಿ ಕಾಮಗಾರಿ ಸಹಿತ ವಿವಿಧ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಲಾಲ್ಬಾಗ್ನಿಂದ ಲೇಡಿಹಿಲ್ವರೆಗಿನ ರಸ್ತೆಯನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಿ, ಆ ಬಳಿಕ ಎರಡನೇ ಹಂತದಲ್ಲಿ ಲಾಲ್ಬಾಗ್ನಿಂದ ಪಿವಿಎಸ್ವರೆಗೆ ಅಭಿವೃದ್ಧಿಪಡಿಸಲಾಗುವುದು ಎಂದರು.
ದೂರದೂರಿನವರಿಗೆ ಮಾಹಿತಿ ನೀಡುವ ಹಾಗೂ ನಗರದೊಳಗಿನ ರಸ್ತೆಯಲ್ಲಿ ದಾರಿ ಸೂಚಕಗಳು ಮತ್ತು ಸ್ಥಳನಾಮಗಳ ಬೋರ್ಡ್ ಅಳವಡಿಸಲು 1.50 ಕೋ.ರೂ ಮೀಸಲಿರಿಸಲಾಗಿದೆ ಎಂದರು.
ಪಂಪ್ವೆಲ್ನಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಹಾಗೂ ಹಂಪನಕಟೆಯಲ್ಲಿ ಮಲ್ಟಿಲೆವೆಲ್ ಕಾರ್ ಪಾರ್ಕಿಂಗ್ ಯೋಜನೆಗಳನ್ನು ಆದಷ್ಟು ಶೀಘ್ರದಲ್ಲಿ ಅನುಷ್ಠಾನಕ್ಕೆ ಒತ್ತು ನೀಡಲಾಗುತ್ತದೆ. ಈಗಾಗಲೇ ಈ ಎರಡೂ ಯೋಜನೆಗಳಿಗೆ ಒಂದು ಹಂತದ ಸಿದ್ಧತೆ ಪೂರ್ಣಗೊಳಿಸಲಾಗಿದ್ದು, ವರ್ಷಾಂತ್ಯದೊಳಗೆ ಎರಡೂ ಕಾಮಗಾರಿಗಳು ಆರಂಭವಾಗುವ ನಿರೀಕ್ಷೆ ಇದೆ ಎಂದರು.
ನಗರದೊಳಗಿನ ವಿವಿಧ ಕಡೆಗಳಲ್ಲಿ ಫುಟ್ಪಾತ್ ಸಮಸ್ಯೆ ಇರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹೀಗಾಗಿ ಬಹುಮುಖ್ಯ ಸ್ಥಳದಲ್ಲಿ ಆಗಬೇಕಾದ ಫುಟ್ಪಾತ್ ಕಾಮಗಾರಿಗಳಿಗೆ ಈಗಾಗಲೇ ಟೆಂಡರ್ ಕರೆದು ಕಾಮಗಾರಿಯನ್ನೂ ಕೆಲವೆಡೆ ಆರಂಭಿಸಲಾಗಿದೆ. ಮುಂದೆ ಇದು ಮುಂದುವರಿಸಲಾಗುವುದು. ನಗರದ 5 ಕಡೆಗಳಲ್ಲಿ ಇ-ಟಾಯ್ಲೆಟ್ ಗಳನ್ನು ಆರಂಭಿಸಲಾಗಿದ್ದು, ಇದನ್ನು ಇನ್ನಷ್ಟು ಕಂಪೆನಿಗಳ ಸಹಕಾರದಿಂದ ಇತರ ಭಾಗಗಳಿಗೂ ವಿಸ್ತರಿಸಲಾಗುವುದು ಎಂದರು.
ಕೆನರಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಅಧ್ಯಕ್ಷೆ ವತಿಕಾ ಪೈ ಅಧ್ಯಕ್ಷತೆ ವಹಿಸಿದ್ದರು. ಶಶಿಧರ ಪೈ ಮಾರೂರು, ಐಸಾಕ್ ವಾಸ್, ಪ್ರಶಾಂತ್ ಸಿ.ಜಿ, ಅಬ್ದುಲ್ ಹಮೀದ್ ಉಪಸ್ಥಿತರಿದ್ದರು.
ಕೇಳಿ ಬಂದ ಆಗ್ರಹಗಳು
- ಕೆಪಿಟಿ ಜಂಕ್ಷನ್ನ ಅವ್ಯವಸ್ಥೆ ಸರಿಪಡಿಸಬೇಕು.
- ರಸ್ತೆ ಅಗೆದು ಕೇಬಲ್ ಅಳವಡಿಕೆಗೆ ಕಡಿವಾಣ ಅಗತ್ಯ.
- ದೂರು ವಿಲೇವಾರಿ ಪ್ರಧಾನಿ ಕಚೇರಿಯ ವ್ಯವಸ್ಥೆಯಂತೆ ವೈಜ್ಞಾನಿಕ ವಿಲೇವಾರಿ ವ್ಯವಸ್ಥೆ ಆಗಲಿ.
- ಸ್ಟೇಟ್ಬ್ಯಾಂಕ್-ಪಂಪ್ವೆಲ್ ರಸ್ತೆಯಲ್ಲಿ ಒಂದು ಬದಿಯಲ್ಲಿ ಪಾರ್ಕಿಂಗ್ ನಿಷೇಧವಾಗಲಿ.
ಸಾರ್ಟ್ ಸಿಟಿ; ಸಮಗ್ರ ಮಂಗಳೂರು ಅಭಿವೃದ್ಧಿ
ಮಂಗಳೂರಿನ ಸಮಗ್ರ ಅಭಿವೃದ್ಧಿ ಹಿನ್ನೆಲೆಯಲ್ಲಿ ಈಗಾಗಲೇ ಘೋಷಣೆಯಾದ ಸ್ಮಾರ್ಟ್ ಸಿಟಿ ಯೋಜನೆಯನ್ನು ಹಂತ
ಹಂತವಾಗಿ ಅನುಷ್ಠಾನಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಉನ್ನತ ಮಟ್ಟದ ಸಮಿತಿ ಇದ್ದು, ಅದರ ನೆಲೆಯಲ್ಲಿ ಸ್ಮಾರ್ಟ್ ರಸ್ತೆ ಹಾಗೂ ಕಾರ್ ಪಾರ್ಕಿಂಗ್ ಯೋಜನೆ ಟೆಂಡರ್ ಹಂತದಲ್ಲಿದೆ. ಮೀನುಗಾರಿಕೆ ಹಾಗೂ ಬಂದರು ಪ್ರದೇಶ ವ್ಯಾಪ್ತಿಯನ್ನು ಅತ್ಯಂತ ವಿನೂತನ ರೀತಿಯಲ್ಲಿ ಬದಲಾವಣೆಗೊಳಿಸುವ ಸ್ಮಾರ್ಟ್ ಸಿಟಿ ಪೂರ್ಣ ರೀತಿಯಲ್ಲಿ ಅನುಷ್ಠಾನವಾದರೆ ಮಂಗಳೂರಿನ ಚಿತ್ರಣ ಬದಲಾಗಲಿದೆ ಎಂದು ಮೇಯರ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hangyo Ice Cream: ಬಿಗ್ಬಾಸ್ ಕನ್ನಡ ಮನೆಯೊಳಗೆ ಹಾಂಗ್ಯೋ ಐಸ್ಕ್ರೀಂ!
Mangaluru: ಸೆನ್ ಪೊಲೀಸ್ ಠಾಣೆಗಳು ಮೇಲ್ದರ್ಜೆಗೆ
Mangaluru: ಕೌನ್ ಬನೇಗಾ ಕರೋಡ್ಪತಿಯಲ್ಲಿ 6.40 ಲ.ರೂ. ಗೆದ್ದ ಅಪೂರ್ವಾ ಶೆಟ್ಟಿ
Mangaluru: ಸೈಬರ್ ಕ್ರೈಂ ಅಧಿಕಾರಿ ಹೆಸರಿನಲ್ಲಿ ಬೆದರಿಸಿ 35 ಲ.ರೂ. ವಂಚನೆ
Mangaluru: ಸಂಸ್ಥೆಯ ಬೆಳವಣಿಗೆಯಲ್ಲಿ ಮಾನವ ಸಂಪನ್ಮೂಲ ಪಾತ್ರ ಪ್ರಮುಖ: ಮಂಜುನಾಥ ಭಂಡಾರಿ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.