![Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ](https://www.udayavani.com/wp-content/uploads/2025/02/kadukona-415x278.jpg)
![Anktaadka: ಹಾಡುಹಗಲೇ ಕಾಡುಕೋಣ ಸಂಚಾರ… ಸ್ಥಳೀಯರಲ್ಲಿ ಆತಂಕ](https://www.udayavani.com/wp-content/uploads/2025/02/kadukona-415x278.jpg)
Team Udayavani, May 19, 2019, 6:00 AM IST
ನಗರ: ಜನತೆಗೆ ಪ್ರಯೋಜನವಾಗಬೇಕು ಎನ್ನುವ ಕಾರಣದಿಂದ ಸರಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ. ಅದೇ ರೀತಿ ಕೆಲ ಸಮಯಗಳ ಹಿಂದೆ ಗ್ರಾಮೀಣ ಭಾಗಗಳಲ್ಲಿ ಶುದ್ಧ ನೀರಿನ ಘಟಕಗಳನ್ನು ಅನುಷ್ಠಾನಗೊಳಿಸಿದ್ದು, ಪ್ರಸ್ತುತ ಬಹುತೇಕ ಘಟಕಗಳು ಕಾರ್ಯಾಚರಣೆ ನಡೆಸದೆ ಸ್ಥಗಿತಗೊಂಡಿದೆ.
ಇಡ್ಕಿದು ಗ್ರಾ.ಪಂ. ವ್ಯಾಪ್ತಿಯ ಮಿತ್ತೂರು ಕುವೆತ್ತಿಲ ಬಳಿಯಲ್ಲೂ ವರ್ಷದ ಹಿಂದೆ ಶುದ್ಧ ನೀರಿನ ಘಟಕವೊಂದನ್ನು ಅನುಷ್ಠಾನಗೊಳಿಸಲಾಗಿದೆ. ಇದು ಪ್ರಾರಂಭದ ಕೆಲದಿನಗಳ ಕಾಲ ಕಾರ್ಯಾಚರಿಸಿದ್ದು ಬಿಟ್ಟರೆ, ಉಳಿದಂತೆ ಈಗಲೂ ಪ್ರಯೋಜನ ಇಲ್ಲದಂತಾಗಿದೆ. ಘಟಕದಲ್ಲಿ ತಾಂತ್ರಿಕ ತೊಂದರೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಅದು ಕಾರ್ಯಾಚರಿಸುತ್ತಿಲ್ಲ ಎಂದು ಸಂಬಂಧಪಟ್ಟವರು ಉತ್ತರ ನೀಡುತ್ತಾರೆ.
ತಾಂತ್ರಿಕ ದೋಷ
ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರಿನ ಯೋಜನೆಯ ವತಿಯಿಂದ ಗ್ರಾಮೀಣಾವೃದ್ಧಿ ಹಾಗೂ ಪಂಚಾಯತ್ರಾಜ್ ಇಲಾಖೆಯಿಂದ ಈ ಘಟಕ ಅನುಷ್ಠಾನಗೊಂಡಿದ್ದು, ಕೆಆರ್ಐಡಿಎಲ್ ಮಂಗಳೂರು ಇದರ ಮೂಲಕ ಘಟಕದ ಕೆಲಸಗಳು ನಡೆದಿದ್ದವು. ಇದರಲ್ಲಿ ತಾಂತ್ರಿಕ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಗ್ರಾ.ಪಂ.ನಿಂದ ತಿಳಿಸಿದಾಗ ಬಂದು ದುರಸ್ತಿ ಮಾಡಿ ಹೋಗಿದ್ದರು. ಆದರೆ ಸ್ವಲ್ಪ ಸಮಯದ ಬಳಿಕ ಮತ್ತೆ ದೋಷ ಕಂಡುಬಂದಿದ್ದು, ದುರಸ್ತಿಗಾಗಿ ಅವರು ನೀಡಿರುವ ದೂರವಾಣಿ ಸಂಖ್ಯೆಯನ್ನು ರಿಸೀವ್ ಮಾಡುವವರೇ ಇಲ್ಲ ಎಂದು ಗ್ರಾ.ಪಂ. ಆರೋಪಿಸುತ್ತಿದೆ.
ಪ್ರಯೋಜನವೇ ಇಲ್ಲ
ಶುದ್ಧ ನೀರಿನ ಘಟಕವನ್ನು ಜನನಿಬಿಡ ಪ್ರದೇಶದಲ್ಲಿ ಅನುಷ್ಠಾನಗೊಳಿಸಬೇಕು. ಜತೆಗೆ ಅದು 24 ಗಂಟೆಯೂ ಕಾರ್ಯಾಚರಣೆ ನಡೆಸಬೇಕು ಎನ್ನುವ ನಿಯಮವಿದೆ. ಆದರೆ ಮಿತ್ತೂರಿನಲ್ಲಿ ಅನುಷ್ಠಾನಗೊಂಡಿರುವ ಸ್ಥಳವು ಜನವೇ ಇಲ್ಲದ ಪ್ರದೇಶವಾಗಿದೆ. ಹೀಗಾಗಿ ಅದನ್ನು ಉಪಯೋಗಿಸುವವರಿಲ್ಲ. ಈ ಘಟಕ ಜನರಿಗೆ ಪ್ರಯೋಜನವಾದಂತಿಲ್ಲ. ಗ್ರಾ.ಪಂ.ಬಳಿ ಅದು ಯಾಕೆ ಕಾರ್ಯಾಚರಣೆ ಮಾಡುತ್ತಿಲ್ಲ ಎಂದು ಕೇಳಿದರೆ, ಅದನ್ನು ಉಪಯೋಗಿವವರೂ ಕಡಿಮೆ ಇದ್ದಾರೆ. ಯಾರು ಕೂಡ ಕಾಯಿನ್ ಹಾಕಿ ಉಪಯೋಗಿಸುತ್ತಿಲ್ಲ ಎನ್ನುವ ಉತ್ತರ ನೀಡುತ್ತಾರೆ. ಅದು ಜನನಿಬಿಡ ಪ್ರದೇಶದಲ್ಲಾದರೂ ಅನುಷ್ಠಾನಗೊಂಡಿದ್ದರೆ ಕೆಲವು ಮಂದಿಯಾದರೂ ಉಪಯೋಗಿಸುತ್ತಿದ್ದರು ಎನ್ನುವ ಅಭಿಪ್ರಾಯ ಕೇಳಿಬಂದಿದೆ.
ಸುಮಾರು 8.5 ಲಕ್ಷ ರೂ.ಗಳಲ್ಲಿ ಘಟಕವು ಅನುಷ್ಠಾನಗೊಂಡಿದ್ದು, ಪ್ರಸ್ತುತ ಅದನ್ನು ದುರಸ್ತಿ ಪಡಿಸುವ ಕುರಿತು ಯಾರೂ ಆಸಕ್ತಿ ವಹಿಸಿದಂತೆ ಕಂಡುಬರುತ್ತಿಲ್ಲ. ಗ್ರಾ.ಪಂ. ಸದನ ಸಮಿತಿ ಸಂಬಂಧಪಟ್ಟವರಿಗೆ ತಿಳಿಸಲಾಗಿದೆ ಎಂದು ಹೇಳುತ್ತಿದೆ. ಹೀಗಾಗಿ ಇನ್ನೂ ಒಂದಷ್ಟು ಕಾಲ ಅದನ್ನು ಹಾಗೇ ಬಿಟ್ಟರೆ ಅದು ಪೂರ್ತಿ ತುಕ್ಕು ಹಿಡಿದು ಹೋಗುವ ಆತಂಕ ಎದುರಾಗಿದ್ದು, ಅನುದಾನ ಪೂರ್ತಿ ಮಣ್ಣು ಪಾಲಾಗುವ ಸ್ಥಿತಿ ಇದೆ. ಹೀಗಾಗಿ ಇನ್ನಾದರೂ ಸಂಬಂಧಪಟ್ಟವರು ಇತ್ತ ಗಮನಹರಿಸಿ ಅದನ್ನು ಕಾರ್ಯಾಚರಣೆಯ ಸ್ಥಿತಿಯಲ್ಲಿ ಉಳಿಸಬೇಕಿದೆ.
••ಕಿರಣ್ ಸರಪಾಡಿ
You seem to have an Ad Blocker on.
To continue reading, please turn it off or whitelist Udayavani.