![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 11, 2022, 6:35 AM IST
ಗುತ್ತಿಗಾರು: ಹಳದಿ ರೋಗ, ಕೊಳೆರೋಗ, ಬೆಂಕಿರೋಗ ಇತ್ಯಾದಿಗಳಿಂದ ಬಸವಳಿದಿರುವ ಅಡಿಕೆ ಬೆಳೆಗಾರನನ್ನು ಮತ್ತಷ್ಟು ಹೈರಾಣಾಗಿಸಲು ಮತ್ತೊಂದು ಕೀಟ ಬಾಧೆ ಆರಂಭವಾಗಿದೆ.
ಅಡಿಕೆಯ ಗುಣಮಟ್ಟವನ್ನು ಕಡಿಮೆ ಮಾಡಬಲ್ಲ ಸಣ್ಣ ಗಾತ್ರದ ಜೀರುಂಡೆಯಂತಿರುವ ಕ್ಸಿಲೋಸಾಂಡ್ರಸ್ ಕ್ರಾಸಿಯಸ್ಕಾಲಸ್ (xylosandrus crasiyaskuls) ಪ್ರಭೇದದ ಕೀಟವೊಂದನ್ನು ಸಿಪಿಸಿಐಆರ್ ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ವಾತಾವರಣದ ಏರುಪೇರು ಮತ್ತು ಹವಾಮಾನ ವೈಪರೀತ್ಯದಿಂದ ಭವಿಷ್ಯದಲ್ಲಿ ಗಂಭೀರ ಸಮಸ್ಯೆಯಾಗುವ ಆತಂಕ ಇದೆ.
ಎಳೆ ಅಡಿಕೆಯ ರಸ ಹೀರುವ ಪೆಂಟಾಟೊಮಿಡ್ ಬಗ್ ಮತ್ತು ಪೆರಿಯಾಂತ್ ಮೈಟ್ ಕೀಟಗಳ ಬಾಧೆ ಮಲೆನಾಡು ಹಾಗೂ ಬಯಲು ಸೀಮೆಯ ಹಲವು ಕಡೆಗಳಲ್ಲಿ ಈಗಾಗಲೇ ಇದೆ. ಇದರಿಂದ ಎಳೆ ಅಡಿಕೆಗಳು ಉದುರುತ್ತವೆ. ಈ ಹಿನ್ನೆಲೆಯಲ್ಲಿ ಪರಿಶೀಲನೆಗಾಗಿ ಸುಳ್ಯ ತಾಲೂಕಿನ ಮರ್ಕಂಜ ಮತ್ತು ಕಡಬ ತಾಲೂಕಿನ ಕಾಣಿಯೂರು ಗ್ರಾಮದ ತೋಟಗಳಿಗೆ ಭೇಟಿ ನೀಡಿದ ವಿಜ್ಞಾನಿಗಳ ತಂಡಕ್ಕೆ ಹೊಸ ಬಗೆಯ ಕೀಟ ಕಂಡುಬಂದಿದೆ.
ಜೀರುಂಡೆಯ ರೂಪ
ಹೊಸದಾಗಿ ಪತ್ತೆಯಾಗಿ ರುವ ಕೀಟವು 2.5ರಿಂದ 2.8 ಮಿ.ಮೀ. ಗಾತ್ರದ್ದಾಗಿದ್ದು, ಜೀರುಂಡೆಯ ರೂಪ ಹೊಂದಿದೆ. ವಯಸ್ಕ ಕೀಟವು 1.06ರಿಂದ 2.39 ಮಿ.ಮೀ. ಅಗಲದಲ್ಲಿ ಅಡಿಕೆಯನ್ನು ತೂತು ಮಾಡಿ ಪ್ರವೇಶಿಸುತ್ತದೆ. ಇದರೊಂದಿಗೆ ಆಂಬ್ರೋಸಿಯೆಲ್ಲಾ ರೋಪೆರಿ ಎಂಬ ಶಿಲೀಂಧ್ರ ಕೂಡ ಒಳಸೇರುತ್ತದೆ. ಒಳಗಡೆ ಕೀಟವು ಸಂತಾನೋತ್ಪತ್ತಿ ಮಾಡುತ್ತದೆ. ಶಿಲೀಂಧ್ರವು ಅದಕ್ಕೆ ಆಹಾರವಾಗಿರುತ್ತದೆ. ಇದರಿಂದ ಅಡಿಕೆಯ ಗುಣಮಟ್ಟ ಕಡಿಮೆಯಾಗುತ್ತದೆ. ರಂಧ್ರದಿಂದ ಹೊರಬರುವ ಪುಡಿ (ಹಿಕ್ಕೆ)ಯಿಂದ ಅಡಿಕೆ ಮೇಲೆ ಕೀಟ ದಾಳಿಯಾಗಿರುವುದನ್ನು ತಿಳಿಯಬಹುದಾಗಿದೆ. ಕೀಟ ಮತ್ತು ಶಿಲೀಂಧ್ರದ ಸಹಜೀವನ ಇಲ್ಲಿ ಪ್ರಮುಖವಾಗಿ ಕಂಡುಬರುತ್ತದೆ.
ಶಿಲೀಂಧ್ರವು ಅಡಿಕೆಯ ಒಳಗೆ ಕಪ್ಪು ಕಲೆಗಳನ್ನು ಉಂಟುಮಾಡುತ್ತದೆ. ಇದರಿಂದ ಅಡಿಕೆಯ ತೂಕ ಕಡಿಮೆಯಾಗುವುದಲ್ಲದೆ ಗುಣಮಟ್ಟದ ಕುಸಿಯುತ್ತದೆ. ಸದ್ಯ ಕೀಟದ ಹಾವಳಿಯ ಪ್ರಾಥಮಿಕ ಪ್ರಕರಣಗಳು ವರದಿಯಾಗಿವೆ, ಗಂಭೀರ ಪರಿಣಾಮ ಬೀರಿಲ್ಲ. ಕೀಟಗಳ ನಿರ್ವಹಣೆ ಕ್ರಮಗಳನ್ನು ಬಗ್ಗೆ ಅಭಿವೃದ್ಧಿಪಡಿಸುತ್ತಿದ್ದೇವೆ ಎಂದು ವಿಟ್ಲದ ಸಿಪಿಸಿಐಆರ್ಯ ಯುವ ವಿಜ್ಞಾನಿಗಳಾದ ಡಾ| ಶಿವಾಜಿ ತುಬೆ ಮತ್ತು ಡಾ| ಭವಿಷ್ಯ ಹೇಳಿದ್ದಾರೆ.
ಇದನ್ನೂ ಓದಿ:ದೇವರಿಗೇ ಪೊಲೀಸ್ ಸಮವಸ್ತ್ರ! ಕಾಶಿಯ ಕೊತ್ವಾಲ ಬಾಬಾ ಕಾಲ ಭೈರವನಿಗೆ ಖಾಕಿ ಸಮವಸ್ತ್ರ
ನಮ್ಮ ವಿಜ್ಞಾನಿಗಳು ಅಡಿಕೆಯನ್ನು ಮುತ್ತಿಕೊಂಡಿರುವ ಹೊಸಕೀಟವನ್ನು ಗುರುತಿಸಿ ವರದಿ ಮಾಡಿದ್ದಾರೆ. ಪರಿಸರ ಸ್ನೇಹಿ ಕಾರ್ಯತಂತ್ರಗಳ ಮೂಲಕ ಅದರ ಚಟುವಟಿಕೆಯ ಅಧ್ಯಯನ ಮಾಡಲಾಗುತ್ತಿದೆ.
-ಡಾ| ಅನಿತಾ ಕರುಣ್,
ಸಿಪಿಸಿಐಆರ್ ನಿರ್ದೇಶಕಿ, ವಿಟ್ಲ
You seem to have an Ad Blocker on.
To continue reading, please turn it off or whitelist Udayavani.