ಮರಳು ಅಭಾವ: ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರ ಧರಣಿ
Team Udayavani, Oct 3, 2017, 4:00 PM IST
ಉಪ್ಪಿನಂಗಡಿ: ಮರಳು ಅಭಾವದಿಂದಾಗಿ ಬಹಳಷ್ಟು ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯರು ಸಾಮಾನ್ಯ ಸಭೆ ಬಹಿಷ್ಕರಿಸಿ, ಧರಣಿ – ಪ್ರತಿಭಟನೆ ನಡೆಸಿದ್ದಾರೆ.
ನಾವು ಎಷ್ಟು ಸಭೆ ನಡೆಸಿದರೂ ಮರಳು ಅಭಾವದಿಂದಾಗಿ ಪ್ರಗತಿ, ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈ ಸಭೆಯನ್ನು ಬಹಿಷ್ಕರಿಸುವುದಾಗಿ ತಿಳಿಸಿ, ಸಭಾಧ್ಯಕ್ಷರ ಸ್ಥಾನದ ಮುಂಭಾಗದಲ್ಲೇ ಕುಳಿತು ಸದಸ್ಯರು ಧರಣಿ ಆರಂಭಿಸಿದರು.
ಸದಸ್ಯ ಸುರೇಶ್ ಅತ್ರಮಜಲು ಮಾತನಾಡಿ, ಮರಳು ಕೊರತೆಯಿಂದಾಗಿ ಬಸವ ವಸತಿ ಯೋಜನೆಯಲ್ಲಿ ಬಡವರ ಮನೆ ನಿರ್ಮಾಣ ಸ್ಥಗಿತಗೊಂಡಿದೆ, ರಾಜ್ಯ ಸರಕಾರ ದ.ಕ. ಜಿಲ್ಲೆಯಲ್ಲಿ ಕಾಡುತ್ತಿರುವ ಮರಳು ಸಮಸ್ಯೆಗೆ ತತ್ಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದಿದ್ದಲ್ಲಿ ಜಿಲ್ಲೆಯ ಎಲ್ಲ ಗ್ರಾ.ಪಂ. ಸದಸ್ಯರನ್ನು ಸಂಘಟಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಮರಳಿದ್ದರೂ ಸ್ಥಳೀಯರಿಗಿಲ್ಲ
ಸದಸ್ಯ ಸುನಿಲ್ ದಡ್ಡು ಧ್ವನಿಗೂಡಿಸಿ, ಉಪ್ಪಿನಂಗಡಿಯಲ್ಲಿ ಎರಡು ನದಿಗಳು ಹರಿಯುತ್ತಿವೆ, ಮರಳು ಹೇರಳವಾಗಿದೆ. ಆದರೆ, ಉಪಯೋಗಕ್ಕೆ ಲಭಿಸುತ್ತಿಲ್ಲ. ಆದರೆ ಬೆಂಗಳೂರು, ಕೇರಳ ಕಡೆಗೆ ನಿರಂತರ ಸಾಗಾಟವಾಗುತ್ತಿದೆ. ಸ್ಥಳೀಯರು ಒಂದು ಪಿಕ್ಅಪ್ ಮರಳು ತೆಗೆದರೂ ಪೊಲೀಸರು ವಾಹನ ಜಪ್ತಿ ಮಾಡಿ, ಕೇಸು ಹಾಕುತ್ತಾರೆ. ದೊಡ್ಡವರು ಬೃಹತ್ ಲಾರಿಗಳಲ್ಲಿ ಬೆಂಗಾವಲು ಇಟ್ಟುಕೊಂಡು ಬೆಂಗಳೂರಿಗೆ ಮರಳು ಸಾಗಿಸುತ್ತಾರೆ. ದ.ಕ. ಜಿಲ್ಲೆಯ ಅಗತ್ಯಕ್ಕೆ ಅನುಗುಣವಾಗಿ ಪ್ರತ್ಯೇಕ ಪ್ರಾದೇಶಿಕ ಮರಳು ನೀತಿ ಜಾರಿ ಆಗಬೇಕು. ಈ ಬಗ್ಗೆ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷ ಕೆ. ಅಬ್ದುಲ್ ರಹಿಮಾನ್ ಪ್ರತಿಕ್ರಿಯಿಸಿ, ಮರಳು ಅಭಾವದ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದೆ.ಮರಳುಗಾರಿಕೆಗೆ ಪರವಾನಿಗೆ ಪ್ರಕ್ರಿಯೆ ಆರಂಭಗೊಂಡಿದ್ದು, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ವಾರದ ಒಳಗಾಗಿ ಸಮಸ್ಯೆ ಬಗೆಹರಿಯುವ ಬಗ್ಗೆ ತಿಳಿಸಿದ್ದಾರೆ. ಸಭೆ ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಅಧ್ಯಕ್ಷರಿಂದ ಸ್ಪಷ್ಟನೆ ಬೇಕು.
ಮರಳು ಸಮಸ್ಯೆಯಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿರುವ ಬಗ್ಗೆ ಹಾಗೂ ಪ್ರತ್ಯೇಕ ಪ್ರಾದೇಶಿಕ ಮರಳು ನೀತಿ ಜಾರಿ ಮಾಡುವಂತೆ ನಿರ್ಣಯ ಅಂಗೀಕರಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು. ಅಧ್ಯಕ್ಷರು ಸಮ್ಮತಿಸಿದ ಬಳಿಕ ಸಭೆ ಮುಂದುವರಿಯಿತು.
ಉಪ್ಪಿನಂಗಡಿ ಪಿಎಸ್ಐ ಆಗಿ ನಂದಕುಮಾರ್ ಎಂಬುವರು ಬಂದಿದ್ದಾರೆ. ಆದರೆ, ಅವರು ಠಾಣೆ ಯಲ್ಲಿ ಸಿಗುತ್ತಿಲ್ಲ. ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಪ್ರಕರಣಗಳು ಜಾಸ್ತಿಯಾಗುತ್ತಿವೆ, ಪೇಟೆಯಲ್ಲಿ ಸಂಚಾರಿ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಇಲ್ಲಿನ ಪಿಎಸ್ಐ ಬಂಟ್ವಾಳ ಠಾಣೆಯಲ್ಲಿ ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎನ್ನಲಾಗುತ್ತಿದೆ. ನಿಯೋಜನೆ ರದ್ದುಗೊಳಿಸಿ, ಅವರು ಉಪ್ಪಿನಂಗಡಿಯಲ್ಲೇ ಇರುವಂತೆ ಮಾಡಬೇಕು ಎನ್ನುವ ನಿರ್ಣಯವನ್ನೂ ಅಂಗೀಕರಿಸಲಾಯಿತು.
ರೆಸ್ಟೋರೆಂಟ್ಗೆ ಆಕ್ಷೇಪ
ಧನ್ವಂತರಿ ಆಸ್ಪತ್ರೆ ಹಿಂಭಾಗದಲ್ಲಿ ರೆಸ್ಟೋರೆಂಟ್ ತೆರೆಯುವುದಕ್ಕೆ ಪರವಾನಿಗೆ ಕೋರಿ ಬಂದ ಅರ್ಜಿಗೆ ಸದಸ್ಯರಾದ ಝರೀನಾ ಹಾಗೂ ಚಂದ್ರಾವತಿ ಆಕ್ಷೇಪ ವ್ಯಕ್ತಪಡಿಸಿ, ಇಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲ ಎಂದರು. ಸದಸ್ಯರಾದ ಸುನೀಲ್ ದಡ್ಡು ಹಾಗೂ ಚಂದ್ರಶೇಖರ ಮಡಿವಾಳ ಅರ್ಜಿಗೆ ಸಮ್ಮತಿ ಸೂಚಿಸಿದರು. ಪರಿಶೀಲನೆಗೆ ಅವಕಾಶ ನೀಡಿ, ಅಧ್ಯಕ್ಷರು ನಿರ್ಣಯ ಅಂಗೀಕರಿಸಿದರು. ಇದೇ ರೆಸ್ಟೋರೆಂಟ್ನಲ್ಲಿ ಬಾರ್ ನಡೆಯುವ ಸಾಧ್ಯತೆಯಿದ್ದು, ಜನವಸತಿ ಪ್ರದೇಶವಾದ್ದರಿಂದ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದಾರೆಂದು ಪಿಡಿಒ ತಿಳಿಸಿದರು.
ಸಭೆಯಲ್ಲಿ ತಾ.ಪಂ. ಸದಸ್ಯೆ ಸುಜಾತಾ ಕೃಷ್ಣ, ಗ್ರಾಮ ಪಂಚಾಯತ್ ಸದಸ್ಯರಾದ ಯು.ಕೆ. ಇಬ್ರಾಹಿಂ, ಉಮೇಶ್ ಗೌಡ, ಸುಂದರಿ, ಚಂದ್ರಾವತಿ, ಯೋಗಿನಿ, ಸುಶೀಲಾ, ಜಮೀಲಾ ಉಪಸ್ಥಿತರಿದ್ದರು. ಪಂ. ಕಾರ್ಯದರ್ಶಿ ಶಾರದಾ ವಂದಿಸಿದರು.
ಪ್ರತ್ಯೇಕ ಆಧಾರ್ ಕೇಂದ್ರ ಬೇಕು
ಯೋಜನೆ ಫಲಾನುಭವಿಗಳು ಆಧಾರ್ ಕಾರ್ಡ್ ಸಲ್ಲಿಸುವುದು ಕಡ್ಡಾಯ. ಆದರೆ, ಶೇ. 40ರಷ್ಟು ಮಂದಿಗೆ ಆಧಾರ್ ನೋಂದಣಿ ಆಗಿಲ್ಲ. ಅದನ್ನು ಮಾಡಿಸಬೇಕಾದರೆ ಪುತ್ತೂರು ಹೋಗಬೇಕು, ಕನಿಷ್ಠ ಮೂರು ದಿನ ಸರತಿ ಸಾಲಿನಲ್ಲಿ ನಿಂತು ಕಾಯಬೇಕು. ಉಪ್ಪಿನಂಗಡಿಯಲ್ಲೇ ಪ್ರತ್ಯೇಕ ಆಧಾರ್ ಕೇಂದ್ರ ತೆರೆಯುವಂತೆ ಸರ್ಕಾರವನ್ನು ಆಗ್ರಹಿಸುವ ನಿರ್ಣಯ ಅಂಗೀಕರಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Belagavi; ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಧ್ವಜದ ಮಾದರಿಯ ಪೆಂಡಾಲ್!
Shimoga; ಹಿಂದೂ ಭಾವನೆ ಮೇಲೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ವಿಜಯೇಂದ್ರ ಆಕ್ರೋಶ
Desi Swara: ಅಮೆರಿಕ ಕನ್ನಡತಿ ಕಲಾಶ್ರೀ, ನೃತ್ಯಗುರು ಸುಪ್ರಿಯಾ ದೇಸಾಯಿಗೆ ಸಮ್ಮಾನ
Shiruru; ನಾಪತ್ತೆಯಾಗಿದ್ದ ಕೇರಳದ ಅರ್ಜುನನ ಲಾರಿ ಪತ್ತೆ; ಈಶ್ವರ್ ಮಲ್ಪೆ ತಂಡದ ಕಾರ್ಯಾಚರಣೆ
World Rivers Day: ಸೆ.22 ವಿಶ್ವ ನದಿಗಳ ದಿನ- ನಿತ್ಯ ಬದುಕಿನ ಜೀವನಾಡಿಯ ಮೂಲ “ನದಿ’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.