ಎಸ್ಡಿಆರ್ಎಫ್ಗೆ ಬೇಕಿದೆ ಕರಾವಳಿಯಲ್ಲಿ ಸ್ವಂತ ಸೂರು
ಬಡಗ ಎಕ್ಕಾರಿನಲ್ಲಿ ಜಮೀನು; ನಿರ್ಮಾಣ ಆಗದ ಸ್ವಂತ ಕಟ್ಟಡ
Team Udayavani, Jun 9, 2024, 7:25 AM IST
ಮಂಗಳೂರು: ರಾಜ್ಯ ವಿಪತ್ತು ಸ್ಪಂದನ ಪಡೆ (ಎಸ್ಡಿಆರ್ಎಫ್)ಯ ರಾಜ್ಯದ ಎರಡನೇ ಕಂಪೆನಿ (ಬಿ-ಕಂಪೆನಿ)ಯು 2015 -16ನೇ ಸಾಲಿನಲ್ಲಿ ಮಂಗಳೂರಿಗೆ ಘೋಷಣೆ ಯಾಗಿ ಅಸ್ತಿತ್ವಕ್ಕೆ ಬಂದಿದೆ. ಪ್ರಸ್ತುತ 30 ಮಂದಿಯ ತಂಡ ಕರಾವಳಿಯನ್ನು ಕೇಂದ್ರೀಕರಿಸಿ ಮಳೆಗಾಲ ಹಾಗೂ ಇತರ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆಗಳನ್ನು ನಡೆಸುತ್ತಿದೆ. ಆದರೆ ಈ ತಂಡಕ್ಕೆ ಸ್ವಂತ ಸೂರು ಮಾತ್ರ ಇನ್ನೂ ಕನಸಾಗಿಯೇ ಉಳಿದಿದೆ.
ಮಂಗಳೂರು ತಾಲೂಕಿನ ಬಡಗ ಎಕ್ಕಾರು ಗ್ರಾಮದಲ್ಲಿ 10 ಎಕರೆ ಜಮೀನನ್ನು ರಾಜ್ಯ ವಿಪತ್ತು ಸ್ಪಂದನ ಪಡೆಯ ತರಬೇತಿ ಕೇಂದ್ರಕ್ಕಾಗಿ 2016ರಲ್ಲಿ ಮೀಸಲಿಡಲಾಗಿತ್ತು. ಆದರೆ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಪ್ರಕ್ರಿಯೆ ಮಾತ್ರ ಇನ್ನೂ ಆರಂಭವಾಗಿಲ್ಲ.
ಸಂಬಂಧ ಸರಕಾರಕ್ಕೆ ಪ್ರಸ್ತಾವನೆ ಈಗಾಗಲೇ ಸಲ್ಲಿಕೆಯಾಗಿದೆ. ಜಿಲ್ಲಾಡಳಿತದಿಂದ ಇನ್ನೊಂದು ಬಾರಿ ಪ್ರಸ್ತಾವನೆ ಸಲ್ಲಿಕೆಗೆ ಉದ್ದೇಶಿಸಲಾಗಿದೆ.
ಸದ್ಯ ಎಸ್ಡಿಆರ್ಎಫ್ ಪಡೆ ಮಂಗಳೂರಿನ ಪಾಂಡೇಶ್ವರದ ಅಗ್ನಿಶಾಮಕ ದಳದ ಕಚೇರಿಯಲ್ಲಿ ತಾತ್ಕಾಲಿಕವಾಗಿ ನೆಲೆಯಾಗಿದ್ದು, ಅಲ್ಲಿಂದಲೇ ಕಾರ್ಯಾಚರಣೆ ನಡೆಸುತ್ತಿದೆ.
ಪೂರ್ಣ ಪ್ರಮಾಣದಲ್ಲಿ ಸಿಬಂದಿಯೂ ಇಲ್ಲ
ಎಸ್ಡಿಆರ್ಎಫ್ನ ಒಂದು ಕಂಪೆನಿಗೆ ರಾಜ್ಯ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ)ಯ 55 ಮಂದಿ, ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ (ಕೆಎಸ್ಐಎಸ್ಎಫ್)ಯ 50, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಿಂದ 21 ಮಂದಿ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಒಬ್ಬ ವೈದ್ಯಕೀಯ ಅಧಿಕಾರಿ ಸಹಿತ ಒಟ್ಟು 127 ಮಂದಿ ಅಧಿಕಾರಿ, ಸಿಬಂದಿ ನಿಯೋಜನೆಗೊಳ್ಳಬೇಕು. ಆದರೆ ಮಂಗಳೂರಿನ ತಂಡದಲ್ಲಿರುವುದು 30 ಮಂದಿ ಮಾತ್ರ. ಎಸ್ಡಿಆರ್ಎಫ್ ರಚನೆಯಾದ ಆರಂಭದಲ್ಲಿ ನಿಯೋಜನೆಗೊಂಡಿದ್ದ ಮಾಜಿ ಸೈನಿಕರ ಗುತ್ತಿಗೆ ಅವಧಿ ಕೊನೆಗೊಂಡಿದೆ. ಗುತ್ತಿಗೆ ನವೀಕರಣ ಆಗದ ಹಿನ್ನೆಲೆಯಲ್ಲಿ ಅವರನ್ನು ಮತ್ತೆ ಕರ್ತವ್ಯಕ್ಕೆ ತೆಗೆದುಕೊಂಡಿಲ್ಲ. ಪ್ರಸ್ತುತ ಅಗ್ನಿಶಾಮಕ ದಳದ ಸಿಬಂದಿ ಮತ್ತು ಪೊಲೀಸ್ ಸಿಬಂದಿಯನ್ನು ಐದು ವರ್ಷಗಳ ಅವಧಿಗೆ ಕರ್ತವ್ಯಕ್ಕೆ ನಿಯೋಜನೆ ಮಾಡಿಕೊಳ್ಳಲಾಗಿದೆ.
ಮುಂಗಾರು ಎದುರಿಸಲು ಸಿದ್ಧತೆ
ಈ ಬಾರಿಯ ಮುಂಗಾರಿನ ಸಂಭಾವ್ಯ ಅಪಾಯವನ್ನು ಎದುರಿಸುವ ನಿಟ್ಟಿನಲ್ಲಿ ಎಸ್ಡಿಆರ್ಎಫ್ ಸಿಬಂದಿ ಈಗಾಗಲೇ ಸಜ್ಜಾಗಿದ್ದಾರೆ. ದ.ಕ. ಜಿಲ್ಲೆಯ ಸುಬ್ರಹ್ಮಣ್ಯ ಭಾಗದಲ್ಲಿ ಮತ್ತು ಉಡುಪಿ ಜಿಲ್ಲೆಯಿಂದ ಈ ಬಾರಿ ಎಸ್ಡಿಆರ್ಎಫ್ಗೆ ನಿಯೋಜನೆಗೆ ಸಂಬಂಧಿಸಿ ಸೂಚನೆ ಬರುವ ಸಾಧ್ಯತೆಯಿದೆ. ಪೊಲೀಸ್ ಮಹಾನಿರ್ದೇಶಕರ ಸೂಚನೆಯಂತೆ ಸಿಬಂದಿ ನಿಯೋಜಿಸಲಾಗುತ್ತದೆ. ಕಾರ್ಯಾಚರಣೆಗೆ ಬೇಕಾದ ಸಲಕರಣೆ, ವಾಹನಗಳನ್ನು ಸಿದ್ಧಪಡಿಸಿ ಕೊಳ್ಳಲಾಗಿದೆ. ತಂಡಕ್ಕೆ ಬೇಕಾದ ತರಬೇತಿಯನ್ನೂ ನಿರಂತರವಾಗಿ ನೀಡಲಾಗುತ್ತಿದೆ. ಬೋಟಿಂಗ್ ತರಬೇತಿ, ಉಪಕರಣಗಳ ಬಳಕೆಗೆ ಸಂಬಂಧಿಸಿದ ತರಬೇತಿ ನೀಡಲಾಗಿದೆ. ನುರಿತ ಅಗ್ನಿಶಾಮಕರು, ಚಾಲಕರು, ತಂತ್ರಜ್ಞರು, ಈಜು ಪಟುಗಳನ್ನು ತಂಡ ಒಳಗೊಂಡಿದೆ.
ಕಟೀಲು ಬಳಿಯ ಬಡಗ ಎಕ್ಕಾರು ಎಂಬಲ್ಲಿ ಎಸ್ಡಿಆರ್ಎಫ್ಗೆ 10 ಎಕರೆ ಭೂಮಿ ಈಗಾಗಲೇ ಮಂಜೂರಾಗಿದೆ. ಮುಂದಿನ ದಿನಗಳಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ಈಗಾಗಲೇ ರಾಜ್ಯ ಸರಕಾರಕ್ಕೆ ಒಂದು ಬಾರಿ ಪ್ರಸ್ತಾವನೆ ಕಳುಹಿಸಲಾಗಿದ್ದು, ಇನ್ನೊಂದು ಬಾರಿ ಪ್ರಸ್ತಾವನೆ ಕಳುಬಹಿಸಲು ಉದ್ದೇಶಿಸಲಾಗಿದೆ. ಸರಕಾರದಿಂದ ಶೀಘ್ರ ಅನುಮತಿ ದೊರೆಯಬೇಕಿದೆ.
– ಎಂ.ಎ. ಶರತ್, ಡೆಪ್ಯುಟಿ ಕಮಾಂಡೆಂಟ್, ಎಸ್ಡಿಆರ್ಎಫ್ ಬಿ. ಕಂಪೆನಿ, ಮಂಗಳೂರು
-ಭರತ್ ಶೆಟ್ಟಿಗಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು
Mangaluru: ಮುಕ್ತಿ ಕಾಣದ “ಬ್ಲ್ಯಾಕ್ಸ್ಪಾಟ್’ಗಳು: ಮತ್ತಷ್ಟು ಹೆಚ್ಚುತ್ತಿರುವ ಅಪಘಾತಗಳು
Airport: ಭದ್ರತೆಯಿಂದ ಜೂಲಿ ನಿವೃತ್ತಿ: 8 ವರ್ಷಗಳಿಂದ ಸೇವೆಯಲ್ಲಿದ್ದ ಶ್ವಾನ
Mangaluru: “ಜನಸಂಖ್ಯಾ ಲಾಭಾಂಶ’ ಸದ್ಬಳಕೆಯಾಗಲಿ: ನ್ಯಾ| ಅಬ್ದುಲ್ ನಜೀರ್
Gulf Medical University: ವಿದ್ಯಾರ್ಥಿಗಳ ಪ್ರತಿಜ್ಞಾ ವಿಧಿ ಸ್ವೀಕಾರ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Mangaluru: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ… ಅಪಾಯದಿಂದ ಪಾರಾದ ಪ್ರಯಾಣಿಕರು
SIT: ಶಾಸಕ ಮುನಿರತ್ನ ನಿವಾಸದ ಮೇಲೆ ಎಸ್ ಐಟಿ ತಂಡ ದಾಳಿ, ಸಾಕ್ಷ್ಯಾಧಾರಗಳ ಸಂಗ್ರಹ
ಭಾರತದಲ್ಲಿ ಪಾಕ್ ಸಿನಿಮಾ ದ ಲೆಜೆಂಡ್ ಆಫ್ ಮೌಲಾ ಜಟ್ ಪ್ರದರ್ಶನಕ್ಕೆ ಅವಕಾಶವಿಲ್ಲ: ಕೇಂದ್ರ
Shimoga; ನಿಮಗೊಂದು ಕಾನೂನು ನಮಗೊಂದು ಕಾನೂನು ಇದೆಯೇ..: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ
Hosur: ಟಾಟಾ ಎಲೆಕ್ಟ್ರಾನಿಕ್ಸ್ ಘಟಕದಲ್ಲಿ ಅಗ್ನಿ ಅವಘಡ… ಕೋಟ್ಯಂತರ ಮೌಲ್ಯದ ಸೊತ್ತು ನಾಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.