“ವಿದ್ಯಾ ನಗರಿ’ಯ ಕ್ಷೇತ್ರ- ಮಂಗಳೂರು (ಉಳ್ಳಾಲ)
Team Udayavani, Apr 19, 2018, 6:20 AM IST
ಮಂಗಳೂರು: ಮಂಗಳೂರು ವಿಧಾನ ಸಭಾ ಕ್ಷೇತ್ರವು ಮಂಗಳೂರು ತಾಲೂಕಿನ ದಕ್ಷಿಣ ಭಾಗ ಮತ್ತು ಬಂಟ್ವಾಳ ತಾಲೂಕಿನ ಪಶ್ಚಿಮ ಮತ್ತು ದಕ್ಷಿಣ ಭಾಗದ ಕೆಲವು ಪ್ರದೇಶಗಳನ್ನು ಒಳಗೊಂಡಿದೆ. ಈ ಹಿಂದೆ ಉಳ್ಳಾಲ ವಿಧಾನ ಸಭಾ ಕ್ಷೇತ್ರವಾಗಿದ್ದ ಇದು 2008ರಲ್ಲಿ ಕ್ಷೇತ್ರಗಳ ಪುನರ್ವಿಂಗಡಣೆಯಾದಾಗ ಮಂಗಳೂರು ವಿಧಾನಸಭಾ ಕ್ಷೇತ್ರ (ನಂ. 204) ಎಂದು ಪುನರ್ ನಾಮಕರಣಗೊಂಡಿತು.
ಈ ಹಿಂದಿನ ಉಳ್ಳಾಲ ಕ್ಷೇತ್ರದ ಕೆಲವು ಪ್ರದೇಶಗಳು ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದು, ಹಳೆಯ ವಿಟ್ಲ ಕ್ಷೇತ್ರದ ಕೆಲವು ಭಾಗಗಳು ಸೇರ್ಪಡೆಗೊಂಡು ವಿಸ್ತರಣೆಗೊಂಡಿತ್ತು. ಪ್ರಸ್ತುತ ಮಂಗಳೂರು ಕ್ಷೇತ್ರವು ಉಳ್ಳಾಲ ಪುರಸಭೆ, ಕೋಟೆಕಾರು ಪಟ್ಟಣ ಪಂಚಾಯತ್, ತಲಪಾಡಿ, ಕಿನ್ಯಾ, ಕೊಣಾಜೆ, ಮುಡಿಪು, ಇರಾ, ಕುರ್ನಾಡು, ಕೈರಂಗಳ, ಪಜೀರು, ನರಿಂಗಾನ, ಬಾಳೆಪುಣಿ, ಚೇಳೂರು,ಸಜಿಪನಡು, ಪಡು, ತುಂಬೆ, ಭಾಗಶಃ ಪಾಣೆಮಂಗಳೂರು ವಲಯ, ಮೇರಮಜಲು, ಕೊಡ್ಮಣ್ ಗ್ರಾಮ ವ್ಯಾಪ್ತಿಯನ್ನು ಹೊಂದಿದೆ.
ಮಂಗಳೂರು ವಿಶ್ವವಿದ್ಯಾನಿಲಯ, ನಿಟ್ಟೆ ಮತ್ತು ಯೇನಪೊಯ ವಿ.ವಿ. ಸಹಿತ ಅನೇಕ ಪ್ರಮುಖ ಶಿಕ್ಷಣ ಸಂಸ್ಥೆಗಳು ಈ ಕ್ಷೇತ್ರದಲ್ಲಿವೆ. 3 ಮೆಡಿಕಲ್ ಕಾಲೇಜುಗಳು, 2 ಡೆಂಟಲ್ ಕಾಲೇಜುಗಳು, 1 ಹೋಮಿಯೋ ಪತಿ ಮೆಡಿಕಲ್ ಕಾಲೇಜು, 2 ಎಂಜಿನಿಯರಿಂಗ್ ಕಾಲೇಜುಗಳು, ಪಾಲಿಟೆಕ್ನಿಕ್, ನರ್ಸಿಂಗ್,ಫಾರ್ಮಸಿ ಮತ್ತಿತರ ವೃತ್ತಿ ಶಿಕ್ಷಣ ಸಂಸ್ಥೆಗಳು ಇಲ್ಲಿದ್ದು, “ವಿದ್ಯಾನಗರಿ’ ಎನಿಸಿಕೊಂಡಿದೆ.
ಈವರೆಗಿನ 14 ಚುನಾವಣೆಗಳಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರಮ್ಯ ಮೆರೆದಿದೆ. 1957ರ ನಡೆದ ಮೊದಲ ಚುನಾವಣೆಯಲ್ಲಿ ಇಲ್ಲಿ ಕಾಂಗ್ರೆಸ್ ಜಯಗಳಿಸಿತ್ತು. ಆಗ ಕಾಂಗ್ರೆಸ್ನ ಗಜಾನನ ರಾವ್ ಪಂಡಿತ್ (20,332) ಅವರು ಸಿಪಿಐಯ ಬಿ.ವಿ. ಕಕ್ಕಿಲ್ಲಾಯ (14,526) ಅವರನ್ನು ಸೋಲಿಸಿದ್ದರು. 1962ರಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ಗೆದ್ದು ರಾಜ್ಯಾದ್ಯಂತ ಗಮನ ಸೆಳೆದಿತ್ತು. ಸಿಪಿಐ ಪಕ್ಷದ ಎ. ಕೃಷ್ಣ ಶೆಟ್ಟಿ (17,725) ಅವರು ಕಾಂಗ್ರೆಸ್ನ ಬಿ.ಎಂ. ಇದಿನಬ್ಬ (16,912) ಅವರನ್ನು ಸೋಲಿಸಿದ್ದರು. 1967ರ ಚುನಾವಣೆಯಲ್ಲಿ ಬಿ.ಎಂ. ಇದಿನಬ್ಬ (21,365) ಅವರು ಎ. ಕೃಷ್ಣ ಶೆಟ್ಟಿ (14,051) ಅವರನ್ನು ಪರಾಭವಗೊಳಿಸಿದ್ದರು. 1972ರಲ್ಲಿ ಕಾಂಗ್ರೆಸ್ನ ಯು.ಟಿ. ಫರೀದ್ (30,048) ಅವರು ಸಿಪಿಐಯ ಕೃಷ್ಣ ಶೆಟ್ಟಿ (14,383) ಅವರನ್ನು ಸೋಲಿಸಿದ್ದರು.
2018ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಿಪಿಐಎಂ ಅಭ್ಯರ್ಥಿ ಘೋಷಿಸಿವೆ. ಕಾಂಗ್ರೆಸ್ನಿಂದ ಪ್ರಸ್ತುತ ಸಚಿವರೂ ಆಗಿರುವ ಯು.ಟಿ. ಖಾದರ್ ಮರು ಆಯ್ಕೆ ಬಯಸಿದ್ದಾರೆ. ಸಿಪಿಐಎಂ ಪಕ್ಷದಿಂದ ನಿತಿನ್ ಕುತ್ತಾರ್ ಅವರು ಸ್ಪರ್ಧಿಸುತ್ತಿದ್ದು, ಚುನಾವಣಾ ಪ್ರಚಾರವನ್ನು ಈಗಾಗಲೇ ಆರಂಭಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಯಾರೆಂಬುದು ಇನ್ನೂ ನಿಗದಿಯಾಗಿಲ್ಲ. ಜೆಡಿಎಸ್ ಈ ಬಾರಿ ಮೈಕೊಡವಿ ನಿಂತಿದ್ದು, ಮಾಜಿ ಮೇಯರ್ ಕೆ. ಅಶ್ರಫ್ ಸ್ಪರ್ಧಾಕಾಂಕ್ಷಿಯಾಗಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಅಧಿಕ ಸಂಖ್ಯೆಯಲ್ಲಿದ್ದು, ಅವರ ಮತಗಳ ಮೇಲೆ ಎಲ್ಲರೂ ಕಣ್ಣಿಟ್ಟಿರುವುದರಿಂದ ಎಸ್ಡಿಪಿಐ ಕೂಡ ಇಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇದೆ.
ಕ್ಷೇತ್ರದ ವೈಶಿಷ್ಟ್ಯ
ಈ ವರೆಗಿನ 14 ಚುನಾವಣೆಗಳಲ್ಲಿ ನಾಲ್ಕು ಪಕ್ಷಗಳಿಗೆ ಪ್ರಾತಿನಿಧ್ಯ ದೊರೆತಿದೆ. ಕಾಂಗ್ರೆಸ್ ದಾಖಲೆಯ 11 ಬಾರಿ ಗೆದ್ದಿದೆ. ಸಿಪಿಐ, ಸಿಪಿಐಎಂ, ಬಿಜೆಪಿ ಒಂದೊಂದು ಬಾರಿ ಜಯಿಸಿವೆ. ಕಾಂಗ್ರೆಸ್ನ ಯು.ಟಿ. ಫರೀದ್4 ಬಾರಿ, ಬಿ.ಎಂ. ಇದಿನಬ್ಬ, ಯು.ಟಿ. ಖಾದರ್ ತಲಾ 3 ಬಾರಿ ಗೆದ್ದಿದ್ದಾರೆ.
58 ವರ್ಷಗಳ ಬಳಿಕ ಮೊದಲ ಬಾರಿ ಸಚಿವ ಸ್ಥಾನ
1957ರಿಂದ 2008ರ ವರೆಗೆ ನಡೆದ 13 ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಗೆದ್ದ ಯಾರಿಗೂ ಸಚಿವ ಸ್ಥಾನ ಲಭಿಸಿರಲಿಲ್ಲ. 2013ರ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ನ ಯು.ಟಿ. ಖಾದರ್ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಹಾಗೆ 58 ವರ್ಷಗಳ ಬಳಿಕ (1957ರಿಂದ) ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿತ್ತು.
ತಂದೆ ಬಳಿಕ ಮಗ
ತಂದೆ ಪ್ರತಿನಿಧಿಸಿದ ಕ್ಷೇತ್ರವನ್ನು ಬಳಿಕ ಮಗ ಕೂಡ ಪ್ರತಿನಿಧಿಸಿ ಸತತ ಮೂರು ಬಾರಿ ಗೆಲುವು ಸಾಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಕ್ಷೇತ್ರ ಮಂಗಳೂರು – ಉಳ್ಳಾಲ ವಿಧಾನಸಭಾ ಕ್ಷೇತ್ರ. ದಿ| ಯು.ಟಿ. ಫರೀದ್ ಅವರು ಈ ಕ್ಷೇತ್ರವನ್ನು 1972, 1978, 1999, 2004ರಲ್ಲಿ ಪ್ರತಿನಿಧಿಸಿ ಗೆದ್ದಿದ್ದರು. ಅವರ ನಿಧನದ ಬಳಿಕ ಅವರ ಪುತ್ರ ಯು.ಟಿ. ಖಾದರ್ ಈ ಕ್ಷೇತ್ರವನ್ನು 2007, 2008 ಮತ್ತು 2013 ರಲ್ಲಿ ಪ್ರತಿನಿಧಿಸಿ ಗೆದ್ದಿದ್ದಾರೆ. ಇದುವರೆಗೆ ನಡೆದ 14 ಚುನಾವಣೆಗಳಲ್ಲಿ ತಂದೆ ಮತ್ತು ಮಗ ಒಟ್ಟು 7 ಬಾರಿ ಗೆದ್ದಿದ್ದಾರೆ.
ಕ್ಷೇತ್ರದಿಂದ ವಿಜೇತರಾದವರು
1957-ಗಜಾನನ ಪಂಡಿತ್ (ಕಾಂಗ್ರೆಸ್)
1962-ಎ. ಕೃಷ್ಣ ಶೆಟ್ಟಿ (ಸಿಪಿಐ)
1967-ಬಿ.ಎಂ. ಇದಿನಬ್ಬ (ಕಾಂಗ್ರೆಸ್)
1972-ಯು.ಟಿ. ಫರೀದ್ (ಕಾಂಗ್ರೆಸ್)
1978-ಯು.ಟಿ. ಫರೀದ್ (ಕಾಂಗ್ರೆಸ್)
1983-ಪಿ. ರಾಮಚಂದ್ರ ರಾವ್ (ಸಿಪಿಐಎಂ)
1985-ಬಿ.ಎಂ. ಇದಿನಬ್ಬ (ಕಾಂಗ್ರೆಸ್)
1989-ಬಿ.ಎಂ. ಇದಿನಬ್ಬ (ಕಾಂಗ್ರೆಸ್)
1994-ಕೆ. ಜಯರಾಮ ಶೆಟ್ಟಿ (ಬಿಜೆಪಿ)
1999-ಯು.ಟಿ. ಫರೀದ್ (ಕಾಂಗ್ರೆಸ್)
2004-ಯು.ಟಿ. ಫರೀದ್ (ಕಾಂಗ್ರೆಸ್)
2007-ಯು.ಟಿ. ಖಾದರ್ (ಕಾಂಗ್ರೆಸ್) ಉಪ ಚುನಾವಣೆ
2008-ಯು.ಟಿ. ಖಾದರ್ (ಕಾಂಗ್ರೆಸ್)
2013-ಯು.ಟಿ. ಖಾದರ್ (ಕಾಂಗ್ರೆಸ್)
– ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.