![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jan 28, 2022, 6:48 AM IST
ಮಂಗಳೂರು: ಮನುಷ್ಯರಿಗೆ ನೀಡುವ ಕೊರೊನಾ ನಿರೋಧಕ ಲಸಿಕೆಯ ಅಭಿಯಾನ ಒಂದು ಕಡೆ ಮುಂದುವರಿಯುತ್ತಿದ್ದರೆ ಇದೀಗ ಜಾನುವಾರುಗಳಿಗೆ ಬರುವ ವಿವಿಧ ಕಾಯಿಲೆಗಳಿಗೆ ಲಸಿಕೆ ಹಾಕುವ ಅಭಿಯಾನ ಚಾಲ್ತಿಯಲ್ಲಿದೆ.
ಈಗಾಗಲೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದನ ಮತ್ತು ಎಮ್ಮೆಗಳಿಗೆ ಕಾಲು ಬಾಯಿ ಜ್ವರಕ್ಕೆ ಲಸಿಕೆ ಹಾಕುವ ಅಭಿಯಾನ ಮುಕ್ತಾಯಗೊಂಡಿದೆ. ಇದೀಗ ಮುಂದಿನ ಫೆಬ್ರವರಿಯಲ್ಲಿ ಹೆಣ್ಣು ಕರುಗಳಿಗೆ ಲಸಿಕೆ ಹಾಕುವ ಅಭಿಯಾನ ನಡೆಯಲಿದ್ದು, ಸಿದ್ಧತೆಗಳು ನಡೆಯುತ್ತಿವೆ.
2,40,659 ದನ, ಎಮ್ಮೆಗಳಿಗೆ ಲಸಿಕೆ
ದನ ಮತ್ತು ಎಮ್ಮೆಗಳಿಗೆ ಬರುವ ಕಾಲು ಬಾಯಿ ಜ್ವರ ರೋಗ ನಿಯಂತ್ರಿಸಲು 6 ತಿಂಗಳಿಗೊಮ್ಮೆ ಲಸಿಕೆ ನೀಡಲಾಗುತ್ತಿದೆ. ಅದರಂತೆ ಜಿಲ್ಲೆಯಲ್ಲಿ ಈ ವರ್ಷದ ಮೊದಲ ಸುತ್ತಿನ ಲಸಿಕೆ ನೀಡಿಕೆ ಈಗಾಗಲೇ ಪೂರ್ಣಗೊಂಡಿದೆ. ಒಟ್ಟು 2,39,714 ದನಗಳಿಗೆ ಮತ್ತು 936 ಎಮ್ಮೆಗಳಿಗೆ ನೀಡಲಾಗಿದೆ.
ಫೆ. 7- 15: ಕಂದು ರೋಗ ನಿರೋಧಕ ಲಸಿಕೆ
ಫೆಬ್ರವರಿ 7ರಿಂದ 15ರ ತನಕ ಬೂಸೆಲ್ಲೋಸಿಸ್ (ಕಂದು ರೋಗ ನಿರೋಧಕ) ಲಸಿಕೆಯನ್ನು 4ರಿಂದ 8 ತಿಂಗಳ ವಯೋಮಿತಿಯ ದನ ಮತ್ತು ಎಮ್ಮೆಗಳ ಹೆಣ್ಣು ಕರುಗಳಿಗೆ ನೀಡುವ ಅಭಿಯಾನ ಜಿಲ್ಲೆಯಲ್ಲಿ ನಡೆಯಲಿದೆ. ಪಶು ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವೈದ್ಯಕೀಯ ಸಿಬಂದಿ ರೈತರ ಮನೆ ಮನೆಗೆ ತೆರಳಿ ಉಚಿತವಾಗಿ ಈ ಲಸಿಕೆಯನ್ನು ನೀಡಲಿದ್ದಾರೆ.
ಲಸಿಕೆ ಏಕೆ?
ಹೆಣ್ಣು ಕರುಗಳು ಗರ್ಭ ಧಾರಣೆ ಮಾಡುವ ಸಂದರ್ಭದಲ್ಲಿ ಬರುವ ರೋಗಗಳನ್ನು ನಿಯಂತ್ರಿಸಲು ಈ ಲಸಿಕೆಯನ್ನು ನೀಡಲಾಗುತ್ತದೆ. ಕಂದು ರೋಗ ತಗಲಿದರೆ ಗರ್ಭ ಸ್ರಾವ, ಹಾಲು ಉತ್ಪತ್ತಿಯ ಮೇಲೆ ಪರಿಣಾಮ ಇತ್ಯಾದಿ ಸಮಸ್ಯೆಗಳು ಎದುರಾಗುತ್ತವೆ. ಕಂದು ರೋಗ ಪೀಡಿತ ದನ/ ಎಮ್ಮೆಗಳ ಹಾಲು ಸೇವನೆ ಮನುಷ್ಯನ ಮೇಲೂ ಪರಿಣಾಮ ಬೀರುತ್ತದೆ. ಹಾಗಾಗಿ ಕಡ್ಡಾಯವಾಗಿ ಈ ಲಸಿಕೆಯನ್ನು ನೀಡಲಾಗುತ್ತದೆ. ಲಸಿಕೆಯು ಜೀವನ ಪರ್ಯಂತ ರೋಗ ನಿರೋಧಕ ಶಕ್ತಿಯನ್ನು ಹೊಂದಿರುತ್ತದೆ.
ಮನುಷ್ಯರು ರೋಗ ನಿರೋಧಕ ಲಸಿಕೆಯನ್ನು ಆಸ್ಪತ್ರೆಗಳಿಗೆ ಹೋಗಿ ತೆಗೆದುಕೊಳ್ಳುತ್ತಾರೆ. ಆದರೆ ಪ್ರಾಣಿಗಳಿಗೆ ಅವು ಇರುವಲ್ಲಿಗೆ ತೆರಳಿ ನೀಡಬೇಕಾಗುತ್ತದೆ. ಇಲಾಖೆಯಲ್ಲಿ ಸಿಬಂದಿ ಕೊರತೆ ಇದ್ದರೂ ದನ/ ಎಮ್ಮೆ/ ಕರು ಮತ್ತಿತರ ಅ ಲಸಿಕೆಯನ್ನು ಕ್ಲಪ್ತ ಸಮಯದಲ್ಲಿ ಕೊಡಲಾಗುತ್ತದೆ. – ಡಾ| ಪ್ರಸನ್ನ ಕುಮಾರ್, ಉಪ ನಿರ್ದೇಶಕರು, ಪಶು ವೈದ್ಕಕೀಯ ಇಲಾಖೆ, ಮಂಗಳೂರು
You seem to have an Ad Blocker on.
To continue reading, please turn it off or whitelist Udayavani.