![1-dee](https://www.udayavani.com/wp-content/uploads/2025/02/1-dee-1-415x221.jpg)
![1-dee](https://www.udayavani.com/wp-content/uploads/2025/02/1-dee-1-415x221.jpg)
Team Udayavani, Apr 26, 2019, 1:28 PM IST
ಹುಬ್ಬಳ್ಳಿ: ರಂಗಭೂಮಿ ಚಟುವಟಿಕೆ ಚುರುಕು ಗೊಳಿಸಬೇಕೆಂಬ ಉದ್ದೇಶದಿಂದ ನಗರ ಹೊರವಲಯದ ರಾಯನಾಳ ಕೆರೆ ದಡದ ರಾಮಮನೋಹರ ಲೋಹಿಯಾ ನಗರದಲ್ಲಿ ರಂಗ ತರಬೇತಿ ಕೇಂದ್ರವೊಂದು ತಲೆ ಎತ್ತುತ್ತಿದೆ. ರಂಗಭೂಮಿ, ಚಲನಚಿತ್ರ ಹಾಗೂ ಧಾರವಾಹಿ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಹುಬ್ಬಳ್ಳಿಯ ಯಶವಂತ ಸರದೇಶಪಾಂಡೆ ‘ಆದಿರಂಗ ಥೇಟರ್’ ರೂಪಿಸುತ್ತಿದ್ದಾರೆ.
ಹು-ಧಾ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ 36 ಗುಂಟೆ ಸಿಎ ಜಮೀನಿನಲ್ಲಿ ರಂಗ ಸಾಂಸ್ಕೃತಿಕ ಕೇಂದ್ರ ತಲೆ ಎತ್ತಲಿದೆ. ಕಾಮಗಾರಿ ಭರದಿಂದ ಸಾಗಿದ್ದು, ಇನ್ನು 8 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಮುಂದಿನ ಹಂತದಲ್ಲಿ ಇದನ್ನು ಕಲಾಶಾಲೆಯನ್ನಾಗಿಸುವ ಗುರಿ ಹೊಂದಿದ್ದಾರೆ.
ಮೈಸೂರು ಹಾಗೂ ಧಾರವಾಡದಲ್ಲಿ ರಂಗ ಚಟುವಟಿಕೆಗಳ ಉತ್ತೇಜನಕ್ಕೆ ರಂಗಾಯಣವಿದೆ. ಆದರೆ ಹುಬ್ಬಳ್ಳಿಯಲ್ಲಿ ಅಂಥ ಸಂಸ್ಥೆಯಿಲ್ಲ. ಈ ಕೊರತೆ ನೀಗಿಸಲು ರಂಗಾಲಯ ರೂಪುಗೊಳ್ಳುತ್ತಿದೆ. ರಂಗ ವಾತಾವರಣ ಸೃಷ್ಟಿಸುವುದು, ರಂಗಭೂಮಿ ಕ್ರಿಯಾಶೀಲವಾಗಿಡುವ ಉದ್ದೇಶ ರಂಗಕೇಂದ್ರದ್ದಾಗಿದೆ. ಇದು ಕೇವಲ ರಂಗ ಚಟುವಟಿಕೆಗಳಿಗೆ ಮಾತ್ರ ಸೀಮಿತವಾಗಿಲ್ಲ. ಇಲ್ಲಿ ಧಾರಾವಾಹಿ, ಚಲನಚಿತ್ರದ ತರಬೇತಿಯನ್ನೂ ನೀಡಲಾಗುತ್ತದೆ.
ಹುಬ್ಬಳ್ಳಿಯಲ್ಲಿ ಕಲಾ ಮಂದಿರಗಳಿದ್ದರೂ ಅವು ಕೇವಲ ರಂಗಭೂಮಿಗೆ ಸೀಮಿತವಾಗಿಲ್ಲ. ನವೀಕರಣ ಕಾರಣಕ್ಕೆ 5 ವರ್ಷ ಸ್ಥಗಿತಗೊಂಡಿದ್ದ ಸವಾಯಿ ಗಂಧರ್ವ ಕಲಾ ಕೇಂದ್ರ ಈಗಷ್ಟೇ ಪುನರಾರಂಭಗೊಂಡಿದೆ. ಕನ್ನಡ ಭವನ ನವೀಕರಣ ಕಾರಣಕ್ಕೆ ಬಂದ್ ಆಗಿದೆ. ಸಾಂಸ್ಕೃತಿಕ ಭವನದಲ್ಲಿ ಧ್ವನಿವರ್ಧಕ ವ್ಯವಸ್ಥೆ ಸಮರ್ಪಕವಾಗಿಲ್ಲ. ಹುಬ್ಬಳ್ಳಿಯಲ್ಲಿ ರಂಗಾಸಕ್ತರು ಸಾಕಷ್ಟು ಸಂಖ್ಯೆಯಲ್ಲಿದ್ದರೂ ಅವರಿಗೆ ಅವಕಾಶ ಇಲ್ಲವಾಗಿದೆ. ಬೇಸಿಗೆ ಶಿಬಿರಗಳಲ್ಲಿ ನಟನೆಗೆ ಹೆಚ್ಚು ಉತ್ತೇಜನ ನೀಡುವುದಿಲ್ಲ. ಇದರಿಂದ ಪ್ರತಿಭೆಗಳಿಗೆ ಪ್ರೋತ್ಸಾಹ ಇಲ್ಲದಂತಾಗಿದೆ.
ಆದಿರಂಗ ಥೇಟರ್ ವಿಶೇಷತೆ: ಇಲ್ಲಿ 6 ವರ್ಷ ಮೀರಿದ ಎಲ್ಲರಿಗೂ ತರಬೇತಿ ನೀಡಲಾಗುತ್ತದೆ. ಡಿಪ್ಲೊಮಾ ಹಾಗೂ ಅಲ್ಪಾವಧಿ ಕೋರ್ಸ್ ಮಾಡಲಾಗುತ್ತದೆ. ಬೇಸಿಗೆ ಶಿಬಿರಗಳನ್ನು ಆಯೋಜಿಸಲಾಗುತ್ತದೆ. ರಂಗಾಭಿನಯ, ರಂಗನೃತ್ಯ, ರಂಗಕುಶಲತೆ, ರಂಗ ಸಂಗೀತ, ರಂಗ ಪ್ರಸ್ತುತಿ ತರಬೇತಿ ನೀಡಲಾಗುತ್ತದೆ. ಇಲ್ಲಿ ಶಾಲೆ-ಕಾಲೇಜುಗಳ ವಾರ್ಷಿಕೋತ್ಸವಗಳನ್ನು ಆಯೋಜಿಸಬಹುದಾಗಿದೆ.
ಉಪಾಹಾರ ಗೃಹ ಮಾಡಲಾಗುತ್ತಿದ್ದು, ಚಿಕ್ಕದಾದ ನಟರಾಜ ಮಂದಿರ ನಿರ್ಮಿಸಲಾಗುವುದು. ಸದ್ಯಕ್ಕೆ ರಂಗಕೇಂದ್ರ ಮಾಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಬಯಲು ರಂಗಮಂದಿರ ( ಓಪನ್ ಏರ್ ಥೇಟರ್) ನಿರ್ಮಿಸುವ ಉದ್ದೇಶವಿದೆ. ಕೆರೆ ದಡದಲ್ಲಿ ಕುಳಿತು ನಾಟಕಗಳನ್ನು ವೀಕ್ಷಿಸುವ ಮಜಾನೇ ಬೇರೆ. ಸುಮಾರು 3 ಕೋಟಿ ರೂ. ವೆಚ್ಚದಲ್ಲಿ ರಂಗ ಮಂದಿರ, ರಂಗ ತರಬೇತಿ ಶಾಲೆ ನಿರ್ಮಿಸಲಾಗುತ್ತಿದ್ದು, ಕೇಂದ್ರ ಅಥವಾ ರಾಜ್ಯ ಸರಕಾರದಿಂದ ಅನುದಾನ ಪಡೆದುಕೊಳ್ಳಲಾಗುವುದು ಎಂದು ಯಶವಂತ ಸರದೇಶಪಾಂಡೆ ಹೇಳುತ್ತಾರೆ.
ಕಟ್ಟಡ ಕಾಮಗಾರಿ ಪೂರ್ಣಗೊಂಡ ನಂತರ ಆರಂಭದಲ್ಲಿ ಗುರು ಸಂಸ್ಥೆಯ ವತಿಯಿಂದ ‘ಆಲ್ ದಿ ಬೆಸ್ಟ್’, ‘ರಾಶಿಚಕ್ರ’, ‘ಸಹಿ ರೀ ಸಹಿ’ ಮೊದಲಾದ ನಾಟಕಗಳನ್ನು ವಾರಾಂತ್ಯದಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಮುಂದೆ ರಂಗಶಂಕರ ಮಾದರಿಯಂತೆ ವಾರಾಂತ್ಯದಲ್ಲಿ ನಿರಂತರ ನಾಟಕಗಳನ್ನು ಸಂಘಟಿಸಲಾಗುವುದು. ಕೇವಲ ಗುರು ಸಂಸ್ಥೆ ಮಾತ್ರವಲ್ಲ, ಬೇರೆ ರಂಗ ಸಂಸ್ಥೆಗಳಿಗೂ ಇಲ್ಲಿ ನಾಟಕ ಸಿದ್ಧಪಡಿಸಲು, ಪ್ರದರ್ಶಿಸಲು ಅವಕಾಶ ಸಿಗಲಿದೆ.
ರಂಗಾಲಯವನ್ನು ಪರಿಪೂರ್ಣ ರಂಗ ಕೇಂದ್ರವ ನ್ನಾಗಿಸುವ ಯೋಜನೆಯಿದೆ. ಹಲವು ಕನಸುಗಳೊಂದಿಗೆ, ಉದ್ದೇಶಗಳೊಂದಿಗೆ ರಂಗಕೇಂದ್ರ ಆರಂಭಿಸುವ ಮೂಲಕ ತವರೂರು ಹುಬ್ಬಳ್ಳಿಗೆ ಕೊಡುಗೆ ನೀಡಲು ಮುಂದಾದ ಯಶವಂತ ಸರದೇಶಪಾಂಡೆ ಅವರಿಗೆ ರಂಗಪ್ರೇಮಿಗಳು ‘ಆಲ್ ದಿ ಬೆಸ್ಟ್’ ಹೇಳಬೇಕಿದೆ.
Train: ರೈಲು ಢಿಕ್ಕಿ ತಡೆಯಲು ಉಪಕ್ರಮ: ನೈಋತ್ಯ ರೈಲ್ವೇಗೆ ಮೊದಲ ಬಾರಿ “ಕವಚ’
ಮೂವರು ಲೇಖಕಿಯರಿಗೆ ಕವಿಸಂ ಮಾತೃಶ್ರೀ ರತ್ನಮ್ಮ ಹೆಗ್ಗಡೆ ಮಹಿಳಾ ಗ್ರಂಥ ಬಹುಮಾನಕ್ಕೆ ಆಯ್ಕೆ
Dharwad: ಪಂ.ಮನಸೂರ ಸಂಗೀತ ಪಾಠ ಶಾಲೆ ಮತ್ತೆ ಆರಂಭ; ಜಿಲ್ಲಾಧಿಕಾರಿ ದಿವ್ಯ ಪ್ರಭು
Hubli: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89.99 ಲಕ್ಷ ರೂ ಪೊಲೀಸ್ ವಶಕ್ಕೆ
ED summons: ಸಿದ್ದರಾಮಯ್ಯ ಪತ್ನಿ ಪಾರ್ವತಿ, ಬೈರತಿ ಸುರೇಶಗೆ ತಾತ್ಕಾಲಿಕ ರಿಲೀಫ್
You seem to have an Ad Blocker on.
To continue reading, please turn it off or whitelist Udayavani.