Hassan ಹಾಸನಾಂಬೆ ದರ್ಶನಕ್ಕೆ ಇಂದು ಕೊನೇ ದಿನ
Team Udayavani, Nov 14, 2023, 7:30 AM IST
ಹಾಸನ: ಶ್ರೀ ಹಾಸನಾಂಬೆಯ ಈ ವರ್ಷದ ದರ್ಶನಕ್ಕೆ ಮಂಗಳವಾರ ಕೊನೆಯ ದಿನ. ಬುಧವಾರ ಮಧ್ಯಾಹ್ನ 12 ಗಂಟೆಗೆ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ. ಹಾಗಾಗಿ ಮಂಗಳವಾರ 24 ಗಂಟೆಯೂ ದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಸೋಮವಾರ ಬೆಳಗ್ಗೆ ಭಕ್ತರ ಸಂಖ್ಯೆ ಕಡಿಮೆ ಇತ್ತು. ಆದರೆ ಮಧ್ಯಾಹ್ನದ ವೇಳೆಗೆ ದೇವಾಲಯದತ್ತ ಭಕ್ತರ ಮಹಾಪೂರವೇ ಹರಿದು ಬಂದಿತು. ಆದರೆ ನೂಕು ನುಗ್ಗಲಿಲ್ಲದೆ ಭಕ್ತರು ಸರಾಗವಾಗಿ ದೇವಿಯ ದರ್ಶನ ಪಡೆದರು. ಗುರುವಾರ ಮತ್ತು ಶುಕ್ರವಾರ ಭಕ್ತರ ನಿಯಂತ್ರಣ ಸಾಧ್ಯವಾಗದೆ ಅವ್ಯವಸ್ಥೆಯಾಗಿದ್ದ ಹಿನ್ನೆಲೆಯಲ್ಲಿ ಭಾನುವಾರ ಮತ್ತು ಸೋಮವಾರ ಜಿಲ್ಲಾಡಳಿತ ದೇವಿಯ ದರ್ಶನಕ್ಕೆ ಸುವ್ಯವಸ್ಥೆ ಮಾಡಲಾಗಿತ್ತು.
ಹಾಗಾಗಿ ಭಕ್ತರು ಶಾಂತಿಯುತವಾಗಿ ಸರದಿ ಸಾಲಿನಲ್ಲಿ ಸಾಗಿ ದೇವಿ ದರ್ಶನ ಪಡೆದರು. ಮಂಗಳವಾರ ದೀಪಾವಳಿ ದಿನವಾದ್ದರಿಂದ ಭಕ್ತರು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಸೂಕ್ತ ಬಿಗಿ ಭದ್ರತೆ ಮಾಡಿಕೊಂಡಿದೆ.
ಭಕ್ತರ ಸಂಖ್ಯೆ, ಆದಾಯದ ಹೊಸ ದಾಖಲೆ: ಈ ಬಾರಿ ಹಾಸನಾಂಬೆ ಜಾತ್ರಾ ಮಹೋತ್ಸವದಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಇದೇ ಮೊದಲ ಬಾರಿಗೆ 10 ಲಕ್ಷಕ್ಕೂ ಹೆಚ್ಚಿನ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದರೆ, ದೇವಾಲಯಕ್ಕೆ ಈ ವರ್ಷ 8 ಕೋಟಿ ರೂ.ವರೆಗೂ ಆದಾಯ ಬರುವ ನಿರೀಕ್ಷೆಯಿದೆ. ಸೋಮವಾರ ಮಧ್ಯಾಹ್ನ 2 ಗಂಟೆವರೆಗೆ ನೇರ ದರ್ಶನದ ಟಿಕೆಟ್ಗಳ ಮಾರಾಟ ಮತ್ತು ಲಾಡು ಪ್ರಸಾದದ ಮಾರಾಟದಿಂದಲೇ 5.52 ಕೋಟಿ ರೂ. ಯಷ್ಟು ಆದಾಯ ಬರುತ್ತಿದೆ. ಇನ್ನು ಹುಂಡಿ ಕಾಣಿಕೆ ಸೇರಿದರೆ ಆದಾಯ 8 ಕೋಟಿ ರೂ. ದಾಟುವ ಅಂದಾಜಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.