![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jul 19, 2019, 12:15 PM IST
ಬೇತಮಂಗಲ ಬಳಿಯ ಕ್ಯಾಸಂಬಳ್ಳಿ ಗ್ರಾಮದಲ್ಲಿರುವ ಗ್ರಂಥಾಲಯ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು ಬೀಗ ಹಾಕಲಾಗಿದೆ.
ಬೇತಮಂಗಲ: ಸರ್ಕಾರಗಳು ಶಿಕ್ಷಣಕ್ಕಾಗಿ ಅನುದಾನಗಳ ಜತೆಗೆ ಪ್ರೋತ್ಸಾಹವನ್ನೂ ನೀಡುತ್ತಿವೆ. ಆದರೆ, ಇಲ್ಲಿನ ಗ್ರಂಥಾಲಯ ತದ್ವಿರುದ್ಧ. ಪ್ರಥಮ ಮುಖ್ಯಮಂತ್ರಿ ಹುಟ್ಟೂರಲ್ಲೇ ಇಂತಹ ಸ್ಥಿತಿ ಕಂಡು ಓದುಗರು ಬೇಸರ ಪಟ್ಟುಕೊಳ್ಳುತ್ತಿದ್ದಾರೆ.
ಆತಂಕ: ಪಟ್ಟಣದ ಸಮೀಪದ ಕ್ಯಾಸಂಬಳ್ಳಿ ಗ್ರಾಮದಲ್ಲಿ ಸುಮಾರು ದಶಕದಿಂದ ಶಿಥಿಲಗೊಂಡ ಕಟ್ಟಡದಲ್ಲೇ ಗ್ರಂಥಾಲಯ ನಡೆಯುತ್ತಿತ್ತು. ಆದರೆ, ಇತ್ತೀಚೆಗೆ ಬಾರಿ ಬಿರುಗಾಳಿ, ಮಳೆಗೆ ಹೆಂಚಿನ ಶೀಟುಗಳು ಜಖಂಗೊಂಡು ಮಳೆ ನೀರು ಕೊಠಡಿಯೊಳಕ್ಕೆ ಬರುತ್ತಿದೆ. ಯಾವುದೇ ಸಮಯದಲ್ಲಾದರೂ ಅವಘಡ ಸಂಭವಿಸುವುದರಿಂದ ಕಟ್ಟಡದ ಬಾಗಿಲಿಗೆ ಬೀಗ ಜಡಿಯಲಾಗಿದೆ. ಅಲ್ಲದೇ, ಗ್ರಂಥಪಾಲಕರು ಮತ್ತು ಓದುಗರು ಕಟ್ಟಡದ ಬಳಿ ಸುಳಿಯಲೂ ಹಿಂದೇಟು ಹಾಕುವಂತಾಗಿದೆ.
ಓದುಗರು ಬೇಸರ: ರಾಜ್ಯದ ಪ್ರಥಮ ಮುಖ್ಯಮಂತ್ರಿ ಕೆ.ಸಿ.ರೆಡ್ಡಿ ಜನಿಸಿದ ಈ ಗ್ರಾಮದಲ್ಲೇ ಮೂಲ ಸೌಲಭ್ಯಗಳ ಕೊರತೆಯುಂಟಾಗಿದೆ. ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಲ್ಲದೆ, ಹಿರಿಯರು, ಸಾಹಿತಿಗಳು, ಉನ್ನತ ವಿದ್ಯಾಭ್ಯಾಸ ಮಾಡುವ ವಿದ್ಯಾರ್ಥಿಗಳು, ದಿನಪತ್ರಿಕೆ, ವಾರ ಪತ್ರಿಕೆ, ವಿವಿಧ ಪುಸ್ತಕ, ಸ್ಫರ್ಧಾತ್ಮಕ ಪುಸ್ತಕಗಳನ್ನು ಓದಿ ತಿಳಿದುಕೊಳ್ಳುತ್ತಿದ್ದರು. ಆದರೆ, ಇತ್ತೀಚೆಗೆ ಗ್ರಂಥಾಲಯ ಕಟ್ಟಡ ಶಿಥಿಲಗೊಂಡಿದ್ದು ಪ್ರಾಣ ಭೀತಿಯುಂಟಾಗಿದೆ.
ಸಮುದಾಯ ಭವನ ಆಶ್ರಯ: ಗ್ರಂಥಾಲಯ ಕಟ್ಟಡ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿರುವುದನ್ನು ಮನಗೊಂಡ ಗ್ರಂಥಪಾಲಕಿ ಸುನೀತಾ, ಪಕ್ಕದಲ್ಲೇ ಇರುವ ಸಮುದಾಯ ಭವನಕ್ಕೆ ಇಲ್ಲಿರುವ ಪುಸ್ತಕ ಮತ್ತು ಇತರೆ ವಸ್ತುಗಳನ್ನು ರವಾನಿಸಿ ಕೆಲಸ ಮಾಡುತ್ತಿದ್ದಾರೆ. ಆದರೆ ಇಲ್ಲಿ ಅವಶ್ಯಕ ಸ್ಥಳವಿಲ್ಲದೆ ಮೂಲಸೌಲಭ್ಯವಿಲ್ಲದೆ ಓದುಗರ ಸಂಖ್ಯೆ ಕಡಿಮೆಯಾಗಿದೆ. ಈ ಭವನದಲ್ಲಿ ಕುಳಿತುಕೊಳ್ಳುವಷ್ಟು ಸ್ಥಳಾವಕಾಶ ಇಲ್ಲದೆ ಪ್ರತಿನಿತ್ಯ ಪರದಾಡುವಂತಾಗಿದೆ. ಅಲ್ಲದೇ, ಪುಸ್ತಕಗಳಿಗೆ ಯಾವುದೇ ಭದ್ರತೆಯೂ ಇಲ್ಲದಂತಾಗಿದೆ.
ಭರವಸೆ ಹುಸಿ: ಶಾಸಕಿ ಎಂ.ರೂಪಕಲಾ ಅವರು ಗ್ರಾಮಕ್ಕೆ ಗ್ರಾಮ ವೀಕ್ಷಣೆ ವೇಳೆ 3 ತಿಂಗಳೊಳಗೆ ನೂತನ ಕಟ್ಟಡ ನಿರ್ಮಿಸಿ ಕೊಡುತ್ತೇನೆ ಎಂಬ ಭರವಸೆ ನೀಡಿದ್ದರು. ಆದರೆ, ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಸ್ಥಳೀಯ ವಾರ್ಡ್ ನಿವಾಸಿಗಳು ದೂರಿದ್ದಾರೆ.
ವರ್ಷ ಕಳೆದರೂ ಸ್ವತಂಃ ಕೊಠಡಿ ಇಲ್ಲ: ಜಿಲ್ಲಾ ಗ್ರಂಥಾಲಯ ಅಧಿಕಾರಿಗಳು ಗ್ರಂಥಾಲಯದ ಕೊಠಡಿ ಸಮಸ್ಯೆ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ನೂತನ ಕೊಠಡಿ ನಿರ್ಮಾಣ ಮಾಡಿ ನೀಡುವ ವೇಳೆಗೆ 1 ವರ್ಷ ಪೂರ್ಣಗೊಳ್ಳುತ್ತದೆ. ಆದರೆ ಅದುವರೆಗೂ ಗ್ರಂಥಾಲಯವನ್ನು ಸುಗಮವಾಗಿ ನಡೆಸಲು ಅನಾನುಕೂಲವಾಗಿದೆ. ಶಾಸಕರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಶೀಘ್ರವಾಗಿ ಇತ್ತ ಕಡೆ ಗಮನಹರಿಸಬೇಕೆಂದು ವಿದ್ಯಾರ್ಥಿಗಳು ಮತ್ತು ಉನ್ನತ ಕೋರ್ಸ್ ಪಡೆಯುವ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
● ಆರ್.ಪುರುಷೋತ್ತಮರೆಡ್ಡಿ
You seem to have an Ad Blocker on.
To continue reading, please turn it off or whitelist Udayavani.