Tipatur: ಬಿಸಿಲಿನ ತಾಪಮಾನಕ್ಕೆ ತಿಪಟೂರು ಜನ ಹೈರಾಣ
Team Udayavani, Apr 5, 2024, 4:17 PM IST
ತಿಪಟೂರು: ಬಿಸಿಲ ಬೇಗೆಗೆ ತತ್ತರಿಸಿದ ಜನ-ಜಾನುವಾರು. ಮನೆಯಿಂದ ಹೊರ ಬಾರದ ವಯೋವೃದ್ಧರು, ಮಕ್ಕಳು. ಸೆಕೆಗೆ ನಿದ್ದೆ ಬಾರದೇ ರಾತ್ರಿಯೆಲ್ಲ ಜಾಗರಣೆ ಮಾಡುವ ನಾಗರಿಕರು. ಕೆಲಸ ಮಾಡಿಸಿಕೊಳ್ಳಲು ಕಚೇರಿಗಳಿಗೆ ಕಾಲಿಡದ ರೈತರು…
ಹೌದು, ಇದೆಲ್ಲಾ ರಣ ಬಿಸಿಲಿನ ಎಫೆಕ್ಟ್. ಜಿಲ್ಲೆ ಮಾತ್ರ ವಲ್ಲದೇ ತಿಪಟೂರು ತಾಲೂಕಿನಲ್ಲಿ ಬಿಸಿಲಿನ ಬೇಗೆಗೆ ಜನ ನಲುಗಿ ಹೋಗಿದ್ದಾರೆ. ಮನೆಯಿಂದ ಹೊರ ಬರಲೂ ಹತ್ತಾರು ಬಾರಿ ಯೋಚಿಸುವಂತಾಗಿದೆ.
ಸುಡುತ್ತಿರುವ ಬಿಸಿಲ ಬೇಗೆ: ತಿಪಟೂರಿನಲ್ಲಿ ಬಿಸಿಲಿನ ತಾಪಮಾನ 34 ಡಿಗ್ರಿಗಿಂತಲೂ ಹೆಚ್ಚಿದೆ. ವಯಸ್ಸಾದವರು, ಮಹಿಳೆಯರು ರಣ ಬಿಸಲನ್ನು ತಾಳಲಾರದೆ ಯಾವುದೇ ಕೆಲಸ ಕಾರ್ಯಗಳಿಗೂ ಹೋಗಲಾರದೆ ಮನೆಯಲ್ಲಿಯೇ ಕೂರುವಂತಾಗಿದೆ.ಇನ್ನು ರೈತರು ಹೊಲ, ತೋಟಗಳಲ್ಲಿ ಕೆಲಸ ಮಾಡಲಾರದಷ್ಟು ಬಿಸಿಲ ಬೇಗೆ ಹೆಚ್ಚಾಗಿದೆ.
ಹೆಚ್ಚಿದ ಬೇಡಿಕೆ: ಬಿಸಿಲ ತಾಪಮಾನಕ್ಕೆ ಜನ ಆಹಾರ ಕಡಿಮೆ ಮಾಡಿದ್ದು, ನೀರು, ಮಜ್ಜಿಗೆ, ತಂಪು ಪಾನೀಯ, ಐಸ್ಕ್ರೀಂ, ಹಣ್ಣುಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಜ್ಯೂಸ್ ಅಂಗಡಿಯವರಿಗೆ, ಹಣ್ಣಿನ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರ ಆಗುತ್ತಿದೆ. ಎಳೆನೀರು, ಕಬೂìಜಾ, ಕಬ್ಬಿನಹಾಲು, ಕಲ್ಲಂಗಡಿ ಹಣ್ಣುಗಳ ಅಂಗಡಿ ಕಂಡರಂತೂ ಜನ ದಾಹ ತೀರಿಸಿಕೊಳ್ಳುತ್ತಿದ್ದಾರೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು, ಬೆಲೆ ಏರಿಕೆ ಮಾಡಿ ಜನರಿಗೆ ಬರೆ ಹಾಕುತ್ತಿದ್ದಾರೆ.
ಸೆಕೆ: ಬಿಸಿಲ ಝಳಕ್ಕೆ ಸೆಕೆ ಹೆಚ್ಚಾಗಿದ್ದು ಮಧ್ಯಾಹ್ನದ ಸಮಯದಲ್ಲಿ ಮನೆಯೊಳಗೆ ಇರಲೂ ಆಗುತ್ತಿಲ್ಲ. ಗಾಳಿಯೂ ಬೀಸುತ್ತಿಲ್ಲವಾದ್ದರಿಂದ ರಾತ್ರಿ ವೇಳೆಯಂತೂ ಫ್ಯಾನ್ ಇಲ್ಲದೆ ನಿದ್ದೆ ಬರುವುದಿಲ್ಲ. ಫ್ಯಾನ್ ಬೀಸುತ್ತಿದ್ದರೂ ಬಿಸಿ ಗಾಳಿಯೇ ಬರುತ್ತಿರುತ್ತದೆ. ಬಿಸಿಲ ಬೇಗೆಗೆ ಬೆವರು ಹೆಚ್ಚಾಗುತ್ತಿದ್ದು ಜನ ಹೈರಾಣಾಗಿದ್ದಾರೆ.
ಇನ್ನು ವಯಸ್ಸಾದವರು, ಮಹಿಳೆಯರು, ಅನಾರೋಗ್ಯಕ್ಕೀಡಾಗಿರುವವರು, ಚಿಕ್ಕ ಚಿಕ್ಕ ಮಕ್ಕಳಂತೂ ವಿಪರೀತ ಸೆಕೆಗೆ ಸುಸ್ತಾಗಿದ್ದಾರೆ. ಕುಡಿಯುವ ನೀರೂ ಬಿಸಿ ನೀರಿನಂತಾಗಿದ್ದು ನೀರು ಕುಡಿದರೂ ದಾಹ ತೀರುತ್ತಿಲ್ಲ. ಜನರಷ್ಟೇ ಬಿಸಿಲಿಗೆ ನಲುಗುತ್ತಿಲ್ಲ. ಜಾನುವಾರು, ಪ್ರಾಣಿ-ಪಕ್ಷಿಗಳು, ಕುರಿ-ಮೇಕೆ, ನಾಯಿಗಳೂ ವಿಪರೀತ ತಾಪಮಾನ ತಡೆದುಕೊಳ್ಳಲಾಗದೆ ಮರಗಳ ನೆರಳಲ್ಲಿ ಆಶ್ರಯ ಪಡೆಯಲು ಮುಂದಾಗುತ್ತಿವೆ. ಹಾಗೆಯೇ ರಣ ಬಿಸಿಲಿನ ಬೇಗೆ ತಗ್ಗಿ ಮಳೆರಾಯನ ಕೃಪೆ ಯಾವಾಗ ಆಗುವುದೋ ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಜನರಿಲ್ಲದೇ ಮಾರುಕಟ್ಟೆಗಳಲ್ಲಿ ವ್ಯಾಪಾರ ಕುಸಿತ :
ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳಿಗೆ ಜನ ಹೋಗಬೇಕೆಂದರೆ ಸುಡು ಬಿಸಿಲಿನಲ್ಲಿ ಹೇಗಪ್ಪಾ ಹೋಗುವುದು ಎಂದು ಚಿಂತಿಸುವಂತಾಗಿದೆ. ದೈನಂದಿನ ಕೆಲಸ ಮಾಡಲೇಬೇಕಾದ ಅನಿವಾರ್ಯತೆ ಇರುವ ಕಾರಣ ಜನ ಛತ್ರಿ, ಟೋಪಿಗಳ ಮೊರೆ ಹೋಗಿದ್ದಾರೆ. ಬಿಸಿಲ ಬೇಗೆಗೆ ತರಕಾರಿಗಳು ಮಧ್ಯಾಹ್ನದ ವೇಳೆಗೆಲ್ಲಾ ಬಾಡಿ ಹೋಗುತ್ತಿವೆ. ಹಣ್ಣು, ತರಕಾರಿಗಳನ್ನು ರಕ್ಷಣೆ ಮಾಡಿಕೊಳ್ಳುವುದಾದರೂ ಹೇಗಪ್ಪ ಎಂದು ವ್ಯಾಪಾರಸ್ಥರೂ ಚಿಂತೆಗೀಡಾಗಿದ್ದಾರೆ. ಬಿಸಿಲ ಹೊಡೆತಕ್ಕೆ ಸಂತೆ, ತರಕಾರಿ ಮಾರುಕಟ್ಟೆ, ಬಟ್ಟೆ ಅಂಗಡಿ ಸೇರಿದಂತೆ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗುತ್ತಿವೆ. ಯುಗಾದಿ ಹಬ್ಬ ಸಮೀಪವಿದ್ದರೂ ಜನ ತಮ್ಮ ಅಗತ್ಯ ವಸ್ತು ಖರೀದಿಸಲು ಬಿಸಿಲ ಭಯಕ್ಕೆ ಮನೆಯಿಂದ ಹೊರಗೆ ಬರುತ್ತಿಲ್ಲ. ಇದರಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಜನದಟ್ಟಣೆ ಕಡಿಮೆಯಿದ್ದು ಮಧ್ಯಾಹ್ನ ಸಮಯದಲ್ಲಂತೂ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.