![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 13, 2019, 4:18 AM IST
ಕಾರ್ಕಳ: ರಾಜ್ಯದ ಪ್ರತಿ ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲೂ ಜನೌಷಧ ಕೇಂದ್ರ ತೆರೆಯುವ ಚಿಂತನೆ ಇದೆ ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿದರು. ಅವರು ಮಂಗಳವಾರ ಕಾರ್ಕಳ ತಾಲೂಕು ಸರಕಾರಿ ಸಾರ್ವಜನಿಕ ಆಸ್ಪತ್ರೆ ಲೋಕಾರ್ಪಣೆಗೊಳಿಸಿ ಸಭಾ ಕಾರ್ಯಕ್ರಮ ದಲ್ಲಿ ಮಾತನಾಡಿದರು. ರಾಜ್ಯದ ಜನತೆಗೆ ಅತ್ಯುತ್ತಮ ಆರೋಗ್ಯ ಸೇವೆ ಒದಗಬೇಕು ಎನ್ನುವ ಉದ್ದೇಶದಿಂದ ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಸರಿಸಮನಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.
ಎರಡು ತಿಂಗಳಲ್ಲಿ ಹುದ್ದೆ ಭರ್ತಿ
ವೈದ್ಯರು, ಆರೋಗ್ಯ ಸಹಾಯಕಿಯರು ಸೇರಿದಂತೆ ಖಾಲಿ ಇರುವ ಹುದ್ದೆಗಳನ್ನು ಎರಡು ತಿಂಗಳೊಳಗಾಗಿ ಭರ್ತಿ ಮಾಡುವ, ಆರೋಗ್ಯ ಇಲಾಖೆಯಲ್ಲಿರುವ ಅರೆಕಾಲಿಕ ನೌಕರರನ್ನೂ ಕೆಲವು ಮಾನದಂಡಗಳ ಆಧಾರದಲ್ಲಿ ಖಾಯಂಗೊಳಿಸುವ ಯೋಚನೆಯೂ ಇದೆ ಎಂದರು.
ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೂ ಶ್ರಮ
ಆರೋಗ್ಯ ಸುಧಾರಣೆಯಲ್ಲಿ ಆಶಾ ಕಾರ್ಯಕರ್ತೆಯರ ಶ್ರಮ ಅಪಾರವಾದುದು. ಪ್ರಸ್ತುತ ಅವರಿಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಒಟ್ಟು 6,500 ರೂ. ಗೌರವಧನ ನೀಡಲಾಗುತ್ತಿದೆ. ಅವರ ಶ್ರಮಕ್ಕೆ ತಿಂಗಳಿಗೆ ಕನಿಷ್ಠ 10 ಸಾವಿರ ರೂ. ಗೌರವಧನ ಪಾವತಿಯಾಗಬೇಕು. ಗೌರವಧನ ಹೆಚ್ಚಳ ನಿಟ್ಟಿನಲ್ಲಿ ಮುಖ್ಯಮಂತ್ರಿ ಜತೆಗೆ ಮಾತನಾಡಿದ್ದೇನೆ ಎಂದರು.
ಪೊಲೀಸ್ ನಿಯೋಜನೆ
ವೈದ್ಯರ ಮೇಲೆ ಹಲ್ಲೆ ತಪ್ಪು. ಮುಂದಿನ ದಿನಗಳಲ್ಲಿ ಎಲ್ಲ ಸರಕಾರಿ ಆಸ್ಪತ್ರೆಗಳಿಗೆ ಪೊಲೀಸ್ ನಿಯೋಜನೆ ಮತ್ತು ಸಿಸಿಟಿವಿ ಅಳವಡಿಸಲಾಗುವುದು ಎಂದು ಸಚಿವರು ತಿಳಿಸಿದರು.
ಕಾರ್ಕಳಕ್ಕೆ ತಾಯಿ ಮತ್ತು ಮಕ್ಕಳ ಆಸ್ಪತ್ರೆ
ರಾಜ್ಯದಲ್ಲಿ ಒಟ್ಟು 8 ತಾಯಿ ಮತ್ತು ಮಕ್ಕಳ ವಿಶೇಷ ಆಸ್ಪತ್ರೆ ತೆರೆಯುವ ಉದ್ದೇಶ ಸರಕಾರಕ್ಕಿದ್ದು, ಕಾರ್ಕಳಕ್ಕೊಂದು ಆಸ್ಪತ್ರೆ ಮಂಜೂರು ಮಾಡಲಾಗುವುದು ಎಂದರು. ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿದರು. ಶಾಸಕ ವಿ. ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸಿಇಒ ಪ್ರೀತಿ ಗೆಹಲೋಟ್, ಆರೋಗ್ಯ ಇಲಾಖೆ ವಿಭಾಗೀಯ ಸಹನಿರ್ದೇಶಕಿ ಡಾ| ಪುಷ್ಪಲತಾ, ಆರೋಗ್ಯ ಮತ್ತು ಶಿಕ್ಷಣ ಸ್ಥಾಯೀ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಜಿ.ಪಂ. ಸದಸ್ಯರಾದ ಸುಮಿತ್ ಶೆಟ್ಟಿ ಕೌಡೂರು, ಉದಯ ಎಸ್. ಕೋಟ್ಯಾನ್, ರೇಷ್ಮಾ ಉದಯ ಶೆಟ್ಟಿ, ದಿವ್ಯಶ್ರೀ ಅಮೀನ್, ಜ್ಯೋತಿ ಹರೀಶ್, ಎಂಸಿಎಫ್ ಡೆಪ್ಯೂಟಿ ಮ್ಯಾನೇಜರ್ ಕೀರ್ತನ್ ಕೆ.ಬಿ., ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಶೈಲೇಂದ್ರ ರಾವ್ ವೇದಿಕೆಯಲ್ಲಿದ್ದರು.
ಜಿಲ್ಲಾ ಆರೋಗ್ಯಾಧಿಕಾರಿ ಡಾ| ಅಶೋಕ್ ಎಚ್. ಸ್ವಾಗತಿಸಿ, ಶಿಕ್ಷಕ ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ವೈದ್ಯಾಧಿಕಾರಿ ಡಾ| ಕೃಷ್ಣಾನಂದ ಶೆಟ್ಟಿ ವಂದಿಸಿದರು.
You seem to have an Ad Blocker on.
To continue reading, please turn it off or whitelist Udayavani.