ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ದುರವಸ್ಥೆ; ರಸ್ತೆ ಗುಂಡಿ ಸರಿಪಡಿಸುವಂತೆ ನಾಗರಿಕರ ಆಗ್ರಹ
Team Udayavani, Jul 26, 2023, 9:38 AM IST
ಶಿರ್ವ: ಲೋಕೋಪಯೋಗಿ ಇಲಾಖೆಯ ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿಯ ಬಂಟಕಲ್ಲು ತಾಂತ್ರಿಕ ಕಾಲೇಜಿನ ಬಳಿ ಮತ್ತು ಶಿರ್ವ ಗ್ರಾ.ಪಂ. ವ್ಯಾಪ್ತಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಸಮೀಪದ ಜೋಡು ಪೆಜತ್ತಕಟ್ಟೆಯ ಕಾಂಕ್ರೀಟ್ ರಸ್ತೆ ಬಳಿ ಮುಖ್ಯ ರಸ್ತೆ ಹಾಳಾಗಿ ಹೊಂಡ ಬಿದ್ದು ನೀರು ತುಂಬಿ ಮಳೆ ಬರುವಾಗ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಜೋಡು ಪೆಜತ್ತಕಟ್ಟೆಯ ಬಳಿ ಕಾಂಕ್ರೀಟ್ ರಸ್ತೆ ಹೊಸದಾಗಿ ನಿರ್ಮಾಣಗೊಂಡಿದ್ದು,ಅದರ ಬಳಿ ಚರಂಡಿ ಸಮರ್ಪಕವಿಲ್ಲದೆ ಮಳೆ ನೀರು ಡಾಮಾರು ರಸ್ತೆಯಲ್ಲಿಯೇ ಹರಿದು ಡೊಡ್ಡ ಗುಂಡಿಗಳಾಗಿವೆ. ರಾತ್ರಿವೇಳೆ ಮಳೆ ಬಂದಾಗ ದ್ವಿಚಕ್ರ ವಾಹನ ಸವಾರರಿಗೆ ಗುಂಡಿಯ ಅರಿವಾಗದೆ ಅಪಘಾತ ಸಂಭವಿಸುತ್ತಿರುತ್ತದೆ. ಮುಖ್ಯರಸ್ತೆ ಯಾಗಿರುವುದರಿಂದ ವೇಗವಾಗಿ ಚಲಿಸುವ ವಾಹನ ಸವಾರರು ರಸ್ತೆಗುಂಡಿಗಳಿಂದಾಗಿ ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ಹೆಚ್ಚಿದೆ. ಘನ ವಾಹನಗಳು ಎದುರಾದಾಗ ಗುಂಡಿ ತಪ್ಪಿಸುವ ಭರದಲ್ಲಿ ಹೆಚ್ಚಿನ ಅಪಘಾತ ಸಂಭವಿಸುವ ಸಾಧ್ಯತೆ ಇದೆ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಜೋಡು ಪೆಜತ್ತಕಟ್ಟೆಯ ಕಾಂಕ್ರೀಟ್ ರಸ್ತೆಯ ಬಳಿ ಗುತ್ತಿಗೆದಾರರು ಗುಂಡಿಗಳಿಗೆ ಜಲ್ಲಿ ಹಾಕಿದ್ದರೂ ಮಳೆಗೆ ಕೊಚ್ಚಿ ಹೋಗಿದೆ. ಕೆಲ ಸಂಘಟನೆಗಳ ಕಾರ್ಯಕರ್ತರು ಬಂಟಕಲ್ಲು ತಾಂತ್ರಿಕ ಕಾಲೇಜಿನ ಬಳಿಯ ರಸ್ತೆಯ ಗುಂಡಿಗಳನ್ನು ಮುಚ್ಚಿ ತಾತ್ಕಾಲಿಕವಾಗಿ ಸರಿಪಡಿಸಿದ್ದರೂ,ಸುರಿಯುತ್ತಿರುವ ಭಾರೀ ಮಳೆಗೆ ಮತ್ತೆ ಗುಂಡಿ ಬಿದ್ದು ಹಾಳಾಗಿದೆ. ಘನವಾಹನಗಳು ಚಲಿಸುವಾಗ ಪಾದಚಾರಿಗಳು ಮತ್ತು ದ್ವಿಚಕ್ರವಾಹನ ಸವಾರರ ಮೇಲೆ ಹೊಂಡದಲ್ಲಿ ತುಂಬಿದ ಕೆಸರು ನೀರಿನ ಸಿಂಚನವಾಗುತ್ತಿದೆ.
ದಿನವೊಂದಕ್ಕೆ ರಸ್ತೆಯಲ್ಲಿ ಸಾವಿರಾರು ವಾಹನಗಳು,ವಿದ್ಯಾರ್ಥಿಗಳು ಸಂಚರಿಸುತ್ತಿದ್ದು ,ರಸ್ತೆಗುಂಡಿಗಳಿಂದ ವಾಹನ ಸವಾರರಿಗೆ ಕಂಟಕಪ್ರಾಯವಾಗಿ ಪರಿಣಮಿಸಿದೆ. ಹೆಚ್ಚಿನ ಅವಘಡ ಸಂಭವಿಸುವ ಮುನ್ನ ಜನಪ್ರತಿನಿಧಿಗಳು, ಅಧಿಕಾರಿಗಳು ಎಚ್ಚೆತ್ತುಗೊಂಡು ವಾಹನ ನಿಬಿಡತೆಯಿಂದ ಕೂಡಿರುವ ಈ ಪ್ರದೇಶದ ರಾಜ್ಯ ಹೆದ್ದಾರಿಯ ಬಗ್ಗೆ ಗಮನ ಹರಿಸಿ ರಸ್ತೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕೆಂಬುದು ನಾಗರಿಕರ ಆಗ್ರಹಿಸುತ್ತಿದ್ದಾರೆ.
ಅಪಾಯಕಾರಿ ಹೊಂಡಗಳು:
ಮಳೆ ನೀರು ಸರಿಯಾಗಿ ಹರಿದು ಹೋಗದೆ ರಸ್ತೆಯಲ್ಲಿಯೇ ಹರಿಯುತ್ತಿದ್ದು ಗುಂಡಿಗಳಾಗಿದೆ. ಮಳೆ ಬರುವಾಗ ಗುಂಡಿಗಳಲ್ಲಿ ನೀರು ತುಂಬಿಕೊಂಡಿದ್ದು ತಪ್ಪಿಸುವ ಭರದಲ್ಲಿ ಆಯತಪ್ಪಿ ದ್ವಿಚಕ್ರವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಧಿಕಾರಿಗಳು, ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸಬೇಕಾಗಿದೆ. –ಗಿರಿಧರ ಪ್ರಭು, ವಾಹನ ಸವಾರ.
-ಸತೀಶ್ಚಂದ್ರ ಶೆಟ್ಟಿ, ಶಿರ್ವ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.