![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Jan 3, 2024, 6:20 AM IST
ಉಡುಪಿ: ಜಿಲ್ಲೆಯಲ್ಲಿ ಇ-ಶ್ರಮ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ರಾಜ್ಯದಲ್ಲಿ ಉಡುಪಿ ಜಿಲ್ಲೆ 24ನೇ ಸ್ಥಾನದಲ್ಲಿದೆ. ಉಚಿತವಾಗಿ ನೋಂದಣಿ ಮಾಡಲಾಗುತ್ತಿದೆಯಾದರೂ ಕಾರ್ಮಿಕರು ಆಸಕ್ತಿ ತೋರುತ್ತಿಲ್ಲ.
ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಬಳಿಗೆ ಹೋಗಿ ನೋಂದಣಿ ಮಾಡಿಸಿಕೊಳ್ಳಿ ಎಂದು ವಿನಂತಿಸಿದರೂ ಬರುತ್ತಿಲ್ಲ ಎನ್ನುವುದು ಅಧಿಕಾರಿಗಳ ದೂರು. ಇದರಲ್ಲಿ ನೋಂದಣಿ ಮಾಡಿಸಿಕೊಂಡರೆ ಸಾಮಾಜಿಕ ಭದ್ರತೆ ಹಾಗೂ ಸರಕಾರದ ಕಲ್ಯಾಣ ಯೋಜನೆಯ ಲಾಭ ಪಡೆಯಬಹುದು. ಒಂದು ವರ್ಷದ ಅವಧಿಗೆ ಪ್ರಧಾನ ಮಂತ್ರಿ ಸುರಕ್ಷಾ ವಿಮಾ ಯೋಜನೆ ಪ್ರಯೋಜನ ಪಡೆಯಬಹುದು. ಅಪಘಾತದಿಂದ ಮರಣ ಹೊಂದಿದಲ್ಲಿ ಅಥವಾ ಶಾಶ್ವತವಾಗಿ ವೈಕಲ್ಯ ಹೊಂದಿದಲ್ಲಿ 2 ಲ.ರೂ. ಹಾಗೂ ಭಾಗಶಃ ಅಂಗವೈಕಲ್ಯಕ್ಕೆ 1 ಲ.ರೂ. ಪರಿಹಾರ ಸಿಗಲಿದೆ.
ಬೆಳಗಾವಿ ಪ್ರಥಮ
ರಾಜ್ಯದ 31 ಜಿಲ್ಲೆಗಳಲ್ಲಿ ಡಿ. 21ರ ವರೆಗೆ ಅಸಂಘಟಿತ ವಲಯದ 78,53,103 ಜನರು ನೋಂದಣಿ ಮಾಡಿದ್ದಾರೆ. ಬೆಳಗಾವಿ ಜಿಲ್ಲೆ ಪ್ರಥಮ (2,78,762) ಸ್ಥಾನದಲ್ಲಿದ್ದು, ಬಳ್ಳಾರಿ ದ್ವಿತೀಯ (4,02,277), ಮೈಸೂರು ತೃತೀಯ (3,86,397) ಸ್ಥಾನದಲ್ಲಿದೆ. ಬೆಂಗಳೂರು ನಗರ (3,56,559) ಐದನೇ ಸ್ಥಾನ, ಬೆಂಗಳೂರು ಗ್ರಾಮಾಂತರ (1,58,495) 27ನೇ ಸ್ಥಾನದಲ್ಲಿದೆ. ಕರಾವಳಿ ಜಿಲ್ಲೆಗಳಾದ ದ.ಕ. (2,29,624) 17ನೇ ಸ್ಥಾನ, ಉಡುಪಿ (1,88,493) 24ನೇ ಸ್ಥಾನ ಹಾಗೂ ಉ.ಕ. (2,53,060) 14ನೇ ಸ್ಥಾನದಲ್ಲಿದೆ. ವಿಜಯನಗರ ಜಿಲ್ಲೆ ಕೊನೆಯ (37,508) ಸ್ಥಾನದಲ್ಲಿದೆ.
ಏನಿದು ಇ-ಶ್ರಮ್?
ರಾಷ್ಟ್ರೀಯ ಅಂಕಿ-ಅಂಶಗಳ ಕಚೇರಿ (ಎನ್ಎಸ್ಒ) 2017-18ನೇ ಸಾಲಿನಲ್ಲಿ ನಡೆಸಿದ ಸಮೀಕ್ಷೆಯಂತೆ ದೇಶದಲ್ಲಿ ಅಂದಾಜು 38 ಕೋಟಿ ಕಾರ್ಮಿಕರು ಅಸಂಘಟಿತ ವರ್ಗಗಳಲ್ಲಿ ತೊಡಗಿಕೊಂಡಿದ್ದು, ಇವರ ಕೇಂದ್ರೀಕೃತ ದತ್ತಾಂಶ ಲಭ್ಯವಿಲ್ಲ. ಇದರಿಂದಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ವಲಸೆ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವರ್ಗಗಳಿಗೆ ಸಂಬಂಧಿತ ಸಮಸ್ಯೆ ನಿವಾರಿಸಲು ಆಗುತ್ತಿಲ್ಲ. ಹೀಗಾಗಿ ಅವರೆಲ್ಲರ ಸಮಗ್ರ ದತ್ತಾಂಶ ಸಂಗ್ರಹಿಸಿ ಅವರಿಗೆ ಸಾವåಾಜಿಕ ಭದ್ರತಾ ಯೋಜನೆ ವಿಸ್ತರಿಸಲು ಕಾರ್ಮಿಕರ ರಾಷ್ಟ್ರೀಯ ಸಮಗ್ರ ದತ್ತಾಂಶ ಸಿದ್ಧಪಡಿಸಲು ಕ್ರಮ ಕೈಗೊಂಡಿದೆ. ಅದುವೇ ಇ-ಶ್ರಮ್ ನೋಂದಣಿ ಅಭಿಯಾನ ಎನ್ನುತ್ತಾರೆ ಅಧಿಕಾರಿಗಳು.
ಕಾರ್ಮಿಕ ಇಲಾಖೆಯ ಕಚೇರಿ ಅಥವಾ ವಿವಿಧೆಡೆ ನಡೆಸಲಾಗುವ ಶಿಬಿರಗಳಿಗೆ ಆಗಮಿಸಿ ಉಚಿತವಾಗಿ ನೋಂದಣಿ ಮಾಡಬಹುದು. ಸೂಕ್ತ ದಾಖಲೆಗಳನ್ನು ನೀಡುವುದು ಕಡ್ಡಾಯ. ಇದರಿಂದ ಸರಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗಲಿದೆ.
– ಕುಮಾರ್ ಬಿ.ಆರ್., ಜಿಲ್ಲಾ ಕಾರ್ಮಿಕ ಅಧಿಕಾರಿ
You seem to have an Ad Blocker on.
To continue reading, please turn it off or whitelist Udayavani.