![1-sidda](https://www.udayavani.com/wp-content/uploads/2025/02/1-sidda-415x281.jpg)
![1-sidda](https://www.udayavani.com/wp-content/uploads/2025/02/1-sidda-415x281.jpg)
Team Udayavani, May 20, 2022, 11:46 AM IST
ಉಡುಪಿ: ತಂಬಾಕು ನಿಯಂತ್ರಿಸುವ ಉದ್ದೇಶಕ್ಕಾಗಿ ಜಿಲ್ಲಾ ಸರ್ವೇಕ್ಷಣ ಘಟಕ ಮಹತ್ತರ ಕ್ರಮಕ್ಕೆ ಮುಂದಾಗಿದೆ. ವಿದ್ಯಾರ್ಥಿಗಳೇ ಹೆಚ್ಚಿರುವ ಮಣಿಪಾಲದ ಆಸುಪಾಸು ತಂಬಾಕು ವ್ಯಸನ ನಿಯಂತ್ರಣಕ್ಕೆ ಮಾನಿಟರಿಂಗ್ ಸ್ಕ್ವ್ಯಾಡ್ ನಿರ್ಮಿಸುವ ಬಗ್ಗೆ ಆರೋಗ್ಯ ಇಲಾಖೆ ಮೂಲಕ ಚಿಂತನೆ ನಡೆಯುತ್ತಿದೆ.
ಸ್ಕ್ವ್ಯಾಡ್ ನಿರ್ಮಾಣ ಸಂಬಂಧ ಈಗಾಗಲೇ ಕೆಎಂಸಿಯವರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಲಾಗಿದೆ.
ತಂಬಾಕು ವ್ಯಸನಕ್ಕೆ ಕಡಿವಾಣ
ದೇಶ-ವಿದೇಶ ಸಹಿತ ವಿವಿಧ ಊರುಗಳಿಂದ ವಿದ್ಯಾರ್ಥಿಗಳು ಮಣಿಪಾಲಕ್ಕೆ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದಾರೆ. ಮಣಿಪಾಲ ಆಸುಪಾಸು ಹಲವಾರು ಅಂಗಡಿಗಳಲ್ಲಿ ತಂಬಾಕು ವಸ್ತುಗಳು ಮಾರಾಟವಾಗುತ್ತಿರುವ ದೂರುಗಳೂ ಕೇಳಿಬರುತ್ತಿವೆ. ಈ ಬಗ್ಗೆ ಆರೋಗ್ಯ ಇಲಾಖೆ ನಿಗಾ ಇಟ್ಟಿದ್ದು, ಇದನ್ನು ನಿಯಂತ್ರಿಸುವ ಉದ್ದೇಶದಿಂದ ಹಲವಾರು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ.
ಹುಕ್ಕಾ ಬಾರ್ಗಳ ಮೇಲೆ ನಿಗಾ
ಪಬ್ಗಳು, ಹುಕ್ಕಾಬಾರ್ಗಳ ಮೇಲೆ ನಿಗಾ ಇರಿಸ ಲಾಗಿದ್ದು, ತಂಬಾಕು ಉತ್ಪನ್ನ ಕಂಡುಬಂದರೆ ಸ್ಕ್ವ್ಯಾಡ್ಗಳ ಮೂಲಕ ತೆರಳಿ ದಂಡ ವಿಧಿಸುವ ಪ್ರಕ್ರಿಯೆಯೂ ನಡೆಯಲಿದೆ. ವಿದ್ಯಾರ್ಥಿಗಳನ್ನೇ ಗುರಿಯಾಗಿರಿಸಿಕೊಂಡು ಈ ವ್ಯಸನ ಚಟುವಟಿಕೆ ನಡೆಯುತ್ತಿದ್ದು, ಇದನ್ನು ನಿಯಂತ್ರಿ ಸುವ ಉದ್ದೇಶವನ್ನು ಆರೋಗ್ಯ ಇಲಾಖೆ ಹೊಂದಿದೆ.
ಜಾಗೃತಿ ಚಟುವಟಿಕೆ
ತಂಬಾಕು ವ್ಯಸನ ನಿಯಂತ್ರಿಸುವ ಸಲುವಾಗಿ ಜಿಲ್ಲಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಎಲ್ಲ ಇಲಾಖೆ, ಶಾಲಾ ಕಾಲೇಜುಗಳಲ್ಲಿ ಹಂತಹಂತವಾಗಿ ಮಾಹಿತಿ ನೀಡಿ ದುಷ್ಪರಿಣಾಮದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಅಂಗಡಿ- ಮುಂಗಟ್ಟುಗಳಿಗೆ ನಿಯಮಿತವಾಗಿ ದಾಳಿ ನಡೆಸಿ ದಂಡ ಹಾಕುವ ಕೆಲಸವನ್ನೂ ಮಾಡಲಾಗುತ್ತಿದೆ. ಪರವಾನಿಗೆ ರಹಿತವಾಗಿ ತಂಬಾಕು, ಬೀಡಿ, ಸಿಗರೇಟ್ ಮಾರಾಟ ಮಾಡುವವರ ಮೇಲೆ ಕೋಟ್ಟಾ ಕಾಯ್ದೆಯಡಿ ಪ್ರಕರಣ ದಾಖಲಿಸುವ ಕೆಲಸವೂ ಆರೋಗ್ಯ ಇಲಾಖೆಯಿಂದ ಜಿಲ್ಲಾದ್ಯಂತ ನಡೆಯುತ್ತಿದೆ.
ಕೆಎಂಸಿ ಮುಖ್ಯಸ್ಥರೊಂದಿಗೆ ಸಭೆ
ಮಣಿಪಾಲ ಆಸುಪಾಸು ಪ್ರದೇಶಗಳಲ್ಲಿ ತಂಬಾಕು ವ್ಯಸನ ನಿಯಂತ್ರಿಸುವ ಬಗ್ಗೆ ಮಾನಿಟರಿಂಗ್ ಸ್ಕ್ವ್ಯಾಡ್ನಿರ್ಮಿಸುವ ಬಗ್ಗೆ ಆರೋಗ್ಯ ಇಲಾಖೆ ಮೂಲಕ ಕೆಎಂಸಿ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದೆ. ನಿರ್ಮಾಣದ ಬಗ್ಗೆ ಚಿಂತನೆ ಇದ್ದು, ಶೀಘ್ರದಲ್ಲಿ ಈ ಬಗ್ಗೆ ತಿಳಿಸಲಾಗುವುದು. -ಡಾ| ನಾಗರತ್ನಾ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ, ಉಡುಪಿ
You seem to have an Ad Blocker on.
To continue reading, please turn it off or whitelist Udayavani.