![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Aug 12, 2021, 4:20 AM IST
ಕಾಪು: ಹಲವು ರಾಜ್ಯಗಳ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಮತ್ತು ಕೊಂಕಣ ರೈಲ್ವೇ ಮಾರ್ಗಗಳ ನಡುವೆಯೇ ಇದ್ದರೂ, ಬೆಳಪು ಗ್ರಾಮದ ಪಣಿಯೂರು (ಪಡುಬಿದ್ರಿ) ರೈಲ್ವೇ ನಿಲ್ದಾಣದ ಬಳಿಯ ಪಡುಬೈಲು ತೋಟ ಪರಿಸರದ ಜನತೆ ಮಾತ್ರ ಮೂಲ ಸೌಕರ್ಯಗಳ ಸೌಲಭ್ಯಗಳಿಲ್ಲದೆ ಪರದಾಡುತ್ತಿದ್ದಾರೆ. ಇಂದಿನ ಆಧುನಿಕ ಯುಗದಲ್ಲೂ ರಸ್ತೆ, ನೀರು, ಸಂಪರ್ಕದ ವ್ಯವಸ್ಥೆಯಿಂದ ದೂರವೇ ಉಳಿದಿರುವ ಈ ಭಾಗದಲ್ಲಿ ಕೇಬಲ್ ಕನೆಕ್ಷನ್ ಮತ್ತು ಬಿಎಸ್ಸೆನ್ನೆಲ್ ಲೈನ್ ಮರೀಚಿಕೆಯಾಗಿದೆ.
ಬೆಳಪು ಗ್ರಾಮದ ಪಣಿಯೂರು ರೈಲ್ವೇ ನಿಲ್ದಾಣ ಸಮೀಪದಲ್ಲಿ ಇರುವ ಪಡುಬೈಲು ತೋಟ ಪರಿಸರದಲ್ಲಿ ವಾಸಿಸುತ್ತಿರುವ 13 ಕುಟುಂಬಗಳ ಪರಿಸ್ಥಿತಿ ದಯನೀಯವಾಗಿದ್ದು, ರೈಲ್ವೇ ಮಾರ್ಗ ನಿರ್ಮಾಣಗೊಂಡು 3 ದಶಕಗಳು ಕಳೆದರೂ ಸಮಸ್ಯೆ ಮಾತ್ರ ಹಾಗೆಯೇ ಉಳಿದಿದೆ. ಬೈಲು ತೋಟದ ಪೂರ್ವಕ್ಕೆ ಕೊಂಕಣ ರೈಲ್ವೇ ಮಾರ್ಗ, ಪಶ್ಚಿಮಕ್ಕೆ ಬೆಳಪು – ಉಚ್ಚಿಲ ಸಂಪರ್ಕ ರಸ್ತೆ, ದಕ್ಷಿಣಕ್ಕೆ ಪಣಿಯೂರು-ಉಚ್ಚಿಲ ರಸ್ತೆ, ಉತ್ತರಕ್ಕೆ ಬೆಳಪು-ಮೂಳೂರು ಸಂಪರ್ಕ ರಸ್ತೆಗಳಿದ್ದರೂ ಬೆಳಪು ಗ್ರಾಮದ ಪಣಿಯೂರು ಪಡುಬೈಲು ತೋಟದ ನಿವಾಸಿಗಳ ಜೀವನ ದ್ವೀಪದೊಳಗಿನ ಜೀವನದಂತಾಗಿದೆ.
ಕೊಂಕಣ ರೈಲ್ವೇ ಮಾರ್ಗ ನಿರ್ಮಾಣ ಕಾಲದಲ್ಲಿ ಇಲಾಖೆ ಈ ಭಾಗದಲ್ಲಿ ಮೇಲ್ಸೇತುವೆ ನಿರ್ಮಿಸುವುದಾಗಿ ಭರವಸೆ ನೀಡಿದೆಯಾದರೂ, ರೈಲ್ವೇ ಮಾರ್ಗ ರಚನೆಯಾಗಿ 3 ದಶಕಗಳು ಕಳೆದರೂ ಅವರು ನೀಡಿದ ಆಶ್ವಾಸನೆ ಈಡೇರಿಲ್ಲ. ಕೊಂಕಣ ರೈಲ್ವೇ ಇಲಾಖೆಯು ಮೇಲ್ಸೇತುವೆ ನಿರ್ಮಿಸಿ ಕೊಟ್ಟಲ್ಲಿ ಉಳಿದ ವ್ಯವಸ್ಥೆಗಳನ್ನು ಜೋಡಿಸಿ ಕೊಡಲು ಗ್ರಾ.ಪಂ. ಸಿದ್ಧವಾಗಿದೆ. ಇವೆಲ್ಲವೂ ಖಾಸಗಿ ಕೃಷಿ ಭೂಮಿ ಆಗಿರುವುದರಿಂದ ಅವರು ಗ್ರಾ.ಪಂ.ನೊಂದಿಗೆ ಕೈ ಜೋಡಿಸಿದಲ್ಲಿ ಪರ್ಯಾಯ ರಸ್ತೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುವುದು ಎಂದು ಬೆಳಪು ಗ್ರಾ.ಪಂ. ಸದಸ್ಯ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.
ಸಮಸ್ಯೆಗಳೇನು? :
ಕೃತಕ ನೆರೆಯ ಭೀತಿ :
ಬೆಳಪು ಗ್ರಾಮದಲ್ಲಿ ಹಾದು ಹೋಗಿರುವ ಕೊಂಕಣ ರೈಲ್ವೇ ಮಾರ್ಗ ಮತ್ತು ರೈಲ್ವೇ ನಿಲ್ದಾಣದ ರಚನೆಗಾಗಿ ಕೃಷಿ ಭೂಮಿಯನ್ನು ಬಿಟ್ಟು ಕೊಟ್ಟಿರುವ ಸ್ಥಳೀಯರ ಬೇಡಿಕೆಗೆ ಇಲಾಖೆ ಸ್ವಲ್ಪವೂ ಸ್ಪಂದಿಸುತ್ತಿಲ್ಲ. ಇಲ್ಲಿ ಕ್ರಾಸಿಂಗ್ ರಸ್ತೆ / ಅಂಡರ್ ಪಾಸ್ / ಮೇಲ್ಸೇತುವೆ ನಿರ್ಮಿಸಿ ಕೊಡುವುದಾಗಿ ಇಲಾಖೆಯು 1990ರಲ್ಲೇ ಭರವಸೆ ನೀಡಿತ್ತಾದರೂ ಅದು ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ. ಅಲ್ಲದೆ ಮಳೆಗಾಲದಲ್ಲಿ ಕೃತಕ ನೆರೆಯ ಭೀತಿ ಎದುರಾಗುತ್ತಿದೆ. ಕೃಷಿ ಭೂಮಿಯೂ ನಾಶವಾಗುತ್ತಿದೆ.–ರವೀಂದ್ರ ಪೂಜಾರಿ, ಬೈಲುತೋಟ
ಪ್ರಸ್ತಾವನೆ ಬಂದಿಲ್ಲ : ಪಡುಬಿದ್ರಿ (ಪಣಿಯೂರು) ರೈಲ್ವೇ ನಿಲ್ದಾಣದ ಮುಂಭಾಗದಲ್ಲಿ ಇರುವ ಮನೆಗಳಲ್ಲಿ ವಾಸಿಸುತ್ತಿರುವ ಜನರಿಗೆ ನಡೆದಾಡಲು ತೊಂದರೆಯಾಗುತ್ತಿರುವ ಬಗ್ಗೆ ಮತ್ತು ಮೂಲ ಸೌಕರ್ಯಗಳ ಜೋಡಣೆಗೆ ರೈಲ್ವೇ ಟ್ರ್ಯಾಕ್ ಅಡ್ಡಿಯಾಗುತ್ತಿರುವ ಬಗ್ಗೆ ಹಾಗೂ ಅಲ್ಲಿನ ಸಮಸ್ಯೆ ಬಗೆಹರಿಸುವ ಬಗ್ಗೆ ಯಾವುದೇ ಪ್ರಸ್ತಾವನೆಗಳು ಕೊಂಕಣ ರೈಲ್ವೇಗೆ ಇದುವರೆಗೆ ಬಂದಿಲ್ಲ . ಆದರೂ ಈ ಬಗ್ಗೆ ಉನ್ನತ ಅಧಿಕಾರಿಗಳ ಜತೆಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತೇನೆ. –ಸುಧಾಕೃಷ್ಣಮೂರ್ತಿ, ಸಾರ್ವಜನಿಕ ಸಂಪರ್ಕಾಧಿಕಾರಿ, ಕೊಂಕಣ ರೈಲ್ವೇ ಮಂಗಳೂರು ವಿಭಾಗ
-ರಾಕೇಶ್ ಕುಂಜೂರು
You seem to have an Ad Blocker on.
To continue reading, please turn it off or whitelist Udayavani.