ಕಲಾವಿದನ ಕೈಚಳಕದಿಂದ ವನ್ಯಜೀವಿ ಕಲಾಕೃತಿಗೆ ಜೀವಂತಿಕೆ
Team Udayavani, Mar 6, 2019, 1:00 AM IST
![thimmakka.jpg](https://www.udayavani.com/wp-content/uploads/2019/03/5/thimmakka-620x355.jpg)
![thimmakka.jpg](https://www.udayavani.com/wp-content/uploads/2019/03/5/thimmakka-620x355.jpg)
ಉಡುಪಿ: ಮಣಿಪಾಲದ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನವನದ (ಟ್ರೀ ಪಾರ್ಕ್) ಎರಡನೇ ಹಂತದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಅರಣ್ಯ ಇಲಾಖೆ 53 ಲ.ರೂ. ವೆಚ್ಚದಲ್ಲಿ ಗ್ರಾಮೀಣ ಬದುಕಿನ ಚಿತ್ರಣದ ಜತೆಗೆ ವನ್ಯ ಜೀವಿಗಳ ಕಲಾಕೃತಿಗಳನ್ನು ಉದ್ಯಾನದಲ್ಲಿ ರಚಿಸುವ ಮೂಲಕ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಿದೆ.
ಅರಣ್ಯ ಇಲಾಖೆ ಉಡುಪಿ ವಲಯ ಮಣಿಪಾಲದ 80-ಬಡಗಬೆಟ್ಟು ಬಳಿಯ ಸುಮಾರು 6 ಎಕರೆ ಅರಣ್ಯ ಪ್ರದೇಶದಲ್ಲಿ 1.25 ಕೋಟಿ ರೂ.ವೆಚ್ಚದಲ್ಲಿ ಆಕರ್ಷಕ ಉದ್ಯಾನ ನಿರ್ಮಿಸಿತ್ತು. 2018ರ ಫೆ. 24ರಂದು ಅರಣ್ಯ ಸಚಿವರಿಂದ ಉದ್ಘಾಟನೆಗೊಂಡ ಟ್ರೀ ಪಾರ್ಕ್ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿತ್ತು. ಆದರೆ, ಮಳೆಗಾಲದಲ್ಲಿ ನಿರ್ವಹಣೆ ಕೊರತೆಯಿಂದ ಉದ್ಯಾನದ ಮಕ್ಕಳ ಆಟಿಕೆಗಳು ಸಂಪೂರ್ಣವಾಗಿ ಹಾಳಾಗಿದ್ದವು.
ಮೊದಲ ಹಂತ
ಮೊದಲ ಹಂತದಲ್ಲಿ ಉದ್ಯಾನದಲ್ಲಿ ವಾಕಿಂಗ್ ಟ್ರ್ಯಾಕ್, ವಿವಿಧ ಬಗೆಯ ವೃಕ್ಷಗಳು, ಔಷಧ ಸಸ್ಯ, ಪ್ರಾಣಿ, ಸರಿಸೃಪ, ಚಿಟ್ಟೆ, ಪಕ್ಷಿಗಳ ಸಂಪೂರ್ಣ ಮಾಹಿತಿ ಫಲಕಗಳನ್ನು ಆಳವಡಿಸಲಾಗಿದೆ. ಮರದ ಹಟ್, ಜೋಕಾಲಿ, ಕರಾವಳಿಯ ಕಲೆಯನ್ನು ಬಿಂಬಿಸುವ ಯಕ್ಷಗಾನ, ಹುಲಿ ಕುಣಿತ, ಭೂತಕೋಲ, ತಟ್ಟಿರಾಯ, ಕಂಬಳ, ಎತ್ತಿನಗಾಡಿಗಳ ಕಲಾಕೃತಿಗಳನ್ನು, ಮಕ್ಕಳಿಗಾಗಿ ಅಡ್ವೆಂಚರ್ ಪಾರ್ಕ್ ಸಹ ಇಲ್ಲಿ ನಿರ್ಮಿಸಲಾಗಿತ್ತು.
ಹೊಸ ಕಲಾಕೃತಿಗಳು
ಎರಡನೇ ಹಂತದ ಕಾಮಗಾರಿಯಲ್ಲಿ ಟ್ರೀ ಪಾರ್ಕ್ನಲ್ಲಿ ಆನೆ, ಕೋತಿ, ಮೊಲ, ಹುಲಿ, ಚಿರತೆ, ಜಿಂಕೆ, ಕರಡಿ, ಕಡವೆ, ಆಮೆ, ವಿವಿಧ ಪ್ರಬೇಧದ ಪಕ್ಷಿಗಳು, ಮೊಸಳೆ ಮುಂತಾದ ಕಲಾಕೃತಿಗಳು ಕಲಾವಿದನ ಕೈಚಳಕದಿಂದ ಜೀವಂತಿಕೆ ಪಡೆದಿವೆ.
ಬಣ್ಣದ ಚಿತ್ತಾರ
ಕಲಾವಿದರು ಉದ್ಯಾನದಲ್ಲಿ ನಿರ್ಮಿಸಲಾದ ವನ್ಯ ಜೀವಿಗಳ ಕಲಾಕೃತಿಗಳಿಗೆ ಸೂಕ್ತ ಬಣ್ಣ ಹಾಕಲಿದ್ದಾರೆ. ಮುಂದಿನ ದಿನದಲ್ಲಿ ಉದ್ಯಾನವನ ವೀಕ್ಷಿಸಲು ತಂಡೋಪತಂಡವಾಗಿ ಸಾರ್ವಜನಿಕರು, ಪ್ರವಾಸಿಗರು ಆಗಮಿಸುವ ನೀರಿಕ್ಷೆಯಲ್ಲಿ ಇದನ್ನು ರೂಪಿಸಲಾಗಿದೆ.
ಪ್ರಮುಖ ಆಕರ್ಷಣೆ
ಮರದಿಂದ ಮರಕ್ಕೆ ಹೋಗುವ ರೋಪ್ ಅಡ್ವೆಂಚರ್ ಟ್ರೀ ಪಾರ್ಕ್ ಪ್ರಮುಖ ಆಕರ್ಷಣೆಯಾಗಿದೆ. 6 ಎಕರೆ ಜಾಗದಲ್ಲಿ ಒಟ್ಟು 12 ನೈಸರ್ಗಿಕ ಕೆರೆಗಳನ್ನು ಉದ್ಯಾನದಲ್ಲಿ ನಿರ್ಮಿಸಲಾಗಿದೆ. ಪ್ರವಾಸಿಗರಿಗೆ ಪ್ರಾಣಿ, ಪಕ್ಷಿಗಳ ಕುರಿತು ಮಾಹಿತಿ ನೀಡುವ ಫಲಕಗಳನ್ನು ಅಳವಡಿಸಲಾಗುತ್ತದೆ. ಜತೆಗೆ, ಕಾಡಿನ ಜತೆಗೆ ಬೆಸೆದುಕೊಂಡಿರುವ ಬುಡಕಟ್ಟು ಜನಾಂಗದ ಸಂಸ್ಕೃತಿಯನ್ನು ಬಿಂಬಿಸಲು ಕಲಾಕೃತಿ, ವಾಚ್ ಟವರ್, ಟ್ರೀ ಹೌಸ್, ಮಕ್ಕಳಿಗಾಗಿ ಜಾರು ಬಂಡಿ ನಿರ್ಮಿಸಲಾಗಿದೆ.
ವಿವಿಧ ಬಗ್ಗೆ ಸಸ್ಯ ರಾಶಿ
ಇಡೀ ಉದ್ಯಾನ ಸಸ್ಯ ರಾಶಿಯಿಂದ ಕಂಗೊಳಿಸುತ್ತಿದೆ. ತುಳಸಿ, ಹೊಗೆ, ಮಜ್ಜಿಗೆ ಸೊಪ್ಪು, ದೊಡ್ಡ ಪತ್ರೆ, ಹಸಿರು ಚಿರಾಯಿತ, ಲವಂಚ, ಅಮೃತ ಬಳಿ, ಕಾಡು ಮಲ್ಲಿಗೆ, ಬ್ರಾಹ್ಮಿà, ಇನ್ಸುಲಿನ್, ಅಡುಸೊಗೆ, ಗಿಡಗಳನ್ನು ಪಾರ್ಕ್ನಲ್ಲಿ ಬೆಳೆಸಲಾಗಿದೆ.
ವಾರಾಂತ್ಯಕ್ಕೆ 400 ಜನ ಭೇಟಿ
ಪ್ರತಿನಿತ್ಯ ಟ್ರೀ ಪಾರ್ಕ್ಗೆ ಸುಮಾರು 100 ಜನರು ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ 400ಕ್ಕೂ ಹೆಚ್ಚಿನ ಜನರು ಆಗಮಿಸುತ್ತಾರೆ. ಅವರ ಅನುಕೂಲಕ್ಕೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕ್ಯಾಂಟೀನ್ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ಅರಣ್ಯ ಇಲಾಖೆ ವಹಿಸಿಕೊಂಡಿದೆ.
ಮುಂದಿನ ವರ್ಷ 3ನೇ ಹಂತದ ಕಾಮಗಾರಿ
ಎರಡನೇ ಹಂತದ ಕಾಮಗಾರಿ ಮುಂದಿನ 15ದಿನದಲ್ಲಿ ಮುಕ್ತಾಯವಾಲಿದೆ. ಮುಂದಿನ ವರ್ಷ ಮೂರನೇ ಹಂತದ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಮಕ್ಕಳಿಗಾಗಿ ವಿಶೇಷ ಮೋಜಿನ ವಲಯ ನಿರ್ಮಿಸಲಾಗುತ್ತದೆ. ಟ್ರೀ ಪಾರ್ಕ್ ಅಂದವನ್ನು ಎಲ್ಲರೂ ಸವಿಯಬೇಕು ಎಂಬುದು ನಮ್ಮ ಉದ್ದೇಶ.
-ಪ್ರಭಾಕರನ್, ಉಪ ಅರಣ್ಯ ಸಂರಕ್ಷಣಾಧಿಕಾರಿ
ಬೆಳಗ್ಗೆ 10ರಿಂದ ಸಂಜೆ 6.30ರ ವರೆಗೆ ವೀಕ್ಷ ಣೆಗೆ ಅವಕಾಶ.
– ತೃಪ್ತಿ ಕುಮ್ರಗೋಡು