![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 16, 2019, 5:00 AM IST
ಉಡುಪಿ: ಶಿವಳ್ಳಿ ಬ್ರಾಹ್ಮಣರ ಪ್ರತೀ ಮನೆಗಳಲ್ಲಿ ನಡೆಯುವ ಸಭೆ- ಸಮಾರಂಭಗಳಲ್ಲಿ ಶಿವಳ್ಳಿ ತುಳುವನ್ನೇ ಮಾತನಾಡಬೇಕು. ಸಮಾರಂಭ ಗಳಲ್ಲೂ ತುಳುವಿನಲ್ಲೇ ಭಾಷಣ, ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು.
ಇದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ರವಿವಾರ ನಡೆದ ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಸಮಾರೋಪದಲ್ಲಿ ಕೈಗೊಂಡ ಪ್ರಮುಖ ನಿರ್ಣಯ.
ಕೈಪಿಡಿಯ ಮೂಲಕ ತುಳು ಶಿವಳ್ಳಿ ಬ್ರಾಹ್ಮಣರ ಮಾಹಿತಿಗಳು 1 ವರ್ಷದೊಳಗೆ ಸಿಗುವಂತಾಗಬೇಕು, ತುಳುಶಿವಳ್ಳಿ ಬ್ರಾಹ್ಮಣರ ಅಭಿವೃದ್ಧಿ ಗಾಗಿ ನಿಧಿಯನ್ನು ಪ್ರಾರಂಭಿಸುವುದಲ್ಲದೆ ಈ ನಿಧಿಗೆ ಎಲ್ಲರೂ ದೇಣಿಗೆ ಸಂಗ್ರಹಿಸಬೇಕು ಎಂದೂ ನಿರ್ಣಯಿಸಲಾಯಿತು.
ಜಾಗೃತಿ ಮೂಡಿಸೋಣ: ಭಟ್
ಶಾಸಕ ಕೆ. ರಘುಪತಿ ಭಟ್ ಅವರು ಮಾತನಾಡಿ, ತುಳು ಶಿವಳ್ಳಿ ಸಮ್ಮೇಳನದ ಮೂಲಕ ಸಮುದಾಯ ದಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ತಳಮಟ್ಟದಿಂದ ಬಂದ ಹಲವಾರು ಸಮುದಾಯಗಳಂತೆ ಶಿವಳ್ಳಿ ಸಮುದಾಯವೂ ಸಮಾಜದಲ್ಲಿ ಗುರುತಿಸಿಕೊಂಡು ಪ್ರಾಬಲ್ಯ ಸಾಧಿಸ ಬೇಕು ಎಂದು ಹೇಳಿದರು.
ಬುದ್ಧಿವಂತಿಕೆಯ ವಿಚಾರದಿಂ ದಾಗಿ ಬ್ರಾಹ್ಮಣರು ಅತ್ಯುನ್ನತ ಸ್ಥಾನದಲ್ಲಿ ನಿಲ್ಲುತ್ತಾರೆ. ಇಂದು ದೇಶದಲ್ಲಿ ಸಿವಿಲ್ಸರ್ವೀಸ್ ಹಾಗೂ ರಾಜಕೀಯ ವ್ಯವಸ್ಥೆ ಗಳು ಅತ್ಯಂತ ಪ್ರಭಾವಶಾಲಿಯಾಗಿವೆ. ಆದರೆ ಐಎಎಸ್, ಕೆಪಿಎಸ್ನಲ್ಲಿ ಬ್ರಾಹ್ಮಣರ ಸಂಖ್ಯೆ ವಿರಳವಿದೆ. ಇದನ್ನು ಹೋಗಲಾಡಿಸಲು ಈ ಎರಡೂ ಕ್ಷೇತ್ರಗಳಲ್ಲೂ ಬ್ರಾಹ್ಮಣರು ಪ್ರಾಬಲ್ಯ ಸಾಧಿಸಬೇಕು ಎಂದರು.
ಸಮ್ಮಾನ
ಸಮುದಾಯದಲ್ಲಿ ಖ್ಯಾತಿ ಗಳಿಸಿದ ವಿ| ಹರಿದಾಸ ಉಪಾಧ್ಯಾಯ, ವಾಗೀಶ್ ಭಟ್, ಭೀಮಾ ಸಂಸ್ಥೆಯ ಗಿರಿರಾಜನ್, ಪುತ್ತೂರಿನ ಡಾ| ಬಾಲಕೃಷ್ಣ ಮೂಡಂಬಡಿತ್ತಾಯ, ಮಜೂರು ಕೃಷ್ಣದಾಸ ಪುರಾಣಿಕ್, ಪಿ. ಜಯರಾಮ ಭಟ್, ದಂಡತೀರ್ಥ ಸೀತಾರಾಮ ಭಟ್, ಸುಧಾಕರ ರಾವ್ ಪೇಜಾವರ, ಸುರೇಶ್ ರಾವ್ ಅವರನ್ನು ಸಮ್ಮಾನಿಸಲಾಯಿತು.
ಪರ್ಯಾಯ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು, ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಆಲ್ ಇಂಡಿಯಾ ಬ್ರಾಹ್ಮಣ್ ಫೆಡರೇಶನ್ ಮಾಜಿ ಅಧ್ಯಕ್ಷ ಡಾ| ಕೆ.ಪಿ. ಪುತ್ತೂರಾಯ ಉಪಸ್ಥಿತರಿದ್ದರು. ಮಂಜುನಾಥ ಉಪಾಧ್ಯಾಯ ಸ್ವಾಗತಿಸಿ, ಶ್ರೀನಿವಾಸ ಬಲ್ಲಾಳ್ ನಿರೂಪಿಸಿದರು.
ಸಮುದಾಯಕ್ಕೆ ಸಚಿವ ಸ್ಥಾನ ಅಗತ್ಯ
ತುಳು ಶಿವಳ್ಳಿ ಬ್ರಾಹ್ಮಣ ಸಮಾಜಕ್ಕೆ ಮಂತ್ರಿ ಸ್ಥಾನದ ಅಗತ್ಯವಿದೆ. ಆದರೆ ಇದಕ್ಕೆ ಧ್ವನಿ ಕೊಡುವವರು ಯಾರೂ ಇಲ್ಲ. ಈ ನಿಟ್ಟಿನಲ್ಲಿ ನಿಮ್ಮೆಲ್ಲರ ಸಹಕಾರ ಆವಶ್ಯಕವಾಗಿದೆ. ಶಾಸಕ ರಘುಪತಿ ಭಟ್ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದರೆ, ತುಳು ಶಿವಳ್ಳಿ ಬ್ರಾಹ್ಮಣ ವಿಶ್ವ ಸಮ್ಮೇಳನ ಸಾರ್ಥಕ ಆಗುತ್ತದೆ. ಉಡುಪಿ ಬೆಳವಣಿಗೆಯಲ್ಲಿ ಡಾ| ವಿ.ಎಸ್. ಆಚಾರ್ಯ ಹಾಗೂ ರಘುಪತಿ ಭಟ್ ಅವರ ಪಾತ್ರ ಅಪಾರವಾದುದು.
-ಪರ್ಯಾಯ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು
ನಿರ್ಣಯಗಳು
ಸಮ್ಮೇಳನದ ಪ್ರಧಾನ ಸಂಚಾಲಕ ಎಂ.ಬಿ. ಪುರಾಣಿಕ್ ನಿರ್ಣಯ ಮಂಡಿಸಿದರು.
-ಬ್ರಾಹ್ಮಣ ಕುಲದ ಮೂಲ ಹುಡುಕುವ ಕೆಲಸವಾಗಬೇಕು.
-ಗುರುಮಠದ ಬಗ್ಗೆ ತಿಳಿದುಕೊಳ್ಳಬೇಕು. ಪ್ರತೀ ವಲಯ ಮಟ್ಟದಲ್ಲಿ ಸಭೆ ನಡೆಸಿ ಈ ಬಗ್ಗೆ ಚರ್ಚೆ ನಡೆಸಬೇಕು.
-ಪ್ರತಿಯೊಂದು ಊರಿನಲ್ಲಿಯೂ ವಸಂತ ಶಿಬಿರ, ಸಂಸ್ಕಾರ ಶಿಬಿರಗಳನ್ನು ನಡೆಸಬೇಕು. ಈ ಶಿಬಿರಗಳ ಮೂಲಕ ಮಕ್ಕಳಿಗೆ ಶ್ಲೋಕ, ಮಂತ್ರ, ಜಪ, ಸಂಧ್ಯಾವಂದನೆಗಳನ್ನು ತಿಳಿಸಬೇಕು. ದೇವಪೂಜಾ ಪದ್ಧತಿಯ ಬಗ್ಗೆಯೂ ತಿಳಿಹೇಳುವ ಕೆಲಸವಾಗಬೇಕು.
– ವಧು-ವರರ ಬಗ್ಗೆ ಮಾಹಿತಿ ನೀಡುವ ಕೇಂದ್ರ ಸ್ಥಾಪನೆಯಾಗಬೇಕು.
You seem to have an Ad Blocker on.
To continue reading, please turn it off or whitelist Udayavani.