![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Feb 16, 2020, 1:15 PM IST
ಯಾದಗಿರಿ: ಕೈಗಾರಿಕೆ ಪ್ರದೇಶದಲ್ಲಿ ಭೂಸ್ವಾಧೀನವಾದ ದಶಕದ ಬಳಿಕ ಇನ್ವೆಸ್ಟ್ ಕರ್ನಾಟಕ ಮೂಲಕ ಜಿಲ್ಲೆಯಲ್ಲಿ 796 ಕೋಟಿ ರೂ. ಬಂಡವಾಳ ಹೂಡಿಕೆಗೆ ಹಲವು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ನಿರುದ್ಯೋಗಿಗಳಲ್ಲಿ ಉದ್ಯೋಗದ ಕನಸು ಚಿಗುರೊಡೆಯುವಂತಾಗಿದೆ.
ಗಡಿ ಜಿಲ್ಲೆ ಯಾದಗಿರಿಯ ಕಡೇಚೂರ-ಬಾಡಿಯಾಳ ಬೃಹತ್ ಕೈಗಾರಿಕಾ ಪ್ರದೇಶದಲ್ಲಿ ಈಗಾಗಲೇ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಮೂರು ಸಾವಿರ ಎಕರೆಗೂ ಹೆಚ್ಚು ಜಮೀನು ಸ್ವಾ ಧೀನಪಡಿಸಿಕೊಂಡಿದೆ. ಆದರೆ ಜಮೀನು ವಶಪಡಿಸಿಕೊಂಡು ದಶಕ ಕಳೆದರೂ ಯಾವೊಂದು ಕೈಗಾರಿಕೆಗಳು ತಲೆ ಎತ್ತಿರಲಿಲ್ಲ. ಈ ಭಾಗದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದ್ದು, ಉದ್ಯೋಗವಿಲ್ಲದೇ ನಿರುದ್ಯೋಗಿ ಯುವಕರು ಬೆಂಗಳೂರು, ಮುಂಬೈ, ಪುಣೆ ಹಾಗೂ ಹೈದ್ರಾಬಾದನಂತ ಮಹಾ ನಗರಗಳಿಗೆ ತೆರಳಿ ದುಡಿಯುವಂತಾಗಿದೆ. ಸ್ಥಳೀಯವಾಗಿಯೇ ಉದ್ಯೋಗ ಲಭ್ಯವಾದರೆ ಈ ಭಾಗದ ಜನರಿಗೆ ಅನುಕೂಲವಾಗುತ್ತದೆ ಎನ್ನುವುದು ಇಲ್ಲಿನ ಜನರ ಮಾತು.
ಕೈಗಾರಿಕೆಗಳ ಉತ್ತೇಜನೆಗೆ ಶುಕ್ರವಾರವಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕ ಸಮಾವೇಶದಲ್ಲಿ ಗಡಿ ಜಿಲ್ಲೆ ಯಾದಗಿರಿಯ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹಲವು ಕಂಪನಿಗಳು ಒಪ್ಪಿವೆ. ಹೈದರಾಬಾದ್ ನ ಭಗೀರಥ ಕೆಮಿಕಲ್ಸ್ ಇಂಡಸ್ಟ್ರೀಸ್ 345 ಕೋಟಿ ಹೂಡಿಕೆ ಮಾಡಲಿದ್ದು, 2100 ಜನರಿಗೆ ಉದ್ಯೋಗ ಸಿಗಲಿದೆ. ಶಿಲ್ಪಾ ಅಲುºಮಿನ್ ಕಂಪನಿ 221 ಕೋಟಿ ಹೂಡಿಕೆಗೆ ಒಪ್ಪಿದ್ದು, 220 ಉದ್ಯೋಗ ಸೃಷ್ಟಿಯಾಗಲಿದೆ. ಆಸ್ಟ್ರಾಜೆನ್ ಲ್ಯಾಬರಟೀಸ್ ಕಂಪನಿ 49.80 ಕೋಟಿ ಹೂಡಿಕೆ ಮಾಡಲಿದ್ದು, 220 ಜನರಿಗೆ ಉದ್ಯೋಗ ದೊರೆಯಲಿದೆ. ಮೊನಾಶಿ ಲೈಫ್ ಸೈನ್ಸ್ ಕಂಪನಿ 20 ಕೋಟಿ ರೂ. ಹೂಡಿಕೆ ಮಾಡಲು ಮುಂದೆ ಬಂದಿದ್ದು, 150 ಜನರಿಗೆ ಉದ್ಯೋಗ ಒದಗಲಿದೆ. ರಾವೂಸ್ ಲ್ಯಾಬರಟರೀಸ್ ಕಂಪನಿ 43.50 ಕೋಟಿ, ಆದರ್ಶ ಫಾರ್ಮಾಸ್ಯೂಟಿಕಲ್ಸ್ 40 ಕೋಟಿ, ಜೆಟ್ ಲೈಫ್ ಸೈನ್ಸ್ ಕಂಪನಿ 19.50 ಕೋಟಿ, ಶ್ರೀಯಾ ಫೈನ್ ಕೆಮಿಕಲ್ಸ್ 26.10 ಕೋಟಿ, ಹೂಡಿಕೆಗೆ ಒಪ್ಪಂದ ಮಾಡಿಕೊಂಡಿವೆ. ಅದರಂತೆ ಕೈಗಾರಿಕೆಗಳು ಸ್ಥಾಪನೆಯಾದರೆ ಜಿಲ್ಲೆಯ ಮೂರು ಸಾವಿರದಷ್ಟು ನಿರುದ್ಯೋಗಿಗಳಿಗೆ ಉದ್ಯೋಗ ಭಾಗ್ಯ ದೊರೆಯಲಿದೆ.
ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ್ ಚಿಂಚನಸೂರ ಕೈಗಾರಿಕಾ ಪ್ರದೇಶದಲ್ಲಿ ಹಲವು ಫಾರ್ಮಾ ಕಂಪನಿಗಳು ತಲೆ ಎತ್ತಲಿವೆ. ಅಲ್ಲದೇ ಕೋಕಾಕೋಲಾ ಕಂಪನಿಯೂ ಈ ಭಾಗದಲ್ಲಿ ಸ್ಥಾಪನೆಯಾಗಿ ನಿರುದ್ಯೋಗ ಸಮಸ್ಯೆ ನಿವಾರಿಸುವುದಾಗಿ ಭರವಸೆ ನೀಡಿದ್ದರು. ನಂತರ ಕೈಗಾರಿಕೆಗಳೊಂದಿಗೆ ಒಪ್ಪಂದ ಮಾಡುವ ಹಂತಕ್ಕೆ ಬಂದು ಸೂಕ್ತ ಸೌಕರ್ಯಗಳಿಲ್ಲದೇ ಕಂಪನಿಗಳು ಹೂಡಿಕೆಗೆ ಹಿಂಜರಿದಿದ್ದವು. ಇದೀಗ ಕಡೇಚೂರು ಕೈಗಾರಿಕಾ ಪ್ರದೇಶದಲ್ಲಿ ಅಗತ್ಯ ಮೂಲ ಸೌಯರ್ಕಗಳಾದ ರಸ್ತೆ, ನೀರು, ಒಳಚರಂಡಿ ಸೌಕರ್ಯ ಕಲ್ಪಿಸುವ ಕಾಮಗಾರಿ ಪ್ರಗತಿಯಲ್ಲಿದೆ.
ಮೊದಲ ಹಂತದ ವಿದ್ಯುತ್ ಸಂಪರ್ಕ ಒದಗಿಸುವ ಕಾಮಗಾರಿಯೂ ನಡೆಯುತ್ತಿದ್ದು, ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ನಮ್ಮ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದಕ್ಕೆ ಸರ್ಕಾರ ರೈತರ ಜಮೀನು ವಶಪಡಿಸಿಕೊಂಡಿದ್ದರೂ ಉದ್ಯೋಗವಿಲ್ಲದಂತಾಗಿದೆ. ನಮ್ಮಲ್ಲಿ ಕೆಲಸವಿಲ್ಲದೇ ದೂರದ ಬೆಂಗಳೂರಿನ ಕಂಪನಿಗಳಲ್ಲಿ ಕೆಲಸ ಹುಡುಕಿ ತಿಂಗಳಿಗೆ 13 ಸಾವಿರ ರೂ.ಗೆ ದುಡಿಯುತ್ತಿದ್ದೇವೆ. ಅಲ್ಲಿ ಇರುವುದಕ್ಕೆ ಮನೆ, ಊಟಕ್ಕೆ ಸಾಕಾಗಲ್ಲ. ಅವಲಂಬಿತರಿಗೆ ಏನೂ ಕಳಿಸಲು ಉಳಿಯುವುದಿಲ್ಲ. ಹೀಗಾಗಿ ತ್ವರಿತವಾಗಿ ಕೈಗಾರಿಕೆ ಸ್ಥಾಪನೆಗೆ ಸರ್ಕಾರ ಮುಂದಾಗಲಿ ಎಂದು ನಿರುದ್ಯೋಗಿ ಯುವಕರು ಮನವಿ ಮಾಡಿದ್ದಾರೆ.
ಜಿಲ್ಲೆಯ ಕೈಗಾರಿಕಾ ಪ್ರದೇಶದಲ್ಲಿ ಕಂಪನಿಗಳ ಬಂಡವಾಳ ಹೂಡಿಕೆಗೆ ಇನ್ವೆಸ್ ಕರ್ನಾಟಕ ವರವಾಗಿದೆ. 40 ವರ್ಷ ಆಡಳಿತ ನಡೆಸಿ ಕಾಂಗ್ರೆಸ್ ಇಲ್ಲಿನ ಜನರಿಗೆ ಕನಿಷ್ಟ ಉದ್ಯೋಗ ನೀಡುವ ಕೆಲಸವನ್ನು ಮಾಡಲಿಲ್ಲ. ಈ ಭಾಗದ ನಿರುದ್ಯೋಗ ಸಮಸ್ಯೆ ನೀಗಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರದ ಬೃಹತ್ ಮತ್ತು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಜಿಲ್ಲಾ ಉಸ್ತುವಾರಿ ಸಚಿವರು ಕಾಳಜಿ ವಹಿಸಿ ಜಿಲ್ಲೆಗೆ 796 ಕೋಟಿ ಬಂಡವಾಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿರುವುದು ಅಭಿನಂದನಾರ್ಹ ಕ್ರಮ. ಇದರಿಂದ ನಮ್ಮ ಭಾಗದ ಯುವಕರಿಗೆ ಉದ್ಯೋಗ ಪಡೆಯಲು ಅನುಕೂಲವಾಗಲಿದೆ.
ಸಾಯಬಣ್ಣ ಬೋರಬಂಡ,
ಬಿಜೆಪಿ ಮುಖಂಡ
ಗುರುಮಠಕಲ್ ಕ್ಷೇತ್ರದಲ್ಲಿ ಬೃಹತ್ ಕೈಗಾರಿಕೆ ಪ್ರದೇಶವಿದ್ದು, ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿಯೂ ಕಂಪನಿಗಳ ಹೂಡಿಕೆಗೆ ಪ್ರಯತ್ನಿಸಲಾಯಿತು. ಈ ಭಾಗದ ಅಭಿವೃದ್ಧಿ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅತ್ಯಂತ ಕಾಳಜಿ ಹೊಂದಿದ್ದರು. ನಮ್ಮ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ, ಸ್ಥಳೀಯ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿ, ಗುಳೆ ಹೋಗುವ ಸಮಸ್ಯೆಗೆ ತಡೆಯುವ ಸಂಕಲ್ಪ ಮಾಡಿದ್ದೆ. ಎರಡು ಹಂತದಲ್ಲಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿಯಾಗಿತ್ತು. ರಾಜ್ಯದಲ್ಲಿನ ರಾಜಕೀಯ ಕಾರಣಗಳಿಂದ ಸಮ್ಮಿಶ್ರ ಸರ್ಕಾರ ಅ ಧಿಕಾರ ಕಳೆದುಕೊಳ್ಳುವಂತಾಯಿತು. ಇದೀಗ ಸರ್ಕಾರ ಇನ್ವೆಸ್ಟ್ ಕರ್ನಾಟಕದ ಮೂಲಕ ಕಂಪನಿಗಳ ಹೂಡಿಕೆಗೆ ಒಪ್ಪಂದ ಮಾಡಿಕೊಂಡಿದೆ. ಕೇವಲ ತೋರಿಕೆಗಾಗಿ ಈ ಒಪ್ಪಂದ ಆಗದೇ ಕಾರ್ಯರೂಪಕ್ಕೆ ಬಂದು ಶೀಘ್ರದಲ್ಲಿಯೇ ಕೈಗಾರಿಕೆಗಳು ಆರಂಭವಾಗಿ ನಮ್ಮ ಭಾಗದ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯಲಿ. ಉದ್ಯಮ ಸ್ಥಾಪನೆಗೆ ಉತ್ತಮ ಅವಕಾಶವಿದ್ದು, ಭೀಮಾನದಿ, ರೈಲ್ವೆ ಲೈನ್ ಹತ್ತಿರವಿದೆ. ಆಂಧ್ರಪ್ರದೇಶವೂ ಹತ್ತಿರದಲ್ಲಿಯೇ ಇರುವುದರಿಂದ ಆ ಭಾಗದಲ್ಲಿ ಉದ್ಯಮಿಗಳು ಕೈಗಾರಿಕೆ ಸ್ಥಾಪನೆಗೆ ಮುಂದಾಗಬಹುದು.
ನಾಗನಗೌಡ ಕಂದಕೂರ,
ಶಾಸಕ
ಅನೀಲ ಬಸೂದೆ
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.