ಮೂತ್ರಕೋಶ ನೋವು ಕಾಯಿಲೆ ಬ್ಲಾಡರ್‌ ಪೇಯ್ನ ಸಿಂಡ್ರೋಮ್‌ (ಬಿಪಿಎಸ್‌) 

ಮೂತ್ರಕೋಶದ ಪದರಗಳ ಒಳಗೆ ಹರಿಯಲ್ಪಟ್ಟಾಗ, ಮೂತ್ರದಲ್ಲಿರುವ ವಿಷಾಂಶಗಳಿಂದಾಗಿ ತೊಂದರೆಗಳು ಉದ್ಭವಿಸುತ್ತವೆ.

Team Udayavani, Oct 17, 2022, 5:53 PM IST

ಮೂತ್ರಕೋಶ ನೋವು ಕಾಯಿಲೆ ಬ್ಲಾಡರ್‌ ಪೇಯ್ನ ಸಿಂಡ್ರೋಮ್‌ (ಬಿಪಿಎಸ್‌) 

ಶಾರದಾ ನಗರದ ಎಲ್ಲ ವೈದ್ಯರನ್ನೂ ಸಂಪರ್ಕಿಸಿದ್ದರು ಆದರೆ ಆಕೆಯ ನೋವು ಹಾಗೆಯೇ ಉಳಿದುಕೊಂಡಿತ್ತು. ಎಲ್ಲ ವೈದ್ಯರೂ ಮೊದಲು ಆಕೆಯನ್ನು ಪರೀಕ್ಷಿಸಿದಾಗ ನಿಮಗೆ ಮೂತ್ರಸೋಂಕು ಇದೆ ಎಂದೇ ಹೇಳಿದ್ದರು. ಆದರೆ ಪ್ರಯೋಗಾಲಯ ಪರೀಕ್ಷೆಗಳ ವರದಿ ಪ್ರತೀ ಬಾರಿಯೂ ಸೋಂಕನ್ನು ನಿರಾಕರಿಸಿತ್ತು. ಕೆಲವು ಆಕೆಯನ್ನು ಆ್ಯಂಟಿಬಯಾಟಿಕ್‌ ಔಷಧಿಗಳ ಮೂಲಕ ಚಿಕಿತ್ಸೆಗೆ ಒಳಪಡಿಸಿದ್ದರು. ಇನ್ನು ಕೆಲವರು ಹಾಗೆ ಮಾಡಿರಲಿಲ್ಲ. ಏನೇ ಆದರೂ ಆಕೆಯ ಸ್ಥಿತಿ ಉತ್ತಮಗೊಂಡಿರಲೇ ಇಲ್ಲ.

ನಮ್ಮ ಹೊರರೋಗಿ ವಿಭಾಗವು ವಿಶೇಷವಾಗಿ ಮಹಿಳೆಯರ ಮೂತ್ರಸಂಬಂಧಿ ಸಮಸ್ಯೆಗಳಿಗೆ ವಿಶೇಷವಾಗಿ ಚಿಕಿತ್ಸೆ ನೀಡುತ್ತೇವೆ ಎಂಬುದನ್ನು ಯಾರಿಂದಲೋ ಕೇಳಿ ಶಾರದಾ ಕೊನೆಯ ಪ್ರಯತ್ನವಾಗಿ ನಮ್ಮ ಹೊರರೋಗಿ ವಿಭಾಗಕ್ಕೆ ಆಗಮಿಸಿದ್ದರು. ಎರಡು ಮಕ್ಕಳ ತಾಯಿ, 36 ವಯಸ್ಸಿನ ಶಾರದಾ ನಮ್ಮಲ್ಲಿ ಬಂದಾಗ ತನ್ನ ನೋವು ಎರಡು ವರ್ಷಗಳ ಹಿಂದೆ ಆರಂಭವಾಗಿತ್ತು ಎಂಬುದಾಗಿ ಹೇಳಿದರು. ಎರಡು ವರ್ಷಗಳ ಹಿಂದಿನವರೆಗೆ ಎಲ್ಲವೂ ಸರಿಯಾಗಿತ್ತು, ಬಳಿಕ ಸಮಸ್ಯೆಗಳು ನಿಧಾನವಾಗಿ ಬಿಗಡಾಯಿಸಲು ಆರಂಭಿಸಿದ್ದವು. ಆಕೆಯ ಕೆಳಹೊಟ್ಟೆಯ ಭಾಗದಲ್ಲಿ ಸರಿಸುಮಾರಾಗಿ ಯಾವಾಗಲೂ ನೋವು ಇರುತ್ತಿತ್ತು. ಆಕೆಗೆ ದೀರ್ಘ‌ಕಾಲ ಮೂತ್ರ ತಡೆ ಹಿಡಿದುಕೊಳ್ಳಲು ಆಗುತ್ತಿರಲಿಲ್ಲ, ಕೆಲವೊಮ್ಮೆ ಮೂತ್ರ ವಿಸರ್ಜನೆ ಮಾಡುವುದು ಎಷ್ಟು ತುರ್ತಾಗುತ್ತಿತ್ತು ಎಂದರೆ, ಯಾವುದೇ ಕಾರಣದಿಂದ ಶೌಚಾಲಯಕ್ಕೆ ಹೋಗುವುದು ಸಾಧ್ಯವಾಗದೆ ಇದ್ದರೆ ಮೂತ್ರ ಸ್ರಾವವಾಗಿ ಬಟ್ಟೆ ಒದ್ದೆಯಾಗಿ ಬಿಡುತ್ತಿತ್ತು. ಹಗಲು ಪ್ರತೀ ಗಂಟೆಗೊಮ್ಮೆ ಎಂಬಂತೆ ಶೌಚಾಲಯಕ್ಕೆ ಹೋಗಬೇಕಾಗಿತ್ತು, ರಾತ್ರಿ ಮೂತ್ರವಿಸರ್ಜನೆಯ ತೀವ್ರ ಬಯಕೆಯೊಂದಿಗೆ ನಾಲ್ಕೈದು ಬಾರಿ ಏಳಬೇಕಾಗುತ್ತಿತ್ತು. ತನ್ನ ಸಮಸ್ಯೆಯ ಬಗ್ಗೆ ವಿವರವಾಗಿ ತಿಳಿಸುತ್ತಾ ಶಾರದಾಗೆ ಕಣ್ಣೀರೇ ಬಂದುಬಿಟ್ಟಿತು, ಏಕೆಂದರೆ ಆಕೆ ಸಂಪರ್ಕಿಸಿದ್ದ ಕೊನೆಯ ವೈದ್ಯರು ನಿಮ್ಮದು ಮನಸ್ಸಿಗೆ ಸಂಬಂಧಿಸಿದ ಸಮಸ್ಯೆ ಎಂದು ಹೇಳಿ ಮನೋವೈದ್ಯರನ್ನು ಸಂಪರ್ಕಿಸಲು ತಿಳಿಸಿದ್ದರು!

ನಾವು ಆಕೆಯ ಪರೀಕ್ಷಾ ವರದಿಗಳನ್ನು ನೋಡಿದೆವು. ಮೂತ್ರ ಪರೀಕ್ಷೆಯ ವಿಭಿನ್ನ ವರದಿಗಳಿದ್ದವು, ಆದರೆ ಎಲ್ಲೂ ಸೋಂಕಿನ ವರದಿಗಳು ಇರಲಿಲ್ಲ. ಶಾರದಾ ಅವರನ್ನು ನಿಜವಾಗಿಯೂ ಬಾಧಿಸುತ್ತಿದ್ದದ್ದು ಇಂಟರ್‌ಸ್ಟೀಶಿಯಲ್‌ ಸಿಸ್ಟೈಟಿಸ್‌ ಅಥವಾ ಮೂತ್ರಕೋಶ ನೋವು ಕಾಯಿಲೆ (ಬಿಪಿಎಸ್‌) ಎಂಬ ಸಮಸ್ಯೆ. ಈ ಸಮಸ್ಯೆಗೆ ಒಳಗಾದ ರೋಗಿಯು ಮೂತ್ರ ಸೋಂಕು ಸಮಸ್ಯೆಯ ಚಿಹ್ನೆಗಳನ್ನೇ ಹೋಲುವ ಚಿಹ್ನೆಗಳನ್ನು ಭಿನ್ನ ತೀವ್ರತೆಯೊಂದಿಗೆ ಅನೇಕ ತಿಂಗಳುಗಳಿಂದ ಹೊಂದಿರುತ್ತಾರೆ. ಆದರೆ ಪರೀಕ್ಷೆಗಳಲ್ಲಿ ಯಾವುದೇ ಸೋಂಕು ಕಂಡುಬರುವುದಿಲ್ಲ. ಇದೊಂದು ದೀರ್ಘ‌ಕಾಲಿಕ ಸಮಸ್ಯೆಯಾಗಿದ್ದು, ಪುರುಷರಿಗಿಂತ ಮಹಿಳೆಯರಲ್ಲೇ ಕಂಡುಬರುವುದು ಹೆಚ್ಚು. ರೋಗಿಗೆ ಲಘು ಕಿರಿಕಿರಿ, ಒತ್ತಡ, ಮೂತ್ರಕೋಶ ಮತ್ತು ತೊಡೆ – ಸೊಂಟ ಸಂಧಿ ಭಾಗದಲ್ಲಿ ಮೃದುತನ, ನೋವಿನ ಅನುಭವ ಉಂಟಾಗಬಹುದು.

ಮೂತ್ರ ವಿಸರ್ಜನೆಯ ಬಯಕೆ ಪದೇಪದೇ ಉಂಟಾಗುತ್ತಿರುತ್ತದೆ. ಈ ಚಿಹ್ನೆಗಳು ಸಾಮಾನ್ಯವಾಗಿ ಅನೇಕ ತಿಂಗಳುಗಳಿಂದ ಇರುತ್ತವೆ. ಚಿಹ್ನೆಗಳ ತೀವ್ರತೆ ಬದಲಾಗುತ್ತಾ ಇರುತ್ತದೆ – ಒಂದು ದಿನ ಇದ್ದಂತೆ ಇನ್ನೊಂದು ದಿನ ಇರುವುದಿಲ್ಲ. ಲಕ್ಷಣಗಳು ಕೆಲವು ದಿನಗಳಲ್ಲಿ ಇತರ ದಿನಗಳಿಗಿಂತ ಹೆಚ್ಚು ತೀವ್ರವಾಗಿರುತ್ತವೆ. ಇದನ್ನು ಇರಿಟೇಬಲ್‌ ಬವೆಲ್‌ ಸಿಂಡ್ರೋಮ್‌, ಫೈಬೊÅಮಯೇಲ್ಜಿಯಾ ಅಥವಾ ಕ್ರಾನಿಕ್‌ ಫ್ಯಾಟೀಗ್‌ ಸಿಂಡ್ರೋಮ್‌ ಜತೆಗೂ ತಳುಕು ಹಾಕುವುದು ಸಾಧ್ಯ. ಕೆಲವು ಮಹಿಳೆಯರಿಗೆ ಲೈಂಗಿಕ ಸಂಪರ್ಕ ಕಾಲದಲ್ಲಿಯೂ ನೋವು ಉಂಟಾಗಬಹುದು. ಹೀಗಾಗಿ ಬಿಪಿಎಸ್‌ ಕಾಯಿಲೆಯು ವೈಯಕ್ತಿಕ ಸಂಬಂಧ, ನಿದ್ರೆ ಮತ್ತು ದೈನಿಕ ಕಾರ್ಯಚಟುವಟಿಕೆಗಳ ಮೇಲೂ ಕೆಲವಷ್ಟು ಪರಿಣಾಮ ಬೀರುವುದು ಸಾಧ್ಯ.

ರೋಗ ಇತಿಹಾಸವನ್ನು ವಿಸ್ತೃತವಾಗಿ ಕಲೆ ಹಾಕುವ ಮೂಲಕ, ಕೂಲಂಕಷ ತಪಾಸಣೆ ಮತ್ತು ಪರೀಕ್ಷೆಗಳನ್ನು ಕೈಗೊಂಡು ತಜ್ಞ ವೈದ್ಯರೊಬ್ಬರು ಈ ನಿರ್ದಿಷ್ಟ ಕಾಯಿಲೆಯನ್ನು ನಿರ್ಧರಿಸುವುದು ಸಾಧ್ಯ. ಮೂತ್ರಕೋಶ ನೋವು, ಬ್ಯಾಕ್ಟೀರಿಯಾ ಸೋಂಕು ಇಲ್ಲದೆಯೇ ಪದೇಪದೇ ಅನೇಕ ಬಾರಿ ಮೂತ್ರವಿಸರ್ಜನೆ ಹಾಗೂ ಇವು ಆರು ತಿಂಗಳುಗಳಿಂದ ಹೆಚ್ಚು ಕಾಲ ಇರುವುದು – ಈ ತ್ರಿವಳಿ ಚಿಹ್ನೆಗಳು ಮೂತ್ರಕೋಶ ನೋವು ಸಿಂಡ್ರೋಮ್‌ನ ಗುಣಲಕ್ಷಣಗಳು. ಕೆಲವು ಸಂದರ್ಭಗಳಲ್ಲಿ ಸೂಕ್ಷ್ಮದರ್ಶಕದಂತಹ ಉಪಕರಣದ ಮೂಲಕ ಮೂತ್ರಕೋಶದ ಒಳಗನ್ನು ಪರೀಕ್ಷಿಸುವ ಸಿಸ್ಟೊಸ್ಕೊಪಿ ಅಥವಾ ಕೆಳ ಮೂತ್ರಜನಕಾಂಗ ವ್ಯೂಹದ ಕಾರ್ಯಚಟುವಟಿಕೆಯನ್ನು ತಿಳಿಯುವ ಯುರೋಡೈನಾಮಿಕ್‌ ತಪಾಸಣೆಗಳ ಅಗತ್ಯ ಬೀಳಬಹುದು. ಈ ಪರೀಕ್ಷೆಗಳನ್ನು ಮೂತ್ರಕೋಶ ನೋವು ಕಾಯಿಲೆಯನ್ನು ಪತ್ತೆ ಮಾಡುವುದಕ್ಕಿಂತಲೂ ಹೆಚ್ಚಾಗಿ ಇತರ ಅಪಾಯಕಾರಿ ಸಮಸ್ಯೆಗಳ ಸಂಭಾವ್ಯತೆ ಇಲ್ಲ ಎಂಬುದನ್ನು ಖಚಿತ ಪಡಿಸಿಕೊಳ್ಳುವುದಕ್ಕಾಗಿ ಕೈಗೊಳ್ಳಲಾಗುತ್ತದೆ. ದಶಕಗಳ ಕಾಲದಿಂದ ನಡೆದ ಸಂವಾದ, ಅಧ್ಯಯನ, ಸಂಶೋಧನೆಗಳ ಹೊರತಾಗಿಯೂ ಈ ಕಾಯಿಲೆಯ ನಿಖರವಾದ ಕಾರಣ ಏನು ಎಂಬುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ದೀರ್ಘ‌ಕಾಲಿಕ ಸೋಂಕುಗಳು, ಕೆಲವು ಅಲರ್ಜಿಕಾರಕಗಳು ಅಥವಾ ಆಟೊ ಇಮ್ಯೂನ್‌ ಮಾಡ್ಯುಲೇಟರ್‌ಗಳು ಮೂತ್ರಕೋಶದ ಒಳ ರಕ್ಷಣಾ ಭಿತ್ತಿಯನ್ನು ಹಾನಿಗೀಡು ಮಾಡುತ್ತವೆ ಎಂಬುದಾಗಿ ಅಂದಾಜಿಸಲಾಗಿದೆ. ಈ ಹಾನಿಯಿಂದಾಗಿ ಮೂತ್ರವು ಮೂತ್ರಕೋಶದ ಪದರಗಳ ಒಳಗೆ ಹರಿಯಲ್ಪಟ್ಟಾಗ, ಮೂತ್ರದಲ್ಲಿರುವ ವಿಷಾಂಶಗಳಿಂದಾಗಿ ತೊಂದರೆಗಳು ಉದ್ಭವಿಸುತ್ತವೆ. ಇದರಿಂದ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಮೂತ್ರಕೋಶದ ಸ್ನಾಯುಗಳಲ್ಲಿ ನೋವಿನ ಅನುಭವಗಳು ಉಂಟಾಗಿ ಆಗಾಗ ಮೂತ್ರ ವಿಸರ್ಜನೆಯ ಬಯಕೆ ಉಂಟಾಗುತ್ತದೆ.

ಈ ಸಮಸ್ಯೆಗೆ ಅನೇಕ ವಿಧದ ಚಿಕಿತ್ಸೆಗಳು ಲಭ್ಯವಿವೆ. ಜೀವನ ವಿಧಾನ ಬದಲಾವಣೆ, ನಡವಳಿಕೆಯಲ್ಲಿ ಪರಿವರ್ತನೆ, ಔಷಧಗಳು ಮತ್ತು ಶಸ್ತ್ರಚಿಕಿತ್ಸೆ ಇವುಗಳಲ್ಲಿ ಒಳಗೊಂಡಿವೆ. ಚಿಹ್ನೆಗಳು ಮತ್ತು ರೋಗಿಯ ಚರಿತ್ರೆಗಳನ್ನು ಆಧರಿಸಿ ಚಿಕಿತ್ಸೆಯನ್ನು ವ್ಯಕ್ತಿ ನಿರ್ದಿಷ್ಟವಾಗಿ ಒದಗಿಸಬೇಕಾಗುತ್ತದೆ. ಈ ಕಾಯಿಲೆಯ ಸಂದರ್ಭದಲ್ಲಿ ಮೂತ್ರಕೋಶದ ಒಳಭಿತ್ತಿ ತುಂಬಾ ಸಂವೇದನಶೀಲ ಮತ್ತು ಅಸಹಿಷ್ಣುವಾಗಿರುವುದರಿಂದ ಮೂತ್ರವನ್ನು ಹೆಚ್ಚು ಆಮ್ಲಿಯಗೊಳಿಸುವ ಆಹಾರ ಮತ್ತು ಪಾನೀಯಗಳು ರೋಗಲಕ್ಷಣಗಳನ್ನು ಉಲ್ಬಣಗೊಳಿಸಬಲ್ಲವು. ಆಹಾರಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದರಿಂದ ರೋಗಲಕ್ಷಣಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಸಾಧ್ಯವಾಗುತ್ತದೆ. ಕೆಲವು ಆಹಾರ ಮತ್ತು ಪಾನೀಯಗಳು ರೋಗಲಕ್ಷಣಗಳನ್ನು ಉಲ್ಬಣಗೊಳಿಸುವುದು ಖಂಡಿತ – ಅಂತಹ ಆಹಾರ ಮತ್ತು ಪಾನೀಯಗಳೆಂದರೆ, ಕಾಫಿ, ಚಹಾ, ಸೋಡಾ, ಮದ್ಯ, ಸಿಟ್ರಸ್‌ ಹಣ್ಣುಗಳ ರಸಗಳು, ಕ್ರೇನ್‌ಬೆರಿ ಜ್ಯೂಸ್‌ ಮತ್ತು ಮಸಾಲೆಯುಕ್ತ ಆಹಾರಗಳು. ನಿರ್ದಿಷ್ಟ ವ್ಯಕ್ತಿಗೆ ಯಾವ ಆಹಾರ ಅಥವಾ ಪಾನೀಯ ತೊಂದರೆದಾಯಕ ಎಂಬುದನ್ನು ತಿಳಿದುಕೊಳ್ಳಲು ವೈಯಕ್ತಿಕ “ಆಹಾರ ದಿನಚರಿ’ ರೂಪಿಸಿಕೊಳ್ಳುವುದು ಅಗತ್ಯ.

ಆಹಾರ ಶೈಲಿಯಲ್ಲಿ ನಡೆಸುವ ಬದಲಾವಣೆಗಳನ್ನು ವರ್ತನಾತ್ಮಕ ಪರಿವರ್ತನೆಗಳು ಹಾಗೂ ಔಷಧಗಳ ಜತೆಗೆ ಸಂಯೋಜಿಸಿಕೊಳ್ಳುವುದು ಯೋಗ್ಯ. ಮೂತ್ರಕೋಶಕ್ಕೆ ತರಬೇತಿ ನೀಡುವುದು ಹೆಚ್ಚು ಮೂತ್ರವನ್ನು ದೀರ್ಘ‌ಕಾಲ ಹಿಡಿದಿರಿಸಿಕೊಳ್ಳುವ ಉದ್ದೇಶದೊಂದಿಗೆ ನೀಡಲಾಗುವ ಒಂದು ಬಗೆಯ ವರ್ತನಾತ್ಮಕ ಚಿಕಿತ್ಸೆ. ಔಷಧಿಗಳನ್ನು ಬಾಯಿಯ ಮೂಲಕ ಸೇವಿಸಲು ನೀಡಲಾಗುತ್ತದೆ, ಕೆಲವು ತೀವ್ರ ತರಹದ ಪ್ರಕರಣಗಳಲ್ಲಿ ಔಷಧಿಗಳನ್ನು ನೇರವಾಗಿ ಮೂತ್ರಕೋಶಕ್ಕೆ ಊಡಿಸಲಾಗುತ್ತದೆ. ಮೇಲೆ ಹೇಳಲಾದ ಎಲ್ಲ ಬಗೆಯ ಚಿಕಿತ್ಸಾ ವಿಧಾನಗಳಿಗೂ ಪ್ರತಿಕ್ರಿಯಿಸದ ಪ್ರಕರಣಗಳನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿಭಾಯಿಸಲಾಗುತ್ತದೆ. ಆದರೆ ಇಂತಹ ಸಂದರ್ಭಗಳು ಅಪರೂಪ. ಬಹುತೇಕ ರೋಗಿಗಳು ಸರಿಯಾದ ಚಿಕಿತ್ಸೆಯ ಮೂಲಕ ತಮ್ಮ ರೋಗಲಕ್ಷಣಗಳಲ್ಲಿ ಗಮನಾರ್ಹ ಇಳಿಕೆಯನ್ನು ಅನುಭವಿಸುತ್ತಾರೆ ಹಾಗೂ ಸಹಜ ಜೀವನ ನಡೆಸಲು ಶಕ್ತರಾಗುತ್ತಾರೆ.

– ಡಾ| ದೀಕ್ಷಾ ಪಾಂಡೆ 
ಅಸೊಸಿಯೇಟ್‌ ಪ್ರೊಫೆಸರ್‌ (ಒಬಿಜಿವೈಎನ್‌)
ಕಸ್ತೂರ್ಬಾ ವೈದ್ಯಕೀಯ ಆಸ್ಪತ್ರೆ, ಮಣಿಪಾಲ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.