Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ
Team Udayavani, Sep 29, 2024, 12:22 PM IST
ಪರಿಚಯ
ಕಬ್ಬಿಣದಂಶ ಕೊರತೆಯು ಅತೀ ವ್ಯಾಪಕವಾಗಿರುವ ಪೌಷ್ಟಿಕಾಂಶ ಸಮಸ್ಯೆಯಾಗಿದ್ದು, ಜಗತ್ತಿನಾದ್ಯಂತ ವಿವಿಧ ವಯಸ್ಸಿನ ಕೋಟ್ಯಂತರ ಮಂದಿ ಇದರಿಂದ ಬಳಲುತ್ತಿದ್ದಾರೆ. ಕಬ್ಬಿಣದಂಶ ಕೊರತೆಯು ಸಾಮಾನ್ಯವಾಗಿ ರಕ್ತಹೀನತೆಯ ಜತೆಗೆ – ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾಗುವುದರ ಜತೆಗೆ ಸಂಬಂಧ ಹೊಂದಿದೆ. ಆದರೆ ರಕ್ತಹೀನತೆಯಿಲ್ಲದ ಕಬ್ಬಿಣದಂಶ ಕೊರತೆ (ನಾನ್ ಅನೀಮಿಕ್ ಅಯರ್ನ್ ಡಿಫೀಶಿಯೆನ್ಸಿ – ಎನ್ಎಐಡಿ) ಎಂಬ ಇನ್ನೊಂದು ವಿಧವೂ ಇದೆ. ಎನ್ಎಐಡಿಯಲ್ಲಿ ಕಬ್ಬಿಣದಂಶ ಗಮನಾರ್ಹವಾಗಿ ಕಡಿಮೆ ಇರುತ್ತದಾದರೂ ರಕ್ತಹೀನತೆ ಇರುವುದಿಲ್ಲ. ಎನ್ಎಐಡಿಯ ಲಕ್ಷಣಗಳು ಮತ್ತು ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್ ಮತ್ತು ಸೀರಂ ಫೆರಿಟಿನ್ ನಂತಹ ಪರೀಕ್ಷೆಗಳು ಈ ಸ್ಥಿತಿಯನ್ನು ಪತ್ತೆ ಮಾಡಲು ನೆರವಾಗುತ್ತವೆ. ಈ ವಿಷಯವನ್ನು ಚರ್ಚಿಸುವ ಲೇಖನ ಇದು.
ರಕ್ತಹೀನತೆಯಿಲ್ಲದ ಕಬ್ಬಿಣದಂಶ ಕೊರತೆ
ಎನ್ಎಐಡಿಯು ಹಲವು ಲಕ್ಷಣಗಳನ್ನು ಉಂಟು ಮಾಡಬಹುದಾಗಿದೆ. ಇವು ಲಘು ಸ್ವರೂಪದಲ್ಲಿದ್ದರೂ ದೈನಿಕ ಚಟುವಟಿಕೆಗಳನ್ನು ಸಾಕಷ್ಟು ಬಾಧಿಸಬಹುದು. ಇಂತಹ ಲಕ್ಷಣಗಳು ಎಂದರೆ:
- ದಣಿವು ಮತ್ತು ದೌರ್ಬಲ್ಯ
ರಕ್ತಹೀನತೆ ಇಲ್ಲದಿದ್ದರೂ ಕಬ್ಬಿಣದಂಶ ಕಡಿಮೆ ಇರುವುದು ಶಕ್ತಿಯ ಮಟ್ಟ ಕುಸಿಯಲು ಕಾರಣವಾಗಬಹುದು. ಇದರಿಂದ ಸತತ ದಣಿವು ಮತ್ತು ದೇಹ ದೌರ್ಬಲ್ಯ ಅನುಭವಕ್ಕೆ ಬರಬಹುದು.
- ಇಂದ್ರಿಯ ಗ್ರಹಣ ಮತ್ತು ವರ್ತನಾತ್ಮಕ ಬದಲಾವಣೆಗಳು
ಕಬ್ಬಿಣದಂಶವು ಮೆದುಳು ಸರಿಯಾಗಿ ಕೆಲಸ ಮಾಡಲು ಅತ್ಯಾವಶ್ಯಕ ಅಂಶ. ಕಬ್ಬಿಣದಂಶ ಕಡಿಮೆ ಇದ್ದರೆ ಏಕಾಗ್ರತೆ, ಸ್ಮರಣೆ ಮತ್ತು ಮನೋಭಾವನೆಗಳಲ್ಲಿ ತೊಂದರೆ ಉಂಟಾಗಬಹುದು. ಮಕ್ಕಳಲ್ಲಿ ಇದು ಕಲಿಕೆ ಮತ್ತು ವರ್ತನೆಗೆ ಸಂಬಂಧಿಸಿ ಸಮಸ್ಯೆ ಉಂಟು ಮಾಡಬಹುದು.
- ದೈಹಿಕ ಚಟುವಟಿಕೆಗಳ ಸಾಮರ್ಥ್ಯದಲ್ಲಿ ಕುಸಿತ
ಎನ್ಎಐಡಿಗೆ ತುತ್ತಾಗಿರುವ ಕ್ರೀಡಾಳುಗಳು ಸಾಮರ್ಥ್ಯ ಮತ್ತು ಸದೃಢತೆಯ ಕುಸಿತ ಅನುಭವಿಸಬಹುದು. ಯಾಕೆಂದರೆ ಆಮ್ಲಜನಕವು ಸ್ನಾಯುಗಳಿಗೆ ಸರಬರಾಜಾಗಲು ಮತ್ತು ಸ್ನಾಯುಗಳು ಚೆನ್ನಾಗಿ ಕೆಲಸ ಮಾಡಲು ಕಬ್ಬಿಣದಂಶ ಅತ್ಯಗತ್ಯ.
- ಕೂದಲು ಉದುರುವಿಕೆ ಮತ್ತು ಉಗುರುಗಳು ಬಿರುಕುಬಿಡುವುದು
ಕಬ್ಬಿಣದಂಶವು ಚರ್ಮ, ಕೂದಲುಗಳು ಮತ್ತು ಉಗುರುಗಳು ಆರೋಗ್ಯಪೂರ್ಣವಾಗಿ ಇರಲು ಅಗತ್ಯ. ಕಬ್ಬಿಣದಂಶ ಕೊರತೆಯಿಂದ ಕೂದಲು ಉದುರಬಹುದು, ಉಗುರುಗಳು ದುರ್ಬಲವಾಗಿ ಬಿರುಕು ಬಿಡಬಹುದು, ತುಂಡಾಗಬಹುದು.
- ರೆಸ್ಟ್ಲೆಸ್ ಲೆಗ್ಸ್ ಸಿಂಡ್ರೋಮ್ (ಆರ್ಎಲ್ಎಸ್)
ಎನ್ಎಐಡಿಯು ಕಾಲುಗಳನ್ನು ಸದಾ ಚಲಿಸುತ್ತಲೇ ಇರಬೇಕು ಎನ್ನುವ ನಿಯಂತ್ರಣ ರಹಿತ ಆಗ್ರಹಕ್ಕೆ ಕಾರಣವಾಗಬಹುದು. ಇದು ಆರ್ಎಲ್ಎಸ್ನ ಒಂದು ಸಾಮಾನ್ಯ ಲಕ್ಷಣವಾಗಿದೆ.
- ಸೋಂಕುಗಳಿಗೆ ತುತ್ತಾಗುವ ಅಪಾಯ ಹೆಚ್ಚಳ
ಕಬ್ಬಿಣದಂಶವು ರೋಗ ನಿರೋಧಕ ಶಕ್ತಿ ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದ್ದರಿಂದ ಕಬ್ಬಿಣದಂಶ ಕಡಿಮೆಯಾದರೆ ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಸೋಂಕುಗಳಿಗೆ ಸುಲಭವಾಗಿ ತುತ್ತಾಗಬಹುದು.
ಎನ್ಎಐಡಿಯಲ್ಲಿ ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್
ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್ ಅಂಶ Reticulocyte hemoglobin content (CHr)ವು ಕಬ್ಬಿಣದಂಶದ ಸ್ಥಿತಿಗತಿಯನ್ನು ಅಳೆಯಲು ಹೊಸ ವಿಧಾನವಾಗಿದೆ. ರೆಟಿಕ್ಯುಲೊಸೈಟ್ ಗಳು ಪ್ರಬುದ್ಧವಲ್ಲದ ಕೆಂಪು ರಕ್ತ ಕಣಗಳಾಗಿದ್ದು, ಅವು ಹೊಂದಿರುವ ಹಿಮೊಗ್ಲೋಬಿನ್ ಪ್ರಮಾಣವು ಹೊಸ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಎಷ್ಟು ಕಬ್ಬಿಣದಂಶ ಲಭ್ಯವಿದೆ ಎಂಬುದನ್ನು ಸೂಚಿಸುತ್ತದೆ.
- ಶೀಘ್ರ ಪತ್ತೆ
ಸಿಎಚ್ಆರ್ ಪರೀಕ್ಷೆಯಿಂದ ಸಾಮಾನ್ಯ ರಕ್ತ ಪರೀಕ್ಷೆಗಳಾದ ಫೆರಿಟಿನ್ ನಂಥವುಗಳಿಗಿಂತ ಮುಂಚಿತವಾಗಿ ಕಬ್ಬಿಣದಂಶ ಕೊರತೆಯನ್ನು ಪತ್ತೆಹಚ್ಚಬಹುದು. ಕಡಿಮೆ ಸಿಎಚ್ ಆರ್ (28 ಪಿಜಿಗಳಿಗಿಂತ ಕಡಿಮೆ) ಮಟ್ಟವು ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಕಬ್ಬಿಣದಂಶ ಲಭ್ಯವಿಲ್ಲ ಎಂಬುದನ್ನು ರಕ್ತಹೀನತೆಯು ಉಂಟಾಗುವುದಕ್ಕೆ ಮುನ್ನವೇ ಸೂಚಿಸುತ್ತವೆ.
- ಕಬ್ಬಿಣದಂಶ ಪೂರಣ ಚಿಕಿತ್ಸೆಯ ನಿಗಾ
ಕಬ್ಬಿಣದಂಶ ಮರುಪೂರಣ ಚಿಕಿತ್ಸೆಯು ಪ್ರಯೋಜನ ಉಂಟುಮಾಡುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸಿಎಚ್ಆರ್ ಸಹಾಯಕವಾಗಿದೆ. ಕಬ್ಬಿಣದಂಶ ಪೂರಕ ಔಷಧಗಳನ್ನು ಆರಂಭಿಸಿದ ಬಳಿಕ ಸಿಎಚ್ಆರ್ ಹೆಚ್ಚಳವಾಗಿರುವುದು ಪರಿಸ್ಥಿತಿ ಸುಧಾರಣೆಯಾಗುತ್ತಿದೆ ಎಂಬುದರ ಸೂಚನೆಯಾಗಿರುತ್ತದೆ.
- ಅನಾರೋಗ್ಯ ಸ್ಥಿತಿಯ ವ್ಯತ್ಯಾಸ ತಿಳಿಯುವುದು
ಎನ್ಎಐಡಿಯಿಂದ ಉಂಟಾಗಿರುವ ರಕ್ತಹೀನತೆ ಮತ್ತು ಇತರ ಯಾವುದೇ ದೀರ್ಘಕಾಲೀನ ಕಾಯಿಲೆಯಿಂದ ಉಂಟಾಗಿರುವ ರಕ್ತಹೀನತೆಯ ನಡುವಣ ವ್ಯತ್ಯಾಸವನ್ನು ತಿಳಿಯಲು ಸಿಎಚ್ ಆರ್ ಸಹಾಯ ಮಾಡುತ್ತದೆ. ಇತರ ದೀರ್ಘಕಾಲೀನ ಅನಾರೋಗ್ಯಗಳಿಂದ ಉಂಟಾಗಿರುವ ರಕ್ತಹೀನತೆಯ ಸಂದರ್ಭದಲ್ಲಿ ಕಬ್ಬಿಣದಂಶವು ಜೀವಕೋಶಗಳಲ್ಲಿ ಸಿಲುಕಿ ದೇಹದ ಬಳಕೆಗೆ ಲಭ್ಯವಾಗುವುದಿಲ್ಲ.
ಎನ್ಎಐಡಿಯಲ್ಲಿ ಸೀರಂ ಫೆರಿಟಿನ್
ಕಬ್ಬಿಣದಂಶ ದಾಸ್ತಾನನ್ನು ಪತ್ತೆಹಚ್ಚಲು ಉಪಯೋಗಿಸುವ ಸಾಮಾನ್ಯ ಪರೀಕ್ಷೆ ಸೀರಂ ಫೆರಿಟಿನ್. ಫೆರಿಟಿನ್ ದೇಹದಲ್ಲಿ ಕಬ್ಬಿಣದಂಶವನ್ನು ದಾಸ್ತಾನು ಮಾಡಿಕೊಳ್ಳುತ್ತದೆ ಮತ್ತು ಅಗತ್ಯಬಿದ್ದಾಗ ಬಿಡುಗಡೆ ಮಾಡುತ್ತದೆ.
- ಕಬ್ಬಿಣದಂಶ ದಾಸ್ತಾನು ಸೂಚಕ
ಫೆರಿಟಿನ್ ಮಟ್ಟ ಕಡಿಮೆ ಇರುವುದು (30 ಎನ್ಜಿ/ಎಂಎಲ್ ಗಿಂತ ಕಡಿಮೆ) ರಕ್ತಹೀನತೆ ಇಲ್ಲದೆ ಇದ್ದರೂ ಕಬ್ಬಿಣದಂಶ ಸಂಗ್ರಹ ಕುಸಿದಿರುವ ಸೂಚನೆಯಾಗಿರುತ್ತದೆ.
- ಉರಿಯೂತ
ಉರಿಯೂತದಿಂದಾಗಿ ಫೆರಿಟಿನ್ ಮಟ್ಟದಲ್ಲಿ ಹೆಚ್ಚಳ ಕಂಡುಬರಬಹುದು, ಇದರಿಂದ ಇರಬಹುದಾದ ಕಬ್ಬಿಣದಂಶ ಕೊರತೆಯು ಪತ್ತೆಯಾಗದೆ ಇರಬಹುದು. ಇದೇ ಕಾರಣದಿಂದ ಫೆರಿಟಿನ್ ಪರೀಕ್ಷೆಯ ಜತೆಗೆ ಇತರ ಪರೀಕ್ಷೆಗಳನ್ನು ಕೂಡ ನಡೆಸುವುದು ಅಗತ್ಯವಾಗಿರುತ್ತದೆ.
- ಸಮಸ್ಯಾ ಸೂಚಕ ಅಂಕಿಅಂಶ
ರಕ್ತಹೀನತೆ ಹೊಂದಿಲ್ಲದ ವ್ಯಕ್ತಿಗಳಲ್ಲಿ 15-30 ಎನ್ಜಿ/ಎಂಎಲ್ ಫೆರಿಟಿನ್ ಮಟ್ಟವು ಎನ್ಎಐಡಿಯನ್ನು ಸೂಚಿಸಬಹುದಾಗಿದೆ. 15 ಎನ್ಜಿ/ ಎಂಎಲ್ ಮಟ್ಟವು ಕಬ್ಬಿಣದಂಶ ಕೊರತೆಯ ತೀವ್ರ ಲಕ್ಷಣವಾಗಿರುತ್ತದೆ.
–ಮುಂದಿನ ವಾರಕ್ಕೆ
-ಸಿಂಧೂರಲಕ್ಷ್ಮೀ ಕೆ.ಎಲ್.
ಅಸೋಸಿಯೇಟ್ ಪ್ರೊಫೆಸರ್
ಪೆಥಾಲಜಿ ವಿಭಾಗ,
ಕೆಎಂಸಿ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Davanagere; ಗಣೇಶೋತ್ಸವ ನಿಲ್ಲಿಸುವ ಷಡ್ಯಂತ್ರ, ಪಿತೂರಿ ನಡೆಯುತ್ತಿದೆ: ಯತ್ನಾಳ್ ಆರೋಪ
Yaduveer Wadiyar: ಉಡುಪಿ ಶ್ರೀಕೃಷ್ಣಮಠಕ್ಕೆ ಸಂಸದ ಯದುವೀರ್ ಭೇಟಿ
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡದ ಸಿದ್ದರಾಮಯ್ಯ ದಪ್ಪ ಚರ್ಮದವರು: ಜೋಶಿ ಟೀಕೆ
MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ
Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.