Lung Health: ಶ್ವಾಸಕೋಶಗಳ ಆರೋಗ್ಯದಲ್ಲಿ ವಿಟಮಿನ್‌ಗಳ ಪಾತ್ರ


Team Udayavani, Jun 16, 2024, 10:09 AM IST

2-lungs

ಆಹಾರದ ಮೂಲಕ ಅಥವಾ ಅಗತ್ಯ ಬಿದ್ದರೆ ಮಲ್ಟಿವಿಟಮಿನ್‌ಗಳ ಮೂಲಕ ದೇಹಕ್ಕೆ ಆವಶ್ಯಕವಾಗಿರುವ ವಿಟಮಿನ್‌ಗಳನ್ನು ಪೂರೈಸುವುದು ನಮ್ಮ ರೋಗನಿರೋಧಕ ಶಕ್ತಿಯನ್ನು ಕಾಯ್ದುಕೊಳ್ಳುವುದಕ್ಕೆ ಒಂದು ಅತ್ಯುತ್ತಮ ವಿಧಾನ ಎಂಬುದನ್ನು ನಾವು ಆಗಾಗ ಕೇಳುತ್ತಿರುತ್ತೇವೆ ಅಥವಾ ಓದುತ್ತಿರುತ್ತೇವೆ. ಆದರೆ ಇದು ಯಾಕೆ ಎಂಬುದು ನಮಗೆ ತಿಳಿದಿದೆಯೇ?

ಶ್ವಾಸಕೋಶಗಳು ಶ್ವಾಸಾಂಗ ವ್ಯವಸ್ಥೆಗೆ ಬುನಾದಿಯಂತಿರುವ ಅಂಗಗಳು. ವಾತಾವರಣದಿಂದ ಆಮ್ಲಜನಕವನ್ನು ಪರಿಶೋಧಿಸಿ ಜೀವಕೋಶಗಳ ಸ್ತರದಲ್ಲಿ ನಡೆಯುವ ಏರೋಬಿಕ್‌ ಶ್ವಾಸೋಚ್ಚ್ವಾಸ ಕ್ರಿಯೆಗೆ ಒದಗುವಂತೆ ಮಾಡುವುದು ಶ್ವಾಸಕೋಶಗಳ ಪ್ರಧಾನ ಕಾರ್ಯ. ಆದರೆ ಈ ಉಸಿರಾಟ ಕ್ರಿಯೆಯ ಜತೆಗೆ ಅವುಗಳು ಇತರ ಕೆಲವು ಉಸರಾಟೇತರ ಕಾರ್ಯಚಟುವಟಿಕೆಗಳನ್ನು ಕೂಡ ನಿರ್ವಹಿಸುತ್ತವೆ. ಶ್ವಾಸಕೋಶಗಳು ಮಾಲಿನ್ಯಕಾರಕಗಳು, ಮೈಕ್ರೊಬಯೋಟಾ ಮತ್ತು ಅಲರ್ಜಿಕಾರಕಗಳಂತಹ ತುಲನಾತ್ಮಕವಾಗಿ ಕಡಿಮೆ ಅಪಾಯಕಾರಿಯಾಗಿರುವ ಅಂಶಗಳ ಜತೆಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತವೆ.

ಶ್ವಾಸಾಂಗದ ಒಳಪದರ (ರೆಸ್ಪಿರೇಟರಿ ಎಪಿಥೇಲಿಯಂ)ವು ಶಾಖದ ಜತೆಗೂಡಿ, ಆದ್ರ ಆದ್ರವಾಗಿದ್ದು ಶ್ವಾಸಾಂಗದ ಮೂಲಕ ಒಳಬರುವ ಈ ಅಂಶಗಳನ್ನು ನಿವಾರಿಸುತ್ತದೆ. ದಿ ಸಿಲಿಯೇಟೆಡ್‌ ಸ್ಯುಡೊಸ್ಟ್ರಾಟಿಫೈಡ್‌ ಕೊಲಮ್ನಾರ್‌ ಎಪಿಥೇಲಿಯಂ ಎಂಬ ಸಂರಚನೆಯು ಶ್ವಾಸಾಂಗ ವ್ಯೂಹದ ಒಳಭಾಗವನ್ನಿಡೀ ಆವರಿಸಿಕೊಂಡಿದೆ. ಸೂಕ್ಷ್ಮದರ್ಶಕದ ಮೂಲಕ ಈ ಸಂರಚನೆಯನ್ನು ವೀಕ್ಷಿಸಿದರೆ ಅತ್ಯಂತ ಸೂಕ್ಷ್ಮವಾದ ಕೇಶರಾಶಿಯಂತೆ ಅದು ಇರುವುದು ಕಂಡುಬರುತ್ತದೆ. ಈ ಕೇಶರಾಶಿಯಂತಹ ರಚನೆಯು ಶ್ವಾಸಕೋಶಗಳ ಒಳ ಪ್ರವೇಶಿಸುವ ಗಾಳಿಯ ಸರಾಗ ಚಲನೆ ಮತ್ತು ಹದಗೊಳಿಸುವುದರ ಜತೆಗೆ ಆಗಲೇ ಹೇಳಿದ ಕೆಟ್ಟ ಅಂಶಗಳನ್ನು ಹೊರಕ್ಕೆ ಕಳುಹಿಸುವ ಎಸ್ಕಲೇಟರ್‌ ನಂತೆ ಕೆಲಸ ಮಾಡುತ್ತದೆ.

ಶೀತವಾದಾಗ ನಾವು ಕೆಮ್ಮುವ ಅಥವಾ ಧೂಮಪಾನಿಗಳು ಕ್ಯಾಕರಿಸಿ ಉಗಿಯುವ ಅಥವಾ ಎಲ್ಲರಲ್ಲೂ ಮೂಗು, ಗಂಟಲಿನಲ್ಲಿ ಇರುವ ಸಿಂಬಳ ಅಥವಾ ಲೋಳೆಯಾದ ದ್ರವವು ಶ್ವಾಸಾಂಗದ ರಕ್ಷಣೆಯ ಮೊದಲ ತಡೆಬೇಲಿಯಂತೆ ಕೆಲಸ ಮಾಡಲು “ಗೊಬ್ಲೆಟ್‌ ಸೆಲ್‌’ಗಳಿಂದ ಉತ್ಪಾದನೆಯಾಗುತ್ತದೆ.

ಶ್ವಾಸಾಂಗದಲ್ಲಿ ಉತ್ಪಾದನೆಯಾಗುವ ಈ ಲೋಳೆದ್ರವವು ಆ್ಯಂಟಿಮೈಕ್ರೋಬಿಯಲ್‌ ಪೆಪ್ಟೆ„ಡ್‌ಗಳು, ಡಿಫೆನ್ಸಿನ್‌ಗಳು, ಸೈಟೊಕಿನ್‌ ಗಳು ಮತ್ತು ಆ್ಯಂಟಿಬಾಡಿಯಂತಹ ರಾಸಾಯನಿಕ ಅಂಶಗಳು ಮತ್ತು ರಿಸೆಪ್ಟರ್‌ಗಳನ್ನು ಕೂಡ ಹೊಂದಿರುತ್ತದೆ. ಇನ್‌ಫ್ಲಮೇಟರಿ ಮೀಡಿಯೇಟರ್‌ಗಳನ್ನು ಕೂಡ ಈ ಲೋಳೆದ್ರವವು ಹೊಂದಿದ್ದು, ಇವುಗಳಲ್ಲಿ ಐಜಿಎ (IgA) ಎಂಬುದು ಮುಖ್ಯ ಘಟಕವಾಗಿದೆ. ಈ ರೋಗಪ್ರತಿಬಂಧಕ ಕಾಯಗಳು ಸಂಭಾವ್ಯ ರೋಗಕಾರಕ ಅಪಾಯಗಳನ್ನು ಗುರುತಿಸಿ ಪ್ರತಿರಕ್ಷಣೆ ಒದಗಿಸುವ ಜತೆಗೆ ಶ್ವಾಸಕೋಶಗಳ ಸಹಜ ಕಾರ್ಯಚಟುವಟಿಕೆಗಳಿಗೆ ಉರಿಯೂತವು ಅಡ್ಡಿಯಾಗದಂತೆ ತಡೆಯುವ ಉರಿಯೂತ ಪ್ರಕ್ರಿಯೆಯ ನಿಯಂತ್ರಣದ ಕೆಲಸವನ್ನೂ ಮಾಡುತ್ತವೆ.

ಇದರ ಜತೆಗೆ ಗಂಟಲಿನಲ್ಲಿರುವ ಟಾನ್ಸಿಲ್‌ಗ‌ಳಲ್ಲಿ ಇರುವ ರಚನೆಯನ್ನು ಹೋಲುವ ಶ್ವಾಸಾಂಗದ ಫಾಲಿಕ್ಯುಲಾರ್‌ ಭಾಗಗಳಲ್ಲಿ ಟಿ ಮತ್ತು ಬಿ ಲಿಂಫೊಸೈಟ್‌ಗಳು (ಬಿಎಎಲ್‌ಟಿ – ಬ್ರಾಂಕಸ್‌-ಅಸೋಸಿಯೇಟೆಡ್‌ ಲಿಂಫಾಯಿಡ್‌ ಟಿಶ್ಯೂ) ಸಮೃದ್ಧವಾಗಿದ್ದು, ಸೋಂಕುಗಳ ವಿರುದ್ಧ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಈ ಎಲ್ಲ ಅತೀ ಸೂಕ್ಷ್ಮವಾದ ಸಂರಚನೆಗಳು ಜತೆಗೂಡಿ ನಾವು ಸೋಂಕುಗಳಿಗೆ ಒಳಗಾಗದೆ ಮತ್ತು ಪರಿಸರದ ಜತೆಗೆ ಸಮತೋಲನದಲ್ಲಿದ್ದು ಶ್ವಾಸಕೋಶಗಳು ಆರೋಗ್ಯಯುತವಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತವೆ.

ಧೂಮಪಾನದಿಂದ ಉಂಟಾದ ಆಕ್ಸಿಡೇಟಿವ್‌ ಒತ್ತಡ, ಒಳಾಂಗಣ ಅಥವಾ ಹೊರಾಂಗಣದ ಮಾಲಿನ್ಯ ಅಥವಾ ಸೋಂಕಿನಿಂದಾಗಿ ಈ ಸೂಕ್ಷ್ಮ ಸಮತೋಲನವು ಹದಗೆಡಬಹುದಾಗಿದೆ. ಅಸ್ತಮಾ, ಸಿಒಪಿಡಿ ರೋಗಿಗಳ ಶ್ವಾಸಾಂಗ ಮಾರ್ಗದಲ್ಲಿ ಉಂಟಾಗುವ ಉರಿಯೂತ ಪ್ರತಿಸ್ಪಂದನೆಯು ರೆಸ್ಪಿರೇಟರಿ ಎಪಿಥೇಲಿಯಂ, ಜನ್ಮಜಾತ ರೋಗನಿರೋಧಕ ವ್ಯವಸ್ಥೆ ಮತ್ತು ಆ ಬಳಿಕ ಉಂಟಾದ ರೋಗ ನಿರೋಧಕ ಶಕ್ತಿಗಳ ಪರಸ್ಪರ ಸಂವಹನವನ್ನು ಒಳಗೊಂಡಿದ್ದು, ಇದು ದೀರ್ಘ‌ಕಾಲೀನ ಉರಿಯೂತ ಪ್ರತಿಸ್ಪಂದನೆಯನ್ನು ಪ್ರಚೋದಿಸುತ್ತದೆ.

ಅಸ್ತಮಾ, ಸಿಒಪಿಡಿ ಮತ್ತು ಶ್ವಾಸಾಂಗ ವೈರಾಣು ಸೋಂಕುಗಳಂತಹ ಶ್ವಾಸಾಂಗ ಅಡಚಣೆ ಕಾಯಿಲೆ (ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸಸ್‌) ಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ತಡೆಯುವ ಹಾಗೂ ಅವುಗಳ ನಿರ್ವಹಣೆಯ ಕಾರ್ಯವಿಧಾನದಲ್ಲಿ ಆಹಾರ ಶೈಲಿ ಮತ್ತು ಪೌಷ್ಟಿಕಾಂಶಗಳು ಪ್ರಾಮುಖ್ಯ, ಬದಲಾಯಿಸಬಹುದಾದ ಅಂಶಗಳಾಗಿವೆ. ಸಸ್ಯಜನ್ಯ ಅಥವಾ ಪ್ರಾಣಿಜನ್ಯವಾದ ಹಲವಾರು ವಿಧದ ಆಹಾರಗಳಲ್ಲಿ ವಿಟಮಿನ್‌ ಗಳು ಮತ್ತು ಸೂಕ್ಷ್ಮ ಪೋಷಕಾಂಶಗಳು ಲಭ್ಯವಿವೆ. ತಮ್ಮ ಪೌಷ್ಟಿಕಾಂಶ ಪಾತ್ರದ ಜತೆಗೆ ಅವು ರೋಗನಿರೋಧಕ ಶಕ್ತಿ ಮತ್ತು ಕರುಳಿನಲ್ಲಿ ಮತ್ತು ಶ್ವಾಸಾಂಗದಲ್ಲಿರುವಂತಹ ಲೋಳೆದ್ರವಗಳ ಸ್ಥಿರೀಕರಣ (ಹೋಮಿಯೊಸ್ಟಾಸಿಸ್‌) ಕ್ರಿಯೆಯಲ್ಲಿಯೂ ಭಾಗವಹಿಸುತ್ತವೆ.

ಈ ಕ್ರಿಯೆಯಲ್ಲಿ ರೋಗ ನಿರೋಧಕ ಪ್ರತಿಕ್ರಿಯೆಯ ನಿಯಂತ್ರಕ ಮಾಲೆಕ್ಯೂಲ್‌ಗ‌ಳ ಜೈವಿಕ ಸಂಶ್ಲೇಷಣೆಗೆ ಅಗತ್ಯವಾದ ಪ್ರಧಾನ ಆಧಾರ ಅಂಶಗಳನ್ನು ಪಡೆಯಲಾಗುತ್ತದೆ. ಶ್ವಾಸಕೋಶಗಳ ಆರೋಗ್ಯ ಮತ್ತು ಹೋಮಿಯೋಸ್ಟಾಸಿಸ್‌ ಕ್ರಿಯೆಗೆ ಸಂಬಂಧಿಸಿದ ಹೇಳುವುದಾದರೆ, ತಮ್ಮ ಉರಿಯೂತ ನಿರೋಧಕ ಕಾರ್ಯದಿಂದ ಮಾತ್ರವಲ್ಲದೆ ರೋಗಕಾರಕಗಳ ವಿರುದ್ಧ ಪ್ರತಿರೋಧಕ ಪ್ರತಿಸ್ಪಂದನೆಯಲ್ಲಿಯೂ ಭಾಗವಹಿಸುವ ಗುಣ ಹೊಂದಿರುವುದರಿಂದ ವಿಟಮಿನ್‌ ಡಿ, ಎ, ಸಿ ಮತ್ತು ಇ ಬಹು ಮುಖ್ಯ ಎಂದು ಪರಿಗಣಿತವಾಗಿವೆ.

ಈ ವಿಟಮಿನ್‌ಗಳ ಪೈಕಿ ವಿಟಮಿನ್‌ ಡಿ ಅತ್ಯಂತ ಮುಖ್ಯವಾದದ್ದು. ವಿಟಮಿನ್‌ ಡಿಯ ಚಯಾಪಚಯ ಕ್ರಿಯೆ ಮತ್ತು ಜೀವಶಾಸ್ತ್ರೀಯ ಪರಿಣಾಮಗಳ ಬಗ್ಗೆ ನಮ್ಮ ತಿಳಿವಳಿಕೆ ಇತ್ತೀಚೆಗಿನ ವರ್ಷಗಳಲ್ಲಿ ಅಪಾರವಾಗಿ ಬೆಳೆದಿದೆ. ವಿಟಮಿನ್‌ ಡಿಯು ಅಪಾರವಾದ ರೋಗ ಪ್ರತಿರೋಧ ಶಕ್ತಿ ಪರಿವರ್ತಕ ಗುಣ ಹೊಂದಿರುವುದು ಸ್ಪಷ್ಟವಾಗಿದೆ. ವಿಟಮಿನ್‌ ಡಿ ಕೊರತೆಯಾದರೆ ಪ್ರಮುಖ ಶ್ವಾಸಾಂಗ ವ್ಯೂಹ ಸೋಂಕುಗಳು ಮತ್ತು ಮೈಕೊಬ್ಯಾಕ್ಟೀರಿಯಲ್‌ ಸೋಂಕುಗಳಿಗೆ ತುತ್ತಾಗುವ ಅಪಾಯ ಹೆಚ್ಚುತ್ತದೆ ಎಂಬುದು ಸೋಂಕುರೋಗಶಾಸ್ತ್ರೀಯ ಅಧ್ಯಯನಗಳಿಂದ ತಿಳಿದುಬಂದಿದೆ.

ಅಲ್ಲದೆ ವಿಟಮಿನ್‌ ಡಿಯು ಅಸ್ತಮಾ ಉಂಟಾಗಲು ಮತ್ತು ಅದರ ಚಿಕಿತ್ಸೆಯಲ್ಲಿ ಪ್ರಾಮುಖ್ಯ ಪಾತ್ರ ವಹಿಸಬಹುದಾಗಿದೆ ಎಂಬುದು ಕೂಡ ಗೊತ್ತಾಗಿದೆ. ಮೈಕೊಬ್ಯಾಕ್ಟೀರಿಯಲ್‌ ಸೋಂಕುಗಳ ಚಿಕಿತ್ಸೆಯಲ್ಲಿ ಅತಿನೇರಳೆ ಬೆಳಕು ಸಹಾಯ ಮಾಡಬಲ್ಲುದು ಎಂಬುದು ಸುಮಾರು ಒಂದು ಶತಮಾನದಷ್ಟು ಹಿಂದೆಯೇ ನಮಗೆ ತಿಳಿದುಬಂದಿತ್ತು.

ಲೂಪಸ್‌ ವಲ್ಗಾರಿಸ್‌ (ಚರ್ಮದ ಕ್ಷಯ ರೋಗ) ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅತಿನೇರಳೆ ಬೆಳಕು ಪ್ರಯೋಜನಕಾರಿ ಎಂಬುದನ್ನು ಸಾಬೀತುಪಡಿಸಿದ್ದಕ್ಕಾಗಿ ನೀಲ್ಸ್‌ ಫಿನ್ಸೆನ್‌ ಎಂಬ ವಿಜ್ಞಾನಿಗೆ 1903ರಲ್ಲಿ ವೈದ್ಯಕೀಯ ವಿಜ್ಞಾನದ ನೊಬೆಲ್‌ ಪ್ರಶಸ್ತಿಯನ್ನು ಘೋಷಿಸಲಾಗಿತ್ತು. 19ನೇ ಶತಮಾನದ ಕೊನೆಯ ವೇಳೆಗೆ ಹರ್ಮನ್‌ ಬ್ರಹ್ಮರ್‌ ಎಂಬ ಇನ್ನೊಬ್ಬ ವಿಜ್ಞಾನಿ ಕ್ಷಯ ರೋಗಿಗಳ ಚಿಕಿತ್ಸೆಗಾಗಿ ಮೊತ್ತಮೊದಲ ಸ್ಯಾನಟೋರಿಯಂ ಸ್ಥಾಪಿಸಿದ್ದರು.

ಇಲ್ಲಿ ಕ್ಷಯ ರೋಗಿಗಳು ಸಾಕಷ್ಟು ಎತ್ತರದ ಪ್ರದೇಶದಲ್ಲಿದ್ದು, ತಾಜಾ ಗಾಳಿ ಮತ್ತು ಉತ್ತಮ ಪೌಷ್ಟಿಕಾಂಶ ಪಡೆಯುವಂತೆ ಮಾಡಲಾಗಿತ್ತು. ಈ ಸ್ಯಾನಿಟೋರಿಯಂಗಳಲ್ಲಿ ಇದ್ದ ಕ್ಷಯ ರೋಗಿಗಳು ಅತಿನೇರಳೆ ಬೆಳಕಿಗೆ ಒಡ್ಡಿಕೊಂಡದ್ದರಿಂದ ಮತ್ತು ಚರ್ಮದಲ್ಲಿ ವಿಟಮಿನ್‌ ಡಿಯ ಪೂರ್ವ ಸ್ವರೂಪದ ಉತ್ಪಾದನೆ ಹೆಚ್ಚಿದ್ದರಿಂದ ಇಲ್ಲಿದ್ದ ಕ್ಷಯ ರೋಗಿಗಳು ಪ್ರಯೋಜನ ಪಡೆಯುವಂತಾಯಿತು ಎಂಬುದಾಗಿ ಆ ಬಳಿಕ ಊಹಿಸಲಾಯಿತು.

ಕಳೆದ ಹಲವಾರು ದಶಕಗಳಿಂದ ಅಸ್ತಮಾ ಪ್ರಕರಣಗಳಲ್ಲಿ ಗಣನೀಯ ಏರಿಕೆ ಕಂಡುಬರುತ್ತಿದೆ, ಇದೇ ಅವಧಿಯಲ್ಲಿ ವಿಟಮಿನ್‌ ಡಿ ಕೊರತೆಯೂ ಇದಕ್ಕೆ ಅನುಗುಣವಾಗಿ ಹೆಚ್ಚಳ ಕಂಡಿದೆ. ಅಸ್ತಮಾ ರೋಗಿಗಳಲ್ಲಿ ವಿಟಮಿನ್‌ ಡಿ ಕೊರತೆಯು ಸಾಮಾನ್ಯವಾಗಿದ್ದು, ವಿಟಮಿನ್‌ ಡಿಯನ್ನು ಪೂರೈಸುವುದರಿಂದ ಅಸ್ತಮಾದ ತೀವ್ರತೆ ಕಡಿಮೆಯಾಗುವುದು ಹಾಗೂ ಕಾರ್ಟಿಕೊಸ್ಟಿರಾಯ್ಡಗಳಂತಹ ಅಸ್ತಮಾ ಚಿಕಿತ್ಸೆಗೆ ಪ್ರತಿಸ್ಪಂದನೆ ಚೆನ್ನಾಗಿ ಆಗುವುದು ಸಾಧ್ಯ. ವಿಟಮಿನ್‌ ಡಿಯನ್ನು ಪೂರೈಸಿದರೆ ಟಿ ಲಿಂಫೊಸೈಟ್‌ ರೆಗ್ಯುಲೇಟರ್‌ ಒದಗುವುದು ಮತ್ತು ಇಮ್ಯೂನ್‌ ಮೀಡಿಯೇಟರ್‌ ಆಗಿರುವ ಐಎಲ್‌-1 ಸ್ರಾವವಾಗುವುದರಿಂದ ಇದು ಸಾಧ್ಯವಾಗುತ್ತದೆ.

ವಿಟಮಿನ್‌ ಎ ವಿಷಯವಾಗಿಯೂ ಇದೇ ತರಹದ ಅಧ್ಯಯನ ಫ‌ಲಿತಾಂಶಗಳು ಲಭಿಸಿವೆ. ವಿಟಮಿನ್‌ ಎಯು ಶ್ವಾಸಕೋಶದಲ್ಲಿ ಟಿರೆಗ್‌ ಜೀವಕೋಶಗಳು ಮತ್ತು ಟಿಎಚ್‌2 ಮತ್ತು ಟಿಎಚ್‌17 ಸೈಟೋಕಿನ್‌ಗಳು ವೃದ್ಧಿಸಲು ಕಾರಣ ವಾಗುತ್ತವೆ. ವಿಟಮಿನ್‌ ಇಯು ಟಿಎಚ್‌2 ಸೈಟೋಕಿನ್‌ಗಳನ್ನು ಸ್ಥಳೀಯವಾಗಿ ಮತ್ತು ದೈಹಿಕ ಸಂರಚನೆ ಎರಡರಲ್ಲೂ ಕಡಿಮೆ ಮಾಡುತ್ತದೆ. ಮೆಗ್ನಿಸಿಯಂ ಬ್ರಾಂಕೊಡಯಲೇಟರ್‌ ಪರಿ ಣಾಮಗಳನ್ನು ಹೊಂದಿದ್ದು, ಶ್ವಾಸಕೋಶದ ಕಾರ್ಯ ಚಟುವಟಿಕೆ ಉತ್ತಮಗೊಳ್ಳಲು ಸಹಾಯ ಮಾಡು ತ್ತದೆ; ಸೆಲೆನಿಯಂ ಶ್ವಾಸಾಂಗ ಮಾರ್ಗದ ಒಳ ಪದರವು ಆಕ್ಸಿಡೇಟಿವ್‌ ಪರಿಣಾಮದಿಂದ ಹಾನಿ ಗೀಡಾಗದಂತೆ ರಕ್ಷಿಸುತ್ತದೆ.

ಫ್ಲೇವಿನಾಯ್ಡ್ ಗಳು ಇಸ್ನೋಫಿಲ್‌ ನುಸುಳುವಿಕೆಯನ್ನು ತಡೆಯುತ್ತದೆ ಹಾಗೂ ಮಾಸ್ಟ್‌ ಸೆಲ್‌ಗ‌ಳು ಮತ್ತು ಬಾಸೋಫಿಲ್‌ಗ‌ಳ ವಿಭಜನೆಯನ್ನು ಕಡಿಮೆ ಮಾಡುತ್ತವೆ. ನಾರಿನಂಶವು ಕರುಳಿನಲ್ಲಿರುವ ಮೈಕ್ರೊಬಯೋಟಾಗಳನ್ನು ಪರಿವರ್ತಿಸುವ ಮೂಲಕ ನ್ಯೂಟ್ರೊμಲ್‌ಗ‌ಳನ್ನು ನಿಯಂತ್ರಿಸಿ ಅಲರ್ಜಿ ಪ್ರಕ್ರಿಯೆಯನ್ನು ಕಡಿಮೆ ಮಾಡಲು ನೆರವಾಗುವ ಸ್ಮಾಲ್‌ ಚೈನ್‌ ಫ್ಯಾಟಿ ಆ್ಯಸಿಡ್‌ ಗಳನ್ನು ಹೆಚ್ಚಿಸುತ್ತದೆ. ‌

ಒಮೆಗಾ 3ರಂತಹ ಫ್ಯಾಟಿ ಆ್ಯಸಿಡ್‌ಗಳು ಅಸ್ತಮಾವನ್ನು ಕಡಿಮೆ ಮಾಡಲು ನೆರವಾಗುತ್ತವೆ, ಅಸಿಟಿಲ್‌ಕೊಲೈನ್‌ ಹೆಚ್ಚಿಸುತ್ತವೆ ಮತ್ತು ಅಲರ್ಜಿಯಿಂದ ಉಂಟಾಗುವ ಪ್ರತಿಸ್ಪಂದನೆಯನ್ನು ತಡೆಯುತ್ತವೆ ಎನ್ನಲಾಗಿದೆ. ವಿಟಮಿನ್‌ ಸಿಯು ಆ್ಯಂಟಿಓಕ್ಸಿಡೆಂಟ್‌ ಗುಣ ವನ್ನು ಹೊಂದಿದ್ದು, ಕೋವಿಡ್‌ ಸೋಂಕಿನ ಸಮಯದಲ್ಲಿ ಶ್ವಾಸಾಂಗ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ವ್ಯಾಪಕವಾಗಿ ಬಳಕೆಯಲ್ಲಿತ್ತು. ಹೀಗಾಗಿ ಶ್ವಾಸಾಂಗ ಆರೋಗ್ಯದ ಮೇಲೆ ಅದರ ಸತ್ಪರಿಣಾಮ ತಿಳಿದಿರುವಂಥದ್ದೇ ಆಗಿದೆ. ವಿಟಮಿನ್‌ ಕೆ ಕೂಡ ಶ್ವಾಸಕೋಶಗಳ ಆರೋಗ್ಯಕ್ಕೆ ಮುಖ್ಯ ಎಂಬುದು ಇತ್ತೀಚೆಗಿನ ಅಧ್ಯಯನಗಳಿಂದ ತಿಳಿದುಬಂದಿದೆ.

ವಿಟಮಿನ್‌ ಕೆಯು ಮ್ಯಾಟ್ರಿಕ್ಸ್‌ ಗ್ಲಾ ಪ್ರೊಟೀನ್‌ (ಎಂಜಿಪಿ) ಎಂಬ ಪ್ರೊಟೀನ್‌ ಸಕ್ರಿಯಗೊಳ್ಳುವುದಕ್ಕೆ ಅಗತ್ಯವಾಗಿದೆ. ಎಂಜಿಪಿಯು ದೇಹದಲ್ಲಿ ಕ್ಯಾಲ್ಸಿಯಂ ನಿಯಂತ್ರಣದಲ್ಲಿ ಭಾಗವಹಿಸುತ್ತದೆ ಹಾಗೂ ರಕ್ತನಾಳಗಳು ಮತ್ತು ಸಂಭಾವ್ಯವಾಗಿ ಶ್ವಾಸಕೋಶಗಳ ಮೃದು ಅಂಗಾಂಶಗಳಲ್ಲಿ ಕ್ಯಾಲ್ಸಿಯಂ ಶೇಖರಗೊಳ್ಳದಂತೆ ತಡೆಯುತ್ತದೆ. ಶ್ವಾಸಕೋಶಗಳ ಅಂಗಾಂಶಗಳು ಕ್ಯಾಲ್ಸಿಫಿಕೇಶನ್‌ ಗೊಂಡರೆ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ತಲೆದೋರಬಲ್ಲವಾದ ಕಾರಣ ಇದು ಬಹಳ ಮುಖ್ಯವಾಗಿದೆ.

ವಿಟಮಿನ್‌ ಕೆ ಮತ್ತು ಶ್ವಾಸ ಕೋಶಗಳ ನಡುವೆ ನೇರ ಸಂಬಂಧ ಇಲ್ಲದೆ ಹೋದರೂ ವಿಟಮಿನ್‌ ಕೆ ಪ್ರಮಾಣ ಕಡಿಮೆ ಇರುವ ವ್ಯಕ್ತಿಗಳಲ್ಲಿ ಶ್ವಾಸೋಚ್ಛಾಸ ಸಾಮರ್ಥ್ಯ ಕಡಿಮೆ ಇರುವುದು ಕಂಡುಬಂದಿದೆ. ಶ್ವಾಸಕೋಶ ಗಳ ಕಾರ್ಯಚಟುವಟಿಕೆಯ ಪರೀಕ್ಷೆಯಾಗಿರುವ ಸ್ಪೈರೊಮೆಟ್ರಿಯಲ್ಲಿ ಎಫ್ಇವಿ 1 ಮತ್ತು ಎಫ್ ವಿಸಿ ಕಡಿಮೆ ಮಟ್ಟದಲ್ಲಿ ತೋರುವ ಮೂಲಕ ಇದು ಕಂಡುಬರುತ್ತದೆ; ವಿಟಮಿನ್‌ ಕೆ ಪೂರೈಕೆಯಿಂದ ಇದನ್ನು ಸರಿಪಡಿಸಬಹುದಾಗಿದೆ.

ಅಧ್ಯಯನಗಳು ಶ್ವಾಸಾಂಗ ಆರೋಗ್ಯದಲ್ಲಿ ವಿಟಮಿನ್‌ ಕೆಯ ಈ ಪಾತ್ರದ ಬಗ್ಗೆ ಹೇಳಿವೆಯಾದರೂ ಇದು ಇನ್ನೂ ಪರಿಶೀಲನೆಯಲ್ಲಿದೆ. ಕಾಯಿಲೆಗಳು ಕಾಣಿಸಿಕೊಂಡ ಬಳಿಕ ಗುಣ ಪಡಿಸುವುದಕ್ಕೆ ಪರದಾಡುವುದಕ್ಕಿಂತ ಅವು ಉಂಟಾಗದಂತೆ ರಕ್ಷಿಸಿಕೊಳ್ಳುವುದೇ ಉತ್ತಮ ಹೌದು. ಆದರೆ ಆಹಾರಾಭ್ಯಾಸದ ಮೂಲಕ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸಿ ಕೊಳ್ಳುವುದು ಪ್ರತಿಬಂಧಾತ್ಮಕ ಕ್ರಮವೇ ವಿನಾ ಶ್ವಾಸಕೋಶಗಳು ಮತ್ತು ಶ್ವಾಸಾಂಗಕ್ಕೆ ಸಂಬಂಧಿಸಿದ ಯಾವುದೇ ಅನಾರೋಗ್ಯಗಳು ಉಂಟಾದರೆ ಚಿಕಿತ್ಸೆ ಎಂದು ತಪ್ಪು ಭಾವಿಸಬಾರದು. ಪೌಷ್ಟಿಕಾಂಶ ಪೂರಕಗಳನ್ನು ಕೂಡ ವೈದ್ಯರ ಶಿಫಾರಸಿನ ಆಧಾರದಲ್ಲಿಯೇ ತೆಗೆದುಕೊಳ್ಳಬೇಕು.

ವಿವಿಧ ವಿಟಮಿನ್‌ಗಳ ಉತ್ತಮ ಮೂಲಗಳನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.

ವಿಟಮಿನ್‌ ಎ: ಲಿವರ್‌ ಮಾಂಸ, ಸಂಪೂರ್ಣ ಹಾಲು, ಚೀಸ್‌, ಕಿತ್ತಳೆ ಮತ್ತು ಕೆಂಪು ಬಣ್ಣದ ಹಣ್ಣುಗಳು ಹಾಗೂ ಕ್ಯಾರೆಟ್‌, ಕೆಂಪು ಕ್ಯಾಪ್ಸಿಕಂ, ಮಾವಿನ ಹಣ್ಣು, ಗೆಣಸು, ಏಪ್ರಿಕೋಟ್‌, ಕುಂಬಳ, ಗಾಢ ಹಸುರು ಬಣ್ಣದ ಸೊಪ್ಪು ತರಕಾರಿಗಳು.

ವಿಟಮಿನ್‌ ಇ: ವನಸ್ಪತಿ ಎಣ್ಣೆಗಳು, ಬೀಜಗಳು ಮತ್ತು ಕಾಳುಗಳು

ವಿಟಮಿನ್‌ ಡಿ: ಫ್ಯಾಟಿ ಮೀನು ಅಥವಾ ಫೋರ್ಟಿಫೈಡ್‌ ಹಾಲು, ಮೊಟ್ಟೆ. ನಮಗೆ ಅಗತ್ಯವಿರುವಷ್ಟು ವಿಟಮಿನ್‌ ಡಿಯನ್ನು ಕೇವಲ ಆಹಾರ ಮೂಲದಿಂದಲೇ ಪಡೆಯುವುದು ಕಷ್ಟಸಾಧ್ಯ. ಹೀಗಾಗಿ ವಿಟಮಿನ್‌ ಡಿ ಕೊರತೆ ಹೊಂದಿರುವವರಿಗೆ 1,000 ಐಯು ವಿಟಮಿನ್‌ ಡಿ3 ಒದಗಿಸುವುದು ಪ್ರಯೋಜನಕಾರಿ. ಇದರ ಜತೆಗೆ ಬೆಳಗ್ಗಿನ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ದೇಹದಲ್ಲಿ ವಿಟಮಿನ್‌ ಡಿ3 ಉತ್ಪಾದನೆ ಆಗುತ್ತದೆ ಎನ್ನುವುದನ್ನು ಮರೆಯಬಾರದು.

ವಿಟಮಿನ್‌ ಸಿ: ಕಿತ್ತಳೆ, ಮೂಸಂಬಿ, ನಿಂಬೆ, ದ್ರಾಕ್ಷಿ, ಬ್ಲ್ಯಾಕ್‌ ಕರೆಂಟ್‌, ಮಾವಿನಹಣ್ಣು, ಕಿವಿ, ರಾಕ್‌ ಮೆಲನ್‌, ಟೊಮ್ಯಾಟೊ ಮತ್ತು ಸ್ಟ್ರಾಬೆರಿಯಂತಹ ಹಣ್ಣುಗಳು, ಹಸುರು ತರಕಾರಿಗಳು.

ವಿಟಮಿನ್‌ ಸಿಯು ಶಾಖದಿಂದ ನಷ್ಟವಾಗುತ್ತದೆ; ಹೀಗಾಗಿ ಅಡುಗೆಯ ವೇಳೆ ಸ್ವಲ್ಪಾಂಶ ನಷ್ಟವಾಗುತ್ತದೆ.

ವಿಟಮಿನ್‌ ಕೆ: ಬಸಳೆ, ಹರಿವೆಯಂತಹ ಸೊಪ್ಪು ತರಕಾರಿಗಳು, ಬೆಣ್ಣೆಹಣ್ಣು, ಕಿವಿಯಂತಹ ಹಣ್ಣುಗಳು.

ಡಾ| ಉದಯ ಸುರೇಶ್‌ಕುಮಾರ್‌,

ಕನ್ಸಲ್ಟಂಟ್‌ ಪಲ್ಮನಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ,

ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ,

ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಲ್ಮನಾಲಜಿ ವಿಭಾಗ, ಕೆಎಂಸಿ, ಮಂಗಳೂರು)

ಟಾಪ್ ನ್ಯೂಸ್

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-health

ಆರೋಗ್ಯದಲ್ಲಿ ಕ್ರಾಂತಿ; ಸ್ತ್ರೀರೋಗ ಮತ್ತು ಪ್ರಸೂತಿ ಶಾಸ್ತ್ರದಲ್ಲಿ ಲ್ಯಾಪರೊಸ್ಕೋಪಿಯ ಮಹತ್ವ

4-

Fasting: ಉಪವಾಸ: ಹೃದಯ ಸಂಬಂಧಿ ಕಾಯಿಲೆ ಮತ್ತು ಮಧುಮೇಹ ಆರೈಕೆ

2-heath

Health: ವಯೋವೃದ್ಧರ ಆರೈಕೆ : ಮುಪ್ಪಿನಲ್ಲಿ ಜೀವನಾಧಾರ

17-tooth-infection

Tooth Infection: ಹಲ್ಲಿನ ಸೋಂಕು-ಸಂಧಿ ನೋವಿಗೆ ಕಾರಣವಾದೀತೇ?

16-

Methylmalonic acidemia: ಮಿಥೈಲ್‌ಮೆಲೋನಿಕ್‌ ಆ್ಯಸಿಡೆಮಿಯಾ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

Politics: ಸಿದ್ದರಾಮಯ್ಯ 5 ವರ್ಷವೂ ಸಿಎಂ: ಕೊತ್ತೂರು ಮಂಜುನಾಥ್‌

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.