![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Apr 8, 2019, 3:00 AM IST
ಬೆಂಗಳೂರು: ಅದು 2002ರಲ್ಲಿ ದಕ್ಷಿಣ ಭಾರತದಲ್ಲಿ ನಡೆದ ಬೃಹತ್ ಹಿಂದೂ ಸಮಾವೇಶ. ಬಿಜೆಪಿಯ ಪ್ರಮುಖ ರಾಷ್ಟ್ರೀಯ ನಾಯಕರೆಲ್ಲರೂ ಆ ಸಮಾವೇಶದಲ್ಲಿ ಭಾಗವಹಿಸಿದ್ದರು. ಅದರಲ್ಲಿ ಅತಿಥಿಯಾಗಿ ಅದೇ ಕ್ಷೇತ್ರದ ಸಂಸದ ಹಾಗೂ ಕರ್ನಾಟಕದ “ರೈಲ್ವೆ ಮ್ಯಾನ್’ ಸಿ.ಕೆ.ಜಾಫರ್ ಷರೀಫ್ ಕೂಡ ಪಾಲ್ಗೊಳ್ಳುವ ಮೂಲಕ ಗಮನ ಸೆಳೆದಿದ್ದರು. ತತ್ವ-ಸಿದ್ಧಾಂತಗಳು, ಪ್ರತಿನಿಧಿಸುವ ಪಕ್ಷಗಳು ಭಿನ್ನವಾಗಿದ್ದರೂ, ನಾಯಕರು ಪರಸ್ಪರ ಅಸ್ಪಶ್ಯರಾಗಿರಲಿಲ್ಲ ಎಂಬುದಕ್ಕೆ ಇದೊಂದು ಉದಾಹರಣೆ.
ಆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಗಿದ್ದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ.
ದಿನದಿಂದ ದಿನಕ್ಕೆ ಬೆಂಗಳೂರು ಬೆಳೆದಂತೆ ಉತ್ತರ ಮತ್ತು ದಕ್ಷಿಣ ಎಂದು ಇಬ್ಭಾಗವಾಯಿತು. ಬಿಜೆಪಿ ಪ್ರವರ್ಧಮಾನದಲ್ಲಿ ಇಲ್ಲದ ದಿನಗಳವು. ಇವೆರಡೂ ಕ್ಷೇತ್ರಗಳು ಕ್ರಮವಾಗಿ ಕಾಂಗ್ರೆಸ್ ಮತ್ತು ಜನತಾ ಪರಿವಾರಕ್ಕೆ ಸಮವಾಗಿ ಪಾಲಾದವು.
ಸಾರ್ವತ್ರಿಕ ಚುನಾವಣೆ ವಿಚಾರಕ್ಕೆ ಬಂದರೆ ಆರಂಭದಿಂದಲೂ ಇಡೀ ನಗರ ತುಸು ಕಾಂಗ್ರೆಸ್ ವಿರೋಧಿ ಆಗಿತ್ತು ಎಂಬುದನ್ನು ಇತಿಹಾಸ ಹೇಳುತ್ತದೆ. ಆದರೆ, ಉತ್ತರ ಕ್ಷೇತ್ರ ಅಸ್ತಿತ್ವಕ್ಕೆ ಬಂದ ನಂತರ ಅಲ್ಲಿನ ಜನ ಕಾಂಗ್ರೆಸ್ ಕೈಹಿಡಿದರು. ಇದಕ್ಕೆ ಕಾರಣ ಆ ಸಂದರ್ಭದಲ್ಲಿದ್ದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಅಲೆ ಹಾಗೂ ಅವರೊಂದಿಗೆ ಒಡನಾಟ ಹೊಂದಿದ್ದ ಜಾಫರ್ ಷರೀಫ್ ಪ್ರಭಾವ.
ಜತೆಗೆ ಅಲ್ಪಸಂಖ್ಯಾತರು ಕೂಡ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದೇ ಕಾರಣಕ್ಕೆ 1977ರಿಂದ ನಿರಂತರವಾಗಿ ಎಂಟು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿತು. ಈ ಮಧ್ಯೆ 1984ರಲ್ಲಿ ಜನತಾ ಪರಿವಾರದಿಂದ ಕೇಂದ್ರ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಕಣಕ್ಕಿಳಿದಿದ್ದರು. ಆ ಸಮಯದಲ್ಲಿ ಜಾರ್ಜ್ ಉಚ್ಛಾಯ ಸ್ಥಿತಿಯಲ್ಲಿದ್ದರು. ಆದಾಗ್ಯೂ ಅವರನ್ನೂ ಜನ ನಿರಾಕರಿಸಿದರು.
2004ರಿಂದ ಬಿಜೆಪಿ ತೆಕ್ಕೆಗೆ: ಕಾಲ ಕಳೆದಂತೆ ಉತ್ತರ ಲೋಕಸಭಾ ಕ್ಷೇತ್ರವು ಕಾಸ್ಮೋಪಾಲಿಟನ್ಗೆ ತೆರೆದುಕೊಂಡಿತು. ವಲಸಿಗರ ಸಂಖ್ಯೆ ಹೆಚ್ಚಿತು. ಹೀಗೆ ನಗರೀಕರಣಕ್ಕೆ ಹೊರಳುತ್ತಿದ್ದಂತೆ, “ನಗರವಾಸಿಗಳ ಪಕ್ಷ’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಬಿಜೆಪಿ ಕೂಡ ಇಲ್ಲಿ ಖಾತೆ ತೆರೆಯಿತು.
2004ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ನಿವೃತ್ತ ಐಪಿಎಸ್ ಅಧಿಕಾರಿ ಎಚ್.ಟಿ. ಸಾಂಗ್ಲಿಯಾನ ಅವರ ಕೈಹಿಡಿಯಿತು. ತಮ್ಮ ಅಧಿಕಾರಾವಧಿಯಲ್ಲಿ ಗಳಿಸಿದ್ದ ವರ್ಚಸ್ಸು, ಅವರ ಹೆಸರಿನಲ್ಲಿ ಬಂದ ಸಿನಿಮಾ, ಕ್ಷೇತ್ರದಲ್ಲಿ ಅಲ್ಪಸಂಖ್ಯಾತರು ಹೆಚ್ಚಿರುವುದು ಎಲ್ಲವೂ ಇದಕ್ಕೆ ಕಾರಣವಾಗಿತ್ತು. ತದನಂತರ ಅದೇ ಸಾಂಗ್ಲಿಯಾನ ವಿಪ್ ಉಲ್ಲಂ ಸಿ ಅಡ್ಡ ಮತದಾನದ ಮೂಲಕ ಬಿಜೆಪಿಗೇ ಕೈಕೊಟ್ಟರು!
ನಂತರ “ಆಪರೇಷನ್ ಕಮಲ’ದ ಮೂಲಕ ಪಕ್ಷಕ್ಕೆ ಸೇರ್ಪಡೆಯಾದ ಡಿ.ಬಿ.ಚಂದ್ರೇಗೌಡ ಅವರನ್ನು ಬಿಜೆಪಿ ಉತ್ತರದಿಂದ ಕಣಕ್ಕಿಳಿಸಿತು. ಒಕ್ಕಲಿಗರೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ತಂತ್ರ ಫಲಿಸಿತು. ಇದಾದ ಮೇಲೆ ಮತ್ತೆ ಒಕ್ಕಲಿಗ ಸಮುದಾಯಕ್ಕೆ ಸೇರಿದ ಡಿ.ವಿ.ಸದಾನಂದಗೌಡ 2014ರಲ್ಲಿ ನರೇಂದ್ರ ಮೋದಿ ಅಲೆಯೊಂದಿಗೆ ಗೆದ್ದರು.
ಬದಲಾದ ಚಿತ್ರಣ: ಆದರೆ, ಈಗ ಕ್ಷೇತ್ರದ ಚಿತ್ರಣ ಬದಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಆಗಿರುವ ಸಚಿವ ಕೃಷ್ಣ ಬೈರೇಗೌಡ ಇದೇ ಲೋಕಸಭಾ ಕ್ಷೇತ್ರದಲ್ಲಿ ಬರುವ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದ ಶಾಸಕ. ಒಬ್ಬ ಒಕ್ಕಲಿಗ ನಾಯಕನನ್ನು ಪ್ರತಿಷ್ಠಾಪಿಸುವ ಲೆಕ್ಕಾಚಾರವೂ ಇದರ ಹಿಂದಿದೆ ಎನ್ನಲಾಗಿದೆ.
ಈ ಮಧ್ಯೆ ಇಬ್ಬರು ಒಕ್ಕಲಿಗ ಸಮುದಾಯದ ನಾಯಕರೇ ಇಲ್ಲಿ ಮುಖಾಮುಖೀ ಆಗಿದ್ದಾರೆ. ಒಂದು ವೇಳೆ ಕೃಷ್ಣ ಬೈರೇಗೌಡ ಗೆದ್ದರೆ, ಒಂದು ಸಚಿವ ಸ್ಥಾನ ತೆರವಾಗಲಿದೆ. ಆ ಸ್ಥಾನವನ್ನು ಇದೇ ಕ್ಷೇತ್ರದಲ್ಲಿನ ಒಬ್ಬ ಶಾಸಕರಿಗೆ ಕೊಡುವ ಭರವಸೆ ದೊರಕಿದೆ. ಇದರಿಂದ ಉಳಿದ ಕಾಂಗ್ರೆಸ್ ಶಾಸಕರೂ ಅವರನ್ನು ಗೆಲ್ಲಿಸುವ ಹುರುಪಿನಲ್ಲಿದ್ದಾರೆ. ಆದರೆ, ಕಾಂಗ್ರೆಸ್ ಗೆದ್ದರೆ, ತೆರವಾದ ಶಾಸಕ ಸ್ಥಾನಕ್ಕೆ ಮತ್ತೂಂದು ಉಪ ಚುನಾವಣೆ ನಡೆಸಬೇಕಾಗುತ್ತದೆ. ಈ ನಿಟ್ಟಿನಲ್ಲಿಯೂ ಅಲ್ಲಿನ ಮತದಾರರು ಯೋಚಿಸುತ್ತಿದ್ದಾರೆ.
ಸದಾನಂದಗೌಡ ಪ್ರಣಾಳಿಕೆಯಲ್ಲಿ ಹೇಳಿದ್ದೇನು?: ಉತ್ತರ ಕ್ಷೇತ್ರಕ್ಕಾಗಿಯೇ ಡಿ.ವಿ.ಸದಾನಂದಗೌಡ ಅವರು ಪ್ರತ್ಯೇಕ ಪ್ರಣಾಳಿಕೆ ರೂಪಿಸಿರಲಿಲ್ಲ. ಪಕ್ಷದ ಪ್ರಣಾಳಿಕೆಯಲ್ಲಿ ಬೆಂಗಳೂರಿಗೆ ಮೆಟ್ರೋ, ಉಪನಗರ ರೈಲು ಯೋಜನೆ ಅನುಷ್ಠಾನ ಪ್ರಮುಖವಾಗಿ ಪ್ರಸ್ತಾಪಿಸಲಾಗಿತ್ತು. ಇನ್ನು ಈ ಭಾಗದ ಪ್ರಮುಖ ಸಮಸ್ಯೆಯಾಗಿರುವ ಸಂಚಾರದಟ್ಟಣೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹೆಬ್ಬಾಳ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೆಟ್ರೋ ಕೊಂಡೊಯ್ಯಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದಕ್ಕೆ ಸಚಿವ ಸಂಪುಟ ಒಪ್ಪಿಗೆ ಬಾಕಿ ಇದೆ.
ಸ್ಪರ್ಧಿಸಿದ್ದ ಘಟಾನುಘಟಿಗಳು: ಇಲ್ಲಿಂದ ಜಾಫರ್ ಷರೀಫ್, ಜಾರ್ಜ್ ಫರ್ನಾಂಡಿಸ್, ಡಿ.ಬಿ.ಚಂದ್ರೇಗೌಡ, ಎಚ್.ಟಿ. ಸಾಂಗ್ಲಿಯಾನ ಸ್ಪರ್ಧಿಸಿದ್ದರು.
ಒಟ್ಟು ವಿಧಾನಸಭಾ ಕ್ಷೇತ್ರಗಳು-8
-95,251 ಯುವ ಮತದಾರರು (18ರಿಂದ 21 ವರ್ಷ)
– 2,656 ಕ್ಷೇತ್ರದಲ್ಲಿನ ಮತಗಟ್ಟೆಗಳು
-80 ಪಿಂಕ್ ಬೂತ್ಗಳು
-2,656 ಬಳಸಲಿರುವ ಇವಿಎಂಗಳು (ಶೇ. 20 ಹೆಚ್ಚುವರಿ)
-13,280 ಚುನಾವಣಾ ಸಿಬ್ಬಂದಿ ನಿಯೋಜನೆ
* ವಿಜಯಕುಮಾರ್ ಚಂದರಗಿ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.