![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Feb 18, 2023, 12:40 PM IST
ಶಿವಮೊಗ್ಗ: ವಿಐಎಸ್ಎಲ್ ಮುಚ್ಚುವುದಿಲ್ಲ, ಉಳಿಸಿಕೊಳ್ಳುತ್ತೇವೆಂದು ವಾರದ ಹಿಂದೆ ಸಿಎಂ ಬಸವರಾಜ ಬೊಮ್ಮಾಯಿ ಮಾತು ಕೊಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಕಾರ್ಖಾನೆ ಮುಚ್ಚುವುದು ಶತಃಸಿದ್ಧ ಎಂದು ರಾಜ್ಯಸಭೆಯಲ್ಲಿ ಉತ್ತರ ಕೊಡುವುದರ ಮೂಲಕ 100 ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಏಕೈಕ ಸಾರ್ವಜನಿಕ ಉಕ್ಕಿನ ಕಾರ್ಖಾನೆ ವಿಐಎಸ್ಎಲ್ಗೆ ಚರಮಗೀತೆ ಬರೆದಿದೆ. ಇಲ್ಲಿಗೆ ಕೈಗಾರಿಕಾ ನಗರದ ಇತಿಹಾಸವೂ ಕೊನೆಯಾಗಲಿದೆ.
8 ವರ್ಷದ ಹಿಂದೆ ಎಂಪಿಎಂ ಕಾರ್ಖಾನೆ ಮುಚ್ಚುವ ಮೂಲಕ ಭದ್ರಾವತಿ ಅರ್ಧ ಆರ್ಥಿಕ ಶಕ್ತಿ ಹೋಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ದೂರದೃಷ್ಟಿ ಫಲವಾಗಿ 1923, ಜ.18ರಂದು ಆರಂಭಗೊಂಡ ಕಾರ್ಖಾನೆಯು ಇಲ್ಲಿನ ಸಾವಿರಾರು ಜನರಿಗೆ ಉದ್ಯೋಗ ನೀಡಿತ್ತಲ್ಲದೇ ರಾಜ್ಯದ ಲಕ್ಷಾಂತರ ಮಂದಿಗೆ ಜೀವನ ನೀಡಿತ್ತು.
ಕೆಮ್ಮಣ್ಣು ಗುಂಡಿ, ಬಾಬಾ ಬುಡನ್ಗಿರಿಯಲ್ಲಿ ಸಿಗುತ್ತಿದ್ದ ಉತ್ಕೃಷ್ಟ ಗುಣಮಟ್ಟದ ಕಬ್ಬಿಣದ ಅದಿರನ್ನು ತಂದು ಕಬ್ಬಿಣ ಮತ್ತು ಸ್ಟೀಲ್ ಉತ್ಪನ್ನಗಳನ್ನು ತಯಾರಿಸಲಾಗುತ್ತಿತ್ತು. ಮದ್ರಾಸ್, ಅಹ್ಮದಾಬಾದ್, ಕರಾಚಿ, ಮುಂಬೈನಲ್ಲಿ ಏಜೆನ್ಸಿಗಳು ಇದ್ದವು. ಮಲೆನಾಡು ಕಾಡುಗಳಿಂದ ಸಿಕ್ಕ ಮರಮುಟ್ಟುಗಳನ್ನು ಉರುವಲಾಗಿ ಬಳಸಲಾಗುತ್ತಿತ್ತು. ಅದಕ್ಕಾಗಿ ತಾಳಗುಪ್ಪವರೆಗೂ ರೈಲ್ವೆ ಮಾರ್ಗ ಅಭಿವೃದ್ಧಿಪಡಿಸಲಾಗಿತ್ತು. ಸ್ವಾತಂತ್ರ್ಯ ನಂತರ ಅದು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಂಟಿ ಅಧೀನದಲ್ಲಿತ್ತು. 1952ರಲ್ಲಿ ವಿದ್ಯುತ್ ಯಂತ್ರಗಳು ಆಗಮಿಸಿದವು.
1960ರಲ್ಲಿ ಜರ್ಮನ್ ತಂತ್ರಜ್ಞಾನದ ಹೊಸ ಯಂತ್ರೋಪಕರಣಗಳನ್ನು ಬಳಸಿ ಉತ್ಪಾದನೆ ಆರಂಭಿಸಲಾಯಿತು. ಈ ಯಂತ್ರಗಳು 20 ವರ್ಷಗಳ ಕಾಲ ಕಂಪನಿಯನ್ನು ಲಾಭದಲ್ಲಿ ಇಟ್ಟಿದ್ದವು. ನಂತರ ಶುರುವಾಗಿದ್ದೆ ಅಧಃಪತನ. ಕಾಲಕಾಲಕ್ಕೆ ಯಂತ್ರೋಪಕರಣಗಳನ್ನು ಉನ್ನತೀಕರಿಸಬೇಕಿದ್ದ ಆಡಳಿತ ಮಂಡಳಿ ಈ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ವರ್ಷದಿಂದ ವರ್ಷಕ್ಕೆ ಲಾಭಾಂಶ ಕಡಿಮೆಯಾಗಿ ನಷ್ಟದ ಹಾದಿ ಹಿಡಿಯಿತು. 1975-80ರಲ್ಲಿ ಲೇ ಆಫ್ ಇತ್ತು ಎಂದರೆ ಕಂಪನಿ ದುಸ್ಥಿತಿ ಹೇಗಿತ್ತು ಎಂಬುದು ನೀವೆ ಊಹಿಸಬಹುದು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಹೊಸ ಯಂತ್ರಗಳು ಬರಲಿಲ್ಲ. ಅಲ್ಲಿಂದ ಇಲ್ಲಿವರೆಗೂ ಅದೇ ಯಂತ್ರಗಳಿಗೆ ತೇಪೆ ಹಚ್ಚಿ ಕೆಲಸ ಮಾಡಲಾಗುತ್ತಿದೆ.
1989ರಲ್ಲಿ ರಾಜೀವ್ ಗಾಂಧಿ ಅವರು ಕೇಂದ್ರ ಸರ್ಕಾರಕ್ಕೆ ವಹಿಸಿದ್ದರು. 1997ರಲ್ಲಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿ ಅವಧಿಯ ಕೊನೆ ದಿನಗಳಲ್ಲಿ ಎಸ್ಐಐಎಲ್ಗೆ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ) ಸಂಪೂರ್ಣ ಹಸ್ತಾಂತರಿಸಿದರು. 600 ಕೋಟಿ ಬಂಡವಾಳ ಹೂಡುವ ಭರವಸೆ ನೀಡಲಾಗಿತ್ತಾದರೂ ಅದು ಈಡೇರಲಿಲ್ಲ. 20 ವರ್ಷಗಳಿಂದ ಈಚೆಗೆ ಅದು ಚುನಾ ವಣಾ ವಿಷಯವಾಗಿ ಕಾರ್ಮಿಕರಿಗೆ ಮೂಗಿಗೆ ತುಪ್ಪ ಸವರಲಾಯಿತು. ಕೇಂದ್ರ ಮಂತ್ರಿಗಳು ಬಂದು ಹೋದರೂ ಒಂದು ರೂ. ಬಂಡವಾಳ ಬರಲಿಲ್ಲ. ಹಳೆ ಯಂತ್ರಗಳು ದುಡಿದು ದುಡಿದು ಸುಸ್ತಾದವು. ಕಾರ್ಮಿಕರಿಗೆ ಸಂಬಳ ಕೊಡುವುದಕ್ಕೂ ಹಣವಿರಲಿಲ್ಲ. ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ಖಾಸಗಿಗೆ ಕೊಡಲು ಗ್ಲೋಬಲ್ ಟೆಂಡರ್ ಕರೆದಿತ್ತು.ಸಾರ್ವಜನಿಕರು ಸಹ ಕಂಪನಿ ಉಳಿದರೆ ಸಾಕು ಎಂಬ ಕಾರಣಕ್ಕೆ ಖಾಸಗೀಕರಣಕ್ಕೆ ವಿರೋಧ ಮಾಡಲಿಲ್ಲ. ಆದರೆ ಯಾವುದೇ ಕಂಪನಿಗಳು ಬಿಡ್ ಮಾಡಲಿಲ್ಲ.
ಕಾರ್ಮಿಕರ ಭವಿಷ್ಯ ಅತಂತ್ರ: ಒಂದು ಕಾಲದಲ್ಲಿ 13 ಸಾವಿರ ಕಾಯಂ ನೌಕರರು, 5 ಸಾವಿರ ಗುತ್ತಿಗೆ ಕಾರ್ಮಿಕರು ಇದ್ದರು. ಕಾರ್ಮಿಕರ ನಿವೃತ್ತಿ ನಂತರ ಹೊಸ ನೇಮಕಾತಿ ಆಗಲಿಲ್ಲ. 20 ವರ್ಷಗಳ ಹಿಂದೆಯೇ ವಿಆರ್ ಎಸ್ಗೆ ಅವಕಾಶ ನೀಡಲಾಗಿತ್ತು. ಕಾರ್ಖಾನೆಗೆ ಭವಿಷ್ಯ ಇಲ್ಲ ಎಂದು ಸಾವಿರಾರು ನೌಕರರು ಅವಧಿಗೂ ಮುನ್ನವೇ ನಿವೃತ್ತಿ ಪಡೆದರು. ಈಗ ಕಾರ್ಖಾನೆಯಲ್ಲಿ ಉಳಿದಿರುವುದು 211 ಕಾಯಂ ನೌಕರರು. 1300 ಗುತ್ತಿಗೆ ಕಾರ್ಮಿಕರು. ಕಂಪನಿ ಮುಚ್ಚಿದರೆ ಈ ನೌಕರರ ಭವಿಷ್ಯ, ಇವರನ್ನೇ ನಂಬಿರುವ ಕುಟುಂಬಗಳು, ಭದ್ರಾವತಿಯ ಆರ್ಥಿಕತೆಗೆ ಬಹು ದೊಡ್ಡ ಪೆಟ್ಟು ಬೀಳಲಿದೆ.
ಸ್ವಂತ ಗಣಿಯೇ ಇರಲಿಲ್ಲ!: ವಿಐಎಸ್ಎಲ್ಗೆ ಅದಿರು ಪೂರೈಸುತ್ತಿದ್ದ ಕೆಮ್ಮಣ್ಣುಗುಂಡಿ ಹಾಗೂ ಬಾಬಾ ಬುಡನ್ ಗಿರಿಯಿಂದ 2004ರಲ್ಲಿ ಕೇಂದ್ರ ಸರ್ಕಾರ ಈ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿದ ಮೇಲೆ ಗಣಿಗಾರಿಕೆ ಸ್ಥಗಿತಗೊಂಡಿತು. ಅಲ್ಲಿಂದ ಬೇರೆ ಕಡೆಯಿಂದ ಖರೀದಿ ಮಾಡಲಾ ಗುತ್ತಿತ್ತು. ಇದು ಸಹ ನಷ್ಟದ ಪ್ರಮಾಣ ಏರಿಸಿತು. 2017ರಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಬಳ್ಳಾರಿಯಲ್ಲಿ ಗಣಿ ಮಂಜೂರು ಮಾಡಿತು. ಈ ಗಣಿ ಈವರೆಗೆ ವಿಐಎಸ್ಎಲ್ ಹೆಸರಿಗೆ ವರ್ಗಾವಣೆಗೊಂಡಿಲ್ಲ.
4200 ಮನೆಗಳ ಕಥೆ ಏನು?: ವಿಐಎಸ್ಎಲ್ ತನ್ನ ಕಾರ್ಮಿಕರಿಗೆ 4200 ಮನೆಗಳನ್ನು ನಿರ್ಮಾಣ ಮಾಡಿದೆ. ಅಧಿಕಾರಿಗಳಿಗೆ, ಕಾರ್ಮಿಕರಿಗೆ ಸುಸಜ್ಜಿತವಾದ ಮನೆಗಳನ್ನು ಕೊಟ್ಟಿತ್ತು. ಭದ್ರಾವತಿ ಹೃದಯಭಾಗದಲ್ಲೇ ಇರುವ ಈ ಮನೆಗಳ ಭವಿಷ್ಯ ಏನಾಗಲಿದೆ ಎಂಬುದು ಕಣ್ಣೀರು ತರಿಸುವಂತಿದೆ. 33 ವರ್ಷ, 99 ವರ್ಷಕ್ಕೆ ಲೀಸ್ಗೆ ನೂರಾರು ಮನೆಗಳನ್ನು ನೀಡಲಾಗಿದೆ. ಲೀಸ್ ಪಡೆದವರು ಹಳೆ ಕಟ್ಟಡ ಕೆಡವಿ ಹೊಸ ಮನೆ ಕಟ್ಟಿದ್ದಾರೆ. ಅನೇಕರು ನವೀಕರಣ ಮಾಡಿಕೊಂಡಿದ್ದಾರೆ. 3 ಸಾವಿರಕ್ಕೂ ಅಧಿಕ ಮನೆಗಳು ಬಾಡಿಗೆ, ಲೀಸ್ ಆಧಾರದಲ್ಲಿ ಬಳಕೆಯಲ್ಲಿವೆ. ಈಗಾಗಲೇ ಎಂಪಿಎಂ ನೌಕರರ ಮನೆಗಳನ್ನು ಖಾಲಿ ಮಾಡಿಸಲಾಗಿದ್ದು ವಿಐಎಸ್ಎಲ್ ನೌಕರರ ಮನೆಗಳ ಭವಿಷ್ಯ ಏನಾಗಲಿದೆ ಎಂಬುದು ಆತಂಕ ಮೂಡಿಸಿದೆ. ವಿಐಎಸ್ಎಲ್ ಆಸ್ತಿಯ ಅಂದಾಜು 1600 ಎಕರೆ ಇದ್ದು, 800 ಎಕರೆಯಲ್ಲಿ ಕೈಗಾರಿಕಾ ಪ್ರದೇಶ, 800 ಎಕರೆಯಲ್ಲಿ ಮನೆಗಳು, 8 ಶಾಲೆಗಳು, ಪಾರ್ಕ್, ಆಸ್ಪತ್ರೆ, ಸ್ಟೇಡಿಯಂ ಇವೆ. ಇವೆಲ್ಲವೂ ಶಾಶ್ವತವಾಗಿ ಮುಚ್ಚಲಿವೆ.
ಕಾರ್ಖಾನೆಗೆ ನೂರು ವರ್ಷ ತುಂಬಿದೆ. ಸಂಭ್ರಮಾಚರಣೆ ಮಾಡುವ ಬದಲು ಶೋಕಾಚರಣೆ ಮಾಡುವಂತಾಗಿದೆ. ಸಾವಿರಾರು ಕುಟುಂಬಗಳು ಇದನ್ನೆ ನಂಬಿಕೊಂಡು ಬದುಕು ಸಾಗಿಸುತ್ತಿವೆ. ಸರ್ಕಾರ ಬಂಡವಾಳ ಹೂಡಲಿ.
●ಸುರೇಶ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷ
●ಶರತ್ ಭದ್ರಾವತಿ
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.