![1-congress](https://www.udayavani.com/wp-content/uploads/2025/02/1-congress-415x299.jpg)
![1-congress](https://www.udayavani.com/wp-content/uploads/2025/02/1-congress-415x299.jpg)
Team Udayavani, Jul 25, 2024, 7:20 AM IST
ವಿಧಾನಸಭೆ: ರಾಜ್ಯಾದ್ಯಂತ 12 ಸಾವಿರ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಇವುಗಳ ಬಾಡಿಗೆ ಮೊತ್ತವನ್ನು ಹೆಚ್ಚಳ ಮಾಡುವುದಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ಭರವಸೆ ಕೊಟ್ಟರು.
ಬಿಜೆಪಿಯ ಎಲ್.ಎ. ರವಿಸುಬ್ರಹ್ಮಣ್ಯ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 69,919 ಅಂಗನವಾಡಿ ಕೇಂದ್ರಗಳಿದ್ದು ಈ ಪೈಕಿ 50 ಸಾವಿರ ಅಂಗನವಾಡಿ ಕೇಂದ್ರಗಳು ಸ್ವಂತ ಕಟ್ಟಡದಲ್ಲಿದ್ದರೆ, 12 ಸಾವಿರ ಅಂಗನವಾಡಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿವೆ. 2 ಸಾವಿರ ಅಂಗನವಾಡಿಗಳನ್ನು ಶಾಲಾ ಆವರಣಗಳಲ್ಲಿ ನಡೆಸುತ್ತಿದ್ದು, ಇನ್ನುಳಿದ ಅಂಗನವಾಡಿಗಳು ಸಮುದಾಯ ಭವನ, ಯುವಕ ಸಂಘಗಳ ಆವರಣದಲ್ಲಿ ನಡೆಯುತ್ತಿವೆ ಎಂದರು.
ಬೆಂಗಳೂರು ನಗರ ಜಿಲ್ಲೆಯಲ್ಲಿನ 2877 ಅಂಗನವಾಡಿಗಳ ಪೈಕಿ 1072 ಸ್ವಂತ ಕಟ್ಟಡ, 359 ಪಂಚಾಯತಿ ಕಟ್ಟಡ, 99 ಸಮುದಾಯ ಭವನ, 06 ಯುವಕ ಮಂಡಳಿ, 269 ಶಾಲಾ ಆವರಣ, 830 ಬಾಡಿಗೆ ಕಟ್ಟಡ ಹಾಗೂ 242 ಅಂಗನವಾಡಿಗಳು ಇತರೆ ಸ್ಥಳಗಳಲ್ಲಿ ನಡೆಯುತ್ತಿವೆ ಎಂದು ಹೇಳಿದರು.
ಇದಕ್ಕೆ ಆಕ್ಷೇಪಿಸಿದ ರವಿಸುಬ್ರಹ್ಮಣ್ಯ, ಅಂಗನವಾಡಿಗಳಲ್ಲಿ ಎಲ್ಕೆಜಿ, ಯುಕೆಜಿ ಶುರು ಮಾಡಬೇಕೆಂದಿದ್ದೀರಿ. ಸ್ವಂತ ಕಟ್ಟಡಗಳೇ ಇಲ್ಲದ ಅಂಗನವಾಡಿಗಳಲ್ಲಿ ಹೇಗೆ ಶುರು ಮಾಡುತ್ತೀರಿ? ಬೆಂಗಳೂರಿನಂತಹ ನಗರದಲ್ಲಿ ಸರ್ಕಾರ ಕೊಡುವ 5 ಸಾವಿರ ರೂ.ಗೆ ಅಂಗನವಾಡಿ ನಡೆಸುವಂತಹ ಯಾವುದೇ ಕಟ್ಟಡ ಬಾಡಿಗೆಗೆ ಸಿಗುವುದಿಲ್ಲ. 10 ತಿಂಗಳ ಬಾಡಿಗೆಯನ್ನು ಮುಂಗಡವಾಗಿ ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರು, ಕಟ್ಟಡದ ಮಾಲೀಕರು ಜಗಳ ಮಾಡಿಕೊಂಡು ಮನೆ ಬಾಗಿಲಿಗೆ ಬರುತ್ತಾರೆ. ಸರ್ಕಾರ ನೀಡುವ ಬಾಡಿಗೆ ಮೊತ್ತ ಹೆಚ್ಚಳ ಮಾಡಿ ಜತೆಗೆ ಮುಂಗಡ ಹಣವನ್ನೂ ಕೊಡಿ ಎಂದು ಒತ್ತಾಯಿಸಿದರು.
ಧ್ವನಿಗೂಡಿಸಿದ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್, ಬಾಡಿಗೆ ಕಟ್ಟಡದ ಅಂಗನವಾಡಿ ಕೇಂದ್ರಗಳಲ್ಲಿ ಎಲ್ಕೆಜಿ, ಯುಕೆಜಿ ಆರಂಭಿಸಿದರೆ ಗುಣಮಟ್ಟದ ಶಿಕ್ಷಣ ಹೇಗೆ ಸಾಧ್ಯ? ಅಂಗನವಾಡಿಗಳಿಗೇ ಕಟ್ಟಡ ಎಂದಾದ ಮೇಲೆ ಎಲ್ಕೆಜಿ, ಯುಕೆಜಿಯನ್ನು ಶಾಲೆಗಳಲ್ಲಿ ನಡೆಸುವ ತೀರ್ಮಾನ ಮಾಡಿ ಎಂದು ಒತ್ತಾಯಿಸಿದರು.
ಎಲ್ಲಕ್ಕೂ ಉತ್ತರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್, ಮುಂಗಡ ಹಣ ನೀಡಲು ಸರ್ಕಾರದಲ್ಲಿ ಅವಕಾಶವಿಲ್ಲ. ಬೆಂಗಳೂರು ನಗರದ ಅಂಗನವಾಡಿಗಳಿಗೆ ಬಾಡಿಗೆ ಮತ್ತಿತರ ಖರ್ಚು-ವೆಚ್ಚಗಳಿಗೆಂದೇ 5.30 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಸದ್ಯಕ್ಕೆ ಬಾಡಿಗೆ ಮೊತ್ತ ಹೆಚ್ಚಳ ಮಾಡಲು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದು ಅಲ್ಲಿಂದ ಅನುಮೋದನೆ ಸಿಕ್ಕ ಕೂಡಲೇ ಬಿಡುಗಡೆ ಮಾಡುತ್ತೇವೆ. 2023-24ರಲ್ಲಿ 4 ಸಾವಿರ ಹೊಸ ಅಂಗನವಾಡಿಗಳಿಗೆ ಮಂಜೂರಾತಿ ಕೊಟ್ಟಿದ್ದು, 6000 ಕಡೆಗಳಲ್ಲಿ ನಿವೇಶನ ಗುರುತು ಮಾಡಲಾಗಿದೆ. ಈ ಬಾರಿ 1000 ಕಟ್ಟಡಗಳನ್ನು ನಿರ್ಮಿಸಲು ಬಜೆಟ್ನಲ್ಲಿ ಅನುದಾನ ಮೀಡಲಿಡಲಾಗಿದೆ ಎಂದು ಮಾಹಿತಿ ನೀಡಿದರು.
“ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನ ಅತ್ಯಂತ ಕಡಿಮೆ ಇದೆ. ಆದರೆ, ಅವರ ಮೇಲೆ ಹೆಚ್ಚು ಕೆಲಸ ಹೇರಲಾಗುತ್ತಿದೆ. ಹೀಗಾಗಿ ಅವರ ಗೌರವ ಧನ ಹೆಚ್ಚಳ ಮಾಡಿ ಇಲ್ಲವೇ ಅವರಿಗೆ ವಹಿಸುವ ಕೆಲಸಗಳನ್ನಾದರೂ ಕಡಿಮೆ ಮಾಡಬೇಕು.” -ಭಾಗೀರಥಿ ಮುರುಳ್ಯ, ಬಿಜೆಪಿ ಶಾಸಕಿ
“ಅಂಗನವಾಡಿ ಕಾರ್ಯಕರ್ತೆಯರ ಗೌರವ ಧನವನ್ನು ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಇದ್ದಾಗ ಹೆಚ್ಚಿಸಿದ್ದರು. ಅದಾದ ನಂತರ ಬಂದ ಸರ್ಕಾರಗಳು ಹೆಚ್ಚಳ ಮಾಡಿಲ್ಲ. ಈ ಬಾರಿ ಕೂಡ ಗೌರವಧನ ಹೆಚ್ಚಿಸುವ ಪ್ರಸ್ತಾವನೆ ಇದೆ. ಸಿಎಂ ಗಮನಕ್ಕೆ ತರಲಾಗಿದೆ. ಶೀಘ್ರವೇ ನಿರ್ಣಯ ಕೈಗೊಳ್ಳಲಾಗುತ್ತೆ.” -ಲಕ್ಷ್ಮೀ ಹೆಬ್ಟಾಳ್ಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಲಿಂಗತ್ವ ಅಲ್ಪಸಂಖ್ಯಾಕರಿಗೂ “ಗೃಹಲಕ್ಷ್ಮೀ’: ಹೆಬ್ಟಾಳ್ಕರ್ ಸೂಚನೆ
ಗೃಹಲಕ್ಷ್ಮೀ ಯೋಜನೆಯ ಲಾಭವನ್ನು ಲಿಂಗತ್ವ ಅಲ್ಪಸಂಖ್ಯಾಕರಿಗೂ ಕೊಡಲಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಟಾಳ್ಕರ್ ವಿಧಾನಸಭೆಯಲ್ಲಿ ಭರವಸೆ ನೀಡಿದರು.
ಕಾಂಗ್ರೆಸ್ನ ನಯನಾ ಮೋಟಮ್ಮ ಪ್ರಶ್ನೆಗೆ ಉತ್ತರ ನೀಡಿದ ಅವರು, ಸರಕಾರ ನೀಡಿರುವ ಗುರುತಿನ ಚೀಟಿ ಹಾಗೂ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಿದರೆ ಲಿಂಗತ್ವ ಅಲ್ಪಸಂಖ್ಯಾಕರಿಗೂ ಈ ತಿಂಗಳಿನಿಂದಲೇ ಹಣ ಬಿಡುಗಡೆ ಮಾಡಲಾಗುತ್ತದೆ ಎಂದರು. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 20,266 ಮಂದಿ ಲಿಂಗತ್ವ ಅಲ್ಪಸಂಖ್ಯಾಕರಿದ್ದು, 2024ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಲಭಿಸಿರುವ ಅಂಕಿ-ಅಂಶಗಳ ಪ್ರಕಾರ 43,752 ಲಿಂಗತ್ವ ಅಲ್ಪಸಂಖ್ಯಾಕರು ರಾಜ್ಯದಲ್ಲಿದ್ದಾರೆ. ಸೂಕ್ತ ದಾಖಲಾತಿ ಜತೆ ಅರ್ಜಿ ಸಲ್ಲಿಸಿದರೆ ಪರಿಗಣಿಸಲಾಗುವುದು ಎಂದರು.
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ
Ramanagara: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೀಕರ ಅಪಘಾತ; ತಪ್ಪಿದ ಭಾರೀ ದುರಂತ
Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್
Water Resource: ನನ್ನ ಜೀವಿತಾವಧಿಯಲ್ಲೇ ನೀರಿನ ಸಮಸ್ಯೆ ಬಗೆಹರಿಯಬೇಕು: ಎಚ್.ಡಿ.ದೇವೇಗೌಡ
You seem to have an Ad Blocker on.
To continue reading, please turn it off or whitelist Udayavani.