Desi Swara: ಟ್ರೋಲ್‌ಗ‌ಳ ನಾಡು ನಾರ್ವೆಯಲ್ಲೊಂದು ಚಾರಣ-ದಂತಕಥೆಗಳು ಹೇಳುವ ನಿಶಾಚರದ ಕತೆ

ಸೌದಾಂಪ್ಟೆನ್‌ ಬಂದರಿನಿಂದ ಹೊರಟು ಒಂದು ವಾರ ವಿವಿಧ ರಮಣೀಯ ಫಿಯೋರ್ಡ್‌ಗಳನ್ನು ನೋಡಿ ಬಂದೆವು

Team Udayavani, Sep 18, 2023, 9:30 AM IST

Desi Swara: ಟ್ರೋಲ್‌ಗ‌ಳ ನಾಡು ನಾರ್ವೆಯಲ್ಲೊಂದು ಚಾರಣ-ದಂತಕಥೆಗಳು ಹೇಳುವ ನಿಶಾಚರದ ಕತೆ

ಇದೇನಿದು ಟ್ರೋಲ್‌ಗ‌ಳ ನಾಡು ಎಂದು ಆಶ್ಚರ್ಯವೇ? ನಾನು ಇಲ್ಲಿ ಹೇಳ ಹೊರಟಿರುವುದು ಇಂಟರ್‌ನೆಟ್‌ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಆಗುವ ಟ್ರೋಲ್‌ಗ‌ಳ ಬಗ್ಗೆ ಅಲ್ಲ. ಇದು ನಾರ್ವೆ ದೇಶದಲ್ಲಿರುವ ಒಂದು ಪ್ರವಾಸಿ ತಾಣ. ಹೌದು ಈ ದೇಶದ ಜನಪದದಲ್ಲಿ, ಮಕ್ಕಳ ಕಥೆಗಳಲ್ಲಿ ಸಹ ಟ್ರೋಲ್‌ ಎನ್ನುವ ನಿಗೂಢ ಕಾಲ್ಪನಿಕ ದೈತ್ಯ ಜೀವಿಗಳು ಮತ್ತು ರಾಕ್ಷಸರು ತುಂಬಿದ್ದಾರೆ.
ಅವುಗಳ ಕಥೆಗಳು ನಾರ್ವೆಯ ಜಾನಪದದಲ್ಲಿ ಹಾಸುಕೊಕ್ಕಾಗಿವೆ. ಎಷ್ಟರ ಮಟ್ಟಿಗೆ ಎಂದರೆ ನಾರ್ವೆಯ 19ನೇ ಯ ಶತಮಾನದ ಪ್ರಸಿದ್ಧ ನಾಟಕಕಾರ ಹೆನ್ರಿಕ್‌ ಇಬ್ಸೆನ್‌ ಬರೆದ ಪಿಯರ್‌ಗಿಂಟ್‌ನಲ್ಲಿ ಸಹ ಟ್ರೋಲ್‌ಗ‌ಳ ಮಹಾರಾಜ ಡೋವೆಗುಬ್ಬೆನ್‌ ಬರುತ್ತಾನೆ.

ಇತ್ತೀಚಿನ ಸಿನೆಮಾಗಳಲ್ಲಿ ಸಹ ಅವುಗಳನ್ನು ಕಾಣಬಹದು. ಉದಾಹರಣೆಗೆ ಹ್ಯಾರಿ ಪಾಟರ್‌, ಪ್ರೋಜನ್‌ ಇತ್ಯಾದಿ. ಅವುಗಳು ಅರವತ್ತು ಅಡಿ ಎತ್ತರದ ಸೆನ್ಜಾ ತರವೂ ಇರಬದು ಅಥವಾ ಕುಬjವೂ ಆಗಿರಬಹುದು. ಅವುಗಳ ಬಗ್ಗೆ ಬಹಳಷ್ಟು ಮೂಢನಂಬಿಕೆಗಳು ಸಹ ಪ್ರಚಲಿತವಾಗಿವೆ. ಉದಾಹರಣೆಗೆ ಅವುಗಳ ಹೆಸರನ್ನು ಹೇಳಿದರೂ ಸಾಕು, ಉಚ್ಚರಿಸಿದವರು ಸತ್ತು ಬಿಡುತ್ತಾರೆ ಎಂದು! ಅವುಗಳು ನಿಶಾಚರರು, ಬೆಳಕು ಬಿದ್ದರೆ ಕಲ್ಲಿನ ಮೂರ್ತಿಯಾಗಿ ಬಿಡುತ್ತಾರೆ ಇತ್ಯಾದಿ. ಅಕ್ಕಪಕ್ಕದ ದೇಶಗಳಾದ ಸ್ವೀಡನ್‌, ಐಸ್ಲೆಂಡ್‌, ಫಿನ್ಲಂಡ್‌ ದೇಶಗಳಲ್ಲದೆ ನಡುಗಡ್ಡೆ ದೇಶಗಳಾದ ಗ್ರೀನ್ಲೆಂಡ್, ಫೇರೋ ಮತ್ತು ಅಲಂಡ್‌ಗಳಲ್ಲಿ ಸಹ ಅವುಗಳ ದಂತ ಕಥೆಗಳು ಕೇಳಿಬರತ್ತವೆ. ಇವುಗಳನ್ನೆಲ್ಲವನ್ನು ಒಟ್ಟಾರಿ ಸೇರಿಸಿ ನಾರ್ಡಿಕ್‌ ದೇಶಗಳು (Nordik countries) ಎಂದು ಕರೆಯುತ್ತಾರೆ.

ನಾರ್ವೆ ದೇಶದ ಪಶ್ಚಿಮ ಕರಾವಳಿಯ ಉದ್ದಕ್ಕೂ ನೂರಾರು ಕೊರಕಲುಗಳು ಕಡಲ ತೋಳಿನಂತೆ ಒಳ ಭೂಭಾಗಗಳಲ್ಲಿ ಬಳುಕುತ್ತ ಸಾಗಿ ಫಿಯೋರ್ಡ್‌ ಎಂದು ಕರೆಸಿಕೊಳ್ಳುತ್ತವೆ. ಅವು ಪ್ರವಾಸಿಗರನ್ನು ಚುಂಬಕದಂತೆ ಆಕರ್ಷಿಸುತ್ತವೆ. ಹಲವಾರು ಶಿಪ್ಪಿಂಗ್‌ ಕಂಪೆನಿಗಳು ಫಿಯೋರ್ಡ್‌ ಟೂರುಗಳನ್ನು ಸಂಯೋಜಿಸಿವೆ. ಇತ್ತೀಚೆಗೆ ನಾನು ಸಹ ನನ್ನ ಮಿತ್ರರೊಂದಿಗೆ ಇಂಥ ಒಂದು ಟೂರ್‌ ಮಾಡಿ ಬಂದೆ. ಇಂಗ್ಲೆಂಡಿನ ಸೌದಾಂಪ್ಟೆನ್‌ ಬಂದರಿನಿಂದ ಹೊರಟು ಒಂದು ವಾರ ವಿವಿಧ ರಮಣೀಯ ಫಿಯೋರ್ಡ್‌ಗಳನ್ನು ನೋಡಿ ಬಂದೆವು. ನೂರಾರು ಮೀಟರ್‌ ಆಳದ ಇಕ್ಕಟ್ಟಾಗಿ ಹಬ್ಬಿದ ಫಿಯೋರ್ಡ್‌ಗಳ ಅಚ್ಚ ನೀಲಿ ನೀರಿನ ಇಕ್ಕೆಲಗಳಲ್ಲಿ ಸಾವಿರಕ್ಕೂ ಹೆಚ್ಚು ಮೀಟರ್‌ಎತ್ತರಕ್ಕೆ ನಿಂತಿರುವ ಕಲ್ಲಿನ ಪರ್ವತಗಳು ಹಿಮಾಚ್ಛಾದಿತವಾಗಿರುತ್ತವೆ. ಅವುಗಳ ಮೇಲೆ 800 ಮೀಟರ್‌ಗಳ ವರೆಗೆ ಮಾತ್ರ ಹುಲ್ಲು, ಗಿಡ, ಮರಗಳ ಸಸ್ಯಗಳು, ಬೆಳೆಯುತ್ತವೆ. ಅವುಗಳಾಚೆ ಎತ್ತರಕ್ಕನುಗುಣವಾಗಿ ಹಿಮ ಅಥವಾ ಹಿಮಾಚ್ಛಾದಿತ ಅನೇಕ ಗ್ಲೆಶಿಯರ್‌ಗಳು.

ಅಂದ ಮೇಲೆ ಆ ಸೌಂದರ್ಯವನ್ನು ಊಹಿಸಿಕೊಳ್ಳಿ. ಇಲ್ಲಿ 1,100 ಮೇಲ್ಪಟ್ಟು ಸಂಖ್ಯೆಯಲ್ಲಿ ಫಿಯೋರ್ಡ್‌ಗಳಿವೆ. ಪ್ರತೀ ವರ್ಷ ಹತ್ತು ಮಿಲಿಯನ್‌ ಪ್ರವಾಸಿಗಳು ಬರುತ್ತಾರೆ. ಅವರಲ್ಲಿ ಅನೇಕರು ಸ್ಕೀಯಿಂಗ್‌, ಕಯಾಕ್‌ ಪ್ರವಾಸ ಮತ್ತು ಹೈಕಿಂಗ್‌ ಹವ್ಯಾಸಿಗಳು. ಈ ದೇಶದಲ್ಲಿ ಲೆಕ್ಕವಿಲ್ಲದಷ್ಟು ಜಲಪಾತಗಳಿವೆಯೆಂದರೆ ಅದು ಉತ್ಪ್ರೇಕ್ಷೆಯಲ್ಲ.

ನಮ್ಮ ಹಡಗು ಮೊದಲು ಲಂಗರು ಹಾಕಿದ್ದು ಸ್ಟ್ರಾವೆಂಗರ್‌ ಪಟ್ಟಣದಲ್ಲಿ. ಅಲ್ಲಿಯ ಪಲ್ಪಿಟ್‌ ರಾಕ್‌ ಎನ್ನುವ ಸಮತಟ್ಟಾದ ಪಾತಳಿಯ ಬೃಹದಾಕಾರದ ಬಂಡೆಯನ್ನು ಹತ್ತಲೆಂದೇ ಪ್ರತೀ ದಿನ ನೂರಾರು ಹೈಕಿಂಗ್‌ ಹವ್ಯಾಸಿಗಳು ಬರುತ್ತಾರೆ. ಮಿಶನ್‌ ಇಂಪಾಸಿಬಲ್‌-3 ಸಿನೆಮಾದಲ್ಲಿ ಟಾಮ್‌ ಕ್ರೂಸ್‌ ಫಿಯೋರ್ಡ್‌ ನೀರಿನಿಂದ 600 ಮೀಟರ್‌ಎತ್ತರದಲ್ಲಿರುವ ಆ ಬಂಡೆಯನ್ನು ಹತ್ತಿದ್ದು, ಇದು ಬಹಳ ಪ್ರಸಿದ್ಧಿ ಪಡೆದಿದೆ. ತಂಡೋಪ ತಂಡವಾಗಿ ಹಿರಿಯರು, ಮಕ್ಕಳನ್ನು ಸಹ ಅಲ್ಲಿ ಕಾಣಬಹುದು. ಅನಂತರ ಓಲ್ಡೆನ್‌, ಗೈರಾನ್ಜರ್‌ ಫಿಯೋರ್ಡ್‌ಗಳನ್ನು, ಇಕ್ಕೆಲಗಳ ಉತ್ತುಂಗ ಪರ್ವತದಿಂದ ಅವುಗಳ ನೀಲಿ ನೀರಿನಲ್ಲಿ ಧುಮುಕುವ ಜಲಪಾತಗಳ ಸೊಗಡನ್ನು ಸವಿದು ಕಣ್ಣು ತುಂಬಿಸಿಕೊಂಡೆವು.

ಅದರಲ್ಲಿ ಒಂದು ವಾರದ ಕ್ರೂಸ್‌ ಪ್ರವಾಸದ ಕೊನೆಯ ದಿನ ಹೌಗೆಸಂಡ್‌ (Hagesund)ನಲ್ಲಿ ಲಂಗರು ಹಾಕಿದಾಗ ನಾವು ಸಹ ಕೈಗೊಂಡಿದ್ದ ಚಾರಣವೇ ಹಿಮಕಾನಾ ಎನ್ನುವ ಕಿರುಗುಡ್ಡದ ಆರೋಹಣ. ಇದಕ್ಕೆ ಮಿನಿ ಟ್ರೋಲ್‌ ಟುಂಗಾ ಅಂತಲೂ ಕರೆಯುವುದುಂಟು. ಯಾಕಂದರೆ ಇದಕ್ಕಿಂತ ದೊಡ್ಡದಾದ ಇದೇ ತರಹದ ಟ್ರೋಲ್‌ ನಾಲಗೆಯ ಶಿಲಾರೂಪ ಸ್ವಲ್ಪ ದೂರದಲ್ಲಿದೆ. ಅದನ್ನು ಹತ್ತಲು ಇಡಿ ದಿವಸವೇ ಬೇಕು….

ಟ್ರೋಲ್‌ ಟುಂಗಾ
ಈ ಶಬ್ದದ ಅರ್ಥ ಟ್ರೋಲ್‌ನ ನಾಲಗೆ (ಟುಂಗಾ) ಅಂತ. ಸುಮಾರು 387 ಮೀಟರ್‌ ಎತ್ತರದ ಗುಡ್ಡದ ತುದಿಯಲ್ಲಿ ಒಂದು ಬಂಡೆಗಲ್ಲು ಪ್ರಾಣಿಯ ಉದ್ದ ನಾಲಗೆಯಂತೆ ಚಾಚಿ ನಿಂತಿದೆ. ಅದರ ವರ್ಣನೆಯನ್ನು ಓದಿ, ಅದರ “ನಾಲಗೆಯ’ ಮೇಲೆ ನಿಂತ ಪ್ರಯಾಣಿಕರ ಅದ್ಭುತ ಫೋಟೋಗಳನ್ನು ನೋಡಿ ನಾವು ನಾಲ್ವರು ಉತ್ಸುಕರಾಗಿದ್ದೆವು. ಹಿಮಕಾನಾ ಇರುವ ನೆಡ್‌ ಸ್ಟ್ರಾಂಡ್‌ ಪ್ರದೇಶ ಹೌಗೆಸಂಡ್‌ (Haugesund) ಬಂದರಿನಿಂದ 50 ಕೀ.ಮೀ ದೂರದಲ್ಲಿದೆ. ನಾವು ಬಂದ ಕ್ರೂಸ್‌ ಹಡಗು ಅಂದು ಬೆಳಗ್ಗೆ ಹನ್ನೊಂದಕ್ಕೆ ಆ ಬಂದರಿಗೆ ಬಂದು ತಲುಪಿದ ತತ್‌ಕ್ಷಣ ಒಂದು ಟ್ಯಾಕ್ಸಿಯನ್ನು ಹತ್ತಿ ಒಂದು ತಾಸಿನ ಅನಂತರ ಈ ಹಳ್ಳಿಗೆ ಬಂದು ತಲುಪಿದೆವು. ಊರ ಮಧ್ಯದಲ್ಲಿ ಒಂದು ಪುಟ್ಟ ಸುಂದರ ಚರ್ಚ್‌. ಟ್ರೋಲ್‌ ದಂತ ಕಥೆಯ ಪ್ರಕಾರ ಆ ಊರಿನ ಜನ ತಮ್ಮ ಚರ್ಚ್‌ಗೆ ಗಂಟೆ ಕೊಳ್ಳಲು ನಿರ್ಧರಿಸಿದಾಗ ಊರಿನವರ ಹತ್ತಿರ ಹಣ ಇರಲಿಲ್ಲವಂತೆ. ಹಿಮಕಾನಾ ಎನ್ನುವ ಹೆಸರಿನ ಬಹಳ ಶ್ರೀಮಂತ ಟ್ರೋಲ್‌ ಆ ಪ್ರದೇಶದಲ್ಲಿ ವಾಸಿಸುತ್ತಿದ್ದಳು. ಕೆಲವರು ಇದನ್ನು ಹಿಮಕೋನಾ ಅನ್ನುತ್ತಾರೆ. ಆಕೆಗೆ ಗಂಟೆಯ ಶಬ್ದ ಆಗದು. ಆಕೆಯನ್ನು ಆ ಊರಿನ ಬಡ ಜನರು ಸಹಾಯ ಕೋರಿದಾಗ ಮೊದಲು ಒಲ್ಲೆ ಎಂದಳು. ಆಮೇಲೆ ಆಕೆ ಒಪ್ಪಿ ಹಣ ಕೊಡುವಾಗ ಹಾಕಿದ ಶರತ್ತೆಂದರೆ ತಾನಿರುವತನಕ ಆ ಗಂಟೆಯನ್ನು ಬಾರಿಸಬಾರದು! ಜನರು ಸಮ್ಮತಿಸಿದರು. ಒಂದು ದಿನ ಪಾದ್ರಿಯ ಮಗಳ ಅಕಾಲ ಮೃತ್ಯುವಾದಾಗ ದುಃಖದಲ್ಲಿ ಮುಳುಗಿದ್ದ ಆಕೆಯ ತಂದೆ ಆ ಶರತ್ತನ್ನು ಮರೆತು ಇಡೀ ದಿನ ಗಂಟೆ ಬಾರಿಸಲು ಆಜ್ಞೆ ಕೊಟ್ಟ. ಗುಡ್ಡ, ಕಣಿವೆ, ಮತ್ತು ಫಿಯೋರ್ಡ್‌ ತುಂಬ ಅದರ ಶಬ್ದ ಪ್ರತಿಧ್ವನಿಸುತ್ತಿತ್ತು. ಅದನ್ನು ಸಹಿಸಲಾರದೆ ಆಕೆ ಗುಡ್ಡದಿಂದ ಧಾವಿಸಿ ಭರದಿಂದ ಇಳಿದು ಬಂದಳಂತೆ. ಚರ್ಚ್‌ಗೆ ಬರುತ್ತಲೇ ಬೆಳಗು ಹರಿಯಿತು. ಆಗ ಆಕೆ ಅಲ್ಲೇ ಶಿಲೆಯಾಗಿ ಬಿಟ್ಟಳಂತೆ. ಕೆಲವು ದಂತ ಕಥೆಗಳಲ್ಲಿ ರಾತ್ರಿಯಿಡೀ ನಿಶಾಚರರಾದ ಟ್ರೋಲ್‌ಗ‌ಳು ಬೆಳಕನ್ನು ಕಂಡ ಕೂಡಲೇ ಅವರ ಪ್ರಾಣ ಹೋಗಿಬಿಡುತ್ತದೆ ಎಂಬ ಮೂಢ ನಂಬಿಕೆ!

ನಾವು ಆ ಬೆಟ್ಟವನ್ನು ಹತ್ತುವ ದಿನ ರಣ ಬಿಸಿಲು. ಬೆಟ್ಟದ ತುದಿಯಿಂದ ಎರಡೇ ಕೀ.ಮೀ.ದೂರವಾದರೂ ಹೆಜ್ಜೆ ಹೆಜ್ಜೆಗೆ ಮೇಲೇರುವ ಹೇರ್‌ಪಿನ್‌ ಬೆಂಡ್‌ ಆಕಾರದ ಪಥ. ಮಧ್ಯ ದಾರಿಯಲ್ಲಿ ಒಂದು ಮುಚ್ಚಿದ ಗೈಟು ಬಿಡಿಸಿ ಹೊಲದಲ್ಲಿ ಮೇಯುತ್ತಿದ್ದ ದೈತ್ಯಾಕಾರದ ಆಕಳುಗಳು ಟ್ರೋಲ್‌ ಇರಬಹುದೇನೋ ಅನ್ನುವ ಹೆದರಿಕೆ ಹುಟ್ಟಿಸುತ್ತಿದ್ದವು! ಈ ಚಾರಣ ನಾವು ಮೂರು ದಿನಗಳ ಹಿಂದೆ ಸ್ಟ್ರಾವಾಂಗರ್‌ ಊರಲ್ಲಿ ಹತ್ತಿದ ಬಹು ಜನಪ್ರಿಯ ಪಲ್ಪಿಟ್‌ ರಾಕ್‌ಗೆ ಹೋಲಿಸಿದರೆ ಅಷ್ಟು ಎತ್ತರ ಅಲ್ಲ, ಹಾಗೇ ಇಲ್ಲಿ ಹೆಚ್ಚು ಜನ ಸಂದಣಿಯೂ ಇರಲಿಲ್ಲ. ಆದರೆ ರಾಚಿದ ಬಿಸಿಲು ಮತ್ತು ಕಡಿದಾದ ದಾರಿ ನಮ್ಮನ್ನು ಸುಸ್ತು ಮಾಡಿತು.

ಕೊನೆಯ ಭಾಗದಲ್ಲಿ ಮಾತ್ರ ಇದ್ದ ಮರಗಳ ಗುಂಪೊಂದು ತಂಪನ್ನು ನೀಡಿತ್ತು. ಅದನ್ನು ದಾಟಿದಂತೆಯೇ ಕಂಡಿದ್ದು ಆಕೆಯ ನಾಲಗೆಯನ್ನು ಹೋಲುವ ಚಪ್ಪಟೆ ಕಲ್ಲಿನ ಚಾಚು; ಅದರ ಮೇಲೆ ನಿಂತು ಸೆಲ್ಫಿ ಫೋಟೊ ತೆಗೆಯುತ್ತಿದ್ದರು ಒಂದಿಬ್ಬರು ಟೂರಿಸ್ಟ್‌ಗಳು. ಆ ಶಿಲೆಯ ರೂಪ ಟ್ರೋಲ್‌ ಹಿಮಕಾನಾಳ ಮುಖದಂತಿದೆ ಅಂತ ಹೇಳುವ ವಾಡಿಕೆ. ಯಥಾ ಪ್ರಕಾರ ಆ ಬಂಡೆಯ ಬದಿಯ ಮರದಡಿಯಲ್ಲಿ ಬಾಯಿ ಚಪ್ಪರಿಸುತ್ತ ಪಿಕ್‌ನಿಕ್‌ ಮಾಡಿ ಸರತಿ ಪ್ರಕಾರ ಒಬ್ಬೊಬ್ಬರೇ “ನಾಲಗೆಯ’ ತುದಿಯ ಮೇಲೆ ನಿಂತು ಫೋಟೊ ತೆಗೆಸಿಕೊಂಡಿದ್ದಾಯಿತು. ಆಮೇಲೆ ಎಲ್ಲರೂ ಎಚ್ಚರಿಕೆಯಿಂದ ಜತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡೆವು. ಅದರ ಸುತ್ತಲಿನ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದೆವು. 370 ಮೀಟರ್‌ ಕೆಳಗೆ ಬೃಹದಾಕಾರದ ಲಿಸೆವಾಟ್‌ ನೆಟ್‌ ಕೆರೆಯ ನೀಲಿ ವರ್ಣದ ನೀರಿನ ತೆರೆಗಳ ಮೇಲೆ ಸೂರ್ಯನ ಕಿರಣಗಳ ನರ್ತನ.

ಅದೊಂದು ಅದ್ಭುತ ದೃಶ್ಯ, ಅವಿಸ್ಮರಣೀಯ ಅನುಭವ. ನಮಗಾಗಿ ಕಾಯಲು ಹೇಳಿದ್ದ ಟ್ಯಾಕ್ಸಿಯವನು ಏನಾದರೂ ಕೈಕೊಟ್ಟನೆಂದರೆ ನಮ್ಮ ಕ್ರೂಸ್‌ ಶಿಪ್‌ ನಮ್ಮನ್ನು ಬಿಟ್ಟೇ ಇಂಗ್ಲೆಂಡಿಗೆ ಹೊರಟು ಹೋದೀತೆಂದು ಹೆದರಿ ಅವಸರದ ಅವರೋಹಣ ಶುರು ಮಾಡಿದೆವು. ಹತ್ತುವಾಗ ಉಬ್ಬಸ ಬರುತ್ತಿದ್ದರೆ ಇಳಿಯುವಾಗ ಮೊಣಕಾಲಿನ ಮೇಲೆ ಒತ್ತಡ ಬೀಳುತ್ತಿತ್ತು. ಕೆಳಗೆ ಇಳಿಯುವಾಗ ನಮ್ಮನ್ನೇ ದುರುಗುಟ್ಟಿ ನೋಡುತ್ತಿದ್ದ ಹೊಲದಲ್ಲಿ ಹೊರಕ್ಕೆ ಬಿಟ್ಟಿದ್ದ ಮೂರು ಹಸುಗಳನ್ನು ದಾಟಿ ಊರು ತಲುಪಿದಾಗ ಚರ್ಚಿನ ಗಂಟೆ ನಾಲ್ಕು ಸಲ ಬಾರಿಸಿತು. ಎಲ್ಲೂ ಟ್ರೋಲ್‌ ಸ್ಮಾರಕ ಕಾಣಲಿಲ್ಲ! ಯಾವ ಟ್ರೋಲ್‌ಗ‌ಳೂ ಹಿಂಬಾಲಿಸಿಲ್ಲ ಅಂತ ಖಚಿತ ಪಡಿಸಿಕೊಂಡು ನಮ್ಮ ಕ್ರೂಸ್‌ ಹಡಗಿಗೆ ಮರಳಿದೆವು.

 ಶ್ರೀವತ್ಸ ದೇಸಾಯಿ, ಡೋಂಕಾರ್ಸ್ಟರ್‌

 

ಟಾಪ್ ನ್ಯೂಸ್

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

NANGI-KADALKORETA

Nangi: ತೀವ್ರಗೊಂಡ ಕಡಲ್ಕೊರೆತ… ಬೀಚ್‌ ವ್ಯೂ ರೆಸಾರ್ಟ್‌ ಸಮುದ್ರ ಪಾಲಾಗುವ ಸಾಧ್ಯತೆ

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು

Maravanthe: ತೀವ್ರಗೊಂಡ ಕಡಲ್ಕೊರೆತ… ಕಡಲು ಸೇರುತ್ತಿರುವ ಕಲ್ಲುಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara:ತವರು ಮನೆ ಮಿಲನದ ಸಂಭ್ರಮ: ಕುಟುಂಬ, ಸಂಬಂಧದ ಮೌಲ್ಯವನ್ನು ತಿಳಿಸಿದ ಭೇಟಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: “ಆದ್ಯ ಪೂಜ್ಯ’ ಗಣೇಶನ ಅಷ್ಟ ಅವತಾರಗಳ ವಿಭಿನ್ನ, ಮನಮೋಹಕ ಪ್ರಸ್ತುತಿ

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ಕ್ಷಮೆ ಕೇಳುವುದು ಹಿರಿದೋ? ಕ್ಷಮಿಸುವುದು ಹಿರಿದೋ?

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ವೈಯಕ್ತಿಕ ಸಂತೋಷ ಸದಾ ಜೀವಂತವಾಗಿರಲಿ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

Desi Swara: ಸುಮಧುರ ಸಂಗೀತ ಸಂಜೆ: ಮಲ್ಹಾರ್‌ 2.0 ಕಾರ್ಯಕ್ರಮ

MUST WATCH

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

udayavani youtube

ಮರವಂತೆ ಬೀಚ್ ಅಪಾಯ ಲೆಕ್ಕಿಸದೆ ಪ್ರವಾಸಿಗರ ಹುಚ್ಚಾಟ

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

ಹೊಸ ಸೇರ್ಪಡೆ

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Mangaluru: ರಾಹುಲ್‌ ಗಾಂಧಿಯನ್ನು ಪೇಜಾವರ ಶ್ರೀ ಟೀಕಿಸಿದ್ದು ಸರಿಯಲ್ಲ : ಪದ್ಮರಾಜ್‌

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Udupi: ಕಾರ್ಮಿಕ ಸುರಕ್ಷೆಗೆ ಜಿಲ್ಲಾಧಿಕಾರಿ ಸೂಚನೆ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Mangaluru: ಮುಖ್ಯಮಂತ್ರಿ ರಾಜೀನಾಮೆ ಅನಿವಾರ್ಯ: ರವಿಕುಮಾರ್‌ ಆಗ್ರಹ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Heavy Rain: ದಕ್ಷಿಣ ಕನ್ನಡ ಜಿಲ್ಲಾದ್ಯಂತ ಉತ್ತಮ ಮಳೆ… ಕೆಲವೆಡೆ ಹಾನಿ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Udupi: ದಿನಪೂರ್ತಿ ಮಳೆ… ತಗ್ಗು ಪ್ರದೇಶಗಳು ಜಲಾವೃತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.